ಮೈಸೂರು: ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸ್ಮರಣಾರ್ಥ ಚಿತ್ರದುರ್ಗದಲ್ಲಿ ಆಯೋಜಿಸಿರುವ ‘ಅಭಿಮಾನೋತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ 8 ರಂದು ಸಂಜೆ 5 ಗಂಟೆಗೆ ಚಿತ್ರದುರ್ಗ ನಗರದಲ್ಲಿ ಯಡಿಯೂರಪ್ಪನವರನ್ನು ‘ಮಿನಿ ದಸರಾ’ ಮಾದರಿಯ ಅದ್ದೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಐತಿಹಾಸಿಕ ಪುರಪ್ರವೇಶ ಮತ್ತು ಮೆರವಣಿಗೆ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಮೇ 8ರಂದು ನಡೆಯುವ ಪುರಪ್ರವೇಶ ಕಾರ್ಯಕ್ರಮವು ಅತ್ಯಂತ ವೈಭವೋಪೇತವಾಗಿರಲಿದೆ. ಸುಮಾರು 25ಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಇಡೀ ಚಿತ್ರದುರ್ಗ ನಗರವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಲಿದೆ. ನಾಡಿನ ರೈತರು, ಮಹಿಳೆಯರು ಮತ್ತು ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಗಣ್ಯರ ಸಮಾಗಮ: ಅಮಿತ್ ಶಾ ಭಾಗಿ
ಮೇ 9 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯ ವೇದಿಕೆಯ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ಸಂಭ್ರಮಾಚರಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಲಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಸಮಾರಂಭವು ಕೇವಲ ರಾಜಕೀಯ ಸಮಾವೇಶವಾಗಿರದೆ, ಧಾರ್ಮಿಕ ಮತ್ತು ಸಾಮಾಜಿಕ ಸಮಾಗಮವಾಗಿಯೂ ಮಾರ್ಪಡಲಿದೆ.
- ಮಠಾಧೀಶರ ಉಪಸ್ಥಿತಿ: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಠಾಧೀಶರು ಮತ್ತು ಸಾಮೀಜಿಗಳು ಕಾರ್ಯಕ್ರಮಕ್ಕೆ ಆಶೀರ್ವದಿಸಲಿದ್ದಾರೆ.
- ಜನಸಾಗರ: ಬೀದರ್ನಿಂದ ಚಾಮರಾಜನಗರದವರೆಗೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
“ಇದು ರಾಜಕೀಯ ಲಾಭಕ್ಕಾಗಿ ಅಲ್ಲ”
ಅಭಿಮಾನೋತ್ಸವಕ್ಕೆ ರಾಜಕೀಯ ಬಣ್ಣ ಹಚ್ಚಬಾರದೆಂದು ವಿಜಯೇಂದ್ರ ಮನವಿ ಮಾಡಿದರು. “ಚುನಾವಣೆಗಿಂತ ಆರು ತಿಂಗಳು ಮುಂಚಿತವಾಗಿ ಈ ಕಾರ್ಯಕ್ರಮ ಮಾಡಿದ್ದರೆ ಇದನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎನ್ನಬಹುದಿತ್ತು. ಆದರೆ ಇದು ಹಿರಿಯ ನಾಯಕನ 50 ವರ್ಷಗಳ ಹೋರಾಟಕ್ಕೆ ಸಲ್ಲಿಸುತ್ತಿರುವ ಗೌರವ,” ಎಂದರು.
“ಬಿಎಸ್ವೈ ಅವರು ಅದೃಷ್ಟದ ಮುಖ್ಯಮಂತ್ರಿಯಲ್ಲ; ಅವರು ಹೋರಾಟದ ಮೂಲಕ ಬಂದವರು. ತಮ್ಮ 50 ವರ್ಷಗಳ ವೃತ್ತಿಜೀವನದಲ್ಲಿ 45 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದು ರೈತರು ಮತ್ತು ಬಡವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ,” ಎಂದು ಅವರು ಸ್ಮರಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯೇಂದ್ರ, ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದರು:
ಅಧಿಕಾರಕ್ಕಾಗಿ ಪೈಪೋಟಿ: “ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹವಣಿಸುತ್ತಿದ್ದರೆ, ಇತ್ತ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ಟವೆಲ್ ಹಾಕಿ ಕುಳಿತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಉಪಚುನಾವಣೆ ಫಲಿತಾಂಶ: ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಫಲಿತಾಂಶದ ನಂತರ ಮುಖ್ಯಮಂತ್ರಿಗಳಿಗೆ ಜ್ಞಾನೋದಯವಾಗಲಿದೆ.
ಮೈಸೂರಿನ ಸ್ಥಿತಿ: ಸಾಂಸ್ಕೃತಿಕ ನಗರಿ ಮೈಸೂರು ಇಂದು ‘ಉಡ್ತಾ ಪಂಜಾಬ್’ ಮಾದರಿಯಲ್ಲಿ ಡ್ರಗ್ಸ್ ಹಾವಳಿಗೆ ತುತ್ತಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಚಿತ್ರದುರ್ಗವೇ ಯಾಕೆ?
ಮಧ್ಯ ಕರ್ನಾಟಕದ ಭಾಗವಾಗಿರುವ ಚಿತ್ರದುರ್ಗವು ಇಡೀ ರಾಜ್ಯದ ಅಭಿಮಾನಿಗಳಿಗೆ ಬರಲು ಅನುಕೂಲಕರವಾಗಿದೆ. ಸಂಸದ ಗೋವಿಂದ ಕಾರಜೋಳ ಅವರ ವಿಶೇಷ ಆಸಕ್ತಿಯ ಮೇರೆಗೆ ಈ ಸ್ಥಳವನ್ನು ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಬೃಹತ್ ಕಾರ್ಯಕ್ರಮವು ರಾಜ್ಯದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಖಚಿತವಾಗಿದೆ.






