ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಹಿರೇಮಠ್ ಸಭಾಂಗಣದಲ್ಲಿ “ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಬೋಧಕೇತರ ನೌಕರರ ಸಂಘ”ದ ಉದ್ಘಾಟನಾ ಸಮಾರಂಭವು ನೆರವೇರಿತು. ಈ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಂಘವನ್ನು ಉದ್ಘಾಟಿಸಿದರು.

ಉದ್ಘಾಟನೆ ಮಾಡಿ ಮಾತನಾಡಿದ ಸಿ.ಎಸ್. ಷಡಾಕ್ಷರಿ ಅವರು, ನಿವೃತ್ತ ನೌಕರರ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಗ್ರ ಕಲ್ಯಾಣಕ್ಕಾಗಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ನಿವೃತ್ತಿಯ ನಂತರವೂ ನೌಕರರಿಗೆ ಸಕ್ರಿಯ ವೇದಿಕೆ ಒದಗಿಸುವಲ್ಲಿ ಇಂತಹ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ನಿವೃತ್ತ ನೌಕರರ ಅನುಭವವು ಸಮಾಜದ ಅಭಿವೃದ್ಧಿಗೆ ಅಮೂಲ್ಯವಾದ ಸಂಪತ್ತಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು, ನಿವೃತ್ತ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮತ್ತು ಸಂಘಟನೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು. ಸಂಘಟಿತ ಪ್ರಯತ್ನಗಳ ಮೂಲಕ ಹಕ್ಕುಗಳ ಸಾಧನೆ ಸಾಧ್ಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಇಂತಹ ಸಂಘಟನೆಗಳು ಪರಸ್ಪರ ಒಗ್ಗಟ್ಟು, ಸಹಕಾರ ಮತ್ತು ಭದ್ರತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಮಾತನಾಡಿ, ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಬೋಧಕೇತರ ನೌಕರರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು. ನಿವೃತ್ತಿಯ ನಂತರವೂ ಅವರ ಅನುಭವ ಹಾಗೂ ಮಾರ್ಗದರ್ಶನ ಸಂಸ್ಥೆಗೆ ದಾರಿದೀಪವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕುಲಸಚಿವರಾದ (ಪರೀಕ್ಷಾಂಗ) ಪ್ರೊ. ಆರ್. ತಿಮ್ಮರಾಯಪ್ಪ ಅವರು ಮಾತನಾಡಿ, ನಿವೃತ್ತ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸಂಘವು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು.
ಸಂಘದ ಅಧ್ಯಕ್ಷರಾದ ಎಂ. ರಮೇಶ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಉದ್ದೇಶಗಳು, ಭವಿಷ್ಯದ ಯೋಜನೆಗಳು ಹಾಗೂ ನಿವೃತ್ತ ನೌಕರರ ಹಿತಾಸಕ್ತಿಗಾಗಿ ಕೈಗೊಳ್ಳಲಿರುವ ಕ್ರಮಗಳನ್ನು ವಿವರಿಸಿದರು. ನಿವೃತ್ತ ನೌಕರರ ಕಲ್ಯಾಣ, ಆರೋಗ್ಯ ಸೌಲಭ್ಯಗಳು, ಪಿಂಚಣಿ ಸಂಬಂಧಿತ ಸಮಸ್ಯೆಗಳು ಹಾಗೂ ಸಾಮಾಜಿಕ ಭದ್ರತೆ ವಿಷಯಗಳಲ್ಲಿ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.ಈ ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.







