ಚಿಕ್ಕಮಗಳೂರು: “ಕನ್ನಡ ಸಾಹಿತ್ಯ ಲೋಕಕ್ಕೆ ಮಹರ್ಷಿ ಅರವಿಂದರ ಉದಾತ್ತ ವಿಚಾರಧಾರೆಗಳನ್ನು ಪರಿಚಯಿಸಿಕೊಟ್ಟ ಅಪರೂಪದ ಮಹಾನುಭಾವರು ಮಧುರಚೆನ್ನರು,” ಎಂದು ಬಸವತತ್ವಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಬಣ್ಣಿಸಿದರು.
ನಗರದ ದೊಡ್ಡಕುರುಬರಹಳ್ಳಿಯ ಕಲ್ಯಾಣನಗರದಲ್ಲಿರುವ ಬಸವತತ್ವಪೀಠದ ಬಸವ ಮಂದಿರದಲ್ಲಿ ಆಯೋಜಿಸಲಾಗಿದ್ದ 58ನೇ ಶಿವಾನುಭವ ಗೋಷ್ಠಿಯ ಅಂಗವಾಗಿ, ‘ಸೆಲ್ಫಿಬುಕ್’ ಸಾಮಾಜಿಕ ಜಾಲತಾಣದ ಆ್ಯಪ್ ಬಿಡುಗಡೆ ಹಾಗೂ ‘ಮಧುರಚೆನ್ನ’ ಏಕವ್ಯಕ್ತಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬೇಂದ್ರೆಯವರ ಒಡಹುಟ್ಟಿದವರು!
ಕಾರ್ಯಕ್ರಮದಲ್ಲಿ ಮಧುರಚೆನ್ನರ ವ್ಯಕ್ತಿತ್ವವನ್ನು ಸ್ಮರಿಸಿದ ಶ್ರೀಗಳು, “ವರಕವಿ ದರಾ ಬೇಂದ್ರೆಯವರಿಂದಲೇ ‘ಒಡಹುಟ್ಟಿದವ’ ಎಂದು ಕರೆಸಿಕೊಂಡ ಹೆಗ್ಗಳಿಕೆ ಮಧುರಚೆನ್ನರದ್ದು. ಮಧುರಚೆನ್ನರು ದೈಹಿಕವಾಗಿ ಮರೆಯಾದಾಗ ಬೇಂದ್ರೆಯವರು ‘ಅವರನ್ನು ಹೂತಿಲ್ಲ; ಬಿತ್ತೀರಿ’ ಎಂದು ಉದ್ಗರಿಸಿದ್ದರು. ಆ ಮಾತು ಇಂದು ಅಕ್ಷರಶಃ ನಿಜವಾಗಿದೆ. ಅವರನ್ನು ಸಾಹಿತ್ಯಾಸಕ್ತರ ಮನಸಿನಲ್ಲಿ ಉಳಿಸುವ ಮತ್ತು ಬೆಳೆಸುವ ಶ್ಲಾಘನೀಯ ಕೆಲಸವು ಇಂದು ‘ಮಧುರಚೆನ್ನ’ ಏಕವ್ಯಕ್ತಿ ನಾಟಕದ ಮೂಲಕ ಅರ್ಥಪೂರ್ಣವಾಗಿ ನಡೆದಿದೆ,” ಎಂದರು.
