ಬೆಂಗಳೂರು: “ಸುಖ-ಸಮೃದ್ಧಿಯ ಬದುಕಿಗೆ ಸಂಸ್ಕಾರವೇ ಮುಖ್ಯ. ಬದುಕಿನಲ್ಲಿ ಹೆಜ್ಜೆ ಗುರುತು ಮೂಡಿಸುವುದು ನಡೆದಾಡುವ ನಡಿಗೆಯಿಂದಲ್ಲ, ಬದಲಿಗೆ ನಮ್ಮ ಸನ್ಮಾರ್ಗದ ನಡತೆಯಿಂದ ಮಾತ್ರ ಸಾಧ್ಯ,” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅವರು ಭಾನುವಾರ ಬೆಂಗಳೂರಿನ ಭಾರತ್ ನಗರದ ‘ಮಾನವ ಧರ್ಮ ಮಂಟಪ’ದಲ್ಲಿ ನಡೆದ “ಜನ ಜಾಗೃತಿ ಧರ್ಮ ಸಮಾರಂಭ”ದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


‘ಸಂಸ್ಕಾರದಿಂದಲೇ ಬದುಕು ಉಜ್ವಲವಾಗುತ್ತದೆ’
ಸಮಸ್ಯೆಗಳನ್ನು ಪರಿಹರಿಸಲು ತಾಳ್ಮೆ, ವಿವೇಕ ಹಾಗೂ ಮೌನದ ಅಗತ್ಯವಿದೆ. ರುಚಿಗಾಗಿ ಆರೋಗ್ಯವನ್ನು ಕಳೆದುಕೊಳ್ಳಬಾರದು. ಅನಗತ್ಯ ವಿವಾದಗಳಿಂದ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು. ಸಂಸ್ಕಾರ ಪಡೆದ ಕಲ್ಲು ದೇವರ ಮೂರ್ತಿಯಾಗುತ್ತದೆ. ಸಂಸ್ಕಾರ ಪಡೆದ ನೀರು ತೀರ್ಥವಾಗುತ್ತದೆ. ಅದೇ ರೀತಿ ಸಂಸ್ಕಾರವು ಮನುಷ್ಯನ ಬದುಕನ್ನೂ ಉಜ್ವಲಗೊಳಿಸುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
‘ಗುರುವಿನ ಮಾರ್ಗದರ್ಶನವೇ ಜೀವನದ ಬೆಳಕು’
ವೀರಶೈವ ಧರ್ಮವು ಸಮಸ್ತ ಸಮಾಜದ ಹಿತವನ್ನು ಬಯಸುವ ಧರ್ಮವಾಗಿದೆ. ಜಗದ್ಗುರು ಶ್ರೀ ರೇಣುಕಾಚಾರ್ಯರು ಅಹಿಂಸೆ, ದಯೆ, ಧ್ಯಾನ, ಸತ್ಯ ಹಾಗೂ ಶಾಂತಿಯ ದಶಧರ್ಮ ಸೂತ್ರಗಳನ್ನು ಬೋಧಿಸಿ ಸಮಾಜಕ್ಕೆ ಆದರ್ಶ ಮಾರ್ಗ ತೋರಿಸಿದ್ದಾರೆ. ನಮ್ಮನ್ನು ಹೊಗಳುವವರು ಅನೇಕರಿರಬಹುದು. ಆದರೆ ನಮ್ಮ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವವರೇ ನಿಜವಾದ ಹಿತೈಷಿಗಳು ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
‘ಯುವಕರು ಸಂಘಟಿತರಾದರೆ ಸಮಾಜಕ್ಕೆ ಹೊಸ ದಿಕ್ಕು’
ಭಾರತನಗರದ ಯುವಕರು ಸಂಘಟಿತವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ತಂದಿದೆ. ಯುವಕರು ಸಂಸ್ಕಾರ, ಸೇವಾ ಮನೋಭಾವ ಮತ್ತು ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಿದರೆ ರಾಷ್ಟ್ರದ ಭವಿಷ್ಯ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಜಗದ್ಗುರುಗಳು ಆಶಿಸಿದರು.


