ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಬಿಡದಿ ಟೌನ್‍ಶಿಪ್ ಯೋಜನೆಗೆ ರೈತರ ಸಮ್ಮತಿ ಕಡ್ಡಾಯ ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

On: July 15, 2026 8:10 PM
Follow Us:

​ಬೆಂಗಳೂರು: ಪ್ರಸ್ತಾವಿತ ಬಿಡದಿ ಸ್ಮಾರ್ಟ್ ಟೌನ್‍ಶಿಪ್ ಯೋಜನೆಗಾಗಿ ಯಾವುದೇ ಒಬ್ಬ ರೈತನ ಜಮೀನನ್ನೂ ಸಹ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಯೋಜನೆಯ ವ್ಯಾಪ್ತಿಯಲ್ಲಿ ಜಮೀನು ನೀಡಲು ಇಷ್ಟವಿಲ್ಲದ ರೈತರು ಮುಕ್ತವಾಗಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ಭರವಸೆ ನೀಡಿದ್ದಾರೆ.

​ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹತ್ವದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಡದಿ ಯೋಜನೆಯ ಇತಿಹಾಸದ ಅಧಿಕೃತ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತುತಪಡಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಯಾರೊಬ್ಬರನ್ನೂ ಭೂಮಿ ನೀಡುವಂತೆ ಒತ್ತಾಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭೂಮಿಯ ಯಥಾಸ್ಥಿತಿ ಬದಲಾಗಲ್ಲ; ರೈತರು ಸ್ವತಂತ್ರರು: ಡಿ.ಕೆ. ಶಿವಕುಮಾರ್

“ಯಾರಿಗೆ ಯೋಜನೆಗಾಗಿ ಭೂಮಿ ನೀಡಲು ಇಷ್ಟವಿಲ್ಲವೋ ಅವರು ಎಂದಿನಂತೆ ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರಬಹುದು. ಯಾರು ಸ್ವಇಚ್ಛೆಯಿಂದ ಭೂಮಿ ನೀಡಲು ಸಿದ್ಧರಿದ್ದಾರೋ, ಅವರು ಸರ್ಕಾರಕ್ಕೆ ಒಪ್ಪಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು. ಆದರೆ ಒಂದು ಗುಂಟೆ ಜಮೀನನ್ನೂ ನಾವು ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ.”

ಅಲ್ಲದೆ, ಭೂಮಿ ನೀಡದ ರೈತರ ಜಮೀನಿನ ಸದ್ಯದ ಸ್ಥಿತಿಗತಿಯನ್ನು (Land Status) ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ರೈತರು ತಮ್ಮ ಜಮೀನನ್ನು ಉಳಿಸಿಕೊಳ್ಳಲು ಸಂಪೂರ್ಣ ಸ್ವತಂತ್ರರು ಎಂದು ಅವರು ಆಶ್ವಾಸನೆ ನೀಡಿದರು.

ಸಾಧಕ-ಬಾಧಕಗಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ

ಯೋಜನೆಯ ಅನುಷ್ಠಾನದ ಕುರಿತು ಕೂಲಂಕಷವಾಗಿ ಪರಿಶೀಲಿಸಲು ಮತ್ತು ರೈತರ ಅಭಿಪ್ರಾಯ ಹಾಗೂ ಆತಂಕಗಳನ್ನು ಆಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಪ್ರಕಟಿಸಿದರು. ಸಮಿತಿಯು ನೀಡುವ ಸಮಗ್ರ ವರದಿ ಬಂದ ನಂತರವೇ ಮುಂದಿನ ನಿರ್ಧಾರವನ್ನು ಸಚಿವ ಸಂಪುಟ (Cabinet) ಸಭೆಯ ಮುಂದೆ ಮಂಡಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ, ಇತ್ತೀಚೆಗೆ ಬಿಡದಿಯಲ್ಲಿ ಜಮೀನು ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, “ಕೆಲವು ವ್ಯಕ್ತಿಗಳು ರಾಜಕೀಯ ಪ್ರೇರಣೆಯಿಂದ ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಹಾದಿ ತಪ್ಪಿದ ಕೆಲವರು ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ,” ಎಂದು ತಿಳಿಸಿದರು.

ಇದು ಹಿಂದಿನ ಸರ್ಕಾರಗಳ ಯೋಜನೆ, ನನ್ನದಲ್ಲ!

“ಬಿಡದಿ ಟೌನ್‍ಶಿಪ್ ಯೋಜನೆ ನನ್ನ ಕನಸಿನ ಯೋಜನೆಯಲ್ಲ. ನಾನು ಎಂದಿಗೂ ಇದರ ಮಾಲೀಕತ್ವ ಅಥವಾ ಶ್ರೇಯಸ್ಸನ್ನು ಪಡೆದಿಲ್ಲ, ಕನಿಷ್ಠ ಇದಕ್ಕೆ ಶಂಕುಸ್ಥಾಪನೆಯನ್ನೂ ಮಾಡಿಲ್ಲ. ನಾನು ಕೇವಲ ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯನ್ನು ಮುಂದುವರಿಸುತ್ತಿದ್ದೇನೆ ಅಷ್ಟೆ. ನಾನು ಕೂಡ ಒಬ್ಬ ರೈತನ ಮಗ, ರೈತರ ಕಷ್ಟ-ನಷ್ಟಗಳು ನನಗೆ ಚೆನ್ನಾಗಿ ಗೊತ್ತು. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ನನ್ನ ಜೀವಮಾನದಲ್ಲಿ ಮಾಡುವುದಿಲ್ಲ,” ಎಂದು ಭಾವುಕರಾಗಿ ನುಡಿದರು.

