ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮವು ಕೇವಲ ಜನಸಾಗರದ ಶಕ್ತಿ ಪ್ರದರ್ಶನಕ್ಕೆ ಮಾತ್ರವಲ್ಲದೆ, ಅತ್ಯಂತ ವ್ಯವಸ್ಥಿತವಾದ ವೈದ್ಯಕೀಯ ಮುನ್ನೆಚ್ಚರಿಕೆಗೂ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಹರಿದುಬಂದಿದ್ದ ಲಕ್ಷಾಂತರ ಅಭಿಮಾನಿಗಳ ಆರೋಗ್ಯ ಕಾಪಾಡುವಲ್ಲಿ ವೈದ್ಯಕೀಯ ಪ್ರಕೋಷ್ಠವು ಪ್ರಮುಖ ಪಾತ್ರ ವಹಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ತೀವ್ರ ಬಿಸಿಲಿನಲ್ಲೂ ಆರೋಗ್ಯ ರಕ್ಷಣೆಗೆ ಕಟ್ಟುನಿಟ್ಟಿನ ಸಿದ್ಧತೆ
ಚಿತ್ರದುರ್ಗದಲ್ಲಿ ತೀವ್ರ ಬಿಸಿಲಿನ ನಡುವೆಯೂ ಕಾರ್ಯಕ್ರಮಕ್ಕೆ ಬಂದ ಕಾರ್ಯಕರ್ತರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಿಸಿಗಾಳಿ, ದೇಹದ ನೀರಿನ ಕೊರತೆ, ದಣಿವು ಸೇರಿದಂತೆ ಯಾವುದೇ ತುರ್ತು ಆರೋಗ್ಯ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸಲು ವೈದ್ಯಕೀಯ ತಂಡ ಸಂಪೂರ್ಣ ಸಜ್ಜುಗೊಂಡಿತ್ತು. ಇತ್ತೀಚಿನ ಕೆಲವು ದುರ್ಘಟನೆಗಳಿಂದ ಪಾಠ ಕಲಿತು, ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಜಾಗ್ರತೆಯಿಂದ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲಾಗಿತ್ತು.

ಬೇಸಿಗೆಯ ಸವಾಲು ಮತ್ತು ಮುನ್ನೆಚ್ಚರಿಕೆ
ಕಡು ಬಿಸಿಲನ್ನು ಗಮನದಲ್ಲಿಟ್ಟುಕೊಂಡು, ನಿರ್ಜಲೀಕರಣ (Dehydration) ಮತ್ತು ಬಿಸಿಲಿನ ತಾಪದಿಂದ ಉಂಟಾಗುವ ತಲೆನೋವು, ಬಿಪಿ ಏರುಪೇರುಗಳನ್ನು ತಡೆಯಲು ವಿಶೇಷ ಕ್ರಮ ಕೈಗೊಳ್ಳಲಾಗಿತ್ತು. “ಜನರಿಗೆ ನಿರಂತರವಾಗಿ ಕುಡಿಯುವ ನೀರು ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಔಷಧಗಳ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ಉಚಿತವಾಗಿ ಮಾತ್ರೆ ಮತ್ತು ಚಿಕಿತ್ಸೆ ನೀಡಲಾಯಿತು” ಎಂದು ಈ ಬೃಹತ್ ಕಾರ್ಯಕ್ರಮದ ವೈದ್ಯಕೀಯ ಸಿದ್ಧತೆಗಳ ನೇತೃತ್ವ ವಹಿಸಿದ್ದ ವೈದ್ಯಕೀಯ ಪ್ರಕೋಷ್ಠದ ಪ್ರಮುಖರಾದ ಡಾ.ನಾರಾಯಣ್, ಡಾ.ಲಕ್ಷ್ಮಣ್, ಹಾಗೂ ಡಾ. ಚನ್ನಮಲ್ಲಯ್ಯ ಅವರು ಸಮಗ್ರ ವ್ಯವಸ್ಥೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

‘ಅಭಿಮಾನಿಗಳ ಆರೋಗ್ಯವೇ ನಮ್ಮ ಆದ್ಯತೆ’
ಕಾರ್ಯಕ್ರಮದ ಯಶಸ್ಸಿನ ಕುರಿತು ಮಾತನಾಡಿದ ಡಾ. ಚನ್ನಮಲ್ಲಯ್ಯ ಅವರು, “ಬಿಎಸ್ ವೈ ಅವರ ಮೇಲೆ ಪ್ರೀತಿಯನ್ನಿಟ್ಟು ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಇಲ್ಲಿಗೆ ಬಂದ ಯಾವೊಬ್ಬ ಅಭಿಮಾನಿಯೂ ಆರೋಗ್ಯ ಸಮಸ್ಯೆಯಿಂದ ಬಳಲಬಾರದು ಮತ್ತು ಅವರಿಗೆ ತಕ್ಷಣದ ಚಿಕಿತ್ಸೆ ಸಿಗಬೇಕು ಎಂಬುದು ನಮ್ಮ ಮೊದಲ ಗುರಿಯಾಗಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು,” ಎಂದು ತಿಳಿಸಿದರು.