‘ಇನ್ನೊಬ್ಬರಿಗಾಗಿ ಬದುಕುವ ಮನಸ್ಸು ಬೆಳೆಸಿಕೊಳ್ಳಿ’ – ಡಿ.ಕೆ. ಶಿವಕುಮಾರ್
ಬೆಂಗಳೂರು ಭಾರತ್ ನಗರದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು .
“ಮನುಷ್ಯನಿಗೆ ಎರಡು ಕೈಗಳಿವೆ. ಒಂದು ಕೈ ತನ್ನನ್ನು ತಾನು ಕಾಪಾಡಿಕೊಳ್ಳಲು, ಇನ್ನೊಂದು ಕೈ ತನ್ನನ್ನು ನಂಬಿದವರನ್ನು ಕಾಪಾಡಲು ಬಳಸಬೇಕು. ಭಾರತೀಯ ಉತ್ಕೃಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಧರ್ಮ ಪೀಠಗಳು ಅತ್ಯುತ್ತಮವಾಗಿ ಉಳಿಸಿ-ಬೆಳೆಸಿಕೊಂಡು ಬಂದಿವೆ.
ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠವು ಯಾವಾಗಲೂ ಭಾವೈಕ್ಯತೆ ಮತ್ತು ಸಾಮರಸ್ಯದ ಬದುಕನ್ನು ರೂಪಿಸಲು ಶ್ರಮಿಸಿದೆ. ಮುಖ್ಯಮಂತ್ರಿಯಾದ ನಂತರ ಶ್ರೀಗಳ ಆಶೀರ್ವಾದ ಪಡೆಯುವ ಅವಕಾಶ ಒದಗಿ ಬಂದಿರುವುದು ನನಗೆ ಅತ್ಯಂತ ಸಂತೋಷದ ಕ್ಷಣ,” ಎಂದರು.

‘ಒಗ್ಗಟ್ಟೇ ಸಮಾಜದ ಶಕ್ತಿ’
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ-ಲಿಂಗಾಯತ ಸಮಾಜದಲ್ಲಿ ಹಲವು ಉಪಪಂಗಡಗಳಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು. ಬಸವಾದಿ ಶಿವಶರಣರು ಹಾಗೂ ಆಚಾರ್ಯ ಪೀಠಗಳು ಸಾಮರಸ್ಯದ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದರು.


‘ಮಾತು-ಕೃತ್ಯ ಒಂದಾದಾಗಲೇ ಯಶಸ್ಸು’
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾತು ಮತ್ತು ಕೃತ್ಯ ಒಂದೇ ಆಗಿದ್ದಾಗ ಮಾತ್ರ ವ್ಯಕ್ತಿ ಆತ್ಮಸಾಕ್ಷಿಗೆ ತಕ್ಕ ಬದುಕು ನಡೆಸಲು ಸಾಧ್ಯ. ಆದರ್ಶ ಜೀವನವೇ ನಿಜವಾದ ಸಾಧನೆ ಎಂದು ತಿಳಿಸಿದರು.
‘ಅಹಂಕಾರವೇ ಅತಿದೊಡ್ಡ ಅಡ್ಡಿ’
ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಿಳಿವಳಿಕೆ ಇಲ್ಲದವರನ್ನು ಮನವೊಲಿಸುವುದು ಸುಲಭ. ಆದರೆ ಸ್ವಲ್ಪ ಜ್ಞಾನದಿಂದಲೇ ಅಹಂಕಾರ ಬೆಳೆಸಿಕೊಂಡವರನ್ನು ಬದಲಾಯಿಸುವುದು ಅತ್ಯಂತ ಕಷ್ಟ. ಗುರುಪೀಠಗಳ ಮಾರ್ಗದರ್ಶನದಲ್ಲಿ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


‘ದೇವರ ಪೂಜೆಗಿಂತ ಮಾನವ ಸೇವೆಯೇ ಶ್ರೇಷ್ಠ’
ಅಧ್ಯಕ್ಷತೆ ವಹಿಸಿದ್ದ ಎಸ್.ಟಿ. ಸೋಮಶೇಖರ್ ಮಾತನಾಡಿ, ದೇವರ ಪೂಜೆ ಮಾತ್ರದಿಂದ ಪುಣ್ಯ ದೊರೆಯುವುದಿಲ್ಲ. ಉತ್ತಮ ಬುದ್ಧಿ, ದಯೆ, ಕರುಣೆ ಹಾಗೂ ಮಾನವ ಸೇವೆಯಿಂದಲೇ ನಿಜವಾದ ಪುಣ್ಯ ಲಭಿಸುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ಗುರುಪೀಠಗಳ ಧ್ಯೇಯವಾಗಿದೆ ಎಂದು ಹೇಳಿದರು.

ಭಕ್ತಿ, ಪೂಜೆ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ
ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಾದ ನೀಡಿದರು. ಸಂಜೆ ವಿವಿಧ ಸಾಂಪ್ರದಾಯಿಕ ವಾದ್ಯ ವೈಭವಗಳೊಂದಿಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದು ಆಶೀರ್ವಾದ ಪಡೆದರು.ಸಮಾರಂಭದ ನಂತರ ಮಹಾ ಪ್ರಸಾದ ವಿನಿಯೋಗ ನೆರವೇರಿತು.
ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಶ್ರೀಮತಿ ವೀಣಾ ಕಾಶಪ್ಪನವರ, ಕೊಡಿಗೇನಹಳ್ಳಿ ನಂಜುಂಡೇಶ್ವರ, ಸಚ್ಚಿದಾನಂದ ಮೂರ್ತಿ, ಹನುಮಂತೇಗೌಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸಂಘೊಳ್ಳಿ ಗುರುಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.











