ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಂತಹ ಅತೀ ಸೂಕ್ಷ್ಮ ಹಾಗೂ ಹೈ-ಸೆಕ್ಯುರಿಟಿ ಝೋನ್ನಲ್ಲಿ ಭದ್ರತಾ ಲೋಪ ಎಸಗಿದ ಯೂಟ್ಯೂಬರ್ ಒಬ್ಬನ ವಿರುದ್ಧ ಪಂಪಾ ಪೊಲೀಸರು ಕಾನೂನು ಸಮರ ಸಾರಿದ್ದಾರೆ. ದೇವಾಲಯದ ಪಾವಿತ್ರ್ಯತೆ ಮತ್ತು ಭದ್ರತಾ ನಿಯಮಗಳನ್ನು ಗಾಳಿಗೆ ತೂರಿ, ನಿರ್ಬಂಧಿತ ಅವಧಿಯಲ್ಲಿ ವಿಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ಇದೀಗ ಪೋಲೀಸ್ ವಿಚಾರಣೆಗೆ ಗುರಿಯಾಗಿದ್ದಾನೆ.
ವ್ಯೂವ್ಸ್ಗಾಗಿ ಶಬರಿಮಲೆ ಭದ್ರತಾ ನಿಯಮಕ್ಕೆ : ಸಂಕಷ್ಟಕ್ಕೆ ಸಿಲುಕಿದ ಯೂಟ್ಯೂಬರ್ ವಿರುದ್ಧ ಕ್ರಿಮಿನಲ್ ಕೇಸ್
ಕೇವಲ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಈ ಯೂಟ್ಯೂಬರ್ ಮಾಡಿದ ಸಾಹಸ ಈಗ ಜೈಲು ಪಾಲಾಗುವ ಹಂತಕ್ಕೆ ತಂದಿದೆ. ಏಪ್ರಿಲ್ 18ರಂದು ವಿಷು ಹಬ್ಬದ ನಂತರ ದೇವಸ್ಥಾನವನ್ನು ಅಧಿಕೃತವಾಗಿ ಮುಚ್ಚಲಾಗಿತ್ತು. ಆದರೆ, ಏಪ್ರಿಲ್ 24ರಂದು ‘ನಿರ್ಜನ ಶಬರಿಮಲೆ’ ಎಂಬ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಈತ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದ. ದೇವಸ್ಥಾನದ ಆವರಣಕ್ಕೆ ಸಾಮಾನ್ಯರಿಗೆ ಪ್ರವೇಶವಿಲ್ಲದ ಸಮಯದಲ್ಲಿ ಇವನು ಸನ್ನಿಧಾನದವರೆಗೂ ತಲುಪಿದ್ದು ಹೇಗೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.
ಪೊಲೀಸರ ಕಣ್ಣು ತಪ್ಪಿಸಿ ಸನ್ನಿಧಾನಕ್ಕೆ ಲಗ್ಗೆ!
ಈ ಯೂಟ್ಯೂಬರ್ ಕಳ್ಳಮಾರ್ಗದ ಮೂಲಕ ಬೆಟ್ಟ ಹತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ:
- ಚೆಕ್ಪಾಯಿಂಟ್ ಬೈಪಾಸ್: ಪಂಪಾ ಪೊಲೀಸರ ಕಣ್ತಪ್ಪಿಸಿ ನೀಲಿಮಲ ಮಾರ್ಗದ ಮೂಲಕ ಈತ ನುಸುಳಿದ್ದಾನೆ.
- ಪ್ರತಿ ಹಂತದ ಚಿತ್ರೀಕರಣ: ಅಪ್ಪಾಚಿಮೇಡು, ಶಬರಿಮಲೆ ಪೀಠಂ, ಮರಕೂಟಂ ಮತ್ತು ಚಂದ್ರನಂದನ್ ರಸ್ತೆಯಂತಹ ನಿರ್ಬಂಧಿತ ಪ್ರದೇಶಗಳಲ್ಲಿ ರಾಜಾರೋಷವಾಗಿ ವಿಡಿಯೋ ಮಾಡಿದ್ದಾನೆ.
- ಪವಿತ್ರ 18 ಮೆಟ್ಟಿಲು: ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ 18 ಪವಿತ್ರ ಮೆಟ್ಟಿಲುಗಳ ತಳಭಾಗ ಮತ್ತು ಧ್ವಜಸ್ತಂಭದವರೆಗೆ ತೆರಳಿ ಈತ ಅತಿಕ್ರಮಣ ಎಸಗಿದ್ದಾನೆ.
ಕೋರ್ಟ್ ಆಯುಕ್ತರ ಗರಂ; ತನಿಖೆ ತೀವ್ರ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ನೇಮಿತ ವಿಶೇಷ ಆಯುಕ್ತ ಆರ್. ಜಯಕೃಷ್ಣನ್, ಭದ್ರತಾ ಲೋಪದ ಬಗ್ಗೆ ತಕ್ಷಣದ ವರದಿ ಕೇಳಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಯೂಟ್ಯೂಬರ್ ವಿಡಿಯೋ ಡಿಲೀಟ್ ಮಾಡಿ ಪರಾರಿಯಾಗಲು ಯತ್ನಿಸಿದ್ದಾನಾದರೂ, ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆತನ ಹೆಜ್ಜೆಗಳನ್ನು ಹಿಂಬಾಲಿಸುತ್ತಿದ್ದಾರೆ.

ಕೇವಲ ಅತಿಕ್ರಮಣವಲ್ಲ, ಸಾರ್ವಜನಿಕ ಶಾಂತಿ ಕದಡುವ ಯತ್ನ: ಯೂಟ್ಯೂಬರ್ಗೆ ಪೊಲೀಸ್ ಖಡಕ್ ಎಚ್ಚರಿಕೆ
ಕೇವಲ ವ್ಯಕ್ತಿಯ ಅತಿಕ್ರಮಣ ಮಾತ್ರವಲ್ಲದೆ, ಈತನಿಗೆ ಅಲ್ಲಿನ ಯಾರಾದರೂ ಸಿಬ್ಬಂದಿ ಸಹಕರಿಸಿದ್ದಾರೆಯೇ? ಅಥವಾ ಭದ್ರತಾ ವ್ಯವಸ್ಥೆಯಲ್ಲಿ ಬೃಹತ್ ರಂಧ್ರವಿದೆಯೇ? ಎಂಬ ಆತಂಕ ಸೃಷ್ಟಿಯಾಗಿದೆ. “ಇದೊಂದು ಗಂಭೀರ ಭದ್ರತಾ ಲೋಪ. ಅತಿಕ್ರಮಣ ಪ್ರವೇಶದ ಜೊತೆಗೆ ಸಾರ್ವಜನಿಕ ಶಾಂತಿ ಕದಡುವ ಯತ್ನದ ಅಡಿಯಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಪೋಲೀಸ್ ಮೂಲಗಳು ಎಚ್ಚರಿಸಿವೆ.






