ಬೆಂಗಳೂರು: ಅದು ಕೇವಲ ಸರ್ಕಾರಿ ನೌಕರರ ಸಮಾವೇಶವಾಗಿರಲಿಲ್ಲ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಅಭೂತಪೂರ್ವ ಸಮ್ಮಿಲನವಾಗಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾದ ‘ನಮ್ಮಭಿಮಾನದ ಅಭಿನಂದನೆ’ ಮಹೋತ್ಸವವು ಜನಸಾಗರಕ್ಕೆ ಸಾಕ್ಷಿಯಾಯಿತು. ಸಂಘಟನೆಯ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದ ಷಡಾಕ್ಷರಿ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು, ವಿಶೇಷವಾಗಿ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ವಿವಿಧ ಹಿತಾಸಕ್ತಿ ಪ್ರಶ್ನೆಗಳನ್ನು ಪ್ರಸ್ತಾಪಿಸಿ, ಅವುಗಳ ಶೀಘ್ರ ಪರಿಹಾರಕ್ಕೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸರ್ಕಾರಿ ನೌಕರರ ಸೇವೆ, ತ್ಯಾಗ ಮತ್ತು ಆಡಳಿತಕ್ಕೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಬಳಿಕ ಸಿ.ಎಸ್. ಷಡಾಕ್ಷರಿ ಅವರು ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಮುಂದಿಟ್ಟರು. ಇದು ಕೇವಲ ಮನವಿ ಅಲ್ಲ, ನೌಕರರ ಭವಿಷ್ಯ, ನಿವೃತ್ತಿ ಭದ್ರತೆ ಹಾಗೂ ಆಡಳಿತದ ಸ್ಥಿರತೆಯ ಪ್ರಶ್ನೆಯಾಗಿದೆ ಎಂದು ಹೇಳಿದರು.

ಎನ್ಪಿಎಸ್ ರದ್ದು – ಒಪಿಎಸ್ ಜಾರಿ ನಮ್ಮ ಪ್ರಮುಖ ಬೇಡಿಕೆ: ಸಿ.ಎಸ್.ಷಡಾಕ್ಷರಿ
ಸಿ.ಎಸ್.ಷಡಾಕ್ಷರಿ ಅವರು ಹೆಚ್ಚಿನ ಸಮಯವನ್ನು ಹೊಸ ಪಿಂಚಣಿ ಯೋಜನೆ (NPS) ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಕುರಿತು ಮೀಸಲಿಟ್ಟ ಅವರು, ಇದು ರಾಜ್ಯದ ಸುಮಾರು 2.93 ಲಕ್ಷ ಸರ್ಕಾರಿ ನೌಕರರ ಬದುಕಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯ ಎಂದು ಹೇಳಿದರು.
“ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎನ್ಪಿಎಸ್ ಕುರಿತು ಸ್ಪಷ್ಟ ಭರವಸೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಹಾಗೂ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್ ಅವರ ಸಮ್ಮುಖದಲ್ಲೇ, ಅಧಿಕಾರಕ್ಕೆ ಬಂದರೆ ಎನ್ಪಿಎಸ್ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಲಾಗಿತ್ತು” ಎಂದು ಅವರು ನೆನಪಿಸಿದರು.
ಈಗ ಆ ಭರವಸೆಯನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ. ಸರ್ಕಾರದ ಮೇಲೆ ನೌಕರರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದರೆ ಒಪಿಎಸ್ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಅವರು ಮನವಿ ಮಾಡಿದರು.


