ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಸವೇಶ್ವರ ಸೊಸೈಟಿಯ ಶತಮಾನೋತ್ಸವ ಸಂಭ್ರಮ: ಮೇ 16 ಮತ್ತು 17ರಂದು ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ

On: May 12, 2026 8:30 PM
Follow Us:

ಶಿವಮೊಗ್ಗ: ನಗರದ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘವು ತನ್ನ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಮೈಲಿಗಲ್ಲಿನ ನೆನಪಿಗಾಗಿ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮೇ 16 ಮತ್ತು 17 ರಂದು ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ರುದ್ರಮುನಿ ಸಜ್ಜನ್ ಅವರು ಸಂಸ್ಥೆಯ ಬೆಳವಣಿಗೆಯನ್ನು ಶ್ಲಾಘಿಸಿದರು. “1925ರಲ್ಲಿ ಕೇವಲ 46 ಸದಸ್ಯರೊಂದಿಗೆ ಸಣ್ಣದಾಗಿ ಆರಂಭವಾದ ಈ ಸೊಸೈಟಿ, ಇಂದು 5,300 ಸದಸ್ಯರನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಪ್ರಸ್ತುತ ಸಂಸ್ಥೆಯು 14 ಕೋಟಿ ರೂಪಾಯಿಗಳಿಗೂ ಅಧಿಕ ಠೇವಣಿ ಹೊಂದಿದ್ದು, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ,” ಎಂದು ತಿಳಿಸಿದರು.

ಈ ಬಾರಿಯ ಶತಮಾನೋತ್ಸವದ ವಿಶೇಷವೆಂದರೆ ಸುಮಾರು 35 ವರ್ಷಗಳ ಸುದೀರ್ಘ ಅವಧಿಯ ನಂತರ ನಗರದಲ್ಲಿ ಜಗದ್ಗುರು ಶ್ರೀ ಪಂಚಪೀಠಾದೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯುತ್ತಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ಭವ್ಯ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

  • ದಿನಾಂಕ: ಮೇ 17, ಭಾನುವಾರ
  • ಸಮಯ: ಮಧ್ಯಾಹ್ನ 3:00 ಗಂಟೆಗೆ
  • ಮಾರ್ಗ: ಗಾಂಧಿ ಬಜಾರ್‌ನ ಶ್ರೀ ಬಸವೇಶ್ವರ ದೇವಾಲಯದಿಂದ ಆರಂಭವಾಗಿ ಬಿ.ಹೆಚ್. ರಸ್ತೆ, ನೆಹರೂ ರಸ್ತೆ ಮೂಲಕ ವಿನೋಬನಗರದ ಅಲ್ಲಮಪ್ರಭು ಮೈದಾನದವರೆಗೆ ಮೆರವಣಿಗೆ ಸಾಗಲಿದೆ.

ಮೆರವಣಿಗೆಯ ನಂತರ ಅಲ್ಲಮಪ್ರಭು ಮೈದಾನದಲ್ಲಿ ಧಾರ್ಮಿಕ ಸಭೆ ಹಾಗೂ ರಾಜ್ಯದ ಜನಪ್ರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನಾ ಮತ್ತು ಕೃತಜ್ಞತಾ ಸಮರ್ಪಣಾ ಸಮಾರಂಭ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತಾದಿಗಳು ಮತ್ತು ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ.

ಸೊಸೈಟಿಯ ಶತಮಾನೋತ್ಸವದ ಅಧಿಕೃತ ಕಾರ್ಯಕ್ರಮವು ಮೇ 16ರ ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಕುುವೆಂಪು ರಂಗಮಂದಿರದಲ್ಲಿ ಜರುಗಲಿದೆ ಎಂದು ಸ್ವಾಗತ ಸಮಿತಿಯ ಖಜಾಂಚಿ ಎಸ್.ಪಿ. ದಿನೇಶ್ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಯಶಸ್ಸಿಗಾಗಿ ವೀರಶೈವ ಲಿಂಗಾಯತ ಸಮಾಜದ 52 ವಿವಿಧ ಸಂಘಟನೆಗಳು ಕೈಜೋಡಿಸಿವೆ.

