ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸತ್ಯ, ದಯೆ ಮತ್ತು ಸೇವೆಯೇ ಬದುಕಿನ ನಿಜವಾದ ಧರ್ಮ; ಸನ್ಮಾನಕ್ಕಿಂತ ಸಂಸ್ಕಾರ ಮತ್ತು ಸಂಸ್ಕೃತಿ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

On: August 4, 2026 8:56 PM
Follow Us:

ಹರಿಹರ: ​”ಸತ್ಯದ ದಾರಿಯಲ್ಲಿ ಹೆಜ್ಜೆ ಇಡುವಾಗ ಸಾವಿರಾರು ಸಂಕಷ್ಟಗಳು ಎದುರಾಗುವುದು ಸಹಜ. ದಾರಿಯುದ್ದಕ್ಕೂ ಸಿಗುವ ಪ್ರಶಂಸೆ-ನಿಂದನೆಗಳು ಕೇವಲ ಕ್ಷಣಿಕ, ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯುವುದೇ ನಿಜವಾದ ಧರ್ಮ. ಬರಿ ಜ್ಞಾನದ ಅರಿವಿಗಿಂತ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ‘ಆಚಾರ’ವೇ ಮನುಷ್ಯನನ್ನು ಎತ್ತರಕ್ಕೇರಿಸುತ್ತದೆ. ಲೋಕ ನೀಡುವ ತಾತ್ಕಾಲಿಕ ಮಾನ-ಸನ್ಮಾನಗಳಿಗಿಂತ, ವ್ಯಕ್ತಿಯ ಅಂತರಂಗವನ್ನು ಬೆಳಗುವ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಗಳೇ ಬದುಕಿನ ನಿಜವಾದ ಶಾಶ್ವತ ಸಂಪತ್ತು” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಸಭಾಂಗಣದಲ್ಲಿ ಜರುಗಿದ ‘ಜನಜಾಗೃತಿ ಧರ್ಮ ಸಮಾರಂಭ’ದ ಎರಡನೇ ದಿನದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

🚩 ಮಾನವೀಯತೆಯ ಆದರ್ಶಗಳು ಬೆಳೆಯಲಿ: ಶ್ರೀ ರಂಭಾಪುರಿ ಜಗದ್ಗುರುಗಳು

“ಸಂತಸ ಮತ್ತು ಶಾಂತಿಯ ಜೀವನ ನಡೆಸಲು ಆಧ್ಯಾತ್ಮಿಕ ಅರಿವು ಹಾಗೂ ಅದರ ಆಚರಣೆಗಳು ಅಗತ್ಯ. ಮನುಷ್ಯ ಸಂಬಂಧಗಳು ಗಟ್ಟಿಯಾಗಬೇಕಾದರೆ ಪ್ರತಿಯೊಬ್ಬರಲ್ಲೂ ಹೃದಯ ಶ್ರೀಮಂತಿಕೆ ಇರಬೇಕು. ಬರಿ ಭವ್ಯವಾದ ಕಟ್ಟಡ, ಭವನಗಳನ್ನು ಎತ್ತರಕ್ಕೆ ಕಟ್ಟಿದರೆ ಸಾಲದು, ಅದರೊಂದಿಗೆ ಮಾನವೀಯತೆಯ ಆದರ್ಶಗಳನ್ನು ಎತ್ತರಕ್ಕೆ ಬೆಳೆಸುವುದು ಅತ್ಯಗತ್ಯವಾಗಿದೆ.”
✨ “ನಮಗೆ ಹೇಗೆ ಸುಖ-ಸಂತೋಷ ಬೇಕೆಂದು ಬಯಸುತ್ತೇವೆಯೋ, ಅದೇ ರೀತಿ ಇತರರಿಗೂ ಬಯಸುವುದೇ ನಿಜವಾದ ಧರ್ಮ. ಕೈಲಾಸಕ್ಕಿಂತ ಕಾಯಕ ಶ್ರೇಷ್ಠ, ಧರ್ಮಕ್ಕಿಂತ ದಯಾಗುಣ ಶ್ರೇಷ್ಠ ಹಾಗೂ ಭೌತಿಕ ಆಸ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಶಾಶ್ವತವಾದದ್ದು ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ಬೋಧಿಸಿದ್ದಾರೆ” ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಇದೇ ಶುಭ ಸಂದರ್ಭದಲ್ಲಿ, ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ನಡೆಯಲಿರುವ 35ನೇ ಶ್ರಾವಣ ಮಾಸದ ಕಾರ್ಯಕ್ರಮದ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಮಾತನಾಡಿ, “ಮನುಷ್ಯ ತನ್ನ ಜೀವನದಲ್ಲಿ ದ್ವೇಷವನ್ನು ಕಳೆದುಕೊಳ್ಳದಿದ್ದರೆ, ಆತನ ಬದುಕಿನಲ್ಲಿ ಸುಖ-ಸಂತಸದ ಹೂವು ಅರಳಲು ಸಾಧ್ಯವಿಲ್ಲ. ಜಗತ್ತಿನಲ್ಲಿ ನಮಗೆ ಬೇಕಾದದ್ದು ಮತ್ತು ಬೇಡವಾದದ್ದು ಎರಡೂ ಇವೆ. ಯಾವುದನ್ನು ಅನುಸರಿಸಿ ಬಾಳಿದರೆ ನೆಮ್ಮದಿ ಸಿಗುತ್ತದೆಯೋ, ಆ ಸನ್ಮಾರ್ಗದಲ್ಲಿ ಮರೆಯದೇ ಮುನ್ನಡೆಯಬೇಕು. ಶ್ರೀ ರಂಭಾಪುರಿ ಜಗದ್ಗುರುಗಳ ನಿರಂತರ ಜನಜಾಗೃತಿ ಸಮಾರಂಭಗಳು ಎಲ್ಲೆಡೆ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ” ಎಂದರು.

