ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಬಿಡದಿ ಟೌನ್‌ಶಿಪ್ ರದ್ದುಪಡಿಸಿ; ರೈತರ ಭೂಮಿಗೆ ಕೈಹಾಕಿದರೆ ಉಗ್ರ ಹೋರಾಟ! ಅನ್ಯಾಯ ಮಾಡಿದರೆ ಚುನಾವಣೆಯಲ್ಲಿ ತಕ್ಕ ಪಾಠ: ಹೆಚ್.ಆರ್. ಬಸವರಾಜಪ್ಪ

On: August 26, 2026 6:48 PM
Follow Us:

ಬಿಡದಿ ಟೌನ್‌ಶಿಪ್ ಯೋಜನೆ ರದ್ದತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಮಾತನಾಡಿದ ಅವರು, ಇದು ಕೇವಲ ಬಿಡದಿ ಅಥವಾ ಬೈರಮಂಗಲ ಹೋಬಳಿಯ ರೈತರ ಹೋರಾಟವಲ್ಲ. ಇಡೀ ಕರ್ನಾಟಕದ ರೈತರ ಬದುಕು, ಕೃಷಿ ಭೂಮಿ, ಪರಿಸರ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ ಹೋರಾಟವಾಗಿದೆ ಎಂದು ಹೇಳಿದರು.

ರೈತರು ಸರ್ಕಾರಕ್ಕೆ ಅಧಿಕಾರ ನೀಡಿರುವುದು ಅವರ ಬದುಕನ್ನು ಸುಧಾರಿಸಲು, ಕೃಷಿಯನ್ನು ಉಳಿಸಲು ಮತ್ತು ಜನಪರ ಆಡಳಿತ ನಡೆಸಲು ಹೊರತು, ರೈತರ ಭೂಮಿಯನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ಉದ್ದೇಶಗಳಿಗೆ ಬಳಸಲು ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ದಿನಗಳಲ್ಲಿ ರೈತರ ಭೂಮಿಗೆ ಸಂಬಂಧಿಸಿದಂತೆ ರೆಡ್ ಝೋನ್ ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗಿತ್ತು. ಆದರೆ ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಹ ಕ್ರಮಗಳನ್ನು ಕೈಬಿಡಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ಅವರು ಹೇಳಿದರು.

“ತಪ್ಪು ಮಾಡಿದ ಸರ್ಕಾರಗಳನ್ನು ರೈತರು ಮತ್ತು ಜನತೆ ಮನೆಗೆ ಕಳುಹಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಎಂಬುದು ಇಲ್ಲಿ ಮುಖ್ಯವಲ್ಲ. ರೈತರ ಬದುಕಿನ ಪ್ರಶ್ನೆ ಬಂದಾಗ ಯಾವುದೇ ಸರ್ಕಾರವಿದ್ದರೂ ಜನರ ವಿರೋಧವನ್ನು ಎದುರಿಸಬೇಕಾಗುತ್ತದೆ. ಈ ಹೋರಾಟವನ್ನು ರಾಜಕೀಯ ಪಕ್ಷಗಳ ಆಟವನ್ನಾಗಿ ನೋಡಬಾರದು. ಇದು ರೈತರ ಜೀವನದ ಪ್ರಶ್ನೆ, ಕೃಷಿಯ ಪ್ರಶ್ನೆ ಮತ್ತು ಪರಿಸರದ ಪ್ರಶ್ನೆಯಾಗಿದೆ” ಎಂದು ಹೆಚ್.ಆರ್.ಬಸವರಾಜಪ್ಪ ಹೇಳಿದರು.

ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸುವುದು, ಜೈಲಿಗೆ ಕಳುಹಿಸುವುದು ಅಥವಾ ಪ್ರಕರಣ ದಾಖಲಿಸುವ ಬೆದರಿಕೆ ಹಾಕುವುದರಿಂದ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಸವರಾಜಪ್ಪ ಎಚ್ಚರಿಸಿದರು.

“ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದ ರೈತರ ಮಕ್ಕಳು ಇದ್ದಾರೆ. ಜೈಲಿಗೆ ಹಾಕುವ ಬೆದರಿಕೆಗೆ ನಾವು ಹೆದರುವುದಿಲ್ಲ. ಅಗತ್ಯಬಿದ್ದರೆ ಜೈಲು ಭರೋ ಚಳುವಳಿಗೂ ಕರೆ ನೀಡುತ್ತೇವೆ. ಆಗ ಕರ್ನಾಟಕದ ಜೈಲುಗಳೇ ಸಾಕಾಗುವುದಿಲ್ಲ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು” ಎಂದು ಹೇಳಿದರು.

ಬಿಡದಿ ಭಾಗದ ರೈತ ಮಹಿಳೆಯರು ಕೂಡ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರಕ್ಕೆ ತಮ್ಮ ಉತ್ತರ ನೀಡಿದ್ದಾರೆ. ಅಗತ್ಯಬಿದ್ದರೆ ಮುಂದಿನ ದಿನಗಳಲ್ಲೂ ವಿವಿಧ ರೀತಿಯ ಹೋರಾಟಗಳನ್ನು ಮುಂದುವರಿಸಲು ಮಹಿಳೆಯರು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು.

ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಹುಪಾಲು ರೈತರು ತಮ್ಮ ಭೂಮಿಯನ್ನು ನೀಡಲು ಸಿದ್ಧರಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

“ಬಹುತೇಕ ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವಾಗ, ಹೆಚ್ಚಿನವರು ಭೂಮಿ ನೀಡಲು ಸಿದ್ಧರಿದ್ದಾರೆ ಎಂದು ಸರ್ಕಾರ ಹೇಳುತ್ತಿರುವುದು ಸರಿಯಲ್ಲ. ಸರ್ಕಾರ ನಿಜವಾದ ರೈತರ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಸಂಗ್ರಹಿಸಬೇಕು” ಎಂದು ಒತ್ತಾಯಿಸಿದರು.

ಪ್ರತಿ ಗ್ರಾಮದಲ್ಲೂ ಎಷ್ಟು ರೈತರು ಭೂಮಿ ನೀಡಲು ಸಿದ್ಧರಿದ್ದಾರೆ, ಎಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಬಗ್ಗೆ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು. ಕೇವಲ ಖಾತೆಗಳಿಗೆ ಹಣ ಜಮೆ ಮಾಡಿರುವುದನ್ನೇ ರೈತರ ಒಪ್ಪಿಗೆ ಎಂದು ಪರಿಗಣಿಸಬಾರದು ಎಂದು ಹೇಳಿದರು.

ಸರ್ಕಾರ ನೇಮಕ ಮಾಡುವ ಸಮಿತಿಯಲ್ಲಿ ಕೇವಲ ಸರ್ಕಾರದ ಪರವಾಗಿ ವರದಿ ನೀಡುವ ವ್ಯಕ್ತಿಗಳು ಇರಬಾರದು. ಕೃಷಿ ತಜ್ಞರು, ಪರಿಸರ ತಜ್ಞರು, ಸಾಮಾಜಿಕ ಕ್ಷೇತ್ರದ ತಜ್ಞರು ಹಾಗೂ ರೈತ ಹೋರಾಟಗಾರರ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಬೇಕು ಎಂದು ಬಸವರಾಜಪ್ಪ ಆಗ್ರಹಿಸಿದರು.

ಭೂಮಿ ಸ್ವಾಧೀನದಿಂದ ಕೃಷಿ, ಪರಿಸರ ಮತ್ತು ಸ್ಥಳೀಯ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಸಮಗ್ರ ಅಧ್ಯಯನ ನಡೆಯಬೇಕು. ರೈತರು ಮಾತ್ರವಲ್ಲದೆ ಕೃಷಿ ಕಾರ್ಮಿಕರು ಮತ್ತು ಭೂಮಿಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಭವಿಷ್ಯವನ್ನೂ ಪರಿಗಣಿಸಬೇಕು ಎಂದು ಹೇಳಿದರು.

“ಒಂದು ಊರಿನಲ್ಲಿ ಕೆಲವೇ ಎಕರೆ ಭೂಮಿ ಹೊಂದಿರುವ ನೂರಾರು ರೈತರು ಮತ್ತು ಕುಟುಂಬಗಳು ಬದುಕು ಕಟ್ಟಿಕೊಂಡಿರುತ್ತಾರೆ. ಅಂತಹ ಪ್ರದೇಶದಲ್ಲಿ ಭೂಮಿಯನ್ನು ವಶಪಡಿಸಿಕೊಂಡರೆ ಅದರ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮ ಏನಾಗುತ್ತದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದರು.

ಬಿಡದಿ ಭಾಗದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಬದಲು, ಈಗಾಗಲೇ ಲಭ್ಯವಿರುವ ಸರ್ಕಾರಿ ಭೂಮಿ ಮತ್ತು ವಿವಿಧ ಯೋಜನೆಗಳಿಗೆ ಮೀಸಲಾಗಿರುವ ಲ್ಯಾಂಡ್ ಬ್ಯಾಂಕ್ ಪ್ರದೇಶಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ನೈಸ್ ಯೋಜನೆ ವ್ಯಾಪ್ತಿಯಲ್ಲಿ ಲಭ್ಯವಿದೆ ಎನ್ನಲಾಗುತ್ತಿರುವ ಲ್ಯಾಂಡ್ ಬ್ಯಾಂಕ್ ಕುರಿತು ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು. ಪರ್ಯಾಯ ಭೂಮಿ ಲಭ್ಯವಿದ್ದರೂ ರೈತರ ಕೃಷಿ ಭೂಮಿಯನ್ನೇ ಟೌನ್‌ಶಿಪ್ ಯೋಜನೆಗೆ ಬಳಸಲು ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.