ಸಮರ್ಪಣಾ ಮನೋಭಾವದ ಸೇವೆ: ಶ್ಲಾಘನೆ
ಇಂತಹ ದೊಡ್ಡ ಸಮಾವೇಶಗಳಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಒಂದು ಸವಾಲಿನ ಕೆಲಸ. ಆದರೆ ಡಾ ನಾರಾಯಣ್, ಡಾ. ಲಕ್ಷ್ಮಣ್, ಹಾಗೂ ಡಾ. ಚನ್ನಮಲ್ಲಯ್ಯ ಅವರ ತಂಡ ಅತ್ಯಂತ ಜವಾಬ್ದಾರಿಯುತವಾಗಿ ಈ ಗಂಭೀರ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಕೇವಲ ವೈದ್ಯರಾಗಿ ಮಾತ್ರವಲ್ಲದೆ, ಒಬ್ಬ ದಕ್ಷ ಸಂಘಟಕರಾಗಿ ಜಿಲ್ಲಾ ಆಸ್ಪತ್ರೆ, ಸಿ.ಜಿ. ಆಸ್ಪತ್ರೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಸಮನ್ವಯಗೊಳಿಸಿ, ಅಭಿಮಾನಿಗಳ ಪಾಲಿಗೆ ‘ಆರೋಗ್ಯ ದೂತ’ನಂತೆ ಕಾರ್ಯನಿರ್ವಹಿಸಿದರು. ಇವರ ಈ ನಿಸ್ವಾರ್ಥ ಸೇವೆ ಮತ್ತು ಜನರ ಆರೋಗ್ಯದ ಬಗ್ಗೆ ಅವರಿಗಿದ್ದ ಕಾಳಜಿಯು ಇಂದು ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಕ್ಷೇತ್ರದಲ್ಲಿ ಲಭ್ಯವಿದ್ದ ಪ್ರಮುಖ ವೈದ್ಯಕೀಯ ಸೌಲಭ್ಯಗಳು:
- ತಜ್ಞ ವೈದ್ಯರ ದಂಡು: ಹೃದಯ ರೋಗ, ಜಠರಗರುಳು ತಜ್ಞರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪರಿಣಿತ ವೈದ್ಯರು ಮತ್ತು ನೂರಾರು ನರ್ಸಿಂಗ್ ಸಿಬ್ಬಂದಿಗಳು ಸ್ಥಳದಲ್ಲಿ ಸೇವೆ ನೀಡಿದರು.
- ಆಸ್ಪತ್ರೆ ವ್ಯವಸ್ಥೆ: ವೇದಾಂತ, ಸರ್ಜಿ, ಸ್ಪರ್ಶ ಹಾಗೂ ಬಸವೇಶ್ವರ ಹಾಸ್ಪಿಟಲ್ ಗಳಲ್ಲಿ ತುರ್ತು ಚಿಕಿತ್ಸೆಗಾಗಿ 100 ಹಾಸಿಗೆಗಳ ಹೈಟೆಕ್ ವ್ಯವಸ್ಥೆ ಮಾಡಲಾಗಿತ್ತು.
- ಆಂಬ್ಯುಲೆನ್ಸ್ ಜಾಲ: ಯಾವುದೇ ತುರ್ತು ಸಂದರ್ಭ ಎದುರಿಸಲು ಸಜ್ಜಾದ 30 ಸುಸಜ್ಜಿತ ಆಂಬ್ಯುಲೆನ್ಸ್ಗಳನ್ನು ಕ್ರೀಡಾಂಗಣದ ಸುತ್ತಮುತ್ತ ನಿಯೋಜಿಸಲಾಗಿತ್ತು.
- ಉಚಿತ ಔಷಧ ಮತ್ತು ಚಿಕಿತ್ಸೆ: ಬೇಸಿಗೆಯ ಬಿಸಿಲಿನಿಂದ ಉಂಟಾಗುವ ನಿರ್ಜಲೀಕರಣ, ತಲೆನೋವು, ಬಿಪಿ ಏರುಪೇರಿನಂತಹ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಉಚಿತವಾಗಿ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.

