ಶಿವಮೊಗ್ಗದಲ್ಲಿ ಧಗಧಗಿಸಿದ ರೈತಾಪಿ ರೋಷ: ‘ಅವೈಜ್ಞಾನಿಕ ಹೊಳೆಹೊನ್ನೂರು ರಿಂಗ್ರೋಡ್’ಗೆ ಬ್ರೇಕ್ ಹಾಕಲು ರೈತರ ಬೃಹತ್ ಸಂಗ್ರಾಮ; ಹೊಟ್ಟೆಮೇಲೆ ಬರೆ ಎಳೆಯುವ ಅಭಿವೃದ್ಧಿ ಬೇಕಿಲ್ಲವೆಂದು ರಣಕಹಳೆ!
ಶಿವಮೊಗ್ಗ: ನಾಡಿಗೆ ಅನ್ನ ನೀಡುವ ರೈತನ ಕರುಳ ಕುಡಿಯಂತಿರುವ ಕೃಷಿ ಭೂಮಿಗೆ ‘ಅವೈಜ್ಞಾನಿಕ ರಿಂಗ್ರೋಡ್’ ಎಂಬ ಅಭಿವೃದ್ಧಿಯ ಹೆಸರಲ್ಲಿ ಬೆಂಕಿ ಇಡಲು ಹೊರಟಿರುವ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಬೀದಿ-ಬೀದಿಗಳಲ್ಲಿ ರೈತಾಪಿ ಅಕ್ರೋಶ ಧಗಧಗಿಸಿ ಉರಿದಿದೆ. ಕಷ್ಟಪಟ್ಟು ಬಿತ್ತಿ ಬೆಳೆ ತೆಗೆಯುವ ರೈತನ ಹೊಟ್ಟೆ ಮೇಲೆ ಬರೆ ಎಳೆದು ಮಾಡುವ ಇಂತಹ ವಿನಾಶಕಾರಿ ಅಭಿವೃದ್ಧಿ ನಮಗೆ ಖಂಡಿತ ಬೇಕಿಲ್ಲ ಎಂದು ಘರ್ಜಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, “ರೈತರ ಬದುಕು, ಕೃಷಿ ಭೂಮಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಬಲಿಗೊಟ್ಟು ರಸ್ತೆ ಮಾಡುವುದು ಯಾವ ಸೀಮೆಯ ನ್ಯಾಯ? ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಯೋಜನೆ ಮರುಪರಿಶೀಲಿಸಬೇಕು, ಕೃಷಿ ಭೂಮಿಗೆ ಹಾನಿಯಾಗದ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ರಿಂಗ್ರೋಡ್ ಹೋರಾಟ ಸಮಿತಿ ವತಿಯಿಂದ ಹೆಚ್.ಆರ್. ಬಸವರಾಜಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಲಾಯಿತು. ರೈತರು ಹಾಗೂ ಹೋರಾಟ ಸಮಿತಿಯ ಮುಖಂಡರು ಪ್ರಮುಖ ಬೀದಿಗಳ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಮಿಳಘಟ್ಟ ರಸ್ತೆಯಲ್ಲಿರುವ ನಗರ ಮತ್ತು ಗ್ರಾಮಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ, ಯೋಜನೆಯ ವ್ಯಾಪ್ತಿಗೆ ಒಳಪಡುವ ರೈತರು ವೈಯಕ್ತಿಕವಾಗಿ ತಕರಾರು ಅರ್ಜಿಗಳನ್ನು ಸಲ್ಲಿಸಿದರು.

