ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ಆದರೂ ಒಳ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

On: August 25, 2026 10:58 PM
Follow Us:

ಬೆಂಗಳೂರು: ತಾನು ಈಗ ಸರ್ಕಾರದ ಮುಖ್ಯಸ್ಥನಲ್ಲ, ತನ್ನ ಬಳಿ ಯಾವುದೇ ಆಡಳಿತಾತ್ಮಕ ಅಧಿಕಾರವೂ ಇಲ್ಲ. ಆದರೂ ಸಾಮಾಜಿಕ ನ್ಯಾಯ, ಮೀಸಲಾತಿ ವ್ಯವಸ್ಥೆ ಹಾಗೂ ಒಳ ಮೀಸಲಾತಿಯ ವಿಚಾರದಲ್ಲಿ ತನ್ನ ನಿಲುವು ಹಿಂದೆಂದೂ ಬದಲಾಗಿಲ್ಲ ಮತ್ತು ಮುಂದೆಯೂ ಬದಲಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ “ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾದವರು ಹಾಗೂ ಅವಕಾಶಗಳಿಂದ ವಂಚಿತರಾದವರಿಗೆ ಮೀಸಲಾತಿ ದೊರೆಯಲೇಬೇಕು ಎಂದು ಹೇಳಿದರು.

“ನಾವ್ಯಾರು ಬುದ್ಧಿ ಕಡಿಮೆ ಇರುವವರಲ್ಲ. ಆದರೆ ಶತಮಾನಗಳಿಂದ ಅವಕಾಶಗಳಿಂದ ವಂಚಿತರಾಗಿದ್ದೇವೆ. ನಮ್ಮಲ್ಲಿರುವ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಅಂತಹ ಅವಕಾಶವನ್ನು ಒದಗಿಸುವ ವ್ಯವಸ್ಥೆಯೇ ಮೀಸಲಾತಿ. ಆದ್ದರಿಂದ ಮೀಸಲಾತಿ ಕೇವಲ ಸೌಲಭ್ಯವಲ್ಲ, ಸಾಮಾಜಿಕ ನ್ಯಾಯವನ್ನು ಸಾಧಿಸುವ ಪ್ರಮುಖ ಸಾಧನವಾಗಿದೆ” ಎಂದು ಹೇಳಿದರು.

ಬುದ್ಧನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದ್ದು, ಅದರ ವಿರುದ್ಧ ಅನೇಕ ಮಹತ್ವದ ಸಾಮಾಜಿಕ ಸುಧಾರಣಾ ಚಳವಳಿಗಳು ನಡೆದಿವೆ ಎಂದು ಸಿದ್ದರಾಮಯ್ಯ ಹೇಳಿದರು. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಎಂದು ಎಲ್ಲರೂ ಮಾತನಾಡುತ್ತಿದ್ದರೂ, ಇಂದಿಗೂ ಅದು ಸಮಾಜದಲ್ಲಿ ಬೇರೂರಿಕೊಂಡಿರುವುದು ವಿಪರ್ಯಾಸಕರ ಸಂಗತಿ ಎಂದರು.

“ನನಗೆ ಸಮಾಜವನ್ನು ಅರ್ಥಮಾಡಿಕೊಳ್ಳುವ ವಯಸ್ಸು ಬಂದಾಗಿನಿಂದಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ. ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿ ತುಂಬಿದಾಗ ಮಾತ್ರ ಜಾತಿ ಮತ್ತು ವರ್ಣ ವ್ಯವಸ್ಥೆಯ ಬೇರುಗಳನ್ನು ಕಿತ್ತುಹಾಕಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಪಟ್ಟಭದ್ರ ಹಿತಾಸಕ್ತಿಗಳು ಅತ್ಯಂತ ಮುಂದಾಲೋಚನೆಯಿಂದ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿವೆ. ಹೀಗಾಗಿ ಕೇವಲ ಮಾತುಗಳಿಂದ ಅದರ ನಿರ್ಮೂಲನೆ ಸಾಧ್ಯವಿಲ್ಲ. ಶೋಷಿತ ಮತ್ತು ಅವಕಾಶ ವಂಚಿತ ಸಮುದಾಯಗಳನ್ನು ಆರ್ಥಿಕವಾಗಿ ಸಬಲಗೊಳಿಸಿ, ಸಾಮಾಜಿಕವಾಗಿ ಗೌರವಯುತ ಸ್ಥಾನಮಾನ ನೀಡಿ, ರಾಜಕೀಯವಾಗಿ ಅಧಿಕಾರದಲ್ಲಿ ಪಾಲುದಾರರನ್ನಾಗಿಸುವ ಮೂಲಕವೇ ನಿಜವಾದ ಬದಲಾವಣೆ ಸಾಧ್ಯ ಎಂದು ಹೇಳಿದರು.

ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದ ಸಂದರ್ಭದಲ್ಲಿ ದೇಶದಲ್ಲಿ ಮೀಸಲಾತಿ ವಿರೋಧಿ ಶಕ್ತಿಗಳು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಿದ್ದವು ಎಂದು ಸಿದ್ದರಾಮಯ್ಯ ಸ್ಮರಿಸಿದರು.

“ಆ ಸಂದರ್ಭದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಅವರ ಜೀವನವೇ ಹಾಳಾಗುವಂತಹ ಪರಿಸ್ಥಿತಿ ನಿರ್ಮಿಸಲಾಯಿತು. ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರು ದೃಢನಿಶ್ಚಯದಿಂದ ಇರದೇ ಇದ್ದಿದ್ದರೆ ಮಂಡಲ್ ಆಯೋಗದ ವರದಿ ಜಾರಿಗೆ ಬರುವುದು ಅನುಮಾನವಾಗಿತ್ತು. ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಎಷ್ಟು ಮುಖ್ಯ ಎಂಬುದಕ್ಕೆ ಅದು ಉದಾಹರಣೆ” ಎಂದರು.

ಮೀಸಲಾತಿ ಎಂಬುದು ಒಂದು ಹಂತದ ಹೋರಾಟದಿಂದ ಮುಗಿಯುವ ವಿಷಯವಲ್ಲ. ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರ ಜಾಗೃತಿ ಮತ್ತು ಹೋರಾಟ ಅಗತ್ಯ ಎಂದ ಅವರು, ಒಳ ಮೀಸಲಾತಿಯ ವಿಚಾರದಲ್ಲಿಯೂ ಹೋರಾಟಗಾರರು ಒಂದಾಗಿ ಮುಂದುವರಿಯಬೇಕು ಎಂದು ಕರೆ ನೀಡಿದರು.

ಒಳ ಮೀಸಲಾತಿಯ ಅಗತ್ಯತೆ ಮತ್ತು ಅದರ ಸಾಂವಿಧಾನಿಕ ಮಾನ್ಯತೆಯ ಕುರಿತು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟತೆ ಬಂದ ಬಳಿಕ ದೇಶದಾದ್ಯಂತ ಈ ವಿಚಾರಕ್ಕೆ ಹೊಸ ಚರ್ಚೆ ಮತ್ತು ಚಳವಳಿ ಆರಂಭವಾಯಿತು ಎಂದು ಅವರು ಹೇಳಿದರು.

“ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರ್ಕಾರ ಯಾವಾಗಲೂ ಒಳ ಮೀಸಲಾತಿಯ ಪರವಾಗಿದೆ. ಮೀಸಲಾತಿಯಂತಹ ಮಹತ್ವದ ವಿಚಾರದಲ್ಲಿ ಹೋರಾಟಗಾರರ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಬಾರದು. ಸ್ವಾರ್ಥಕ್ಕಾಗಿ ಮೀಸಲಾತಿ ವಿರೋಧಿ ಶಕ್ತಿಗಳ ಜತೆ ಕೈಜೋಡಿಸುವುದು ಶೋಷಿತ ಸಮುದಾಯಗಳ ಹಿತಕ್ಕೆ ವಿರುದ್ಧವಾದುದು. ಯಾರು ನಿಜವಾಗಿ ನಮ್ಮ ಹಕ್ಕುಗಳ ಪರ ಇದ್ದಾರೆ ಮತ್ತು ಯಾರು ವಿರೋಧಿಗಳಿದ್ದಾರೆ ಎಂಬುದನ್ನು ಗುರುತಿಸುವ ಜಾಗೃತಿ ಅಗತ್ಯ” ಎಂದು ಹೇಳಿದರು.