ನಿಸ್ವಾರ್ಥ ಸೇವೆಯಲ್ಲಿ ತೊಡಗಿದ ವೈದ್ಯರ ಬಳಗ
ಈ ಮಹತ್ವದ ವೈದ್ಯಕೀಯ ಸೇವೆಯಲ್ಲಿ ಭಾಗವಹಿಸಿದ್ದ ವೈದ್ಯರ ತಂಡದಲ್ಲಿ ಡಾ.ಚನ್ನಮಲ್ಲಯ್ಯ, ಡಾ. ಲಕ್ಷ್ಮಣ್ ಹೆಚ್. ರಾಜೂರ್, ಡಾ. ನಾರಾಯಣ, ಡಾ. ಸದಾನಂದ, ಡಾ. ಸುಭಾಷ್ ಶಿವನಗೌಡ, ಸಂತೋಷ್ ಗುಡಿಮಠ, ಡಾ. ಸಾಯಿ ಆಶ್ಲೇಶ್, ಡಾ. ಸುರೇಶ್, ಡಾ. ಪ್ರಕಾಶ್ ತಾರಿವಾಳ್, ಮಲ್ಲಿಕಾರ್ಜುನ, ಡಾ. ಸುಭಾಷ್ ಪಾಟೀಲ್, ಡಾ. ನವೀನ್ ಪಾಟೀಲ್, ಡಾ. ದೀಪಕ್, ಡಾ. ಬಾಲಾಜಿ ಹಾಗೂ ಡಾ. ವರುಣ್ ಸೇರಿದಂತೆ ಹಲವರು ನಿಸ್ವಾರ್ಥ ಸೇವೆ ಸಲ್ಲಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬ ಕಾರ್ಯಕರ್ತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ ಈ ವೈದ್ಯಕೀಯ ತಂಡ, ಸೇವಾಭಾವದಿಂದ ಹಗಲಿರುಳು ದುಡಿದು ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿತು. ವೇದಿಕೆ ವ್ಯವಸ್ಥಾಪನಾ ತಂಡದೊಂದಿಗೆ ಸಮನ್ವಯ ಸಾಧಿಸಿ ಆರೋಗ್ಯ ಸಂಬಂಧಿತ ಎಲ್ಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ವೈದ್ಯಕೀಯ ಪ್ರಕೋಷ್ಠದ ಕಾರ್ಯ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.

ಅಭಿಮಾನೋತ್ಸವ ಯಶಸ್ಸಿನ ಹಿಂದೆ ವೈದ್ಯಕೀಯ ತಂಡದ ಶ್ರಮ
ಲಕ್ಷಾಂತರ ಜನರ ಸಮಾಗಮ ನಡೆದ ಈ ಭವ್ಯ ಕಾರ್ಯಕ್ರಮ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಯಲು ವೈದ್ಯಕೀಯ ತಂಡದ ಶ್ರಮವೂ ಪ್ರಮುಖ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾರ್ಯಕರ್ತರ ಆರೋಗ್ಯ ಮತ್ತು ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಸೇವೆ ಸಲ್ಲಿಸಿದ ಈ ವೈದ್ಯರ ಬಳಗ ಮಾನವೀಯತೆ, ಕರ್ತವ್ಯನಿಷ್ಠೆ ಮತ್ತು ಸೇವಾಭಾವಕ್ಕೆ ಮಾದರಿಯಾಗಿದೆ.

ಸೇವಾಭಾವದಿಂದ ಮೆರೆದ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ
ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮವು ವೈದ್ಯಕೀಯ ಪ್ರಕೋಷ್ಠ ತಂಡದ ಅಚ್ಚುಕಟ್ಟಾದ ಕಾರ್ಯವೈಖರಿ ಹಾಗೂ ಸಮರ್ಪಿತ ಸೇವೆಯಿಂದ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಕಾರ್ಯಕರ್ತರ ಉತ್ಸಾಹದ ಜೊತೆಗೆ ವೈದ್ಯಕೀಯ ಪ್ರಕೋಷ್ಠದ ನಿಸ್ವಾರ್ಥ ಸೇವಾಭಾವವೂ ಸ್ಪಷ್ಟವಾಗಿ ಗೋಚರಿಸಿತು.