ಇಂದು ರಸ್ತೆ, ನಾಳೆ ಟೌನ್ಶಿಪ್: ಅಭಿವೃದ್ಧಿಯ ಹೆಸರಲ್ಲಿ ರೈತರ ಜಮೀನಿಗೆ ಸಂಕಷ್ಟ ಎಂದ ರೈತ ನಾಯಕ ಹೆಚ್.ಆರ್.ಬಸವರಾಜಪ್ಪ
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಆರ್. ಬಸವರಾಜಪ್ಪ ಅವರು, “ರಿಂಗ್ರೋಡ್ ಎಂದರೆ ಕೇವಲ ಒಂದು ರಸ್ತೆ ನಿರ್ಮಿಸುವ ಯೋಜನೆ ಎಂದು ಭಾವಿಸಬಾರದು. ರಸ್ತೆ ನಿರ್ಮಾಣವಾದ ನಂತರ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂ ಬಳಕೆಯಲ್ಲಿ ಬದಲಾವಣೆ ಆಗಬಹುದು. ವಸತಿ ಪ್ರದೇಶ, ಟೌನ್ಶಿಪ್ ಹಾಗೂ ಇತರ ಅಭಿವೃದ್ಧಿ ಚಟುವಟಿಕೆಗಳು ನಡೆಯಬಹುದು. ರಸ್ತೆಯ ಎರಡೂ ಬದಿಗಳಲ್ಲಿ ನಿರ್ದಿಷ್ಟ ಅಂತರದ ಭೂಮಿಯನ್ನು ಭವಿಷ್ಯದ ಅಭಿವೃದ್ಧಿ ಉದ್ದೇಶಗಳಿಗೆ ಕಾಯ್ದಿರಿಸುವ ವ್ಯವಸ್ಥೆ ಇದ್ದರೆ, ರೈತರ ಜಮೀನಿನ ಬಳಕೆಯ ಮೇಲೂ ಮುಂದಿನ ದಿನಗಳಲ್ಲಿ ನಿರ್ಬಂಧಗಳು ಎದುರಾಗಬಹುದು” ಎಂದರು.

ಹೀಗಾಗಿ ಯೋಜನೆಯ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ರೈತರೂ ಈಗಲೇ ಎಚ್ಚರಿಕೆಯಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸರ್ಕಾರಕ್ಕೆ ವೈಯಕ್ತಿಕವಾಗಿ ತಕರಾರು ಅರ್ಜಿ ಸಲ್ಲಿಸಬೇಕು. ಯಾರೂ ಕೂಡ ಈ ಅವಕಾಶವನ್ನು ನಿರ್ಲಕ್ಷಿಸಬಾರದು. ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿಕೊಂಡು, ಯಾವ ಸರ್ವೆ ನಂಬರ್ ಯೋಜನೆಯ ವ್ಯಾಪ್ತಿಗೆ ಬರುತ್ತದೆ, ಎಷ್ಟು ಭೂಮಿ ಪರಿಣಾಮಕ್ಕೊಳಗಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸರ್ವೆ ಕಾರ್ಯದ ಹಿನ್ನೆಲೆಯಲ್ಲಿ ರೈತರಿಗೆ ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ
ಈಗಾಗಲೇ ಕೆಲವು ಗ್ರಾಮಗಳಲ್ಲಿ ರಿಂಗ್ರೋಡ್ ಯೋಜನೆಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಮೊಬೈಲ್ ಆ್ಯಪ್ ಹಾಗೂ ದಿಶಾಂಕ್ನಂತಹ ಭೂ ದಾಖಲೆ ಮತ್ತು ಸ್ಥಳ ಗುರುತಿಸುವ ವ್ಯವಸ್ಥೆಗಳ ಮೂಲಕ ಯಾವ ರೈತರ ಜಮೀನು ಯೋಜನೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆದ್ದರಿಂದ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು. ಯೋಜನೆಯಿಂದ ತಮ್ಮ ಜಮೀನಿಗೆ ಆಗಬಹುದಾದ ಪರಿಣಾಮದ ಕುರಿತು ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದ ಪೂರ್ಯ ನಾಯಕ್ ಸೇರಿದಂತೆ ಹೋರಾಟ ಸಮಿತಿಯ ಅನೇಕ ಮುಖಂಡರು ಹಾಗೂ ರೈತರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರೈತರ ಹಿತದೃಷ್ಟಿಯಿಂದ ಎಲ್ಲರೂ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.

