ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

​ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಒಗ್ಗಟ್ಟಿನ ಹೋರಾಟ; ಪಕ್ಷಕ್ಕೆ ದ್ರೋಹ ಬಗೆದವರನ್ನು ಬಿಡುವುದಿಲ್ಲ: ಬಿ.ವೈ. ವಿಜಯೇಂದ್ರ

On: June 26, 2026 8:01 PM
Follow Us:

ಮಂಗಳೂರು: ರಾಜ್ಯದಲ್ಲಿ ಜನವಿರೋಧಿ ಆಡಳಿತ ನಡೆಯುತ್ತಿದ್ದು, ರೈತರು, ಯುವಕರು, ಬಡವರು ಹಾಗೂ ಸಾಮಾನ್ಯ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಕಾಂಗ್ರೆಸ್ ಸರ್ಕಾರದ ಮುಖವಾಡವನ್ನು ಕಳಚುವ ಕೆಲಸವನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೈಗೊಳ್ಳಲಿದ್ದಾರೆ ಎಂದರು.

ಪಕ್ಷದ ಸಂಘಟನೆ ಹಾಗೂ ಲಕ್ಷಾಂತರ ಕಾರ್ಯಕರ್ತರ ಶಕ್ತಿಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಜನವಿರೋಧಿ, ರೈತರ ವಿರೋಧಿ ಹಾಗೂ ಯುವಜನರ ಆಶೋತ್ತರಗಳಿಗೆ ಸ್ಪಂದಿಸದ ಈ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಜನರೇ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಶ್ವರಪ್ಪ ಹೇಳಿಕೆಗೆ ವಿಜಯೇಂದ್ರ ತಿರುಗೇಟು

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ ಅವರು, ಈ ಬಗ್ಗೆ ಹಲವು ಶಾಸಕರು ತಮಗೆ ದೂರವಾಣಿ ಕರೆ ಮಾಡಿ ಚರ್ಚಿಸಿರುವುದಾಗಿ ತಿಳಿಸಿದರು.

“ಹಿಂದಿನ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 18ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆಯಾಗಿದ್ದನ್ನು ಬಹುಶಃ ಈಶ್ವರಪ್ಪನವರು ಮರೆತಿದ್ದಾರೆ ಎಂದು ಕಾಣುತ್ತದೆ. ಅಂದು ಸಾವಿರಾರು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ, ಅವರನ್ನು ದಮನ ಮಾಡುವ ಷಡ್ಯಂತ್ರ ನಡೆದಿತ್ತು,” ಎಂದು ನೆನಪಿಸಿದರು.

“ಅಂತಹ ಕಠಿಣ ಪರಿಸ್ಥಿತಿಯಲ್ಲಿ 17 ಶಾಸಕರು ನಮ್ಮೊಂದಿಗೆ ಕೈಜೋಡಿಸಿದ್ದರಿಂದಲೇ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಜನಪರ ಬಿಜೆಪಿ ಸರ್ಕಾರ ರಚನೆಯಾಗಲು ಸಾಧ್ಯವಾಯಿತು. ಇದರಿಂದಾಗಿ ನೂರಾರು ಕಾರ್ಯಕರ್ತರಿಗೆ ವಿವಿಧ ನಿಗಮ-ಮಂಡಳಿಗಳಲ್ಲಿ ಅಧಿಕಾರ ಸಿಕ್ಕಿತು. ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಧಿಕಾರ ಅನುಭವಿಸಿದ್ದನ್ನು ಮರೆತಂತಿದೆ. ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣ ಸೇರಿದಂತೆ ಅಂದಿನ ಹಲವು ಪ್ರಸ್ತುತವಲ್ಲದ ವಿಷಯಗಳ ಚರ್ಚೆಗೆ ನಾನೀಗ ಹೋಗುವುದಿಲ್ಲ,” ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

🗳️ ಅಡ್ಡ ಮತದಾನ: ದ್ರೋಹಿಗಳಿಗೆ ರಕ್ಷಣೆಯಿಲ್ಲ

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ ಕುರಿತು ಮಾತನಾಡಿದ ವಿಜಯೇಂದ್ರ, “ಗೌಪ್ಯ ಮತದಾನವಾಗಿರುವುದರಿಂದ ಸತ್ಯ ಹೊರಬರುವುದಿಲ್ಲ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ಸತ್ಯ ಇಂದಲ್ಲ ನಾಳೆ ಖಂಡಿತವಾಗಿ ಹೊರಬರಲಿದೆ. ಈ ಕುರಿತು ಎಲ್ಲಾ ಸಂಪೂರ್ಣ ಮಾಹಿತಿಯನ್ನು ದೆಹಲಿಯಲ್ಲಿ ಕೇಂದ್ರ ವರಿಷ್ಠರಿಗೆ ತಲುಪಿಸಿದ್ದೇನೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ,” ಎಂದು ಎಚ್ಚರಿಸಿದರು.

ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿಯ ಮೂವರು ಶಾಸಕರೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ನಮಗಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಅವರು, “ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ಡಿ.ವಿ. ಸದಾನಂದ ಗೌಡರು ಕರೆ ಮಾಡಿ ಮಾತನಾಡಿದ್ದರು. ಕಾಂಗ್ರೆಸ್‌ನವರು ಕೆಲವು ಬಿಜೆಪಿ ಶಾಸಕರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಸದಾನಂದ ಗೌಡರು ಒಳ್ಳೆಯ ಉದ್ದೇಶದಿಂದಲೇ ಇದನ್ನು ಹೇಳಿದ್ದಾರೆ. ಆದರೆ, ನಾವು ಕೇವಲ ಅನುಮಾನ ಪಡುವುದಾದರೆ ಎಲ್ಲಾ ಶಾಸಕರನ್ನೂ ಅನುಮಾನಿಸಬೇಕಾಗುತ್ತದೆ. ಸದ್ಯಕ್ಕೆ ಅಡ್ಡ ಮತದಾನದ ಚರ್ಚೆಗೆ ಇಲ್ಲಿಗೇ ಇತಿಶ್ರೀ ಹಾಡೋಣ,” ಎಂದರು.

ನನ್ನ ಸಮಯ ಚೆನ್ನಾಗಿದೆ; ನಾಯಕತ್ವದ ಪ್ರಶ್ನೆಗೆ ಉತ್ತರ

ಪಕ್ಷದಲ್ಲಿ ಕೇಳಿಬರುತ್ತಿರುವ ಅಪಸ್ವರ ಹಾಗೂ ನಾಯಕತ್ವದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಟೈಮ್ ಚೆನ್ನಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ರಾಜಕೀಯ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಅಧ್ಯಕ್ಷ ಸ್ಥಾನದಲ್ಲಿರಲು ನಾನು ನಾಲಾಯಕ್. ನನ್ನಿಂದ ಯಾವುದೇ ಅಪಚಾರ ಆಗಿಲ್ಲ, ಹಿರಿಯರಿಗೆ ಅಗೌರವ ತೋರುವ ಅಗತ್ಯವೂ ನನಗಿಲ್ಲ. ರಾಷ್ಟ್ರೀಯ ನಾಯಕರು ನನಗೆ ಜವಾಬ್ದಾರಿ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ,” ಎಂದು ಸ್ಪಷ್ಟಪಡಿಸಿದರು.

“ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವುದು ಪಕ್ಷ ಸಂಘಟನೆಗಾಗಿಯೇ ಹೊರತು, ಮುಂದಿನ ಮುಖ್ಯಮಂತ್ರಿ ಹುದ್ದೆಗೇರಲು ಅಲ್ಲ. ನಾನು ಎಲ್ಲರನ್ನೂ ಒಳಗೊಂಡ ತಂಡವಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ನಾನು ಹೊಂದಾಣಿಕೆ ರಾಜಕೀಯ ಮಾಡಿದರೆ ಅದು ನನ್ನದೇ ಅಪರಾಧವಾಗುತ್ತದೆ,” ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತು ಲೇವಡಿ ಮಾಡಿದ ವಿಜಯೇಂದ್ರ, “ಅಡ್ಡ ಮತದಾನದಲ್ಲಿ ಅವರ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಶಾಸಕರಂತೂ ಸ್ವಯಂಪ್ರೇರಿತರಾಗಿ ಅಡ್ಡ ಮತದಾನ ಮಾಡಿಲ್ಲ. ಡಿ.ಕೆ. ಶಿವಕುಮಾರ್ ಅವರು ಬಹುಮುಖ ಪ್ರತಿಭೆಯ ನಾಯಕ. ಅವರು ಯಾರ ಮನೆಗೆ ಹೋದರೂ ಆ ಮನೆಯವರೇ ಆಗಿಬಿಡುತ್ತಾರೆ,” ಎಂದು ವ್ಯಂಗ್ಯವಾಡಿದರು.