ಇತರೆ ರಾಜ್ಯಗಳ ಮಾದರಿ ಅನುಸರಿಸಿ
ಈಗಾಗಲೇ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿವೆ. ಕರ್ನಾಟಕದಲ್ಲಿಯೂ ಈ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದ್ದರಿಂದ ವರದಿಯನ್ನು ಪರಿಶೀಲಿಸಿ ಶೀಘ್ರದಲ್ಲೇ ಅನುಷ್ಠಾನಗೊಳಿಸುವ ನಿರ್ಧಾರ ಪ್ರಕಟಿಸಬೇಕು ಎಂದು ಷಡಾಕ್ಷರಿ ಒತ್ತಾಯಿಸಿದರು.
“ಒಪಿಎಸ್ ಜಾರಿಯಾದರೆ ಅದು ಕೇವಲ ಆರ್ಥಿಕ ನಿರ್ಧಾರವಾಗುವುದಿಲ್ಲ; ಸರ್ಕಾರಿ ನೌಕರರ ಬದುಕಿನ ಭದ್ರತೆಯನ್ನು ಖಾತ್ರಿಪಡಿಸುವ ಐತಿಹಾಸಿಕ ನಿರ್ಧಾರವಾಗುತ್ತದೆ,” ಎಂದು ಅವರು ಹೇಳಿದರು.
ನಿವೃತ್ತ ನೌಕರರ ದುಸ್ಥಿತಿಗೆ ಪರಿಹಾರ ಬೇಕು
ನಿವೃತ್ತಿಯ ನಂತರ ಹಲವು ನೌಕರರು ಅತ್ಯಂತ ಕಡಿಮೆ ಪಿಂಚಣಿಯೊಂದಿಗೆ ಜೀವನ ಸಾಗಿಸುತ್ತಿರುವ ವಾಸ್ತವವನ್ನು ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಕೆಲವರಿಗೆ ತಿಂಗಳಿಗೆ ಕೇವಲ ₹1,500 ರಿಂದ ₹2,000ರವರೆಗೆ ಮಾತ್ರ ಪಿಂಚಣಿ ದೊರೆಯುತ್ತಿದೆ. ಜೀವನಪೂರ್ತಿ ಸರ್ಕಾರಕ್ಕೆ ಸೇವೆ ಸಲ್ಲಿಸಿದ ಕೆಲವರು ಇಂದು ಕೂಲಿ ಕೆಲಸ ಮಾಡುವ ಪರಿಸ್ಥಿತಿ ಎದುರಿಸುತ್ತಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು.
“ಒಬ್ಬ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಿವೃತ್ತಿಯಾದ ನಂತರ ಜೀವನ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದು ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ; ನಿವೃತ್ತಿ ಭದ್ರತೆ ಇಲ್ಲದ ವ್ಯವಸ್ಥೆಯ ಸಂಕೇತ,” ಎಂದು ಅವರು ಹೇಳಿದರು.

ಖಾಲಿ ಹುದ್ದೆಗಳ ಭರ್ತಿ ಸ್ವಾಗತಾರ್ಹ
ರಾಜ್ಯದಲ್ಲಿ ಖಾಲಿ ಇರುವ ಸುಮಾರು 60 ರಿಂದ 70 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿರುವ ಕ್ರಮವನ್ನು ಷಡಾಕ್ಷರಿ ಸ್ವಾಗತಿಸಿದರು. ಸಿಬ್ಬಂದಿ ಕೊರತೆಯಿಂದ ಅನೇಕ ಇಲಾಖೆಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ. ಹೊಸ ನೇಮಕಾತಿಯಿಂದ ಯುವಶಕ್ತಿಗೆ ಅವಕಾಶ ದೊರೆಯುವುದರ ಜೊತೆಗೆ ಆಡಳಿತದ ವೇಗ ಮತ್ತು ಗುಣಮಟ್ಟವೂ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಮಾದರಿಯ ವೇತನ ಜಾರಿಯಾಗಲಿ
ರಾಜ್ಯದ ಸರ್ಕಾರಿ ನೌಕರರ ಬಹುಕಾಲದ ಮತ್ತೊಂದು ಬೇಡಿಕೆಯಾದ ಕೇಂದ್ರ ಮಾದರಿಯ ವೇತನ ಕುರಿತು ಕೂಡ ಅವರು ಪ್ರಸ್ತಾಪಿಸಿದರು. ಕೇಂದ್ರ ವೇತನ ಆಯೋಗದ ಶಿಫಾರಸುಗಳು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೇಂದ್ರದ ಮಾದರಿಯ ವೇತನ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.


