ಶಿಕಾರಿಪುರ, ಸೆಪ್ಟೆಂಬರ್ 03: ರಾಜಕೀಯ ಪಯಣದಲ್ಲಿ ಕೆಲವೊಂದು ವಸ್ತುಗಳು ಕೇವಲ ಉಪಯೋಗದ ಸಾಧನವಾಗಿಯೇ ಉಳಿಯದೆ, ತಲೆಮಾರುಗಳ ನೆನಪು, ಭಾವನೆ ಮತ್ತು ಪ್ರೇರಣೆಯ ಸಂಕೇತವಾಗುತ್ತವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೀವನದಲ್ಲಿ ಅಂಥ ವಿಶೇಷ ಸ್ಥಾನ ಪಡೆದಿರುವುದು CKR-45 ಅಂಬಾಸಿಡರ್ ಕಾರು. ಇಂದು ಈ ವಾಹನವನ್ನು ಕ್ಷೇತ್ರ ಪ್ರವಾಸಕ್ಕೆ ಬಳಸಿದ ಸಂದರ್ಭ, ಪುತ್ರ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ಭಾವುಕತೆಯ ನೆನಪುಗಳನ್ನು ತಂದುಕೊಟ್ಟಿತು.
ಹೋರಾಟದಿಂದ ಹುಟ್ಟಿದ ಹೆಜ್ಜೆ ಗುರುತು
ಬೈಸಿಕಲ್, ಎತ್ತಿನಗಾಡಿ, ಸರ್ಕಾರಿ ಬಸ್ಸುಗಳಲ್ಲಿ ಊರೂರು ಸುತ್ತಿ ಸಂಘಟನೆ ನಡೆಸುತ್ತಿದ್ದ ಯಡಿಯೂರಪ್ಪನವರು, ಅಪಾರ ಪರಿಶ್ರಮದ ಬಳಿಕ 1988ರಲ್ಲಿ ಈ ಅಂಬಾಸಿಡರ್ ಕಾರನ್ನು ಖರೀದಿಸಿದರು. ಆ ಕ್ಷಣ, ಅವರ ರಾಜಕೀಯ ಪಯಣದಲ್ಲಿ ಕೇವಲ ಸೌಲಭ್ಯವಲ್ಲ, ಬದಲಾಗಿ ನಂಬಿಕೆಯ ನೂತನ ಅಧ್ಯಾಯದ ಆರಂಭವಾಯಿತು.
‘ಕಮಲ ರಥ’ದ ರೂಪಾಂತರ‘
ಈ ಕಾರು ಬಿಜೆಪಿ ಸಂಘಟನೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು. ರಾಜ್ಯದ ಮೂಲೆಮೂಲೆ ಸುತ್ತಿ ನೂರಾರು ಸಂಘಟಕರನ್ನು, ಸಾವಿರಾರು ಕಾರ್ಯಕರ್ತರನ್ನು ಹೊತ್ತೊಯ್ದಿತು. “ಇದು ಕೇವಲ ಕಾರಲ್ಲ, ನಮ್ಮ ಹೋರಾಟದ ರಥ”ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿತು. ಆ ಕಾರಣಕ್ಕೇ ಕಾರ್ಯಕರ್ತರು ಅದನ್ನು ‘ಕಮಲ ರಥ’ವೆಂದು ಗೌರವಿಸಿದರು.
ರಾಷ್ಟ್ರೀಯ ನಾಯಕರ ಹೆಜ್ಜೆಯಲ್ಲಿ
ಅಟಲ್ ಬಿಹಾರಿ ವಾಜಪಾಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ರಾಷ್ಟ್ರೀಯ ನಾಯಕರು ಕರ್ನಾಟಕ ಪ್ರವಾಸ ಕೈಗೊಂಡಾಗಲೂ ಈ ಕಾರು ಸಹಯಾತ್ರಿಯಾಯಿತು. ಪಕ್ಷದ ಆರ್ಭಟದ ದಿನಗಳಲ್ಲಿ, ಸಂಘಟನೆಯ ಶಕ್ತಿ ತೋರಿಸುವ ಪ್ರತೀ ಕ್ಷಣದಲ್ಲಿ CKR-45 ಅಜರಾಮರ ಪಾತ್ರವಹಿಸಿತು.
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಹೇಳುವಂತೆ,
“CKR-45 ನಮ್ಮ ಕುಟುಂಬದ ಸದಸ್ಯ ಮಾತ್ರವಲ್ಲ, ಬಿಜೆಪಿಯೊಬ್ಬ ಹಿರಿಯ ಕಾರ್ಯಕರ್ತನೂ ಹೌದು. ತಂದೆಯವರು ತಮ್ಮ ಪರಿಶ್ರಮದಿಂದ ಈ ಕಾರನ್ನು ಖರೀದಿಸಿ, ಕಾರ್ಯಕರ್ತರೊಂದಿಗೆ ಬಾಂಧವ್ಯ ಬೆಸೆಯಲು ಬಳಸಿದರು. ಶಿಕಾರಿಪುರದ ಪ್ರತಿಯೊಂದು ಬೀದಿಯಲ್ಲೂ ಇದು ಸಂಚರಿಸಿ ಜನರ ಮನದಲ್ಲಿ ನೆನಪು ಮೂಡಿಸಿದೆ. ಮುಂದೆಯೂ ಇದೇ ರೀತಿಯಾಗಿ ಕಾರ್ಯಕರ್ತರ ಪ್ರೇರಣೆಯ ಸಂಕೇತವಾಗಿ ಉಳಿಯಲಿದೆ” ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.