ರಾಜ್ಯದಲ್ಲಿ ಒಳ ಮೀಸಲಾತಿಗಾಗಿ ಸುಮಾರು ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ಧಾರದ ನಂತರ ಕರ್ನಾಟಕದಲ್ಲಿಯೂ ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.

ಅದರಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ರಾಜ್ಯದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ, ಸಂಬಂಧಪಟ್ಟ ಸಮುದಾಯಗಳ ಜನರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಿತ್ತು ಎಂದರು.

“ಆ ವರದಿಯ ಆಧಾರದ ಮೇಲೆ ಆರಂಭದಲ್ಲಿ ಐದು ಗುಂಪುಗಳಾಗಿ ಒಳ ಮೀಸಲಾತಿ ಹಂಚಿಕೆ ಮಾಡುವ ಕುರಿತು ಚಿಂತಿಸಲಾಯಿತು. ನಂತರ ಐದು ಗುಂಪುಗಳನ್ನು ಮೂರು ವಿಭಾಗಗಳನ್ನಾಗಿ ಪರಿಗಣಿಸಿ 6:6:5 ಸೂತ್ರದಡಿ ಮೀಸಲಾತಿ ಹಂಚಿಕೆಗೆ ಪ್ರಯತ್ನಿಸಲಾಯಿತು. ಅಲೆಮಾರಿ ಸಮುದಾಯಗಳನ್ನು ಭೋವಿ ಮತ್ತು ಬಂಜಾರ ಸಮುದಾಯಗಳೊಂದಿಗೆ ಸೇರಿಸುವ ವಿಚಾರವೂ ಚರ್ಚೆಗೆ ಬಂದಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿ, ಮರು ವರ್ಗೀಕರಣದ ವಿರುದ್ಧ ಹೈಕೋರ್ಟ್‌ನಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿದ್ದವು” ಎಂದು ಹೇಳಿದರು.

ನಂತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಶೇ.15ರ ಒಳ ಮೀಸಲಾತಿ ಹಂಚಿಕೆ ಕುರಿತು ಚರ್ಚೆ ನಡೆಯಿತು. ಅಂತಿಮವಾಗಿ ಶೇ.5.25, ಶೇ.5.25 ಮತ್ತು ಶೇ.4.50ರಂತೆ ಮೀಸಲಾತಿ ಹಂಚಿಕೆ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟವೂ ಒಪ್ಪಿಗೆ ನೀಡಿತ್ತು ಎಂದು ವಿವರಿಸಿದರು.

“ಇಷ್ಟೆಲ್ಲಾ ಪ್ರಯತ್ನಗಳಾದ ಬಳಿಕವೂ ಕೆಲವು ಗೊಂದಲಗಳು ಉಳಿದಿವೆ. ಆದರೆ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ವಿಳಂಬವಾಗಬಾರದು. ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಒಳ ಮೀಸಲಾತಿಯನ್ನು ಜಾರಿಗೆ ತರಲೇಬೇಕು” ಎಂದು ಒತ್ತಾಯಿಸಿದರು.

ಪ್ರಸ್ತುತ ಸರ್ಕಾರದ ಮುಖ್ಯಸ್ಥರೊಂದಿಗೆ ಈ ವಿಷಯವನ್ನು ಚರ್ಚಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಉಳಿದಿರುವ ಎಲ್ಲಾ ಗೊಂದಲಗಳನ್ನು ನಿವಾರಿಸಿ, ಅಂತಿಮವಾಗಿ ಸಚಿವ ಸಂಪುಟದ ಮೂಲಕ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು.

“ಮುಖ್ಯಮಂತ್ರಿಗಳು ನನ್ನ ಮಾತನ್ನು ಆಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಅಂತಿಮವಾಗಿ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳುತ್ತದೆ. ಆದರೆ ನನ್ನ ನಿಲುವು ಸ್ಪಷ್ಟವಾಗಿದೆ—ಒಳ ಮೀಸಲಾತಿ ಜಾರಿಯಾಗಲೇಬೇಕು” ಎಂದು ಪುನರುಚ್ಚರಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಕುರಿತು ನೀಡಿದ ಸಂದೇಶವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ನಾನು ಇಲ್ಲಿಯವರೆಗೂ ಸಾಮಾಜಿಕ ನ್ಯಾಯದ ರಥವನ್ನು ಎಳೆದುಕೊಂಡು ಬಂದಿದ್ದೇನೆ. ಸಾಧ್ಯವಾದರೆ ಅದನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಿರಿ, ಆದರೆ ಎಂದಿಗೂ ಹಿಂದಕ್ಕೆ ತಳ್ಳಬೇಡಿ” ಎಂಬ ಆಶಯದಂತೆ ಸಮಾಜ ನಡೆಯಬೇಕು ಎಂದು ಹೇಳಿದರು.