ರಿಂಗ್ರೋಡ್ ಸುತ್ತಮುತ್ತಲಿನ ಭೂಮಿಗೂ ಪರಿಣಾಮದ ಆತಂಕ
ರಿಂಗ್ರೋಡ್ ನಿರ್ಮಾಣವಾದ ಬಳಿಕ ರಸ್ತೆಯ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಗಾಗಿ ಕಾಯ್ದಿರಿಸುವ ಸಾಧ್ಯತೆ ಇದೆ. ರಸ್ತೆಯ ಎರಡೂ ಬದಿಗಳಲ್ಲಿ ನಿರ್ದಿಷ್ಟ ಅಂತರದ ಭೂಮಿಯನ್ನು ಭವಿಷ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಿಡುವ ವ್ಯವಸ್ಥೆ ಇದ್ದರೆ, ಇಂದು ರೈತರ ಜಮೀನು ರಸ್ತೆ ಯೋಜನೆಯ ವ್ಯಾಪ್ತಿಗೆ ಬಂದರೆ ನಾಳೆ ಅದರ ಬಳಕೆಯ ಮೇಲೂ ನಿರ್ಬಂಧಗಳು ಬರಬಹುದು.
ರಸ್ತೆ ನಿರ್ಮಾಣವಾದ ನಂತರ ಆ ಭಾಗದಲ್ಲಿ ವಸತಿ ಪ್ರದೇಶ, ಟೌನ್ಶಿಪ್ ಅಥವಾ ಇತರ ಅಭಿವೃದ್ಧಿ ಚಟುವಟಿಕೆಗಳು ನಡೆಯಬಹುದು. ಆಗ ಯೋಜನೆಯ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟಿರುವ ಜಮೀನುಗಳ ಮೇಲೆ ರೈತರು ಸ್ವತಂತ್ರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
“ಇದಕ್ಕೆ ಬಿಡದಿ ಟೌನ್ಶಿಪ್ ವಿಚಾರವನ್ನು ಉದಾಹರಣೆಯಾಗಿ ನೋಡಬಹುದು. ಇಂತಹ ಯೋಜನೆಗಳ ಸಂದರ್ಭದಲ್ಲಿ ರೈತರ ಆತಂಕವನ್ನು ಸರ್ಕಾರ ನಿರ್ಲಕ್ಷಿಸಬಾರದು. ಹಿಂದಿನ ಸರ್ಕಾರಗಳು ತಪ್ಪು ಮಾಡಿದ್ದರೆ ಅದನ್ನೇ ಮುಂದುವರಿಸುವುದು ಸರಿಯಲ್ಲ. ಜನರು ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶವೇ ತಪ್ಪುಗಳನ್ನು ಸರಿಪಡಿಸಿ ಜನರ ಹಿತ ಕಾಪಾಡುವುದು. ಹೀಗಾಗಿ ಪ್ರಸ್ತುತ ಸರ್ಕಾರ ರೈತರ ಹಿತದೃಷ್ಟಿಯಿಂದ ಯೋಜನೆಯನ್ನು ಮರುಪರಿಶೀಲಿಸಬೇಕು” ಎಂದು ಹೆಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.

“ರೈತರ ಭೂಮಿಯೇ ಅವರ ಭವಿಷ್ಯ”: ಹೆಚ್.ಆರ್.ಬಸವರಾಜಪ್ಪ
ರೈತನಿಗೆ ಕೃಷಿ ಭೂಮಿ ಕೇವಲ ಆಸ್ತಿಯಲ್ಲ. ಅದೇ ಜೀವನಾಧಾರ, ಕುಟುಂಬದ ಭವಿಷ್ಯ ಹಾಗೂ ಮುಂದಿನ ಪೀಳಿಗೆಯ ಬದುಕಿನ ಆಧಾರ. ಯಾವುದೇ ಯೋಜನೆಯ ಹೆಸರಿನಲ್ಲಿ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ ಅದರ ಪರಿಣಾಮವನ್ನು ರೈತ ಕುಟುಂಬಗಳು ದೀರ್ಘಕಾಲ ಅನುಭವಿಸಬೇಕಾಗುತ್ತದೆ.
