ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ಲಿಂ. ಎಸ್.ಆರ್. ಕಾಶಪ್ಪನವರ 24ನೇ ಪುಣ್ಯಸ್ಮರಣೆ; “ಅಧಿಕಾರಾವಧಿಯಲ್ಲಿ ಕಾಶಪ್ಪನವರು ಮಾಡಿದ ಜನಪರ ಕೆಲಸಗಳು ಎಂದಿಗೂ ಅಮರ”: ಶ್ರೀ ರಂಭಾಪುರಿ ಜಗದ್ಗುರುಗಳು

On: July 12, 2026 9:19 PM
Follow Us:

ಹುನಗುಂದ: “ಮಾನವನ ಬದುಕು ಭಗವಂತನ ಶ್ರೇಷ್ಠ ಕೊಡುಗೆಯಾಗಿದೆ. ಇದನ್ನು ಅರಿತು, ಧರ್ಮದ ಹಾದಿಯಲ್ಲಿ ಆಚರಿಸಿ ಬಾಳಿದರೆ ಜೀವನ ಬಂಗಾರವಾಗುತ್ತದೆ. ನಿರಂತರ ಪ್ರಯತ್ನ ಮತ್ತು ಕಠಿಣ ಸಾಧನೆಯಿಂದ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಸಾಧಿಸುವ ಛಲವೊಂದಿದ್ದರೆ ಅದುವೇ ಜೀವನದ ಶ್ರೇಯಸ್ಸಿಗೆ ಮೂಲ ಕಾರಣವಾಗುತ್ತದೆ” ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾವರಗಿಯ ಎಸ್.ಎಂ.ಎಸ್. ಪ್ರೌಢಶಾಲಾ ಆವರಣದಲ್ಲಿ ಭಾನುವಾರ ನಡೆದ ಮಾಜಿ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ 24ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸತ್ಕಾರ್ಯಗಳೇ ಶಾಶ್ವತ: ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವನ ಜೀವನವು ಸುಖ-ದುಃಖ, ನೋವು-ನಲಿವು, ಮಾನ-ಅಪಮಾನ ಹಾಗೂ ಜಯ-ಅಪಜಯಗಳೆಂಬ ದ್ವಂದ್ವಗಳಿಂದ ಕೂಡಿದೆ. ಈ ಸತ್ಯವನ್ನು ಯಾರು ಅರಿತುಕೊಳ್ಳುತ್ತಾರೋ, ಅವರು ಜೀವನದಲ್ಲಿ ಎಂತಹದೇ ಕಷ್ಟಗಳು ಎದುರಾದರೂ ಎದೆಗುಂದದೆ ಮುನ್ನಡೆಯಬಲ್ಲರು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಮಾರ್ಗದರ್ಶನ ನೀಡಿದರು.

“ನಮ್ಮ ಜೀವನ ಶಾಶ್ವತವಲ್ಲ, ಆದರೆ ನಾವು ಮಾಡುವ ಸತ್ಕಾರ್ಯಗಳು ಮಾತ್ರ ಎಂದೆಂದಿಗೂ ಶಾಶ್ವತವಾಗಿ ಉಳಿಯುತ್ತವೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಪಾರ ಶ್ರದ್ಧೆ ಹಾಗೂ ಅಭಿಮಾನ ಹೊಂದಿದ್ದ ಮಾಜಿ ಸಚಿವ ಲಿಂ. ಎಸ್.ಆರ್. ಕಾಶಪ್ಪನವರ ಜೀವನದ ಸಿದ್ದಿ ಮತ್ತು ಸಾಧನೆಗಳು ಅಪಾರವಾದವು” ಎಂದು ಜಗದ್ಗುರುಗಳು ಸ್ಮರಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ವಿಸ್ತರಣೆ, ಗ್ರಾಮೀಣ ಭಾಗದ ರಸ್ತೆ ಮತ್ತು ಸೇತುವೆಗಳ ನಿರ್ಮಾಣ, ಶಾಲಾ ಕಟ್ಟಡಗಳ ಅಭಿವೃದ್ಧಿ ಹಾಗೂ ರೈತರಿಗೆ ಉಪಯುಕ್ತವಾದ ಹಲವಾರು ಜನಪರ ಕಾರ್ಯಗಳನ್ನು ಕಾಶಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದು ಅದೇ ಹೆದ್ದಾರಿಯಲ್ಲಿ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಮುನ್ನಡೆಯುತ್ತಿರುವುದು ಸಂತೋಷ ತಂದಿದೆ. ಮುಂಬರುವ ದಿನಗಳಲ್ಲಿ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನಗಳು ದೊರೆಯಲಿ ಎಂದು ಜಗದ್ಗುರುಗಳು ಶುಭ ಹಾರೈಸಿದರು.

