ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ವಕೀಲರ ಸಂಘದ ಪದಾಧಿಕಾರಿಗಳ ರಾಜ್ಯ ಕಾನೂನು ಸಮ್ಮೇಳನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿ ಮಾತನಾಡಿದರು.
“ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಸೇವೆ ದೊರಕಬೇಕಿದೆ. ಜನರ ದನಿಯಾಗಿ ವಕೀಲ ಸಮುದಾಯ ಸೇವೆ ಸಲ್ಲಿಸಿ ನ್ಯಾಯದಾನ ವಿತರಣೆಯಲ್ಲಿ ಮಹತ್ವದ ಪಾತ್ರವಹಿಸಬೇಕು.” ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ಉಲ್ಲೇಖಿಸಿದ ವಿಜಯೇಂದ್ರ, “ವೈವಿಧ್ಯತೆಯ ನಡುವೆಯೂ ಏಕತೆಯನ್ನು ಸಾಧಿಸಿ ಭಾರತ ವಿಕಸಿತ ರಾಷ್ಟ್ರವಾಗುವ ಕನಸಿನತ್ತ ಸಾಗುತ್ತಿದೆ. ಸಂವಿಧಾನದ ಆಶಯಗಳನ್ನು ಕಾಯುವ ನಿಟ್ಟಿನಲ್ಲಿ ಘನ ನ್ಯಾಯಾಲಯಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸಿವೆ. ಇದರಲ್ಲಿ ವಕೀಲರ ಪಾತ್ರ ಅಪಾರ” ಎಂದರು.
ಸೈಬರ್ ಅಪರಾಧ ಮತ್ತು ಭಯೋತ್ಪಾದನೆಯಂತಹ ಸವಾಲುಗಳನ್ನು ಉಲ್ಲೇಖಿಸಿದ ಅವರು, “ದೇಶದ ಸಾರ್ವಭೌಮತ್ವದ ರಕ್ಷಣೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಎಂದಿಗೂ ರಾಜಿ ಮಾಡಿಕೊಳ್ಳದೆ ಸಂವಿಧಾನದ ಗೌರವವನ್ನು ಕಾಪಾಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಿರಣ್ ರಿಜು, ಭಾರತೀಯ ವಕೀಲರ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಾಜ್ಯ ವಕೀಲರ ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ಎಸ್. ಮಿತ್ತಲ್ ಕೋಡ್, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಹಿರಿಯ ವಕೀಲರು ಮತ್ತು ಅಪರ ಅಟಾರ್ನಿ ಜನರಲ್ ಅರವಿಂದ್ ಕಾಮತ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.