ಈಗಾಗಲೇ ಮಳೆ ಕೊರತೆ, ನೀರಿನ ಸಮಸ್ಯೆ, ಬೆಳೆ ನಷ್ಟ ಸೇರಿದಂತೆ ಹಲವು ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಅಡಿಕೆ ಸೇರಿದಂತೆ ವಿವಿಧ ಬೆಳೆಗಳ ತೋಟಗಳಿಗೆ ನೀರಿನ ಕೊರತೆ ಉಂಟಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
“ನಮ್ಮ ಜಮೀನು ಕಳೆದುಕೊಂಡರೆ ನಮ್ಮ ಭವಿಷ್ಯವೇ ಕಳೆದುಕೊಂಡಂತೆ. ಇಂದು ಕೃಷಿ ಮಾಡುತ್ತಿರುವ ಭೂಮಿಯೇ ನಾಳೆ ನಮ್ಮ ಮಕ್ಕಳಿಗೆ ಆಧಾರವಾಗಬೇಕು. ಆದ್ದರಿಂದ ರಿಂಗ್ರೋಡ್ ಯೋಜನೆಯ ಪರಿಣಾಮವನ್ನು ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು” ಎಂದು ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಆಕ್ಷೇಪಣೆ ಸಲ್ಲಿಸದಿದ್ದರೆ ಮುಂದೆ ಸಮಸ್ಯೆ
ಸರ್ಕಾರದಿಂದ ಯೋಜನೆಗೆ ಸಂಬಂಧಿಸಿದಂತೆ ಅಧಿಸೂಚನೆ ಅಥವಾ ಗಜೆಟ್ ಪ್ರಕಟಣೆ ಹೊರಬಂದ ನಂತರ ಕಾನೂನು ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ರೈತರು ಈಗ ಸಿಕ್ಕಿರುವ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು.
ಪ್ರತಿಯೊಬ್ಬ ರೈತರೂ ವೈಯಕ್ತಿಕವಾಗಿ ಆಕ್ಷೇಪಣೆ ಸಲ್ಲಿಸಬೇಕು. ಮುಂದೆ ಜಮೀನು ಸ್ವಾಧೀನಕ್ಕೆ ಒಳಪಟ್ಟಲ್ಲಿ ಪರಿಹಾರ ಸೇರಿದಂತೆ ತಮ್ಮ ಹಕ್ಕುಗಳ ಕುರಿತು ದಾಖಲೆ ರೂಪದಲ್ಲಿ ವಿಷಯ ಮಂಡಿಸಲು ಇದು ಸಹಕಾರಿಯಾಗುತ್ತದೆ. ಆದರೆ ಈಗ ಆಕ್ಷೇಪಣೆ ಸಲ್ಲಿಸದೇ ಇದ್ದರೆ ಮುಂದೆ ತಮ್ಮ ಅಸಮಾಧಾನವನ್ನು ದಾಖಲಿಸಲು ತೊಂದರೆಯಾಗಬಹುದು ಎಂದು ಎಚ್ಚರಿಸಿದರು.
ಆಕ್ಷೇಪಣೆ ಸಲ್ಲಿಸಲು ಇನ್ನೂ ಸುಮಾರು ಒಂದು ವಾರದ ಕಾಲಾವಕಾಶವಿದೆ. ಹೋರಾಟ ಸಮಿತಿ ನೀಡಿರುವ ನಮೂನೆಯನ್ನು ಪಡೆದು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಮಾಡಿ ಸಲ್ಲಿಸಬೇಕು. ಒಂದು ಪ್ರತಿಯನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಿ, ಮತ್ತೊಂದು ಪ್ರತಿಗೆ ಸ್ವೀಕೃತಿ ಪಡೆದುಕೊಂಡು ತಮ್ಮ ಬಳಿ ಇಟ್ಟುಕೊಳ್ಳಬೇಕು.