​ಅವಧೂತ ಕವಿ ಗುರುರಾಜ್ ಗುರೂಜಿ ಅವರು ಮಾತನಾಡಿ, “ಮನುಷ್ಯ ಸಮಸ್ಯೆಯತ್ತಷ್ಟೇ ಗಮನ ಹರಿಸಿದಾಗ ಸಮಸ್ಯೆಗಳೇ ಹೆಚ್ಚಾಗುತ್ತವೆ. ಆದರೆ ಸಾಧನೆ ಹಾಗೂ ಪರಿಹಾರದತ್ತ ನೋಟ ಹರಿಸಿದಾಗ ಹೊಸ ಹೊಸ ಅವಕಾಶಗಳು ಬಾಗಿಲು ತೆರೆಯುತ್ತವೆ. ಯಾರೂ ನಿರಾಶರಾಗದೆ ಆಶಾವಾದಿಗಳಾಗಿ ಬಾಳುವುದು ಶ್ರೇಯಸ್ಕರ. ಆಧ್ಯಾತ್ಮಿಕ ಜ್ಞಾನದ ಅರಿವು ಜೀವನದ ವಿಕಾಸಕ್ಕೆ ಭದ್ರ ಬುನಾದಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

​ಸಮಾರಂಭದ ನೇತೃತ್ವ ವಹಿಸಿದ್ದ ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯರು ಮಾತನಾಡಿ, “ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಸಹನೆ ಮತ್ತು ಸಾಧನೆಯೇ ಪರಿಣಾಮಕಾರಿ ಔಷಧ. ಇತರರಿಗೆ ಏನನ್ನಾದರೂ ಹಂಚುವುದಿದ್ದರೆ ಸಂತೋಷವನ್ನು ಹಂಚಬೇಕು. ಧರ್ಮದಲ್ಲಿ ಸತ್ಯ ಮತ್ತು ಶಾಂತಿ ನೆಲಸಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಹಾಗೂ ಸಿದ್ಧಾಂತಗಳು ಮಾನವಕುಲದ ಸಂವರ್ಧನೆಗೆ ಸಂಜೀವಿನಿಯಾಗಿವೆ” ಎಂದರು.

ಹಂಪಸಾಗರದ ಶ್ರೀವಲ್ಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, “ಬದುಕಿ ಬಾಳುವ ಮನುಷ್ಯನಿಗೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮದ ತತ್ವತ್ರಯಗಳು ಜೀವನದ ವಿಕಾಸಕ್ಕೆ ಕಾರಣವಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮಯಜ್ಞವು ಜನಮನದ ಜಾಗೃತಿಗೆ ಸಾಕ್ಷಿಯಾಗಿದೆ” ಎಂದು ಬಣ್ಣಿಸಿದರು.