🔸 ಅಂತರಂಗದ ಬೆಳಕು ಮುಖ್ಯ: ಶ್ರೀಶೈಲ ಜಗದ್ಗುರುಗಳು

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ, “ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಅಂತರಂಗದ ಬೆಳಕಿಗಿಂತ ಬಹಿರಂಗದ ಬೆಳಕೇ ಹೆಚ್ಚೆಂದು ಭಾವಿಸುತ್ತಾರೆ. ಭೌತಿಕ ಸುಖಕ್ಕಾಗಿ ಮಡಿದವರೇ ಹೆಚ್ಚು. ಆದರೆ ಧರ್ಮ, ಸಂಸ್ಕೃತಿ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದವರು ಲಿಂ. ಎಸ್.ಆರ್. ಕಾಶಪ್ಪನವರು. ಹುನಗುಂದ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಸರ್ಕಾರದ ಗರಿಷ್ಠ ಸೌಲಭ್ಯಗಳನ್ನು ತಲುಪಿಸುವಲ್ಲಿ ಅವರು ಶ್ರಮಿಸಿದ್ದರು” ಎಂದು ಗುಣಗಾನ ಮಾಡಿದರು.

🌱 ಬಾಳಿನ ಪುಟಗಳನ್ನು ಸಮೃದ್ಧಗೊಳಿಸಿಕೊಳ್ಳಿ: ಶ್ರೀ ಕಾಶಿ ಜಗದ್ಗುರುಗಳು

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀ ಮತ್ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, “ಮರಣ ಎಂಬುದು ಯಾರನ್ನೂ ಬಿಟ್ಟಿಲ್ಲ. ಹುಟ್ಟಿದ ಮನುಷ್ಯನಿಗೆ ಮೃತ್ಯು ಕಡ್ಡಾಯ. ಆದರೆ ಹುಟ್ಟು ಮತ್ತು ಸಾವಿನ ಮಧ್ಯೆ ಸಿಗುವ ಬಾಳಿನ ಪುಟಗಳನ್ನು ಸತ್ಕಾರ್ಯಗಳ ಮೂಲಕ ಸಮೃದ್ಧಗೊಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಲಿಂ. ಎಸ್.ಆರ್. ಕಾಶಪ್ಪನವರು ರಾಜಕೀಯ ಕ್ಷೇತ್ರದಲ್ಲಿ ಧೀರರಾಗಿ, ವೀರರಾಗಿ ಹೆಜ್ಜೆ ಮೂಡಿಸಿದವರು. ವೀರಶೈವ ಪಂಚಪೀಠಗಳ ಜೊತೆಗೆ ಅನೋನ್ಯ ಸಂಬಂಧ ಹೊಂದಿದ್ದ ಅವರು ಜನಕಲ್ಯಾಣಕ್ಕಾಗಿ ಶ್ರಮಿಸಿದ ಮಹನೀಯರು” ಎಂದು ನೆನೆದರು.

​ಇದೇ ಸಂದರ್ಭದಲ್ಲಿ ಪ್ರಿಯಾಂಕ ಬಿರಾದಾರ ಅವರು ರಚಿಸಿದ, ಲಿಂ. ಕಾಶಪ್ಪನವರ ಜೀವನಾಧಾರಿತ ‘ಜನಾನುರಾಗಿ ಕಾಶಪ್ಪನವರು’ ಕವನ ಸಂಕಲನವನ್ನು ಉಭಯ ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು. ಸಮಾರಂಭದ ಅಂಗವಾಗಿ ಹಾವರಗಿ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

​ಬೆಂಗಳೂರಿನ ಖ್ಯಾತ ಚಲನಚಿತ್ರ ನಿರ್ದೇಶಕರಾದ ಎಂ.ಎ. ಕುಪ್ಪೇಲೂರು (ರಾಜಾ) ಅವರಿಗೆ ಜಗದ್ಗುರುಗಳ ಆಶೀರ್ವಾದದೊಂದಿಗೆ ‘ಎಸ್.ಆರ್.ಕೆ. ಗೌರವ ಪ್ರಶಸ್ತಿ’ ನೀಡಿ ಸತ್ಕರಿಸಲಾಯಿತು.

​ಶಾಸಕ ವಿಜಯಾನಂದ ಕಾಶಪ್ಪನವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, “ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದದ್ದು. ಪಂಚಪೀಠಗಳು ಯಾವಾಗಲೂ ಧರ್ಮ ಮತ್ತು ಸಮಾಜದ ಪರವಾಗಿ ಕೆಲಸ ಮಾಡುತ್ತಾ ಬಂದಿವೆ. ವೀರಶೈವ ಲಿಂಗಾಯತ ಸಮುದಾಯ ಮಾತ್ರವಲ್ಲದೆ, ಇತರೆಲ್ಲಾ ಸಮಾಜದ ಬಾಂಧವರು ಪಂಚಪೀಠಗಳ ಮೇಲೆ ಅಪಾರ ಶ್ರದ್ಧೆ-ಭಕ್ತಿ ಹೊಂದಿದ್ದಾರೆ. ಅಂತಹ ಪರಮ ಪೂಜ್ಯರು ಇಂದು ನಮ್ಮ ತಂದೆಯವರಾದ ಲಿಂ. ಎಸ್.ಆರ್. ಕಾಶಪ್ಪನವರ 24ನೇ ವರ್ಷದ ಪುಣ್ಯಾರಾಧನಾ ಸಮಾರಂಭಕ್ಕೆ ದಯಮಾಡಿಸಿರುವುದು ನಮ್ಮೆಲ್ಲರ ಸೌಭಾಗ್ಯ” ಎಂದರು.