ಸಭೆಗೆ ಹಾಜರಾಗಲು ಸಾಧ್ಯವಾಗದ ರೈತರೂ ಕೂಡ ತಕರಾರು ಅರ್ಜಿ ಸಲ್ಲಿಸಬೇಕು. ಕುಟುಂಬದಲ್ಲಿ ಮದುವೆ, ಅನಾರೋಗ್ಯ, ಬೇರೆ ಕೆಲಸ ಅಥವಾ ಯಾವುದೇ ಅನಿವಾರ್ಯ ಕಾರಣವಿದ್ದರೂ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾತ್ರ ಕಳೆದುಕೊಳ್ಳಬಾರದು. ಸಂಬಂಧಪಟ್ಟ ಕಚೇರಿಗೆ ತೆರಳಿ ನಮೂನೆ ಪಡೆದು ಅರ್ಜಿ ಸಲ್ಲಿಸಬೇಕು ಎಂದು ಬಸವರಾಜಪ್ಪ ಮನವಿ ಮಾಡಿದರು.

ಪರಿಹಾರದ ಬಗ್ಗೆ ಸ್ಪಷ್ಟತೆ ಅಗತ್ಯ
ರೈತರ ಜಮೀನು ಯೋಜನೆಗೆ ಒಳಪಟ್ಟರೆ ಸರ್ಕಾರ ನೀಡುವ ಪರಿಹಾರದ ಬಗ್ಗೆಯೂ ಸ್ಪಷ್ಟತೆ ಅಗತ್ಯ. ಜಮೀನಿನ ಮಾರುಕಟ್ಟೆ ಮೌಲ್ಯ, ಮಾರ್ಗಸೂಚಿ ಮೌಲ್ಯ ಹಾಗೂ ಸಂಬಂಧಪಟ್ಟ ನಿಯಮಗಳ ಆಧಾರದ ಮೇಲೆ ಪರಿಹಾರ ನಿಗದಿಯಾಗುವ ಸಾಧ್ಯತೆ ಇದೆ. ರೈತರು ತಮ್ಮ ಜಮೀನಿನ ದಾಖಲೆಗಳು ಹಾಗೂ ಮೌಲ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು.
ಪರಿಹಾರ ಸಿಗುತ್ತದೆ ಎಂದು ಮಾತ್ರ ಹೇಳಿ ರೈತರ ಆತಂಕವನ್ನು ಕಡೆಗಣಿಸಲು ಸಾಧ್ಯವಿಲ್ಲ. ಮೊದಲು ಎಷ್ಟು ಭೂಮಿ ಹೋಗುತ್ತದೆ, ಯಾರ ಜಮೀನು ಹೋಗುತ್ತದೆ, ಯಾವ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ, ಯೋಜನೆಯಿಂದ ರೈತರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ತಾಲೂಕಿಗೆ ಈ ವ್ಯಾಪ್ತಿ ಅಗತ್ಯವೇ?
ಪ್ರಸ್ತಾವಿತ ಯೋಜನೆಯ ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಶಿವಮೊಗ್ಗ ತಾಲೂಕು ಪ್ರದೇಶವನ್ನು ಒಳಪಡಿಸಿರುವುದರ ಅಗತ್ಯತೆಯ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು. ಶಿವಮೊಗ್ಗ ನಗರದಿಂದ ಸುಮಾರು 18 ಕಿ.ಮೀ. ಹಾಗೂ ಭದ್ರಾವತಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಪ್ರದೇಶಗಳಲ್ಲಿಯೂ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವೇನು ಎಂಬುದನ್ನು ಸರ್ಕಾರ ತಿಳಿಸಬೇಕು.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಸೇರಿದಂತೆ ಈಗಾಗಲೇ ಸ್ಥಳೀಯ ಆಡಳಿತ ವ್ಯವಸ್ಥೆ ಇರುವ ಪ್ರದೇಶಗಳ ಅಭಿವೃದ್ಧಿಗೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬಹುದು. ಅಭಿವೃದ್ಧಿ ಮಾಡುವುದು ಬೇಡ ಎಂದು ನಾವು ಹೇಳುತ್ತಿಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಕೃಷಿ ಭೂಮಿಗೆ ನೇರವಾಗಿ ಹಾನಿಯಾಗಬಾರದು. ರೈತರ ಜಮೀನಿಗೆ ಕಡಿಮೆ ಪರಿಣಾಮ ಬೀರುವ ಪರ್ಯಾಯ ಮಾರ್ಗಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದರು.
