ಶಿವಮೊಗ್ಗ: ಮಧ್ಯ ಕರ್ನಾಟಕ ಭಾಗದ ಜನರಿಗೆ ಸುಲಭ ಹಾಗೂ ತ್ವರಿತ ನ್ಯಾಯ ದೊರಕಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವದ ರೊಟೇರಿಯನ್ ಹಾಗೂ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್ ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಳೆದ ಹದಿಮೂರು ದಿನಗಳಿಂದ ನಡೆಯುತ್ತಿರುವ ವಕೀಲರ ಹೋರಾಟಕ್ಕೆ ಬೆಂಬಲ ಸೂಚಿಸಿ ಶಿವಮೊಗ್ಗದ ಎಲ್ಲಾ ಎಂಟು ರೋಟರಿ ಕ್ಲಬ್ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಮಧ್ಯ ಕರ್ನಾಟಕದ ನ್ಯಾಯ ಹಕ್ಕಿಗೆ ಶಿವಮೊಗ್ಗವೇ ಸೂಕ್ತ ಕೇಂದ್ರ” : ಜಿ. ವಿಜಯ್ ಕುಮಾರ್
ಈ ವೇಳೆ ಮಾತನಾಡಿದ ಜಿ. ವಿಜಯ್ ಕುಮಾರ್ ಅವರು, ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಸಮಿತಿಯು ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಮಧ್ಯ ಕರ್ನಾಟಕ ಪ್ರದೇಶವು ಪೂರೈಸುತ್ತದೆ ಎಂದು ಹೇಳಿದರು. ಶಿವಮೊಗ್ಗವು ಭೌಗೋಳಿಕವಾಗಿ ಮಧ್ಯ ಕರ್ನಾಟಕದ ಕೇಂದ್ರ ಭಾಗದಲ್ಲಿರುವುದರಿಂದ ಇಲ್ಲಿ ಸರ್ಕ್ಯೂಟ್ ಪೀಠ ಸ್ಥಾಪಿಸುವುದು ನ್ಯಾಯಸಮ್ಮತ ಹಾಗೂ ಆಡಳಿತಾತ್ಮಕವಾಗಿ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಧ್ಯ ಕರ್ನಾಟಕ ಜಿಲ್ಲೆಗಳನ್ನು ಮಂಗಳೂರಿನ ಕರಾವಳಿ ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಯುಕ್ತಿಯುತವಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನರು ನ್ಯಾಯಾಂಗ ಸೇವೆಗಾಗಿ ಮಂಗಳೂರಿನ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾದರೆ ಅದು ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆ ಉಂಟುಮಾಡಲಿದೆ” ಎಂದು ಹೇಳಿದರು.
ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು, ರಾಜ್ಯಪಾಲರು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಸರ್ಕಾರವು ಜನಾಭಿಪ್ರಾಯವನ್ನು ಗೌರವಿಸಿ ಶಿವಮೊಗ್ಗದಲ್ಲಿಯೇ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
“ಮಂಗಳೂರು ಮಧ್ಯ ಕರ್ನಾಟಕಕ್ಕೆ ಅನುಕೂಲಕರವಲ್ಲ”: ಜಿ.ಆರ್.ರಾಘವೇಂದ್ರ
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಅವರು, ಮಂಗಳೂರಿನಲ್ಲಿ ಪ್ರಸ್ತಾವಿತ ಸರ್ಕ್ಯೂಟ್ ಪೀಠದ ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರು.
“ಕರಾವಳಿ ಭಾಗವನ್ನು ಮಧ್ಯ ಕರ್ನಾಟಕದಿಂದ ಸುಲಭವಾಗಿ ತಲುಪುವುದು ಸಾಧ್ಯವಿಲ್ಲ. ವಿಶೇಷವಾಗಿ ಮಳೆಗಾಲದಲ್ಲಿ ಆಗುಂಬೆ ಹಾಗೂ ಹುಲಿಕಲ್ ಘಾಟ್ ಮಾರ್ಗಗಳಲ್ಲಿ ಸಂಚಾರವೇ ಸವಾಲಾಗುತ್ತದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೀಗಿರುವಾಗ ಮಂಗಳೂರು ಮಧ್ಯ ಕರ್ನಾಟಕದ ಜನರಿಗೆ ನ್ಯಾಯಾಂಗ ಕೇಂದ್ರವಾಗಲು ಸೂಕ್ತವಲ್ಲ” ಎಂದು ಅವರು ಹೇಳಿದರು.
