ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಾಯಕ ಸಮುದಾಯಗಳಿಗೆ ಬಿಜೆಪಿ ಸದಾ ಶಕ್ತಿ; ಕಾನೂನು ಸುವ್ಯವಸ್ಥೆ ವೈಫಲ್ಯ, ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಿರಿ: ಬಿ.ವೈ. ವಿಜಯೇಂದ್ರ ಕರೆ

On: July 11, 2026 9:05 PM
Follow Us:

ಮೈಸೂರು: “12ನೇ ಶತಮಾನದಲ್ಲಿ ಜಗದ್ಗುರು ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂಬ ಮಹತ್ವದ ತತ್ವದ ಮೂಲಕ ಸರ್ವ ಕಾಯಕ ಸಮುದಾಯಗಳನ್ನು ಒಗ್ಗೂಡಿಸಿ ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ, 21ನೇ ಶತಮಾನದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ‘ಕಾಯುವುದೇ ಕೈಲಾಸ’ ಎಂಬಂತೆ ವರ್ತಿಸುತ್ತಿದೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಮಾಜಗಳ ನಡುವೆ ವಿಷಬೀಜ ಬಿತ್ತಿ ಜನರನ್ನು ವಿಭಜಿಸುವ ರಾಜಕಾರಣ ಮಾಡುತ್ತಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಮೈಸೂರಿನ ಜಿ. ಕೆ. ಮೈದಾನದಲ್ಲಿ ಮೈಸೂರಿನ ಕಾಯಕ ಸಮುದಾಯಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್‌ನ ನೂತನ ಸದಸ್ಯ ರಘು ಆರ್. ಕೌಟಿಲ್ಯ ಅವರ ಅಭಿನಂದನೆ ಹಾಗೂ ಭಾರತೀಯ ಜನತಾ ಪಾರ್ಟಿಗೆ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ವಿಜಯೇಂದ್ರ ಅವರು, “ದೇಶದಲ್ಲಿ ಸುದೀರ್ಘ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಶೋಷಿತ, ಪೀಡಿತ ಕಾಯಕ ಸಮುದಾಯಗಳ ಕಣ್ಣೀರು ಒರೆಸುವ ಯಾವುದೇ ಪ್ರಾಮಾಣಿಕ ಕೆಲಸ ಮಾಡಿಲ್ಲ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ರಾಜಕಾರಣ ಮಾಡಿದ್ದನ್ನು ಬಿಟ್ಟರೆ ಶೋಷಿತರಿಗೆ ಇವರು ನೀಡಿದ ಕೊಡುಗೆ ಶೂನ್ಯ. ಅಂದು ಕಾಂಗ್ರೆಸ್ ಮನಸ್ಸು ಮಾಡಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪ್ರಧಾನಿ ಮಾಡಬಹುದಿತ್ತು. ಆದರೆ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ಇಂದು ಅಂಬೇಡ್ಕರ್, ದೇವರಾಜು ಅರಸು ಇಲ್ಲವೇ ಮಹಾತ್ಮ ಗಾಂಧೀಜಿಯವರ ಹೆಸರು ಹೇಳುವ ಯಾವುದೇ ನೈತಿಕತೆ ಇಲ್ಲ,” ಎಂದರು.

“ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಡಿ. ಕೆ. ಶಿವಕುಮಾರ್ ಹಾಗೂ ಬಿ. ಕೆ. ಹರಿಪ್ರಸಾದ್ ಅವರು ಈ ವರ್ಗಕ್ಕೆ ನೀಡಿದ ಕೊಡುಗೆಯಾದರೂ ಏನು? ರಾಜ್ಯದಲ್ಲಿ ದಲಿತರ ಹತ್ಯೆಯಾಗುತ್ತಿದ್ದರೂ ಈ ನಾಲಾಯಕ್ ಸರ್ಕಾರ ಏನೂ ಮಾಡುತ್ತಿಲ್ಲ. ನರಸತ್ತ ಕಾಂಗ್ರೆಸ್ ಸರ್ಕಾರಕ್ಕೆ ಅಹಿಂದ ವರ್ಗದವರ ಮೇಲೆ ಕಾಳಜಿಯಿಲ್ಲ. ಬಡವರು ಬಡವರಾಗಿಯೇ ಉಳಿಯಲು ಕಾಂಗ್ರೆಸ್ ನೀತಿಗಳೇ ಕಾರಣ,” ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಸಂಪೂರ್ಣ ವೈಫಲ್ಯ: ಸರಣಿ ಹತ್ಯೆಗಳಿಗೆ ಸರ್ಕಾರದ ಮೌನ ಸಾಕ್ಷಿ – ಬಿ.ವೈ.ವಿಜಯೇಂದ್ರ

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿವೆ” ಎಂದು ಬಿಜೆಪಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