ಗ್ರಾಮ ಪಂಚಾಯಿತಿಗಳ ವಿಲೀನದಿಂದಲೂ ಆತಂಕ
ಯೋಜನೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಹಲವು ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಒಟ್ಟುಗೂಡಿಸಿರುವ ಬಗ್ಗೆಯೂ ರೈತರಲ್ಲಿ ಆತಂಕವಿದೆ. ವಿವಿಧ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ವಿಲೀನಗೊಳಿಸಿ ಹೊಸ ಆಡಳಿತ ವ್ಯವಸ್ಥೆಯ ವ್ಯಾಪ್ತಿಗೆ ತರುವ ಕ್ರಮದಿಂದ ಮುಂದಿನ ದಿನಗಳಲ್ಲಿ ಭೂ ಬಳಕೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಅರಹತೊಳಲು, ಕೆಂಗನಳ್ಳಿ, ಅಶೋಕ್ ನಗರ, ಮಲ್ಲಾಪುರ, ಸನ್ಯಾಸಿ ಕೋಡಮಗ್ಗಿ, ನಾಗಸಮುದ್ರ, ಸಿದ್ಲಿಪುರ, ಕನಸಿನ ಕಟ್ಟೆ , ಹೊಳೆಹಟ್ಟಿ, ಸೂಗೂರು, ಬಳ್ಳಾಪುರ, ಕೂಡ್ಲಿ, ಜಾವಳ್ಳಿ, ಬಿ ಬೀರನಹಳ್ಳಿ, ವೆಂಕಟಾಪುರ, ಬೆಳಗಲು, ಕಾಟೀಕೆರೆ, ದಾಸರ ಕಲ್ಲಳ್ಳಿ, ತಿಮ್ಲಾಪುರ, ಮಾರಶೆಟ್ಟಿಹಳ್ಳಿ, ತಟ್ಟಿಹಳ್ಳಿ, ಆಗಸನಹಳ್ಳಿ ಹಾಗೂ ಹನುಮಂತಾಪುರ ಭಾಗದ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಹಲವು ಗ್ರಾಮಗಳ ಮೇಲೆ ಯೋಜನೆಯ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ಗ್ರಾಮವನ್ನು ಹೊರತುಪಡಿಸಿ ಉಳಿದ ಪ್ರದೇಶಗಳನ್ನೆಲ್ಲಾ ವಿವಿಧ ರೀತಿಯಲ್ಲಿ ಯೋಜನೆಯ ವ್ಯಾಪ್ತಿಗೆ ತರುವ ಪ್ರಯತ್ನ ನಡೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಎಲ್ಲ ವಿಚಾರಗಳನ್ನೂ ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಬಸವರಾಜಪ್ಪ ಹೇಳಿದರು.

ಇದು ರಾಜಕೀಯ ಹೋರಾಟವಲ್ಲ, ರೈತರ ಬದುಕಿನ ಹೋರಾಟ
ರಿಂಗ್ರೋಡ್ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಬೇಡ. ಇದು ರೈತರ ಬದುಕಿನ ಪ್ರಶ್ನೆ. ‘ಅವರು ಮಾಡಿದರು, ಇವರು ಮಾಡಿದರು’ ಎಂಬ ರಾಜಕೀಯ ಚರ್ಚೆಗಿಂತ ರೈತರ ಜಮೀನು ಉಳಿಸುವುದು ಮುಖ್ಯ.
ಹಿಂದಿನವರು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಈಗ ಅಧಿಕಾರದಲ್ಲಿರುವವರದ್ದು. ರೈತರ ಪರ ನಿಲ್ಲುವುದಾಗಿ ಹೇಳುವ ಸರ್ಕಾರ ಅವರ ಭೂಮಿ ಮತ್ತು ಜೀವನೋಪಾಯದ ಪ್ರಶ್ನೆಯಲ್ಲೂ ಅದನ್ನು ಸಾಬೀತುಪಡಿಸಬೇಕು.
