ಮಂಗಳೂರು: ಧರ್ಮಸ್ಥಳದಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ವಿವಿಧ ಬಗೆಯ ಆರೋಪ-ಪ್ರತಿಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಮಹತ್ವದ ಕರೆ ನೀಡಿದ್ದಾರೆ. “ಯಾವುದೇ ರೀತಿಯ ಪ್ರತಿಭಟನೆ ಅಥವಾ ಹೋರಾಟ ಅಗತ್ಯವಿಲ್ಲ. ಎಲ್ಲವೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ. ಸತ್ಯವನ್ನು ಬಿಟ್ಟು ನಾನು ಯಾವತ್ತೂ ಹೋಗಿಲ್ಲ, ಹೋಗುವುದೂ ಇಲ್ಲ. ಎಲ್ಲರೂ ತಾಳ್ಮೆಯಿಂದ, ಶಾಂತಿಯುತವಾಗಿರಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ಇಂದು (ಆಗಸ್ಟ್ 29) ಧರ್ಮಸ್ಥಳದಲ್ಲಿ ಜೈನ ಮುನಿಗಳ ಮಹಾಸಭೆ ನಡೆಯಿತು. ರಾಜ್ಯದ ಎಲ್ಲಾ ಜೈನ ಮಠಗಳ ಭಟ್ಟಾರಕರು, ಮುನಿಗಳು ಹಾಗೂ ನೂರಾರು ಭಕ್ತರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಭಟ್ಟಾರಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ಬಳಿಕ ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹೆಗ್ಗಡೆ, “ಇಷ್ಟೊಂದು ಆಶಯಧಾರಿಗಳು ಮತ್ತು ಆಶೀರ್ವಚನಗಳೊಂದಿಗೆ ಶ್ರೀಕ್ಷೇತ್ರಕ್ಕೆ ಹೊಸ ಕಳೆ ಬಂದಿದೆ. ಎಲ್ಲರ ಸಾನ್ನಿಧ್ಯ ನಮಗೆ ಧೈರ್ಯ ತುಂಬಿದೆ” ಎಂದರು.
ಎಸ್ಐಟಿ ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ವಿವರ ನೀಡದೆ, ಭಕ್ತರ ಮನೋಭಾವವನ್ನು ಹಂಚಿಕೊಂಡ ಹೆಗ್ಗಡೆ, “ಈ ಬೆಳವಣಿಗೆ ಬಳಿಕ ಮಹಿಳೆಯರೇ ಹೆಚ್ಚು ಕಣ್ಣೀರು ಹಾಕಿದ್ದಾರೆ, ವೇದನೆ ಪಡುತ್ತಿದ್ದಾರೆ. ಕೆಲವರು ಹೋರಾಟಕ್ಕೂ ಸಿದ್ದರಾಗಿದ್ದಾರೆ. ಆದರೆ ಅಂತಹ ಹೋರಾಟಗಳ ಅಗತ್ಯವಿಲ್ಲ. ಎಲ್ಲವನ್ನೂ ಸ್ವಾಮಿಯ ಆಶ್ರಯಕ್ಕೆ ಬಿಟ್ಟಿದ್ದೇವೆ. ಅದರ ಫಲಿತಾಂಶ ಈಗ ಕಾಣಿಸುತ್ತಿದೆ” ಎಂದು ಹೇಳಿದರು.
ಅವರು ಮುಂದುವರಿದು, “ಜನಿವಾರ ಜಾತಿ ವೇಷಕ್ಕಲ್ಲ, ಮೂರು ಧರ್ಮಗಳ ಆಚರಣೆಗಾಗಿ ಧರಿಸಲಾಗುತ್ತದೆ. ದಶಲಕ್ಷಣಗಳು ಪೂಜೆ ಮತ್ತು ಪ್ರಾರ್ಥನೆಗಾಗಿ ಇವೆ. ಸತ್ಯಕ್ಕೆ ಎರಡು ಮುಖವಿಲ್ಲ. ಧರ್ಮವೇ ನಮ್ಮ ಶರಣಾಗತಿಯ ಮಾರ್ಗ” ಎಂದು ಸ್ಪಷ್ಟಪಡಿಸಿದರು.
ಭಕ್ತರಿಗೆ ಶಾಂತಿಯ ಸಂದೇಶ ನೀಡಿದ ಹೆಗ್ಗಡೆ, “ಸನ್ನೆ ಕೊಟ್ಟರೆ ಸಾವಿರಾರು ಜನ ಸೇರುತ್ತಾರೆ. ಆದರೆ ಸಂಯಮವೇ ಶ್ರೇಷ್ಠವಾದದ್ದು. ನಮ್ಮ ಎಲ್ಲಾ ಪ್ರಯತ್ನಗಳಿಗೆ ಮಂಜುನಾಥ ಸ್ವಾಮಿಯ ಅನುಗ್ರಹವಿದೆ. ಆದ್ದರಿಂದ ಎಲ್ಲರೂ ಶಾಂತಿ-ಸಹನೆ ಕಾಪಾಡಬೇಕು” ಎಂದು ಕರೆ ನೀಡಿದರು.