ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಂಪತ್ತು ಬೆಳೆದಷ್ಟೂ ಮಾನವೀಯ ಸಂಬಂಧಗಳು ಗಟ್ಟಿಯಾಗಲಿ; ಧರ್ಮದ ಬೆಳಕಿನಲ್ಲಿ ಸಾರ್ಥಕ ಜೀವನ ಕಟ್ಟಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರುಗಳು

On: July 25, 2026 11:19 PM
Follow Us:

ಹಗರಿಬೊಮ್ಮನಹಳ್ಳಿ: ಜೀವನದಲ್ಲಿ ಸಂಪತ್ತು, ಸ್ಥಾನಮಾನ ಮತ್ತು ಭೌತಿಕ ಸೌಲಭ್ಯಗಳು ಹೆಚ್ಚಾದಂತೆ ಮಾನವೀಯ ಮೌಲ್ಯಗಳು, ಸಂಬಂಧಗಳು ಹಾಗೂ ಧರ್ಮನಿಷ್ಠೆ ಕುಗ್ಗಬಾರದು. ನಿಜವಾದ ಸಂಪತ್ತು ಎಂದರೆ ಹಣವಲ್ಲ, ಸದ್ಗುಣಗಳು ಮತ್ತು ಮಾನವೀಯತೆ. ಧರ್ಮದ ಮಾರ್ಗವೇ ಮೋಕ್ಷದ ಹೆದ್ದಾರಿಯಾಗಿದ್ದು, ಧರ್ಮಾಚರಣೆಯಿಂದಲೇ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಹಗರಿಬೊಮ್ಮನಹಳ್ಳಿಯ ಶ್ರೀ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮ, ಸಂಸ್ಕಾರ ಮತ್ತು ಮಾನವೀಯತೆಯೇ ಜೀವನದ ನಿಜವಾದ ಸಂಪತ್ತು: ಶ್ರೀ ರಂಭಾಪುರಿ ಜಗದ್ಗುರುಗಳು

“ಧರ್ಮದ ದಾರಿಯೇ ಮೋಕ್ಷದ ಹೆದ್ದಾರಿ. ಪರಿಶ್ರಮವಿಲ್ಲದೆ ಯಶಸ್ಸು ದೊರೆಯುವುದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡು ಬದುಕುವುದೇ ನಿಜವಾದ ಧರ್ಮ. ಹಣ ಮತ್ತು ಆಸ್ತಿಪಾಸ್ತಿಗಳು ಬದುಕಿಗೆ ಅನುಕೂಲಗಳನ್ನು ನೀಡಬಹುದು; ಆದರೆ ಮಾನವೀಯತೆ, ಪ್ರಾಮಾಣಿಕತೆ ಮತ್ತು ನೈತಿಕತೆ ಇಲ್ಲದ ಜೀವನಕ್ಕೆ ಯಾವುದೇ ಅರ್ಥವಿಲ್ಲ. ಧರ್ಮ, ಸಂಸ್ಕಾರ ಮತ್ತು ಸತ್ಸಂಗದ ಮೂಲಕವೇ ವ್ಯಕ್ತಿತ್ವ ರೂಪುಗೊಳ್ಳುತ್ತದೆ” ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

ಸಮಾಜದ ಸಂಪ್ರದಾಯಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ನೈತಿಕ ಮೌಲ್ಯಗಳು ಮತ್ತು ಧರ್ಮದ ತತ್ವಗಳು ಎಂದಿಗೂ ಬದಲಾಗುವುದಿಲ್ಲ. ಪುಸ್ತಕಗಳನ್ನು ಬದಲಾಯಿಸಬಹುದು, ಆದರೆ ಇತಿಹಾಸವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯ ಯಾವ ಬೀಜ ಬಿತ್ತುತ್ತಾನೋ ಅದೇ ಫಲವನ್ನು ಪಡೆಯುವಂತೆ, ಉತ್ತಮ ಚಿಂತನೆ ಮತ್ತು ಸತ್ಕಾರ್ಯಗಳಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

