ಬೆಂಗಳೂರು: ರಾಜ್ಯದ ಶೈಕ್ಷಣಿಕ ವಲಯದಲ್ಲಿ ದೀರ್ಘಕಾಲದಿಂದ ಚರ್ಚೆಯಲ್ಲಿದ್ದ ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. 2022ರಲ್ಲಿ ಜಾರಿಯಲ್ಲಿದ್ದ ವಿವಾದಿತ ಸಮವಸ್ತ್ರ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿರುವ ಸರ್ಕಾರ, ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ತಮ್ಮ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಂಬಿಕೆಯ ಸಂಕೇತಗಳನ್ನು ಧರಿಸಲು ಮುಕ್ತ ಅವಕಾಶ ಕಲ್ಪಿಸಿ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಆರೋಗ್ಯ ಸಚಿವ ದಿನೇಶ್ ಗುಂಡರಾವ್ ಹಾಗೂ ಶಾಸಕ ರಿಜ್ವಾನ್ ಹರ್ಷದ್ ಅವರ ಜೊತೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಹಳೆಯ ಆದೇಶ ರದ್ದು: ಮುಕ್ತ ಶಿಕ್ಷಣಕ್ಕೆ ಹಾದಿ ಸುಗಮ
ಫೆಬ್ರವರಿ 5, 2022 ರಂದು ಅಂದಿನ ಸರ್ಕಾರ ಹೊರಡಿಸಿದ್ದ ಸಮವಸ್ತ್ರಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ಆದೇಶವನ್ನು (ಸಂಖ್ಯೆ: ಇಪಿ 14 ಎಸ್ಹೆಚ್ಹೆಚ್ 2022) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳ (KV) ವಸ್ತ್ರ ಸಂಹಿತೆಯನ್ನು ಮಾದರಿಯಾಗಿಟ್ಟುಕೊಂಡು ಈ ಹೊಸ ಮಾರ್ಗಸೂಚಿಯನ್ನು ರೂಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಹೊಸ ಮಾರ್ಗಸೂಚಿಯ ಮುಖ್ಯಾಂಶಗಳು:
ಸಾಂಪ್ರದಾಯಿಕ ಸಂಕೇತಗಳಿಗೆ ಮಾನ್ಯತೆ: ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದ ಜೊತೆಗೆ ಪೇಟ (Turbon), ಜನಿವಾರ, ಶಿವದಾರ, ರುದ್ರಾಕ್ಷಿ ಮತ್ತು ತಲೆವಸ್ತ್ರ/ಹಿಜಾಬ್ (Headscarf) ಸೇರಿದಂತೆ ಸೀಮಿತ ಸಾಂಪ್ರದಾಯಿಕ ಗುರುತುಗಳನ್ನು ಧರಿಸಲು ಅವಕಾಶ ನೀಡಲಾಗಿದೆ.
ತಾರತಮ್ಯಕ್ಕೆ ತಡೆ: ಯಾವುದೇ ವಿದ್ಯಾರ್ಥಿಯು ಧಾರ್ಮಿಕ ಅಥವಾ ಸಾಂಪ್ರದಾಯಿಕ ಸಂಕೇತ ಧರಿಸಿದ್ದಾನೆ ಎಂಬ ಕಾರಣಕ್ಕೆ ತರಗತಿ, ಪರೀಕ್ಷೆ ಅಥವಾ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿಸುವಂತಿಲ್ಲ. ಇದು ಶಿಕ್ಷಣದ ಹಕ್ಕಿನ ರಕ್ಷಣೆಯ ಭಾಗವಾಗಿದೆ.
ಬಲವಂತಕ್ಕೆ ಅವಕಾಶವಿಲ್ಲ: ಸಾಂಪ್ರದಾಯಿಕ ಸಂಕೇತಗಳನ್ನು ಧರಿಸುವಂತೆ ಅಥವಾ ಧರಿಸಿದವುಗಳನ್ನು ಕಳಚುವಂತೆ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರುವಂತಿಲ್ಲ.
ಶಿಸ್ತು ಮತ್ತು ಗುರುತಿಸುವಿಕೆ: ಈ ಸಂಕೇತಗಳು ಸಮವಸ್ತ್ರದ ಬಣ್ಣಕ್ಕೆ ಪೂರಕವಾಗಿರಬೇಕು ಹಾಗೂ ಶಾಲಾ ಶಿಸ್ತು, ಭದ್ರತೆ ಅಥವಾ ವಿದ್ಯಾರ್ಥಿಯನ್ನು ಗುರುತಿಸುವಿಕೆಗೆ (Identification) ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು.
”ಇವ ನಮ್ಮವ” ತತ್ವಕ್ಕೆ ಒತ್ತು
ಸರ್ಕಾರದ ಈ ನಿರ್ಧಾರದ ಹಿಂದೆ ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆಯ ಆಶಯವಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
”ಜಾತ್ಯತೀತತೆ ಎಂದರೆ ನಂಬಿಕೆಗಳ ವಿರೋಧವಲ್ಲ, ಬದಲಾಗಿ ಪ್ರತಿಯೊಬ್ಬರ ನಂಬಿಕೆಯನ್ನು ಗೌರವಿಸುವುದಾಗಿದೆ. ಬಸವಣ್ಣನವರ ‘ಇವ ನಮ್ಮವ’ ಎಂಬ ತತ್ವದಡಿ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುವುದು ನಮ್ಮ ಉದ್ದೇಶ,”
ಸಚಿವ ಮಧು ಬಂಗಾರಪ್ಪ
ಅನ್ವಯ ಮತ್ತು ಅನುಷ್ಠಾನ
ಈ ಹೊಸ ಆದೇಶವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಲಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC) ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳು (CDC) ಈ ಮಾರ್ಗಸೂಚಿಯ ಅನುಷ್ಠಾನದ ಜವಾಬ್ದಾರಿಯನ್ನು ಹೊರಲಿವೆ. ಈ ಆದೇಶಕ್ಕೆ ವಿರುದ್ಧವಾಗಿರುವ ಹಿಂದಿನ ಎಲ್ಲಾ ಸುತ್ತೋಲೆಗಳು ಇಂದಿನಿಂದಲೇ ಅಸಿಂಧುಗೊಳ್ಳಲಿವೆ.
ಈ ತೀರ್ಮಾನವು ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ಸೌಹಾರ್ದತೆ ಮೂಡಿಸಲಿದೆ ಮತ್ತು ವಿದ್ಯಾರ್ಥಿಗಳು ಯಾವುದೇ ಮುಜುಗರವಿಲ್ಲದೆ ಶಿಕ್ಷಣದತ್ತ ಗಮನಹರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.