ಯೋಜನೆಯ ಹಿನ್ನೆಲೆ ಮತ್ತು ದಾಖಲೆಗಳ ವಿವರಣೆ

ಈ ಯೋಜನೆಯ ಇತಿಹಾಸವನ್ನು ಕೆದಕಿದ ಮುಖ್ಯಮಂತ್ರಿಗಳು, “ಹಿಂದಿನ ಸರ್ಕಾರದ ಅವಧಿಯಲ್ಲೇ ಈ ಯೋಜನಾ ಪ್ರದೇಶವನ್ನು ‘ರೆಡ್ ಝೋನ್’ (ಅಭಿವೃದ್ಧಿ ನಿಯಂತ್ರಿತ ವಲಯ) ಎಂದು ಘೋಷಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಬಿಡದಿ ನಗರಾಭಿವೃದ್ಧಿ ಪ್ರಾಧಿಕಾರದ (BDA) ಅನುಮೋದನೆ ಇಲ್ಲದೆ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿರಲಿಲ್ಲ. ತದನಂತರ 2007ರಲ್ಲಿ ಮಾರಂಡಹಳ್ಳಿ, ಒಡೆಯರಹಳ್ಳಿ ಸೇರಿದಂತೆ ಮತ್ತಷ್ಟು ಗ್ರಾಮಗಳನ್ನು ಇದಕ್ಕೆ ಸೇರಿಸಲಾಗಿತ್ತು,” ಎಂದು ದಾಖಲೆಗಳನ್ನು ನೆನಪಿಸಿದರು.

ಖಾಸಗಿ ಸಹಭಾಗಿತ್ವದ ಕುರಿತು ಮಾತನಾಡುತ್ತಾ, “ಹಿಂದಿನ ಸರ್ಕಾರವೇ ಗ್ರಾಮಠಾಣಾ ಸೇರಿದಂತೆ ಆಸ್ತಿಗಳ ಪರಿಹಾರವನ್ನು ಗುರುತಿಸಿತ್ತು. ಖಾಸಗಿ ಡೆವಲಪರ್ ಆದ ‘ಡಿಎಲ್‍ಎಫ್’ (DLF) ಕಂಪನಿಯಿಂದ 400 ಕೋಟಿ ರೂ. ಭದ್ರತಾ ಠೇವಣಿ ಪಡೆದು ಯೋಜನೆಗೆ ಪಾಲ್ಗೊಳ್ಳಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೆ, 2010 ರಲ್ಲಿದ್ದ ಸರ್ಕಾರವೂ ಇದೇ ಯೋಜನೆಯನ್ನು ಮುಂದುವರಿಸಿ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಜಾಗತಿಕ ಟೆಂಡರ್ ಆಹ್ವಾನಿಸಿತ್ತು,” ಎಂದು ಅವರು ಸ್ಪಷ್ಟಪಡಿಸಿದರು.

​ಈ ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಶಾಸಕ ಬಾಲಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ನವೆಂಬರ್ 17ರಂದು ಬಿಜೆಪಿ ವತಿಯಿಂದ ಬೃಹತ್ ಧರಣಿ: ಡಿಕೆಶಿಗೆ ‘ರಿಯಲ್ ಎಸ್ಟೇಟ್ ಮುಖ್ಯಮಂತ್ರಿ’ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ

ರಾಜ್ಯವನ್ನೇ ಬೆಚ್ಚಿಬೀಳಿಸಿದ ನಕಲಿ ಬ್ಯಾಂಕ್ ಖಾತೆ ಹಗರಣ; ರೂ. 87 ಕೋಟಿ ಅಕ್ರಮದ ಹಿಂದೆ ದುಬೈ ಲಿಂಕ್ ಶಂಕೆ: ಸಿಬಿಐ, ಇ.ಡಿ ತನಿಖೆಗೆ ಸಿ.ಟಿ. ರವಿ ಒತ್ತಾಯ

ರಸ್ತೆ ಬದಿ ಕಾರು, ಬೈಕ್ ನಿಲ್ಲಿಸಿ ಮರೆತುಬಿಟ್ರಾ? ಶಿವಮೊಗ್ಗ ಎಸ್‌ಪಿ ನಿಖಿಲ್ ಬಿ. ಅವರಿಂದ ಬಂತು ‘ಅಂತಿಮ ವಾರ್ನಿಂಗ್’!: ಜುಲೈ 15 ರಿಂದ ಶಿವಮೊಗ್ಗದಲ್ಲಿ ಪೊಲೀಸ್ ಬೇಟೆ ಶುರು!

ರೈತರ ಒಪ್ಪಿಗೆಯಿಲ್ಲದ ಬಿಡದಿ ಟೌನ್‌ಶಿಪ್ ಯೋಜನೆ ಸರ್ವಾಧಿಕಾರಿ ಧೋರಣೆ; ರೈತರ ಕಣ್ಣೀರಿನ ಮೇಲೆ ಅಧಿಕಾರದ ಕನಸು ಕಟ್ಟಬೇಡಿ: ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

ರೋಟರಿ ಶಿವಮೊಗ್ಗ ಪೂರ್ವದ ನೂತನ ಪದಾಧಿಕಾರಿಗಳ ಪದಗ್ರಹಣ; ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ: ಡಿ.ಕೆ. ಶೇಷಗಿರಿ

ಜಾತಿ ಜನಗಣತಿ ಹೆಸರಿನಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ; ಬದ್ಧತೆಯ ಕೊರತೆಯಿಂದ ಒಬಿಸಿ ಸಮುದಾಯಗಳ ವಿಶ್ವಾಸಕ್ಕೆ ದ್ರೋಹ: ರಘು ಕೌಟಿಲ್ಯ

Leave a Comment