ಬೆಂಗಳೂರು: ಕೋಟ್ಯಂತರ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಿರಂತರ ಶ್ರಮ ಮತ್ತು ಸರ್ವರ ಸಹಕಾರದಿಂದ ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಸಮಾರಂಭವು ಅತ್ಯಂತ ಅಪೂರ್ವ ಹಾಗೂ ಐತಿಹಾಸಿಕ ಯಶಸ್ಸು ಸಾಧಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ಯುವಿ. ರಾಘವೇಂದ್ರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ‘ಗಾಯತ್ರಿ ವಿಹಾರ’ದಲ್ಲಿ ಹಮ್ಮಿಕೊಂಡಿದ್ದ ಅಭಿಮಾನೋತ್ಸವದ ಯಶಸ್ಸಿನ ಅಭಿನಂದನಾ ಕಾರ್ಯಕ್ರಮ ಹಾಗೂ ಕೃತಜ್ಞತಾ ಔತಣಕೂಟದಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ಶ್ರಮಕ್ಕೆ ಶ್ಲಾಘನೆ
ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಸಂಸದರು, “ಈ ಬೃಹತ್ ಸಮಾವೇಶದ ಯಶಸ್ಸಿನ ಹಿಂದೆ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಪ್ರಕೋಷ್ಠಗಳ ಸಂಚಾಲಕರ ಅಹೋರಾತ್ರಿ ಶ್ರಮವಿದೆ. ಚಿತ್ರದುರ್ಗದ ಬಿರು ಬಿಸಿಲನ್ನೂ ಲೆಕ್ಕಿಸದೆ ಸಮಾವೇಶಕ್ಕೆ ಹರಿದುಬಂದಿದ್ದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಿಸುವ ಮೂಲಕ ಸ್ವಯಂಸೇವಕರು ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ್ದಾರೆ” ಎಂದು ಶ್ಲಾಘಿಸಿದರು.
ಗಣ್ಯರ ಮತ್ತು ಪೂಜ್ಯ ಗುರುಗಳ ಸಮ್ಮುಖದಲ್ಲಿ ನೆರವೇರಿದ ಸಮಾವೇಶ
“ಅಭಿಮಾನೋತ್ಸವಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ, ನಮ್ಮ ಆಹ್ವಾನವನ್ನು ಮನ್ನಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದು ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತು. ಜೊತೆಗೆ, ರಾಜ್ಯದ ನೂರಾರು ಮಠಾಧೀಶರು, ಪೂಜ್ಯ ಸ್ವಾಮೀಜಿಗಳು ಹಾಗೂ ಹರಗುರು ಚರಮೂರ್ತಿಗಳು ಆಗಮಿಸಿ ಆಶೀರ್ವದಿಸಿದ್ದರಿಂದ ಇಡೀ ಸಮಾರಂಭವು ಅತ್ಯಂತ ಸಾಂಗವಾಗಿ ಮತ್ತು ದಿವ್ಯವಾಗಿ ನೆರವೇರಿತು,” ಎಂದು ಬಿ.ವೈ.ರಾಘವೇಂದ್ರ ಅವರು ನೆನೆದರು.
ಇದೇ ಸಂದರ್ಭದಲ್ಲಿ, ಅಭಿಮಾನೋತ್ಸವ ಮುಗಿದ ಮರುದಿನವೇ ಗೌರವಾನ್ವಿತ ಪ್ರಧಾನಮಂತ್ರಿಯವರು ಬೆಂಗಳೂರಿಗೆ ಆಗಮಿಸಿದ್ದನ್ನು ಸ್ಮರಿಸಿದ ಅವರು, ಪ್ರಧಾನಿಗಳನ್ನು ಸ್ವಾಗತಿಸಲು ಹರಿದುಬಂದಿದ್ದ ಸಹಸ್ರಾರು ಜನಸ್ತೋಮದ ಉತ್ಸಾಹವನ್ನು ಕೊಂಡಾಡಿದರು.
ವಿಘ್ನವಿಲ್ಲದೆ ಸಾಗಿದ ಐತಿಹಾಸಿಕ ಕಾರ್ಯಕ್ರಮ
ಸಮಾವೇಶದ ಶಿಸ್ತಿನ ಬಗ್ಗೆ ಮಾತನಾಡಿದ ಅವರು, “ಇಷ್ಟು ದೊಡ್ಡ ಮಟ್ಟದ ಜನಸಾಗರ ಸೇರಿದ್ದರೂ ಕಾರ್ಯಕ್ರಮಕ್ಕೆ ಯಾವುದೇ ಸಣ್ಣ ಕಪ್ಪು ಚುಕ್ಕೆಯೂ ತಗುಲದಂತೆ ಅತ್ಯಂತ ವ್ಯವಸ್ಥಿತವಾಗಿ ಎಲ್ಲವೂ ನೆರವೇರಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಮಿಗಿಲಾದ ಯಶಸ್ಸು ಸಿಕ್ಕಿರುವುದಕ್ಕೆ ದೈವಾನುಗ್ರಹ ಮತ್ತು ನಿಮ್ಮೆಲ್ಲರ ಹಾರೈಕೆಯೇ ಮುಖ್ಯ ಕಾರಣ” ಎಂದರು.
ಬಿಜೆಪಿ ಅಧಿಕಾರಕ್ಕೆ ತರಲು ಇಂದಿನಿಂದಲೇ ಶ್ರಮಿಸಿ: ಕಾರ್ಯಕರ್ತರಿಗೆ ಬಿ.ವೈ.ರಾಘವೇಂದ್ರ ಕರೆ
ಇಡೀ ರಾಜ್ಯವೇ ತಿರುಗಿ ನೋಡುವಂತಹ ಅನನ್ಯ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಯುವಶಕ್ತಿ ಮತ್ತು ಸ್ವಯಂಸೇವಕರ ಪಾತ್ರ ಅತ್ಯಂತ ದೊಡ್ಡದಾಗಿದೆ. ಯುವಜನರ ಮತ್ತು ಕಾರ್ಯಕರ್ತರ ಈ ನಿರಂತರ ಬೆಂಬಲ ನಮಗೆ ಸದಾ ಶ್ರೀರಕ್ಷೆ ಎಂದು ಅಭಿಪ್ರಾಯಪಟ್ಟ ರಾಘವೇಂದ್ರ ಅವರು, “ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ (BJP) ಅಧಿಕಾರಕ್ಕೆ ತರಲು ನಾವೆಲ್ಲರೂ ಇಂದಿನಿಂದಲೇ ಒಗ್ಗಟ್ಟಾಗಿ, ಶ್ರದ್ಧೆಯಿಂದ ದುಡಿಯೋಣ” ಎಂದು ನೆರೆದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಅಭಿನಂದನಾ ಸಮಾರಂಭದಲ್ಲಿ ಪಕ್ಷದ ಪ್ರಮುಖ ಮುಖಂಡರು, ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಉಪಸ್ಥಿತರಿದ್ದರು.