ಒಗ್ಗಟ್ಟಿನ ಪ್ರದರ್ಶನ: “ಸಮಾಜದ ಎಲ್ಲಾ ವರ್ಗದವರು ಮತ್ತು ವಿವಿಧ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ರೂಪಿಸುತ್ತಿವೆ. ಇದಕ್ಕಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ, ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ,”

ಬಳ್ಳೇಕೆರೆ ಸಂತೋಷ್, ಅಧ್ಯಕ್ಷರು, ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ, ಶಿವಮೊಗ್ಗ

ಶತಮಾನದ ಹೊಸ್ತಿಲಲ್ಲಿ ಶಿವಮೊಗ್ಗದ ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ: ಸಹಕಾರ ಕ್ಷೇತ್ರದಲ್ಲಿ ಒಂದು ಅಪೂರ್ವ ಪಯಣ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ‘ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ’ವು ಇದೀಗ ಶತಮಾನೋತ್ಸವದ (100 ವರ್ಷ) ಸಂಭ್ರಮದಲ್ಲಿದೆ. 1925ರಲ್ಲಿ ಸಣ್ಣದಾಗಿ ಬಿತ್ತಿದ ಬೀಜ ಇಂದು ಬೃಹತ್ ಆಲದ ಮರವಾಗಿ ಬೆಳೆದು ನಿಂತಿರುವುದು ಸಹಕಾರ ಕ್ಷೇತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ.

ಕಳೆದ ನೂರು ವರ್ಷಗಳ ಹಿಂದೆ, ಅಂದರೆ 30-06-1925 ರಂದು ಈ ಸಂಘವು ನೋಂದಾಯಿಸಲ್ಪಟ್ಟಿತು. ಸಂಘದ ಸ್ಥಾಪನೆಗೆ ಚನ್ನಗಿರಿಯ ಕೆ. ಹಾಲಪ್ಪ, ಕೆ.ಹೆಚ್. ಹಾಲಪ್ಪ ಹಾಗೂ ಶಿವಮೊಗ್ಗದ ಪ್ರಖ್ಯಾತ ವಕೀಲರಾಗಿದ್ದ ಹೆಚ್. ಲಿಂಗಪ್ಪನವರು ಮುಖ್ಯ ಕಾರಣಕರ್ತರು. ದಿ. ಜಿ.ಸಿ. ಮಹಾಲಿಂಗಪ್ಪನವರು ಪ್ರಥಮ ಅಧ್ಯಕ್ಷರಾಗಿ ಕಾರ್ಯಾರಂಭ ಮಾಡಿದರು. ಅಂದು ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದ ಸಣ್ಣ ಕೊಠಡಿಯಲ್ಲಿ ಕೇವಲ 40 ಸದಸ್ಯರು ಹಾಗೂ 1,150 ರೂಪಾಯಿಗಳ ಷೇರು ಬಂಡವಾಳದೊಂದಿಗೆ ಆರಂಭವಾದ ಈ ಸಂಸ್ಥೆ, ಇಂದು ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಹಂತಕ್ಕೆ ಬೆಳೆದು ನಿಂತಿದೆ.

ಸಂಸ್ಥೆಯು ಕಾಲಕ್ಕೆ ತಕ್ಕಂತೆ ಆಧುನಿಕತೆಯನ್ನು ಅಪ್ಪಿಕೊಂಡು ಬೆಳೆದಿದೆ:

  • ಸುವರ್ಣ ಮತ್ತು ಅಮೃತ ಮಹೋತ್ಸವ: 1976ರಲ್ಲಿ ವೈ.ಸಿ. ಸಿದ್ದಪ್ಪನವರ ನೇತೃತ್ವದಲ್ಲಿ ಸುವರ್ಣ ಮಹೋತ್ಸವ ಹಾಗೂ 2000-01ರಲ್ಲಿ ಎಸ್.ಎನ್. ರುದ್ರಮುನಿಯವರ ನೇತೃತ್ವದಲ್ಲಿ ಅಮೃತ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗಿದೆ.
  • ಸ್ವಂತ ಸುಸಜ್ಜಿತ ಕಟ್ಟಡ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಪಡೆದು, ಸುಮಾರು 2.25 ಕೋಟಿ ರೂ. ವೆಚ್ಚದಲ್ಲಿ ‘ಬಸವ ಸದನ’ ಎಂಬ ಸುಸಜ್ಜಿತ ಕಚೇರಿ ಮತ್ತು ಸಭಾಭವನವನ್ನು ನಿರ್ಮಿಸಿಕೊಳ್ಳಲಾಗಿದೆ.
  • ಆರ್ಥಿಕ ಸುಭದ್ರತೆ: 2025-26ನೇ ಸಾಲಿನಲ್ಲಿ ಸಂಘವು 41,57,788 ರೂಪಾಯಿಗಳ ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕ ಶಿಸ್ತನ್ನು ಪ್ರದರ್ಶಿಸಿದೆ.