ರೈತರು ಈಗಾಗಲೇ ಬದುಕಿಗಾಗಿ ಹೋರಾಡುತ್ತಿದ್ದಾರೆ. ಕೃಷಿಗೆ ನೀರು, ಬೆಳೆ ರಕ್ಷಣೆ, ಉತ್ತಮ ಆದಾಯ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಲಿದೆ. ಆದ್ದರಿಂದ ಸರ್ಕಾರ ರೈತರೊಂದಿಗೆ ಸಮಗ್ರ ಚರ್ಚೆ ನಡೆಸಿ, ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಪರ್ಯಾಯ ಮಾರ್ಗ ರೂಪಿಸಬೇಕು ಎಂದು ಬಸವರಾಜಪ್ಪ ಒತ್ತಾಯಿಸಿದರು.
ಗ್ರಾಮದಿಂದ ಗ್ರಾಮಕ್ಕೆ ಜಾಗೃತಿ
“ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಗ್ರಾಮಕ್ಕೆ ತೆರಳಿ ರೈತರಿಗೆ ಯೋಜನೆಯ ಕುರಿತು ಮಾಹಿತಿ ನೀಡಬೇಕು. ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಬೇಕು. ತಕರಾರು ಅರ್ಜಿ ಸಲ್ಲಿಸುವಂತೆ ಪ್ರತಿಯೊಬ್ಬ ರೈತರನ್ನೂ ಪ್ರೇರೇಪಿಸಬೇಕು.
ಇಂದು ಸಭೆಗೆ ಬರಲು ಸಾಧ್ಯವಾಗದಿರಬಹುದು. ಕುಟುಂಬದಲ್ಲಿ ಮದುವೆ, ಅನಾರೋಗ್ಯ, ಬೇರೆ ಕೆಲಸ ಅಥವಾ ಯಾವುದೇ ಅನಿವಾರ್ಯ ಕಾರಣ ಇರಬಹುದು. ಆದರೆ ತಕರಾರು ಅರ್ಜಿ ಸಲ್ಲಿಸುವ ಅವಕಾಶವನ್ನು ಮಾತ್ರ ಯಾರೂ ಕಳೆದುಕೊಳ್ಳಬಾರದು. ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನ ಹಿತಕ್ಕಾಗಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು.
ಇದು ಕೇವಲ ಒಂದು ರಸ್ತೆ ನಿರ್ಮಾಣದ ಪ್ರಶ್ನೆಯಲ್ಲ. ಇದು ರೈತರ ಜಮೀನು, ರೈತರ ಬದುಕು ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆಯಾಗಿದೆ. ಆದ್ದರಿಂದ ಸರ್ಕಾರ ಅವೈಜ್ಞಾನಿಕ ರಿಂಗ್ರೋಡ್ ಯೋಜನೆಯನ್ನು ಮರುಪರಿಶೀಲಿಸಿ, ರೈತರೊಂದಿಗೆ ಚರ್ಚಿಸಿ, ಕೃಷಿ ಭೂಮಿಗೆ ಕಡಿಮೆ ಪರಿಣಾಮ ಬೀರುವ ಪರ್ಯಾಯ ಮಾರ್ಗವನ್ನು ಪರಿಶೀಲಿಸಿ ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಹೆಚ್.ಆರ್. ಬಸವರಾಜಪ್ಪ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ. ಚಂದ್ರಪ್ಪ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ತಾಲೂಕು ಅಧ್ಯಕ್ಷ ಸಿ. ಚಂದ್ರಪ್ಪ, ಹೋರಾಟ ಸಮಿತಿಯ ಮುಖಂಡರಾದ ಮಹೇಶ್ ಸುಗೂರು, ಓಂಕಾರಪ್ಪ, ಲೋಕೇಶ್ ರಾವ್, ಚಂದ್ರಶೇಖರ್ ಸೇರಿದಂತೆ ರೈತ ಸಂಘದ ವಿವಿಧ ಪದಾಧಿಕಾರಿಗಳು, ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.