ಅರವಿಂದರ ದರ್ಶನ ಮತ್ತು ಬಸವತತ್ವ
“ಮಹರ್ಷಿ ಅರವಿಂದರ ಯೋಗಚಿಂತನೆಗೂ ನಮ್ಮ ಶರಣರ ಬಸವತತ್ವಕ್ಕೂ ಅವಿನಾಭಾವ ಸಂಬಂಧವಿದೆ. ದೈಹಿಕ, ಮಾನಸಿಕ ಹಾಗೂ ಆತ್ಮಿಕ ವಿಕಾಸದ ಮೂಲಕ ಪ್ರತಿಯೊಬ್ಬರೂ ಉನ್ನತ ಸಾಧನೆ ಮಾಡಬೇಕು; ಇದೇ ನಿಜವಾದ ಯೋಗ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಅರವಿಂದರು. ಇದನ್ನೇ 12ನೇ ಶತಮಾನದ ಶರಣರು ಪ್ರತಿಪಾದಿಸಿದ್ದರು. ಈ ಪರಂಪರೆಯನ್ನು ಮಧುರಚೆನ್ನರು ಯಶಸ್ವಿಯಾಗಿ ಮುಂದುವರಿಸಿದರು. ಇಂಥ ಮಹಾನ್ ಕವಿಯ ಕುರಿತಾದ ನಾಟಕವನ್ನು ಅವರ ಸ್ವಂತ ಮೊಮ್ಮಗರಾದ ಜಗದೇವ ಗಲಗಲಿ ಅವರೇ ರಂಗದ ಮೇಲೆ ಪ್ರಸ್ತುತಪಡಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷ,” ಎಂದು ಶ್ರೀಗಳು ಹೆಮ್ಮೆ ವ್ಯಕ್ತಪಡಿಸಿದರು.


ಸ್ಥಳೀಯ ಸಾಮಾಜಿಕ ಜಾಲತಾಣ ಆ್ಯಪ್ಗಳ ಅಗತ್ಯತೆ ಇಂದಿನ ಅನಿವಾರ್ಯ: ಶ್ರೀ ಮರುಳಸಿದ್ಧ ಸ್ವಾಮೀಜಿ
ಇದೇ ಸಂದರ್ಭದಲ್ಲಿ ಜಗತ್ತನ್ನು ನಿಯಂತ್ರಿಸುತ್ತಿರುವ ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ, ಪ್ರಾದೇಶಿಕ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ರೂಪಿಸಲಾದ ‘ಸೆಲ್ಫಿಬುಕ್’ (SelfieBook) ಎಂಬ ವಿನೂತನ ಮೊಬೈಲ್ ಫೋನ್ ಆ್ಯಪ್ ಅನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, “ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮದೇ ಆದ ಸ್ಥಳೀಯ ಸಾಮಾಜಿಕ ಜಾಲತಾಣದ ಆ್ಯಪ್ಗಳ ಅಗತ್ಯ ಮತ್ತು ಅನಿವಾರ್ಯತೆ ತುಂಬ ಇತ್ತು. ಈ ನಿಟ್ಟಿನಲ್ಲಿ ಮೂಡಿಬಂದಿರುವ ಈ ಆ್ಯಪ್ ಯಶಸ್ವಿಯಾಗಲಿ,” ಎಂದು ಆಶಿಸಿದರು.
ಸಮಾರಂಭದಲ್ಲಿ ಸಿಂದಿಗೆರೆ ಕರಡಿ ಗವಿಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹಾಗೂ ಶಿರಸಂಗಿಯ ಶ್ರೀ ಬಸವಮಹಾಂತ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಸೆಲ್ಫಿ ಬುಕ್ ಆ್ಯಪ್ ವಿನ್ಯಾಸಕ ನಂಜೇಶ್ ಬೆನ್ನೂರು ಹಾಗೂ ಪ್ರಸಿದ್ಧ ರಂಗಕರ್ಮಿ ಗಣೇಶ್ ಅಮೀನಗಡ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಇಟಲಿ ಕನ್ನಡ ಅಸೋಸಿಯೇಷನ್ ಅಧ್ಯಕ್ಷರಾದ ಹೇಮೇಗೌಡ ರುದ್ರಪ್ಪ ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಕ್ಕನ ಬಳಗದ ಸದಸ್ಯೆಯರು ಹಾಗೂ ಖ್ಯಾತ ಗಾಯಕಿ ಅಕ್ಷತಾ ಹೆಗಡೆ ಅವರು ವಚನ ಗಾಯನ ನಡೆಸಿಕೊಟ್ಟರು. ನಂತರ ನೆರೆದಿದ್ದ ನೂರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ ‘ಮಧುರಚೆನ್ನ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡು ಜನಮನ ಗೆದ್ದಿತು.