​ಕಾರ್ಯಕ್ರಮದಲ್ಲಿ ಪ್ರಮುಖರಾದ ಡಿ. ಹೇಮಂತರಾಜ್, ಮಲ್ಲಜ್ಜರ ವಿರೂಪಾಕ್ಷಪ್ಪ, ವೀರೇಶ್, ಬಿ.ಜೆ. ಮುರುಗೇಶಪ್ಪ, ಎನ್.ಹೆಚ್. ಪಾಟೀಲ್ ಅವರಿಗೆ ‘ಶ್ರೀ ಗುರುರಕ್ಷೆ’ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

​ಸಮಾರಂಭದಲ್ಲಿ ಗಜಾಪುರದ ವೀರಣ್ಣ, ವಿನಯ್ ಕುಮಾರ್, ಡಿ.ಜಿ. ಶಿವಾನಂದಪ್ಪ, ಡಾ. ನಾಗರಾಜ್, ಚಂದ್ರಶೇಖರ್ ಪೂಜಾರ, ಬಿ. ಹಾಲೇಶಗೌಡ, ಸಂತೋಷ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

  • ಸಾಂಸ್ಕೃತಿಕ ಕಾರ್ಯಕ್ರಮ: ಕುಮಾರಿ ನಿಧಿಶ್ರೀ ಮತ್ತು ನಿಹಾರಿಕಾ ಹಿರೇಮಠ ಅವರಿಂದ ಮನಮೋಹಕ ಭರತನಾಟ್ಯ ಹಾಗೂ ಕಾಂತರಾಜ್-ವೀರೇಶ್ ಮತ್ತು ತಂಡದವರಿಂದ ‘ಸಂಗೀತ ಸೌರಭ’ ಕಾರ್ಯಕ್ರಮ ನಡೆಯಿತು.
  • ನಿರೂಪಣೆ ಹಾಗೂ ಸ್ವಾಗತ: ಕುಮಾರಿ ಐಶ್ವರ್ಯ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಗುರು ಬಸವರಾಜ್ ಮತ್ತು ಡಾ. ಶ್ವೇತಾ ಕಾರ್ಯಕ್ರಮವನ್ನು ನಿರೂಪಿಸಿದರು.

​ಇಂದು ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ನೆರವೇರಿತು. ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಕಲ್ಲಪ್ಪ ದೇವರಮಠ ಹಾಗೂ ಕೆ.ಎಮ್. ರೇಣುಕಸ್ವಾಮಿ ವಂಶಸ್ಥರು ಅನ್ನ ದಾಸೋಹ ಸೇವೆಯನ್ನು ನೆರವೇರಿಸಿಕೊಟ್ಟರು.

K.M.Sathish Gowda

Join WhatsApp

Join Now

Facebook

Join Now

Read more

ಹೆತ್ತ ತಾಯಿ, ಜ್ಞಾನ ನೀಡಿದ ಗುರುವನ್ನು ಎಂದಿಗೂ ಮರೆಯಬಾರದು: ಶ್ರೀ ರಂಭಾಪುರಿ ಜಗದ್ಗುರುಗಳು

ಸಿರಿಗೆರೆ ಶ್ರೀಮಠದಿಂದ ಸಮಾಜಮುಖಿ ಕ್ರಾಂತಿ; 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ದಾಸೋಹಕ್ಕೆ ಶಾಂತಿವನದ ವಿಷಮುಕ್ತ ಆಹಾರ: ಅಕ್ಷರದ ಜೊತೆಗೆ ಆರೋಗ್ಯದ ಆಶೀರ್ವಾದ ನೀಡಿದ ಶ್ರೀ ತರಳಬಾಳು ಜಗದ್ಗುರುಗಳು

ಸಿರಿಗೆರೆಯಲ್ಲಿ ಗುರುಪೂರ್ಣಿಮೆಯ ಭಕ್ತಿ ಸಂಭ್ರಮ; ಸಂಸ್ಕಾರಯುತ ಕುಟುಂಬವೇ ಮಕ್ಕಳ ಭವಿಷ್ಯದ ಭದ್ರ ಅಡಿಪಾಯ: ಶ್ರೀ ತರಳಬಾಳು ಜಗದ್ಗುರು

​ಸೆ. 22ರಂದು ಶಿವಮೊಗ್ಗದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವಕ್ಕೆ ಶ್ರೀಶೈಲ ಜಗದ್ಗುರುಗಳಿಗೆ ಭಕ್ತಿಪೂರ್ವಕ ಆಹ್ವಾನ

ಆಧ್ಯಾತ್ಮದ ಅಮರ ಸಂಪತ್ತನ್ನು ಕರುಣಿಸುವವರೇ ನಿಜವಾದ ಶ್ರೀಗುರು: ಶ್ರೀ ರಂಭಾಪುರಿ ಜಗದ್ಗುರುಗಳು

ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾಗುರು: ಗುರುಪೂರ್ಣಿಮೆಯ ಮಹತ್ವ

Leave a Comment