ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯ ನಡುವೆ ಅನನ್ಯಾ ಭಟ್ ನಾಪತ್ತೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. 20 ವರ್ಷಗಳ ಹಿಂದೆ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆಂದು ತಾಯಿ ಸುಜಾತಾ ಭಟ್ ನೀಡಿದ್ದ ದೂರು ಈಗ ಗಂಭೀರ ವಿಚಾರಣೆಯ ಹಂತ ತಲುಪಿದ್ದರೂ, ಇದೀಗ ಸ್ವತಃ ಸುಜಾತಾ ಭಟ್ ಅವರೇ ದೂರು ಹಿಂಪಡೆಯಲು ಮುಂದಾಗಿದ್ದಾರೆ.
ತೀವ್ರ ವಿಚಾರಣೆಯ ನಂತರ ಸುಜಾತಾ ಕಣ್ಣೀರಧಾರೆ
ಧರ್ಮಸ್ಥಳ ಪ್ರಕರಣಕ್ಕಾಗಿ ರಚಿಸಲಾಗಿದ್ದ ಎಸ್ಐಟಿ (SIT) ತಂಡ, ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನೂ ಸಮಾಂತರವಾಗಿ ತನಿಖೆ ನಡೆಸುತ್ತಿದೆ. ಎರಡು ದಿನಗಳಿಂದ ಸತತ ವಿಚಾರಣೆಗೆ ಒಳಗಾದ ಸುಜಾತಾ ಭಟ್, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೆ ಅಳಲು ತೋಡಿಕೊಂಡು “ತಪ್ಪಾಯ್ತು, ದೂರು ವಾಪಸ್ ಪಡೆಯುತ್ತೇನೆ, ನನ್ನನ್ನು ಬಿಟ್ಟುಬಿಡಿ”ಎಂದು ಕಣ್ಣೀರಿಟ್ಟಿದ್ದಾರೆ.
ಮಾಹಿತಿಯ ಪ್ರಕಾರ, ವಿಚಾರಣೆ ವೇಳೆ ಸುಜಾತಾ ಭಟ್ ಕೆಲ ಹೆಸರುಗಳು ಮತ್ತು ರಹಸ್ಯ ಮಾಹಿತಿಗಳನ್ನು ಎಸ್ಐಟಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ಅನನ್ಯಾ ಭಟ್ ಕಥೆಯನ್ನು ಹೆಣೆದವರ ಮೇಲೆ ಈಗ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
ದೂರು ಹಿಂಪಡೆಯಲು ಒಲವು
ಸುಜಾತಾ ಭಟ್, ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮುಂದೆ ಸ್ವತಃ ದೂರು ವಾಪಸ್ ಪಡೆಯುವುದಾಗಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಪ್ರಾಥಮಿಕವಾಗಿ ಎಸ್ಐಟಿ ಅಧಿಕಾರಿಗಳು ಕೂಡ ಅವರ ಮನವಿಗೆ ಒಪ್ಪಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಪ್ರಕರಣದ ನೆಲೆ
ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ತಂಡ, ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ‘ಮಾಸ್ಕ್ ಮ್ಯಾನ್’ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೇ ನಡುವೆ ಸುಜಾತಾ ಭಟ್, ತಮ್ಮ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಬಾಂಬ್ ಸಿಡಿಸಿದ್ದರಿಂದ, ಪ್ರಕರಣಕ್ಕೆ ಇನ್ನಷ್ಟು ತೀವ್ರತೆ ಸಿಕ್ಕಿತ್ತು.
ಆದರೆ ಈಗ ದೂರು ಹಿಂಪಡೆಯುವ ನಿರ್ಧಾರದಿಂದ, ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಸುಜಾತಾ ಭಟ್ ವಿಚಾರಣೆಯಲ್ಲಿ ಬಾಯ್ಬಿಟ್ಟ ಹೆಸರುಗಳು ಮತ್ತು ವಿವರಗಳು ಹೊಸ ಸಮಸ್ಯೆಗೆ ಕಾರಣವಾಗಲಿವೆ ಎಂಬ ಆತಂಕ ತನಿಖಾ ವಲಯದಲ್ಲಿ ವ್ಯಕ್ತವಾಗಿದೆ.