  • ಗವಿಸಿದ್ದಪ್ಪನ ಬರ್ಬರ ಹತ್ಯೆ: ಕೊಪ್ಪಳದಲ್ಲಿ ವಾಲ್ಮೀಕಿ ಸಮಾಜದ ಯುವಕ ಗವಿಸಿದ್ದಪ್ಪನ ಬರ್ಬರ ಹತ್ಯೆಯಾದರೂ ಸರ್ಕಾರ ಮೂಕಪ್ರೇಕ್ಷಕನಾಗಿದೆ.
  • ಲವ್ ಜಿಹಾದ್ ಪ್ರಕರಣಗಳು: ಯಲ್ಲಾಪುರದಲ್ಲಿ ದಲಿತ ಮಹಿಳೆ ಹಾಗೂ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆಯಂತಹ ಲವ್ ಜಿಹಾದ್ ಪ್ರಕರಣಗಳು ನಡೆದರೂ ಕಠಿಣ ಕ್ರಮ ಕೈಗೊಂಡಿಲ್ಲ.
  • ಸರಣಿ ದೌರ್ಜನ್ಯ ಮತ್ತು ಕೊಲೆ: ಹಾವೇರಿ ಜಿಲ್ಲೆಯ ನರಗಲ್‌ನಲ್ಲಿ ಕುರುಬ ಸಮಾಜದ ಲೋಹಿತ್ ಅವರ ಕೈ ಕಡಿಯಲಾಗಿದೆ ಮತ್ತು ರಟ್ಟೀಹಳ್ಳಿಯಲ್ಲಿ 60 ವರ್ಷದ ಮರಾಠ ಸಮಾಜದ ಹಿರಿಯರಾದ ಶಿವಾಜಿ ರಾವ್ ಅವರನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ.
ಎಸಿ ಕೊಠಡಿಯಲ್ಲೇ ಕೂತ ಸಚಿವರು:
“ಇಷ್ಟೆಲ್ಲಾ ಭೀಕರ ಘಟನೆಗಳು ನಡೆದರೂ ಕಾಂಗ್ರೆಸ್ ಸರ್ಕಾರದ ಯಾವೊಬ್ಬ ಸಚಿವರೂ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸೌಜನ್ಯ ತೋರಿಲ್ಲ. ವಿಧಾನಸೌಧದ ಎಸಿ ಕೊಠಡಿಯಲ್ಲಿ ಕುಳಿತು ಕೇವಲ ಪರಿಹಾರದ ಚೆಕ್ ಕಳುಹಿಸಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ” ಎಂದು ತೀವ್ರವಾಗಿ ಟೀಕಿಸಿದರು.

​”ವಾಲ್ಮೀಕಿ ನಿಗಮದ ನೂರಾರು ಕೋಟಿ ರೂಪಾಯಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿ, ಪಕ್ಕದ ತೆಲಂಗಾಣದಲ್ಲಿ ಬೇನಾಮಿ ಖಾತೆಗಳ ಮೂಲಕ ಲೋಕಸಭಾ ಚುನಾವಣೆಗೆ ಬಳಸಿಕೊಂಡಿದೆ. ಮೂಡಾ ಸೈಟ್ ಹಗರಣ ಹಾಗೂ ಗೃಹಲಕ್ಷ್ಮಿ ಯೋಜನೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ,” ಎಂದು ವಿಜಯೇಂದ್ರ ದೂರಿದರು.

​ಅಲ್ಲದೆ, “ರಾಜ್ಯದ ಬಡ ಚಮ್ಮಾರ ಸಮಾಜದ ಕುಟುಂಬಗಳು ಹೊಲಿಯುತ್ತಿದ್ದ ಶೂ ಮತ್ತು ಚಪ್ಪಲಿಗಳ ಖರೀದಿಗೆ ಇಸ್ವಿ ಇದ್ದ ಹಳೆಯ ವ್ಯವಸ್ಥೆಯನ್ನು ಬದಲಾಯಿಸಿ, ಹಾಲಿ ಸರ್ಕಾರವು ಹೊರರಾಜ್ಯದ ಬೃಹತ್ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ 500 ಕೋಟಿ ರೂ. ಟರ್ನ್ ಓವರ್ ನಿಯಮ ವಿಧಿಸಿ ಟೆಂಡರ್ ನೀಡಿದೆ. ಇದು ನಮ್ಮದೇ ರಾಜ್ಯದ ಬಡ ಚಮ್ಮಾರ ಸಮಾಜದ ಹೊಟ್ಟೆಗೆ ಹೊಡೆಯುವ ಭ್ರಷ್ಟ ನೀತಿಯಾಗಿದೆ,” ಎಂದು ಆರೋಪಿಸಿದರು.

​ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ರಾಜ್ಯದಲ್ಲಿರುವ ಅಕ್ರಮ ನುಸುಳುಕೋರರು ಮತ್ತು ವಲಸಿಗರಿಗೆ ರೆವಿನ್ಯೂ ಇನ್ಸ್‌ಪೆಕ್ಟರ್ ಮಟ್ಟದಲ್ಲೇ ವಾಸಸ್ಥಳ ಪ್ರಮಾಣಪತ್ರ ನೀಡಲು ಹೊರಟಿರುವುದು ದೇಶದ ಭದ್ರತೆಗೆ ದೊಡ್ಡ ಕಂಟಕವಾಗಿದೆ. ಪೌರತ್ವ ತೀರ್ಮಾನಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿದೆಯೇ ಹೊರತು ಕಂದಾಯ ಇಲಾಖೆಯ ಅಧಿಕಾರಿಗಳಿಗಲ್ಲ. ಈ ದೇಶವಿರೋಧಿ ನೀತಿಯ ವಿರುದ್ಧ ಶೀಘ್ರದಲ್ಲೇ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಲಾಗುವುದು ಎಂದು ಅವರು ಎಚ್ಚರಿಸಿದರು.

​”ಕಾಂಗ್ರೆಸ್ ಕೇವಲ ವಂಚನೆಯ ರಾಜಕಾರಣ ಮಾಡಿದರೆ, ಬಿಜೆಪಿ ಎಲ್ಲಾ ಹಿಂದುಳಿದ ಹಾಗೂ ಕಾಯಕ ಸಮಾಜಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿದೆ. ಶ್ರೀ ರಘು ಕೌಟಿಲ್ಯ (ಮಡಿವಾಳ ಸಮಾಜ), ಶ್ರೀ ಶಂಕರಪ್ಪ, ಶ್ರೀ ಶಾಂತಾರಾಮ್ ಸಿದ್ದಿ (ಬುಡಕಟ್ಟು ಸಮಾಜ), ಶ್ರೀ ಕಿಶೋರ್ (ಸವಿತಾ ಸಮಾಜ) ಮುಂತಾದವರನ್ನು ಎಂಎಲ್‌ಸಿ ಮಾಡಲಾಗಿದೆ. ನಾರಾಯಣಸಾ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ 27ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಸಚಿವರಿದ್ದು, ದೇಶದ ಪ್ರಥಮ ಪ್ರಜೆಯಾಗಿ ಬುಡಕಟ್ಟು ಸಮುದಾಯದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ತರಲಾಗಿದೆ,” ಎಂದು ಹೇಳಿದರು.

​ಇದೇ ಹಾದಿಯಲ್ಲಿ ಜೆಡಿಎಸ್ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ವಿಶ್ವಾಸದ ಚರ್ಚೆ ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಒಕ್ಕೂಟವು ಈ ಹಿಂದೂ ವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಎನ್. ಮಹೇಶ್, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪಿ.ಸಿ. ಮೋಹನ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ. ಸುಬ್ಬಣ್ಣ, ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕರ್ನಾಟಕ ಸರ್ಕಾರದ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ ಆದೇಶಕ್ಕೆ ತೀವ್ರ ವಿರೋಧ:​ ಅಕ್ರಮ ವಲಸಿಗರಿಗೆ ಮಣೆ ಹಾಕುತ್ತಿದೆಯೇ ಸರ್ಕಾರ? PRC ಕರಡು ತಕ್ಷಣ ಕೈಬಿಡಲು ಎನ್. ಕೆ. ಜಗದೀಶ್ ಆಗ್ರಹ

ಜನಪರ ಹೋರಾಟಕ್ಕೆ ಹೊಸ ರೂಪುರೇಷೆ: ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆಯಲ್ಲಿ ಸಂಯುಕ್ತ ಹೋರಾಟ– ಕರ್ನಾಟಕ ಕೋರ್ ಕಮಿಟಿ ಸಭೆ

ರಾಜಕೀಯ, ಶಿಕ್ಷಣ, ಸಹಕಾರ ಹಾಗೂ ಸಮಾಜಸೇವೆಯ ನಾಲ್ಕು ದಶಕಗಳ ಅಚಲ ಪಯಣ: ಸೇವೆ, ಸಂಸ್ಕಾರ, ಸಂಘಟನೆಗೆ ಮತ್ತೊಂದು ಹೆಸರು – ಎಸ್.ಪಿ. ದಿನೇಶ್

ರೋಟರಿ ಬಯೋ ಡೈವರ್ಸಿಟಿ ಪಾರ್ಕಿನಲ್ಲಿ ಹಸಿರು ಸಂಕಲ್ಪ; ಪರಿಸರ ಉಳಿದರೆ ಮಾತ್ರ ಮಾನವ ಬದುಕು ಸುರಕ್ಷಿತ: ಡಿ.ಕೆ. ಶೇಷಗಿರಿ

ಆಂತರಿಕ ಭಿನ್ನಮತಕ್ಕೆ ಬ್ರೇಕ್: ಬಿಜೆಪಿ ಬಲವರ್ಧನೆಗೆ ಸುಧಾಕರ್-ವಿಶ್ವನಾಥ್ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಸಾಗಲು ನಿರ್ಧಾರ

ಮತದಾರರ ಗಮನಕ್ಕೆ: ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಿರ್ಲಕ್ಷಿಸಿದರೆ ಕಳಚಲಿದೆ ಮತದಾನದ ಹಕ್ಕು!

Leave a Comment