🚩 ಯುವಜನಾಂಗ ಮತ್ತು ಧರ್ಮ ಪರಂಪರೆ

ಯುವಜನಾಂಗವೇ ದೇಶದ ನಿಜವಾದ ಸಂಪತ್ತು. ಯುವಕರಲ್ಲಿ ಜ್ಞಾನ, ಸಂಸ್ಕಾರ, ವೈಚಾರಿಕತೆ ಮತ್ತು ರಾಷ್ಟ್ರೀಯ ಮನೋಭಾವ ಬೆಳೆಯಬೇಕು. ಸಂಸ್ಕೃತಿ ವಿರೋಧಿ ಚಿಂತನೆಗಳಿಗೆ ಅವಕಾಶ ನೀಡದೆ, ಧರ್ಮ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಯುವಕನ ಮೇಲಿದೆ ಎಂದು ಕರೆ ನೀಡಿದರು.

ವೀರಶೈವ ಧರ್ಮದಲ್ಲಿ ಜಂಗಮರ ಸ್ಥಾನ ಅತ್ಯಂತ ಶ್ರೇಷ್ಠವಾಗಿದೆ. ಹುಟ್ಟಿನಿಂದ ಅಂತ್ಯಸಂಸ್ಕಾರದವರೆಗೆ ಸಮಾಜಕ್ಕೆ ಧರ್ಮದ ಮಾರ್ಗದರ್ಶನ ನೀಡುವ ಜಂಗಮ ಸಮುದಾಯವು ಧರ್ಮ ಪರಂಪರೆ ಮತ್ತು ಮೌಲ್ಯಗಳ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಗುರು-ಲಿಂಗ-ಜಂಗಮ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪವಿತ್ರವಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು.

ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘವು ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜಮುಖಿ ಸೇವೆಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಂಘದ ಅಧ್ಯಕ್ಷ ಜಿ.ಎಂ. ಜಗದೀಶ್ ಸೇರಿದಂತೆ ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿಗೆ ಆದರ್ಶ ಸೇವೆ ಸಲ್ಲಿಸಲಿ ಎಂದು ಆಶೀರ್ವದಿಸಿದರು.

ಮಾನವೀಯತೆಯೇ ಬದುಕಿನ ನಿಜವಾದ ಅಲಂಕಾರ: ಶಾಸಕ ನೇಮಿರಾಜ ನಾಯ್ಕ

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ ನಾಯ್ಕ ಮಾತನಾಡಿ, “ಮನುಷ್ಯನಿಗೆ ಮನುಷ್ಯನೇ ದೊಡ್ಡ ಶಕ್ತಿ. ಕರುಣೆ, ಪರೋಪಕಾರ, ಸಹಾನುಭೂತಿ ಮತ್ತು ಮಾನವೀಯತೆ ಜೀವನದ ನಿಜವಾದ ಆಭರಣಗಳು. ಹಿರಿಯರು ತೋರಿಸಿದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜ ಸುಂದರವಾಗುತ್ತದೆ. ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಘ ಧರ್ಮ ಮತ್ತು ಸಮಾಜ ಸೇವೆಯಲ್ಲಿ ಮಾದರಿಯಾಗಲಿ” ಎಂದು ಆಶಿಸಿದರು.

ವೀರಶೈವ ಸಮಾಜ ಮತ್ತಷ್ಟು ಸಂಘಟಿತವಾಗಬೇಕು: ಎಚ್.ಎಸ್. ಶಿವಶಂಕರ

ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಾತನಾಡಿ, ವೀರಶೈವ-ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಸಮಾಜ ಇನ್ನಷ್ಟು ಸದೃಢವಾಗಲಿದೆ. ಪಂಚಪೀಠಗಳು ವೀರಶೈವ ಧರ್ಮದ ಮೂಲ ಗುರುಪೀಠಗಳಾಗಿದ್ದು, ಅವುಗಳ ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಯಬೇಕು ಎಂದು ಹೇಳಿದರು.