  • ಸಮಾರಂಭದ ಅಧ್ಯಕ್ಷತೆ: ಮಾಜಿ ಶಾಸಕಿ ಶ್ರೀಮತಿ ಗೌರಮ್ಮ ಎಸ್. ಕಾಶಪ್ಪನವರು ವಹಿಸಿದ್ದರು.
  • ಸ್ವಾಗತ ಭಾಷಣ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರು ಎಲ್ಲರನ್ನೂ ಸ್ವಾಗತಿಸಿದರು.
  • ಮುಖ್ಯ ಅತಿಥಿಗಳು: ಬಾಗಲಕೋಟೆ ಶಾಸಕ ಉಮೇಶ್ ಮೇಟಿ, ಇಳಕಲ್ಲ ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ ಸೇರಿದಂತೆ ಹಲವು ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು.

​ಕಾರ್ಯಕ್ರಮವನ್ನು ಬಸವರಾಜ ಶಿರೂರು ನಿರೂಪಿಸಿದರು, ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಸಮಾರಂಭದ ಮುಕ್ತಾಯದ ನಂತರ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಕಲ್ಪಿಸಲಾಗಿದ್ದ ‘ಅನ್ನ ದಾಸೋಹ’ ಯಶಸ್ವಿಯಾಗಿ ನಡೆಯಿತು.

K.M.Sathish Gowda

Join WhatsApp

Join Now

Facebook

Join Now

Read more

ಅರಮನೆ ಮೈದಾನದಲ್ಲಿ ಮೊಳಗಿತು 70 ಲಕ್ಷ ಕುಟುಂಬಗಳ ಸ್ವಾಭಿಮಾನದ ಧ್ವನಿ!; ಒಪಿಎಸ್ ಜಾರಿ, ಎನ್‌ಪಿಎಸ್ ರದ್ದು, ಕೇಂದ್ರ ಮಾದರಿಯ ವೇತನಕ್ಕೆ ಒತ್ತಾಯ: ನೌಕರರ ಭವಿಷ್ಯದ ಪ್ರಶ್ನೆ ಮುಂದಿಟ್ಟ ಸಿ.ಎಸ್. ಷಡಾಕ್ಷರಿ

ಸರ್ಕಾರಿ ನೌಕರರ ಶಕ್ತಿ, ಸಂಘಟನೆಯ ವೈಭವ; ಸಿ.ಎಸ್. ಷಡಾಕ್ಷರಿ ನಾಯಕತ್ವದಲ್ಲಿ ವಿಜೃಂಭಿಸಿದ ‘ನಮ್ಮಭಿಮಾನದ ಅಭಿನಂದನೆ’

ರಾಜ್ಯದ ಅಭಿವೃದ್ಧಿಗೆ ಸರ್ಕಾರಿ ನೌಕರರೇ ಶಕ್ತಿ; ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು: ಸಿ.ಎಸ್. ಷಡಾಕ್ಷರಿ

ಕಾಯಕ ಸಮುದಾಯಗಳಿಗೆ ಬಿಜೆಪಿ ಸದಾ ಶಕ್ತಿ; ಕಾನೂನು ಸುವ್ಯವಸ್ಥೆ ವೈಫಲ್ಯ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಿರಿ: ಬಿ.ವೈ. ವಿಜಯೇಂದ್ರ ಕರೆ

ಕರ್ನಾಟಕ ಸರ್ಕಾರದ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ ಆದೇಶಕ್ಕೆ ತೀವ್ರ ವಿರೋಧ:​ ಅಕ್ರಮ ವಲಸಿಗರಿಗೆ ಮಣೆ ಹಾಕುತ್ತಿದೆಯೇ ಸರ್ಕಾರ? PRC ಕರಡು ತಕ್ಷಣ ಕೈಬಿಡಲು ಎನ್. ಕೆ. ಜಗದೀಶ್ ಆಗ್ರಹ

ಜನಪರ ಹೋರಾಟಕ್ಕೆ ಹೊಸ ರೂಪುರೇಷೆ: ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ಸಂಯುಕ್ತ ಹೋರಾಟ– ಕರ್ನಾಟಕ ಕೋರ್ ಕಮಿಟಿ ಸಭೆ

Leave a Comment