ಸಾಮಾಜಿಕ ನ್ಯಾಯದ ಹೋರಾಟವು ವ್ಯಕ್ತಿ ಅಥವಾ ಒಂದು ಸರ್ಕಾರಕ್ಕೆ ಸೀಮಿತವಾಗಬಾರದು. ಮುಂದಿನ ತಲೆಮಾರುಗಳು ಅದನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅವರು ತಿಳಿಸಿದರು.

ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಜನಸಂಖ್ಯೆಗೆ ಅನುಗುಣವಾಗಿ ಬಳಸುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಮಹತ್ವದ ಕಾನೂನು ಕ್ರಮ ಕೈಗೊಂಡಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

2013ಕ್ಕೂ ಮೊದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದ್ದ ಅನುದಾನ ಸುಮಾರು 8 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ತಮ್ಮ ಸರ್ಕಾರ ಕಾನೂನು ಜಾರಿಗೊಳಿಸಿದ ಬಳಿಕ ಈ ಮೊತ್ತ 15 ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಯಿತು ಎಂದು ಅವರು ಹೇಳಿದರು.

“ಪ್ರಸ್ತುತ ಎಸ್‌ಸಿಪಿ/ಟಿಎಸ್‌ಪಿ ಅಡಿಯಲ್ಲಿ 44,636 ಕೋಟಿ ರೂಪಾಯಿಗಳ ಅನುದಾನವಿದೆ. ಜನಸಂಖ್ಯೆಗೆ ಅನುಗುಣವಾಗಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಹಣವನ್ನು ಮೀಸಲಿಡುವಂತಹ ಕ್ರಮವನ್ನು ಕೈಗೊಳ್ಳಲು ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಬಗ್ಗೆ ನಿಜವಾದ ಬದ್ಧತೆ ಇರಬೇಕು” ಎಂದರು.

ಕಾಯ್ದೆಯಲ್ಲಿದ್ದ 7ಡಿ ವಿಧಿಯನ್ನು ರದ್ದುಪಡಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತಮ್ಮ ಸರ್ಕಾರ ಕೈಗೊಂಡಿತ್ತು ಎಂದ ಅವರು, ಕೆಎಸ್‌ಎಫ್‌ಸಿ ಮೂಲಕ ಕಡಿಮೆ ಬಡ್ಡಿದರದಲ್ಲಿ ಉದ್ಯಮಶೀಲತೆಗೆ ಸಾಲ ಸೌಲಭ್ಯ ಒದಗಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿಯೂ ಕರ್ನಾಟಕವು ಮಹತ್ವದ ಕ್ರಮ ಕೈಗೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರತ್ನಪ್ರಭಾ ಅವರು ಮುಖ್ಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಮಿತಿ ರಚಿಸಿ, ಅದರ ವರದಿಯ ಆಧಾರದ ಮೇಲೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು. ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದರೂ, ಅಂತಿಮವಾಗಿ ಸರ್ಕಾರದ ಕ್ರಮಕ್ಕೆ ಅನುಕೂಲಕರ ತೀರ್ಪು ದೊರಕಿತು ಎಂದು ಹೇಳಿದರು.

“ಇಂತಹ ಮಹತ್ವದ ಸಾಮಾಜಿಕ ನ್ಯಾಯದ ಕ್ರಮಗಳು ಸುಲಭವಾಗಿ ಆಗುವುದಿಲ್ಲ. ಅದಕ್ಕೆ ದೃಢವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆ ಬೇಕಾಗುತ್ತದೆ” ಎಂದು ಅವರು ಹೇಳಿದರು.