ಈ ಭಾಗದ ಜನರಿಗೆ ತ್ವರಿತ ಮತ್ತು ಸುಲಭ ನ್ಯಾಯ ದೊರಕಬೇಕಾದರೆ ಶಿವಮೊಗ್ಗದಲ್ಲಿಯೇ ಸರ್ಕ್ಯೂಟ್ ಬೆಂಚ್ ಸ್ಥಾಪನೆ ಅಗತ್ಯ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
“ಕಲಬುರಗಿ, ಧಾರವಾಡ ಮಾದರಿಯಲ್ಲಿ ಶಿವಮೊಗ್ಗಕ್ಕೂ ಪೀಠ ಬೇಕು”:ಕಿಶೋರ್ ಕುಮಾರ್ ಡಿ.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಕಿಶೋರ್ ಕುಮಾರ್ ಡಿ. ಮಾತನಾಡಿ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಿಗೆ ಸೇವೆ ಸಲ್ಲಿಸುತ್ತಿರುವ ಧಾರವಾಡ ಮತ್ತು ಕಲಬುರಗಿ ಸರ್ಕ್ಯೂಟ್ ಪೀಠಗಳ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರೋಟರಿ ರಿವರ್ಸೈಡ್ ಅಧ್ಯಕ್ಷ ವಿಶ್ವನಾಥ್ ನಾಯಕ್ ಮಾತನಾಡಿ, ಶಿವಮೊಗ್ಗದಲ್ಲಿ ಸಮರ್ಥ ಹಿರಿಯ ವಕೀಲರು ಮತ್ತು ಕಾನೂನು ತಜ್ಞರ ತಂಡವಿದ್ದು, ಸರ್ಕ್ಯೂಟ್ ಪೀಠದ ಕಾರ್ಯನಿರ್ವಹಣೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು. ಈ ಬೇಡಿಕೆಗೆ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಸಾರ್ವಜನಿಕ ಸಂಘಟನೆಗಳ ಸರ್ವಾನುಮತದ ಬೆಂಬಲವೂ ಇದೆ ಎಂದರು.
“ಜನರಿಗೆ ನ್ಯಾಯ ಇನ್ನಷ್ಟು ಕೈಗೆಟುಕುವಂತಾಗಬೇಕು”: ಧನರಾಜ್
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಧನರಾಜ್ ಮಾತನಾಡಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರಿಗೆ ನ್ಯಾಯವನ್ನು ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ದೊರಕಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆ ಅನಿವಾರ್ಯವಾಗಿದೆ ಎಂದು ಹೇಳಿದರು.
“ಈ ಜಿಲ್ಲೆಗಳು ಬೆಂಗಳೂರಿನಿಂದ ಸುಮಾರು 250 ರಿಂದ 300 ಕಿಲೋಮೀಟರ್ ದೂರದಲ್ಲಿವೆ. ಪ್ರತಿಯೊಂದು ಪ್ರಕರಣಕ್ಕೂ ಬೆಂಗಳೂರಿಗೆ ತೆರಳುವುದು ಸಾಮಾನ್ಯ ಜನರಿಗೆ ಆರ್ಥಿಕ ಹಾಗೂ ಮಾನಸಿಕ ಒತ್ತಡ ಉಂಟುಮಾಡುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟರು.
ರೋಟರಿ ಉತ್ತರದ ಅಧ್ಯಕ್ಷ ಬಸವರಾಜಪ್ಪ ಅವರು ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠದ ಅಗತ್ಯತೆಯನ್ನು ವಿವರಿಸಿದರು.
ರೋಟರಿ ಮಲ್ನಾಡ್ ಅಧ್ಯಕ್ಷ ಪ್ರಕಾಶ್ ಮೂರ್ತಿ ಹಾಗೂ ಕಾರ್ಯದರ್ಶಿ ರಶ್ಮಿ ಮಾತನಾಡಿ, ಮಧ್ಯ ಕರ್ನಾಟಕ ಭಾಗದ ಜನರ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಜಯಶೀಲ ಶೆಟ್ಟಿ ಹಾಗೂ ದೀಪಾ ಶೆಟ್ಟಿ ಮಾತನಾಡಿ, “ಸರ್ಕ್ಯೂಟ್ ಪೀಠ ಕೇವಲ ಬೇಡಿಕೆಯಲ್ಲ; ಇದು ಈ ಭಾಗದ ಜನರ ಮೂಲಭೂತ ನ್ಯಾಯ ಹಕ್ಕಿನ ಪ್ರಶ್ನೆಯಾಗಿದೆ” ಎಂದರು.
“ಪ್ರಯಾಣ ವೆಚ್ಚ ಮತ್ತು ಸಮಯದ ಭಾರ ಕಡಿಮೆಯಾಗಲಿದೆ”
ರೋಟರಿ ಜುಬಿಲಿ ಅಧ್ಯಕ್ಷ ಅಶ್ವಥ್ ಹಾಗೂ ಮಾಜಿ ಅಧ್ಯಕ್ಷ ವಾಗೀಶ್ ಮಾತನಾಡಿ, ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಿಂದ ಮಧ್ಯ ಕರ್ನಾಟಕ ಭಾಗದ ವಕೀಲರು ಮತ್ತು ದಾವೆದಾರರು ಅನಗತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
“ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಾದರೆ ಪ್ರಯಾಣದ ಸಮಯ, ವೆಚ್ಚ ಹಾಗೂ ಸಾರಿಗೆ ಸಮಸ್ಯೆಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ. ಇದರಿಂದ ಜನರಿಗೆ ನ್ಯಾಯ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ರೊಟೇರಿಯನ್ ಆರ್. ಮನೋಹರ್, ರೋಟರಿ ಕ್ಲಬ್ ಶಿವಮೊಗ್ಗದ ವಕೀಲ ಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಹಿರಿಯ ವಕೀಲರು, ಶಿವಮೊಗ್ಗ ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರು ಭಾಗವಹಿಸಿದ್ದರು.