​ಬಿಡದಿ ಟೌನ್‌ಶಿಪ್ ಯೋಜನೆಯಿಂದ ರೈತರನ್ನು ಒಕ್ಕಲೆಬ್ಬಿಸಲು ಬಿಜೆಪಿ ಬಿಡುವುದಿಲ್ಲ. ರೈತರ ಹಿತರಕ್ಷಣೆಗಾಗಿ ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.

​ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಎಜಿ (CAG) ವರದಿ ಉಲ್ಲೇಖಿಸಿದ ಅವರು, “ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳಿದ್ದು, ಇವುಗಳಿಗಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲಾಗುತ್ತಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಈ ಸಮಿತಿಗಳು ಏನು ಮಾಡುತ್ತಿದ್ದವು? ತಕ್ಷಣವೇ ಗ್ಯಾರಂಟಿ ಸಮಿತಿ ಅಧ್ಯಕ್ಷರನ್ನು ಮನೆಗೆ ಕಳುಹಿಸಿ, ಅಧಿಕಾರಿಗಳ ಮೂಲಕ ಪಾರದರ್ಶಕವಾಗಿ ಕೆಲಸ ಮಾಡಿಸಲಿ,” ಎಂದು ಆಗ್ರಹಿಸಿದರು.

​ಕೊನೆಯದಾಗಿ, ಎಸ್‌ಐಆರ್ (SIR) ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸುಳ್ಳು ಅಪಪ್ರಚಾರ ಮಾಡುತ್ತಿದ್ದು, ಇದರ ವಿರುದ್ಧ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಜನಜಾಗೃತಿ ಮೂಡಿಸಲು ನಮ್ಮ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಗ್ರಾಮೀಣ ಮಹಿಳೆಯರ ಬದುಕಿಗೆ ಆಸರೆಯಾದ ಪುಷ್ಪಗಿರಿ ಸಂಸ್ಥೆ: ಜೂನ್ 29ರಂದು ಶಿವಮೊಗ್ಗದಲ್ಲಿ ಬೃಹತ್ ಮಹಿಳಾ ಸಮಾವೇಶ ಹಾಗೂ ‘ವಿದ್ಯಾಚೇತನ’ ಪ್ರಶಸ್ತಿ ಪ್ರದಾನ

RSS ಆರ್ಥಿಕತೆ ಕುರಿತು ಟೀಕಿಸುವವರು ಇತಿಹಾಸ ಅರಿಯಬೇಕು; ದೇಶದಲ್ಲೇ ಅತ್ಯಂತ ಪಾರದರ್ಶಕ ವ್ಯವಸ್ಥೆ ಹೊಂದಿರುವ ಸಂಘಟನೆ ಆರ್‌ಎಸ್‌ಎಸ್‌: ರಾಜೇಶ್ ಪದ್ಮಾರ್

​ಆಟೋ ಹಿಂಬರಹದ ಸಂಸ್ಕೃತಿ: ಮಲೆನಾಡಿನ ರಸ್ತೆಯಲ್ಲಿ ಮಿನುಗಿದ ‘ಟಾಟಾ’ ಎಂಬ ದಾರಿದೀಪ!

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೆಚ್ಚಿದ ಒತ್ತಡ: ಶಾಸಕರು, ವಕೀಲರೊಂದಿಗೆ ಸಿಎಂ ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ

​ಕೋಟಿ ಕೋಟಿ ಬಿಲ್ ಬಾಕಿ: ತುಂಗಾ ಏತ ನೀರಾವರಿ ಸ್ಥಗಿತ, ಮಳೆ ಯಂತ್ರಗಳ ದೋಷದಿಂದ ರೈತರಿಗೆ ವಿಮಾ ವಂಚನೆ: ಸರ್ಕಾರದ ವಿರುದ್ಧ ಹೆಚ್.ಆರ್. ಬಸವರಾಜಪ್ಪ ಆಕ್ರೋಶ!

ಶಿವಮೊಗ್ಗದಲ್ಲಿ ಪ್ರಮುಖ ನಾಗರಿಕರ ಗೋಷ್ಠಿ: ಸಂಘಟಿತ ಸಮಾಜ ನಿರ್ಮಾಣವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮೋಚ್ಚ ಧ್ಯೇಯ – ರಾಜೇಶ್ ಪದ್ಮಾರ್

Leave a Comment