‘ಸಂಧ್ಯಕಿರಣ’ ಯೋಜನೆ ಜಾರಿಗೆ ತರಬೇಕು: ಸಿ.ಎಸ್.ಷಡಾಕ್ಷರಿ
ರಾಜ್ಯದ ಸುಮಾರು 4.70 ಲಕ್ಷ ನಿವೃತ್ತ ಸರ್ಕಾರಿ ನೌಕರರಿಗಾಗಿ ರೂಪಿಸಲಾಗಿರುವ ‘ಸಂಧ್ಯಕಿರಣ’ ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು. ಈ ಯೋಜನೆ ಈಗಾಗಲೇ ಸಚಿವ ಸಂಪುಟದ ಹಂತಕ್ಕೆ ಬಂದಿದೆ. ನಿವೃತ್ತ ನೌಕರರ ಜೀವನಮಟ್ಟ ಸುಧಾರಿಸಲು ಹಾಗೂ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಈ ಯೋಜನೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.
60–70 ಲಕ್ಷ ಜನರ ಕುಟುಂಬದ ಧ್ವನಿ
ಸೇವೆಯಲ್ಲಿರುವ ನೌಕರರು, ನಿವೃತ್ತ ನೌಕರರು ಹಾಗೂ ಅವರ… ಕುಟುಂಬ ಸದಸ್ಯರನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು 60 ರಿಂದ 70 ಲಕ್ಷ ಜನರನ್ನು ಒಳಗೊಂಡ ದೊಡ್ಡ ಕುಟುಂಬ ರೂಪುಗೊಂಡಿದೆ ಎಂದು ಷಡಾಕ್ಷರಿ ಹೇಳಿದರು. ಈ ಕುಟುಂಬದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದರೆ ಆಡಳಿತ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ. ನೌಕರರ ಮನೋಬಲ ಹೆಚ್ಚಿದರೆ ಅದರ ನೇರ ಲಾಭ ರಾಜ್ಯದ ಜನತೆಗೆ ದೊರೆಯುತ್ತದೆ ಎಂದು ಅವರು ಹೇಳಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ ಸಿ.ಎಸ್. ಷಡಾಕ್ಷರಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ರಾಜ್ಯದ ಸರ್ಕಾರಿ ನೌಕರರ ಪರವಾಗಿ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ, ಜನಪರ ಆಡಳಿತ ಹಾಗೂ ಸರ್ಕಾರಿ ನೌಕರರ ಕಲ್ಯಾಣ ಪರಸ್ಪರ ಪೂರಕವಾಗಿವೆ. ಸರ್ಕಾರವು ನೌಕರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ, ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಇನ್ನಷ್ಟು ಉತ್ಸಾಹ, ಬದ್ಧತೆ ಹಾಗೂ ಕಾರ್ಯಕ್ಷಮತೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಸರ್ಕಾರದ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಸಂಕಲ್ಪ ನಮ್ಮದು. ನೌಕರರ ಕಲ್ಯಾಣದ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡುತ್ತೇವೆ,” ಎಂದು ತಿಳಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು.


ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸರ್ಕಾರಿ ನೌಕರರ ಮಕ್ಕಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಮೂಲ ಅಸ್ತಿಭಾರವಾಗಿದ್ದು, ಸರ್ಕಾರಿ ನೌಕರರ ಮಕ್ಕಳು ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಶಯವನ್ನು ಸಂಘ ವ್ಯಕ್ತಪಡಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸರ್ಕಾರಿ ನೌಕರರ ಸಮ್ಮುಖದಲ್ಲಿ ನಡೆದ ಈ ಮಹಾಸಮಾರಂಭವು ನೌಕರರ ಐಕ್ಯತೆ, ಸಂಘಟನೆಯ ಬಲ, ಜನಪರ ಆಡಳಿತದ ಮೇಲಿನ ಬದ್ಧತೆ ಹಾಗೂ ನ್ಯಾಯಸಮ್ಮತ ಬೇಡಿಕೆಗಳ ಪ್ರತಿಧ್ವನಿಯಾಗಿ ಯಶಸ್ವಿಯಾಗಿ ನೆರವೇರಿತು.