2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ ಎಂದು ಉಲ್ಲೇಖಿಸಿದ ಅವರು, ಶೋಷಿತ ಸಮುದಾಯಗಳಿಗೆ ಅಧಿಕಾರ, ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಅವಕಾಶಗಳಲ್ಲಿ ನ್ಯಾಯಯುತ ಪಾಲು ದೊರೆಯಬೇಕು ಎಂದರು.

ಸರ್ಕಾರದಲ್ಲಿ ಶೋಷಿತ ಸಮುದಾಯಗಳಿಗೆ ರಾಜಕೀಯ ಪ್ರತಿನಿಧಿತ್ವ ದೊರೆಯುವಂತೆ ಮಾಡಲು ತಮ್ಮ ರಾಜಕೀಯ ಜೀವನದಲ್ಲಿ ಹಲವು ಬಾರಿ ಪ್ರಯತ್ನಿಸಿದ್ದೇನೆ ಎಂದು ಹೇಳಿದ ಅವರು, ಕೇವಲ ಘೋಷಣೆಗಳಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ; ಅಧಿಕಾರದ ರಚನೆಯಲ್ಲಿಯೂ ಹಿಂದುಳಿದ ಮತ್ತು ಶೋಷಿತ ವರ್ಗಗಳಿಗೆ ಸೂಕ್ತ ಅವಕಾಶ ದೊರೆಯಬೇಕು ಎಂದು ಪ್ರತಿಪಾದಿಸಿದರು.

ತಾವು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರವಾಗಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದರೂ, ಒಳ ಮೀಸಲಾತಿ ಜಾರಿಗೆ ತರುವ ಪ್ರಯತ್ನದ ಸಂದರ್ಭದಲ್ಲಿ ತಮ್ಮ ವಿರುದ್ಧವೇ ಕೆಲವರು ಧಿಕ್ಕಾರ ಕೂಗಿದ್ದರು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

“ಆದ್ದರಿಂದಲೇ ಯಾರು ನಮ್ಮ ಪರವಾಗಿ ನಿಂತಿದ್ದಾರೆ, ಯಾರು ನಮ್ಮ ಹಕ್ಕುಗಳಿಗೆ ವಿರೋಧವಾಗಿದ್ದಾರೆ ಎಂಬುದನ್ನು ಸರಿಯಾಗಿ ಗುರುತಿಸಬೇಕು ಎಂದು ನಾನು ಪದೇ ಪದೇ ಹೇಳುತ್ತೇನೆ. ಕೇವಲ ಭಾವೋದ್ರೇಕಕ್ಕೆ ಒಳಗಾಗದೆ, ನಮ್ಮ ಹಕ್ಕುಗಳಿಗಾಗಿ ನಿಜವಾಗಿ ಕೆಲಸ ಮಾಡಿದವರನ್ನು ಗುರುತಿಸುವ ಪ್ರಜ್ಞೆ ಸಮಾಜದಲ್ಲಿ ಬೆಳೆಯಬೇಕು” ಎಂದು ಹೇಳಿದರು.

ತಾನು ಚುನಾವಣಾ ರಾಜಕೀಯದಿಂದ ಒಂದು ಹಂತದಲ್ಲಿ ನಿವೃತ್ತಿಯಾದರೂ ಸಕ್ರಿಯ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದರು.

“ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಒಳ ಮೀಸಲಾತಿಯ ಹೋರಾಟ ಗುರಿ ತಲುಪುವವರೆಗೆ ನಿಲ್ಲಬಾರದು. ಹೋರಾಟಗಾರರ ನಡುವೆ ಭಿನ್ನಾಭಿಪ್ರಾಯ ಮೂಡಬಾರದು. ನಿಮ್ಮೊಳಗೆ ನಿಮ್ಮ ವಿರುದ್ಧವೇ ಬೆಂಕಿ ಹಚ್ಚುವವರ ಬಗ್ಗೆ ಎಚ್ಚರಿಕೆಯಿಂದಿರಿ. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಹೋರಾಡಿದರೆ ಮಾತ್ರ ನಮ್ಮ ಗುರಿ ಸಾಧಿಸಲು ಸಾಧ್ಯ” ಎಂದು ಕರೆ ನೀಡಿದರು.