ರೈತರ ಹೋರಾಟವನ್ನು ನಿರ್ಲಕ್ಷಿಸಿ ಬಲವಂತದ ಕ್ರಮ ಕೈಗೊಂಡರೆ ಮುಂದಿನ ಚುನಾವಣೆಯಲ್ಲಿ ಸರ್ಕಾರಕ್ಕೆ ಅದರ ಪರಿಣಾಮ ಎದುರಾಗಲಿದೆ ಎಂದು ಬಸವರಾಜಪ್ಪ ಎಚ್ಚರಿಸಿದರು.

“ಮುಂದಿನ ಚುನಾವಣೆಯ ಕನಸು ಕಾಣುತ್ತಿರುವ ಸರ್ಕಾರ ರೈತರ ನೋವನ್ನು ನಿರ್ಲಕ್ಷಿಸಬಾರದು. ಬಿಡದಿ ರೈತರಿಗೆ ಅನ್ಯಾಯವಾದರೆ ಅದರ ಪರಿಣಾಮ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗುವುದಿಲ್ಲ. ಇಡೀ ಕರ್ನಾಟಕದ ರೈತ ಸಮುದಾಯ ಇದಕ್ಕೆ ಪ್ರತಿಕ್ರಿಯೆ ನೀಡಲಿದೆ” ಎಂದು ಬಸವರಾಜಪ್ಪ ಹೇಳಿದರು.

ಹೋರಾಟಗಾರರು ತಮ್ಮ ಪರವಾಗಿ ಕೃಷಿ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದ ತಜ್ಞರ ಹೆಸರುಗಳನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ಅವರನ್ನು ಸಮಿತಿಯಲ್ಲಿ ಸೇರಿಸಿ ನಿಷ್ಪಕ್ಷಪಾತವಾಗಿ ರೈತರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸರ್ಕಾರ ಪುನರ್‌ಪರಿಶೀಲಿಸಿ ರೈತರ ಅಭಿಪ್ರಾಯಕ್ಕೆ ಗೌರವ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ವಿಧಾನಸೌಧದವರೆಗೂ ವಿಸ್ತರಿಸಲಾಗುವುದು ಎಂದು ಅವರು ಎಚ್ಚರಿಸಿದರು.

“ಇದು ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್‌ನ ರಾಜಕೀಯ ಆಟವಲ್ಲ. ಇದು ರೈತರ ಬದುಕಿನ ಪ್ರಶ್ನೆ. ರೈತರ ಭೂಮಿ, ಪರಿಸರ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ಸರ್ಕಾರ ಸರಿಯಾದ ತೀರ್ಮಾನ ಕೈಗೊಳ್ಳದಿದ್ದರೆ ರಾಜ್ಯದ ರೈತರು ಒಗ್ಗಟ್ಟಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಾರೆ” ಎಂದು ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಬಿಡದಿ ಟೌನ್‌ಶಿಪ್ ಯೋಜನೆ ರದ್ದತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಚಳುವಳಿಗೆ ರಾಜ್ಯದ ವಿವಿಧ ಭಾಗಗಳಿಂದ ರೈತರು, ರೈತ ಸಂಘಟನೆಗಳ ಮುಖಂಡರು ಹಾಗೂ ರೈತ ಮಹಿಳೆಯರು ಬೆಂಬಲ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಶ್ರೀ ತರಳಬಾಳು ಜಗದ್ಗುರುಗಳ ಆಶೀರ್ವಾದ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ: ಆಗಸ್ಟ್ 29ರಿಂದ 31ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಆದರ್ಶ ರಾಜಕಾರಣದ ಪುನರುಜ್ಜೀವನಕ್ಕೆ ಕರೆ: ನೂತನ ಸಭಾಧ್ಯಕ್ಷ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರಿಗೆ ಶ್ರೀ ತರಳಬಾಳು ಜಗದ್ಗುರುಗಳ ಮಾರ್ಗದರ್ಶನ

ಎಂಜಲು ಕಾಸಿಗೆ ಆಸೆ ಬಿದ್ದು ಕಣ್ಣುಮುಚ್ಚಿದ ಅಧಿಕಾರಿಗಳು: ಅಕ್ರಮ ‘ತುಂತೂರು’ ರೆಸಾರ್ಟ್ ಮೇಲೆ ಬಿದ್ದಿತು ಅಬಕಾರಿ ಕಣ್ಣು, ಮಾಲೀಕ ಗಾಜನೂರು ಸದಾನಂದನಿಗೆ ಎಫ್‌ಐಆರ್ ಶಾಕ್!

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ಆದರೂ ಒಳ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳ್ಳರಿಗೆ ಸಿಂಹಸ್ವಪ್ನ, ಜನರಿಗೆ ನೆಮ್ಮದಿ; ಎಸ್ಪಿ ನಿಖಿಲ್ ಬಿ. ನೇತೃತ್ವದಲ್ಲಿ ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ: ಬರೋಬ್ಬರಿ ₹5.73 ಕೋಟಿ ಸ್ವತ್ತು ಮಾಲೀಕರ ಕೈಗೆ!

Leave a Comment