ಕೇವಲ ಸಾಲ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ಸಂಘವು ಸಾಮಾಜಿಕ ಕಳಕಳಿಯನ್ನೂ ಮೆರೆದಿದೆ.

  • ಪ್ರತಿಭಾ ಪುರಸ್ಕಾರ: ಮಾಜಿ ಮುಖ್ಯಮಂತ್ರಿ ಕರ್ನಾಟಕ ರತ್ನ ದಿ.ಎಸ್.ನಿಜಲಿಂಗಪ್ಪನವರ ಸ್ಮರಣಾರ್ಥ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
  • ಪ್ರೋತ್ಸಾಹ: ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
  • ಶಿಕ್ಷಣಕ್ಕೆ ನೆರವು: ಅಮೃತ ಮಹೋತ್ಸವ ಸಹಾಯಾರ್ಥ ನಿಧಿಯಡಿ ಬಸವೇಶ್ವರ ಅಕಾಡೆಮಿ ಆಫ್ ಎಜ್ಯುಕೇಷನ್‌ನ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಗುತ್ತಿದೆ.
  • ಗೌರವ: ಸಂಘದ ಶಿಸ್ತುಬದ್ಧ ಆಡಳಿತಕ್ಕಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ “ಉತ್ತಮ ಸಹಕಾರ ಸಂಘ ಪ್ರಶಸ್ತಿ” (2024-25) ಲಭಿಸಿದೆ.

30-06-2025 ಕ್ಕೆ ಯಶಸ್ವಿಯಾಗಿ ನೂರು ವರ್ಷ ಪೂರೈಸಿರುವ ಸಂಘವು, ಈ ಐತಿಹಾಸಿಕ ಘಟ್ಟವನ್ನು ಸ್ಮರಣೀಯವಾಗಿಸಲು ಮೇ 16 ಮತ್ತು 17, 2026 ರಂದು ಭವ್ಯ ‘ಶತಮಾನೋತ್ಸವ ಕಾರ್ಯಕ್ರಮ’ವನ್ನು ಹಮ್ಮಿಕೊಂಡಿದೆ. ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಮತ್ತು ಗಣ್ಯರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದೆ. ಈ ನೆನಪಿಗಾಗಿ ವಿಶೇಷ ‘ಸ್ಮರಣ ಸಂಚಿಕೆ’ಯನ್ನು ಬಿಡುಗಡೆ ಮಾಡಲಾಗುವುದು.

ಇದೇ ಸುಸಂದರ್ಭದಲ್ಲಿ ಗ್ರಾಹಕರ ದಶಕಗಳ ಬೇಡಿಕೆಯಾಗಿದ್ದ ‘ಭದ್ರತಾ ಕಪಾಟು’ (Safe Lockers) ಸೌಲಭ್ಯವನ್ನು ಉದ್ಘಾಟಿಸಲಾಗುತ್ತಿದ್ದು, ಇದು ಸದಸ್ಯರ ಆಸ್ತಿಪಾಸ್ತಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಿದೆ.

ನೂರು ವರ್ಷಗಳ ಕಾಲ ಸಂಘದ ಏಳಿಗೆಗೆ ಶ್ರಮಿಸಿದ ಪದಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ನಿರಂತರ ಸಹಕಾರ ನೀಡುತ್ತಿರುವ ಸದಸ್ಯರೇ ಈ ಮಹತ್ತರ ಸಾಧನೆಯ ಹಿಂದಿನ ಶಕ್ತಿ ಎಂದು ಸಂಘದ ಆಡಳಿತ ಮಂಡಳಿ ಹೆಮ್ಮೆಯಿಂದ ಸ್ಮರಿಸುತ್ತದೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಳ್ಳೇಕೆರೆ ಸಂತೋಷ್ ಸೇರಿದಂತೆ ಪ್ರಮುಖರಾದ ಬೆನಕಪ್ಪ, ಚಂದ್ರಯ್ಯ, ವಿರೂಪಾಕ್ಷಪ್ಪ, ವಾಗ್ದೇವಿ, ಸುಜಾತ ಬಸವರಾಜ್, ವಿ.ಸಿ.ಎಸ್. ಮೂರ್ತಿ, ಪಿ. ರುದ್ರೇಶ್, ರಾಜಶೇಖರ್, ಜೆ. ವಿಜಯಕುಮಾರ್, ಗಣೇಶ್ ಎಂ. ಅಂಗಡಿ, ಪ್ರದೀಪ್ ವಿ. ಎಲ್., ಸಚಿನ್, ಮೋಹನ್, ಹಾಲೇಶ್ ಹಾಗೂ ಲೋಕಣ್ಣ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

Leave a Comment