ಒಳ ಮೀಸಲಾತಿ ಕೇವಲ ಒಂದು ಸಮುದಾಯದ ಪ್ರಶ್ನೆಯಲ್ಲ, ಇದು ಶತಮಾನಗಳಿಂದ ಅವಕಾಶಗಳಿಂದ ವಂಚಿತರಾದ ವಿವಿಧ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಮಹತ್ವದ ಸಾಮಾಜಿಕ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.

“ಸಾಮಾಜಿಕ ನ್ಯಾಯದ ಹೋರಾಟವನ್ನು ಯಾರೂ ಅರ್ಧದಲ್ಲೇ ನಿಲ್ಲಿಸಬಾರದು. ಅಂಬೇಡ್ಕರ್ ಅವರು ಮುಂದಕ್ಕೆ ಎಳೆದುಕೊಂಡು ಬಂದ ಸಾಮಾಜಿಕ ನ್ಯಾಯದ ರಥವನ್ನು ನಾವು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಬೇಕು. ಯಾವುದೇ ಕಾರಣಕ್ಕೂ ಅದನ್ನು ಹಿಂದಕ್ಕೆ ತಳ್ಳಬಾರದು. ಒಳ ಮೀಸಲಾತಿ ಜಾರಿಯಾಗಬೇಕು, ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಬೇಕು—ಇದೇ ನನ್ನ ಸ್ಪಷ್ಟ ನಿಲುವು” ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಹೋರಾಟಗಾರರಾದ ಬಸವರಾಜ ಕವತಾಳ, ಮಾರಸಂದ್ರ ಮುನಿಯಪ್ಪ, ಅಂಬಣ್ಣ ಸೇರಿದಂತೆ, ವಿವಿಧ ಪರಿಶಿಷ್ಟ ಜಾತಿ ಸಮುದಾಯಗಳ ಮುಖಂಡರು, ಸಾಮಾಜಿಕ ನ್ಯಾಯ ಹೋರಾಟಗಾರರು ಹಾಗೂ ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಕಳ್ಳರಿಗೆ ಸಿಂಹಸ್ವಪ್ನ, ಜನರಿಗೆ ನೆಮ್ಮದಿ; ಎಸ್ಪಿ ನಿಖಿಲ್ ಬಿ. ನೇತೃತ್ವದಲ್ಲಿ ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ: ಬರೋಬ್ಬರಿ ₹5.73 ಕೋಟಿ ಸ್ವತ್ತು ಮಾಲೀಕರ ಕೈಗೆ!

ರಾಯಚೂರಿನಿಂದ ಬಳ್ಳಾರಿವರೆಗೆ ಬಿಜೆಪಿ ಬೃಹತ್ ಪಾದಯಾತ್ರೆ: ಸೆ.1ರಿಂದ 10ರವರೆಗೆ ಸರ್ಕಾರದ ವೈಫಲ್ಯ ಬಯಲು ಅಭಿಯಾನ

ರಾಜ್ಯಪಾಲರಿಗೂ ಮನವಿ ಸಲ್ಲಿಕೆ: ವಿರೋಧ ಪಕ್ಷವನ್ನು ಎದುರಿಸಲಾಗದೆ ಪಲಾಯನ ಮಾಡಿದ ಸರ್ಕಾರ – ಬಿ.ವೈ. ವಿಜಯೇಂದ್ರ ಆರೋಪ

ಸಿರಿಗೆರೆ ಸ್ವಚ್ಛತೆಗೆ ಶ್ರೀ ತರಳಬಾಳು ಮಠದ ಮತ್ತೊಂದು ಕೊಡುಗೆ: ₹13 ಲಕ್ಷ ವೆಚ್ಚದ ನೂತನ ಕಸ ವಿಲೇವಾರಿ ವಾಹನ

ಕರ್ನಾಟಕದಲ್ಲಿ SIR ಕರಡು ಮತದಾರರ ಪಟ್ಟಿ ಪ್ರಕಟ; 1.08 ಕೋಟಿ ಹೆಸರುಗಳು ಡಿಲೀಟ್: ಆಕ್ಷೇಪಣೆಗೆ ಸೆ.23ರವರೆಗೆ ಅವಕಾಶ

ಬೈಂದೂರು ರೈಲ್ವೇ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ

Leave a Comment