ಸಮಾರಂಭಕ್ಕೂ ಮುನ್ನ ಹಗರಿಬೊಮ್ಮನಹಳ್ಳಿ ಹಾಲುಸ್ವಾಮಿ ಮಠದ ಆವರಣದಲ್ಲಿ ನಿರ್ಮಾಣವಾಗಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ವೃತ್ತಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಾಸಕ ನೇಮಿರಾಜ ನಾಯ್ಕ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತರು, ಸಮಾಜದ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಶಿವಾಚಾರ್ಯರು, ಉತ್ತಂಗಿ ಸೋಮಶೇಖರ ಶ್ರೀಗಳು, ಚಾನುಕೋಟಿ ಮಠದ ಡಾ. ಸಿದ್ಧಲಿಂಗ ಶಿವಾಚಾರ್ಯರು, ಕೊಟ್ಟೂರು ಯೋಗಿರಾಜೇಂದ್ರ ಶಿವಾಚಾರ್ಯರು, ಅಡವಿಹಳ್ಳಿ ಹಾಲುಸ್ವಾಮೀಜಿ, ಗದ್ದಿಕೆರೆ ಚರಂತೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಬಾದಾಮಿ ಮೃತ್ಯುಂಜಯ, ಕೊಟ್ರೇಶ ಶೆಟ್ಟರ್, ಮಲ್ಲಿಕಾರ್ಜುನಸ್ವಾಮಿ ಕಲ್ಮಠ,ಇ ಸಂಘದ ಅಧ್ಯಕ್ಷ ಜಿ.ಎಂ. ಜಗದೀಶ್,. ಡಾ. ಬಿ.ಎಚ್. ವಿಶ್ವನಾಥ್, ಇಂದುಮತಿ ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ನವಲಿ ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು. ಎನ್.ಎಂ. ಸದ್ಯೋಜಾತಮೂರ್ತಿ ಸ್ವಾಗತಿಸಿದರು. ಶ್ರೀಮತಿ ಪೂಜಾ ಸಂಗಡಿಗರಿಂದ ಪ್ರಾರ್ಥನೆ ನೆರವೇರಿತು.

K.M.Sathish Gowda

Join WhatsApp

Join Now

Facebook

Join Now

Read more

ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಜೀವನವೂ ಪರಿಶುದ್ಧವಾಗಬೇಕು; ಧರ್ಮ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳೇ ಬದುಕಿನ ನಿಜವಾದ ಸಂಪತ್ತು: ಶ್ರೀ ರಂಭಾಪುರಿ ಜಗದ್ಗುರುಗಳು

​ದೇವರಭೂಪುರದಲ್ಲಿ ವೈಭವದ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ; ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

ಜೀವನದ ಸಾರ್ಥಕತೆಗೆ ಗುರಿ ಮತ್ತು ಗುರು ಅತ್ಯಗತ್ಯ; ಧರ್ಮದ ಬೆಳಕಿನಲ್ಲಿ ಸಾರ್ಥಕ ಬದುಕು ಕಟ್ಟಿಕೊಳ್ಳಿ: ಶ್ರೀ ರಂಭಾಪುರಿ ಜಗದ್ಗುರು

ಹಣದ ಜೊತೆಗೆ ಗುಣವಿದ್ದರೆ ಬದುಕು ಸಾರ್ಥಕ; ಗುಣವಿದ್ದರೆ ಭಗವಂತ ಸದಾ ಜೊತೆಯಲ್ಲಿರುತ್ತಾನೆ: ಶ್ರೀ ರಂಭಾಪುರಿ ಜಗದ್ಗುರುಗಳು

ವೀರಶೈವ-ಲಿಂಗಾಯತ ಸಮಾಜ ಒಳಪಂಗಡಗಳ ಭೇದ ಮರೆತು ಒಂದಾಗಲಿ; ಸಮಾಜದಲ್ಲಿ ಸಂಘಟನೆಗಳು ಬೆಳೆಯಬೇಕೇ ಹೊರತು ಸಂಘರ್ಷಗಳು ನಡೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

ಅಂತರಂಗ ಶುದ್ಧಿಯಾದಾಗಲೇ ಸಮಾಜದಲ್ಲಿ ಶಾಂತಿ-ಸಮಾನತೆ ನೆಲೆಸುತ್ತದೆ: ಶಿವಗಂಗಾ ಶ್ರೀ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

Leave a Comment