ಭದ್ರಾವತಿ: ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಭಕ್ತಿಭಾವ, ಸಂಪ್ರದಾಯ ಮತ್ತು ಸಂಸ್ಕೃತಿಯ ಅದ್ಭುತ ಸಂಗಮವಾಗಿ ಕಂಗೊಳಿಸಿತು. ತಾಯಿ ಭದ್ರಾ ನದಿಯಂತೆ ಭಕ್ತಿರಸವು ತುಂಬಿ ಹರಿದ ಈ ಮಹೋತ್ಸವದಲ್ಲಿ ಭದ್ರಾವತಿ ನಗರವೇ ಒಂದು ದೈವಿಕ ತೀರ್ಥಕ್ಷೇತ್ರದಂತೆ ರೂಪಾಂತರಗೊಂಡಿತ್ತು.

ಮಾಘ ಶುದ್ಧ ಪೂರ್ಣಿಮೆಯ ಪಾವನ ದಿನದಂದು ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನ ಹಾಗೂ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಪರಂಪರೆಯ ಇತಿಹಾಸ ಪ್ರಸಿದ್ಧ ಘಳಿಗೆಯನ್ನು ಸ್ಮರಿಸುವ ಈ ಮಹೋತ್ಸವವು ಭಕ್ತರಲ್ಲಿ ಅಪಾರ ಉತ್ಸಾಹ ಮತ್ತು ಆನಂದವನ್ನು ಮೂಡಿಸಿತು. ಸಂಸ್ಥಾಪನಾಚಾರ್ಯರಾದ ಶ್ರೀ ವಿಶ್ವಬಂಧು ಮರುಳಸಿದ್ಧರು ತೆಲುಗು ಬಾಳು ಸಿದ್ದೇಶ್ವರರನ್ನು ಸದ್ಧರ್ಮ ಪೀಠದಲ್ಲಿ ಆಸೀನರನ್ನಾಗಿಸಿ ‘ತರಳಬಾಳು’ ಎಂದು ಹರಸಿದ ಸುವರ್ಣ ಕ್ಷಣದ ಸಾಕ್ಷ್ಯವೇ ಈ ತರಳಬಾಳು ಹುಣ್ಣಿಮೆ.
ಈ ಪವಿತ್ರ ಸಂದರ್ಭದಲ್ಲಿ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ, ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತೆರೆದ ವಾಹನದಲ್ಲಿ ಸಾಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವದ ಮೂಲಕ ಭದ್ರಾವತಿಯ ನಗರದಲ್ಲಿ ದರ್ಶನ ನೀಡಿ ಭಕ್ತರಿಗೆ ಆಶೀರ್ವಾದ ಕರುಣಿಸಿದರು. ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿದ್ದಂತೆ ನಗರದಲ್ಲಿ ಭಕ್ತಿಯ ಅಲೆ ಎದ್ದಿತು.
“ವರ್ಧತಾಂ, ಅಭಿವರ್ಧತಾಂ, ಚಿರಮಭಿವರ್ಧತಾಂ ತರಳಬಾಳು ಸಂತಾನ ಶ್ರೀಃ” ಎಂಬ ಭಕ್ತಿಘೋಷಗಳು ಆಕಾಶ ಮುಟ್ಟಿದಂತೆ ಮೊಳಗಿದವು. ಗುರು ಮತ್ತು ಭಕ್ತರ ನಡುವಿನ ಬಾಂಧವ್ಯವನ್ನು ಪ್ರತಿಬಿಂಬಿಸುವ ಈ ಮೆರವಣಿಗೆ ಅತ್ಯಂತ ವೈಭವದಿಂದ ಸಾಗಿತು.
ಮೆರವಣಿಗೆಯ ದಾರಿಯುದ್ದಕ್ಕೂ ಪೂರ್ಣಕುಂಭ ಸ್ವಾಗತ, ನಂದಿಧ್ವಜಗಳ ಪ್ರದರ್ಶನ, ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಅದ್ಭುತ ಪ್ರದರ್ಶನಗಳು ಜನಮನ ಸೆಳೆದವು. ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೀವಂತ ರೂಪವಾಗಿ ಮೆರವಣಿಗೆ ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ಸಾಗಿತು.

ಭಕ್ತಿಕೇಂದ್ರಿತವಾದ ಈ ಮಹೋತ್ಸವದಲ್ಲಿ ಭಕ್ತರು ಸ್ವಯಂಪ್ರೇರಿತರಾಗಿ ತಮ್ಮ ಶ್ರದ್ಧಾಭಕ್ತಿಯನ್ನು ಅರ್ಪಿಸಿ ಶ್ರೀ ಜಗದ್ಗುರುಗಳವರ ದರ್ಶನ ಪಡೆದು ಆಶೀರ್ವಾದವನ್ನು ಸ್ವೀಕರಿಸಿದರು. ತರಳಬಾಳು ಪರಂಪರೆಯ ಧಾರ್ಮಿಕ ಮಹತ್ವ, ಸಾಮಾಜಿಕ ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಈ ಹುಣ್ಣಿಮೆ ಮಹೋತ್ಸವ ಭದ್ರಾವತಿಯ ಇತಿಹಾಸದಲ್ಲಿ ಮತ್ತೊಂದು ಸ್ವರ್ಣಾಕ್ಷರದ ಅಧ್ಯಾಯವಾಗಿ ದಾಖಲಾಗಿದೆ.











