ರಾಣೇಬೆನ್ನೂರು: ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವವುಗಳೆಲ್ಲವೂ ಅಮೂಲ್ಯ ಸಂಪತ್ತು. ದೇಹ, ಮನಸ್ಸು, ಬುದ್ಧಿ, ಕೈ ಮತ್ತು ಕಾಲುಗಳೇ ಮನುಷ್ಯನ ನಿಜವಾದ ಆಸ್ತಿ. ಚಿನ್ನ ಮತ್ತು ಆಭರಣಗಳಿಲ್ಲದೇ ವ್ಯಕ್ತಿ ಬದುಕಬಹುದು, ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಕೊಡಿಯಾಲ ಹೊಸಪೇಟೆಯ ಬಾಳೆಹಳ್ಳಿ ವೀರಸಿಂಹಾಸನ ಮಂಗಳ ಮಂಟಪದಲ್ಲಿ ನಡೆದ”ಜನ ಜಾಗೃತಿ ಧರ್ಮ ಸಮಾರಂಭ”ದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.


ಸದ್ಗುಣಗಳಿಂದ ಶ್ರೀಮಂತಗೊಳ್ಳಲಿ ಬದುಕು: ಶ್ರೀ ರಂಭಾಪುರಿ ಜಗದ್ಗುರುಗಳು
ಬದುಕಿನ ಮೌಲ್ಯಗಳ ಕುರಿತು ಬೆಳಕು ಚೆಲ್ಲಿದ ಜಗದ್ಗುರುಗಳು:
“ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಮನುಷ್ಯನ ಬದುಕು ಶ್ರೀಮಂತಗೊಳ್ಳಬೇಕು. ಕೇವಲ ಹಣ, ಚಿನ್ನ, ಬೆಳ್ಳಿ ಮತ್ತು ಭೌತಿಕ ವಸ್ತು-ಒಡವೆಗಳಿಂದ ಬದುಕು ಕಟ್ಟುವುದು ಶ್ರೇಯಸ್ಕರವಲ್ಲ. ಮೌಲ್ಯಾಧಾರಿತ ಹಾಗೂ ಸದ್ಗುಣವಂತನ ಬದುಕು ಸಮಾಜಕ್ಕೆ ಆದರ್ಶವಾಗುತ್ತದೆ. ಹಿಂದಿನ ಋಷಿ-ಮುನಿಗಳು ಮತ್ತು ಶ್ರೇಷ್ಠ ಆಚಾರ್ಯರು ಭೌತಿಕ ಬದುಕಿಗಾಗಿ ಹಂಬಲಿಸದೆ, ಆಧ್ಯಾತ್ಮಿಕ ಲೋಕದಲ್ಲಿ ಆನಂದದಿಂದ ಬಾಳಿ ಇಡೀ ಮಾನವಕುಲಕ್ಕೆ ದಾರಿ ದೀಪವಾದರು,” ಎಂದರು.
“ಇಂದಿನ ಮನುಷ್ಯನಿಗೆ ಸಕಲ ಸಂಪತ್ತು, ಸಂಪನ್ಮೂಲ ಮತ್ತು ಸೌಲಭ್ಯಗಳಿದ್ದರೂ ಬದುಕಿನಲ್ಲಿ ಹರ್ಷ-ನೆಮ್ಮದಿ ಇಲ್ಲದಂತಾಗಿದೆ. ಸತ್ಯ ಮತ್ತು ಶುದ್ಧ ಕಾಯಕದಿಂದ ಮಾತ್ರ ಬದುಕು ಬಲಗೊಳ್ಳುತ್ತದೆ. ಸತ್ಕಾರ್ಯಗಳಿಂದ ಮನುಷ್ಯನ ಅಂತಃಕರಣ ಪರಿಶುದ್ಧವಾಗುತ್ತದೆ ಎಂಬುದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ‘ರೇಣುಕಾಗಸ್ತ್ಯ ಸಂವಾದ’ ಗ್ರಂಥದಲ್ಲಿ ಬೋಧಿಸಿದ್ದಾರೆ,” ಎಂದು ಸ್ಮರಿಸಿದರು.


ನ್ಯಾಯ-ಧರ್ಮದ ಹಾದಿಯಲ್ಲಿ ಸಾಗಿ: ಸಂತೋಷ್ ಪಾಟೀಲ್
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್:
- • ನೆಮ್ಮದಿಯ ಬದುಕು: ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತಿಯಾದರೆ ಅದಕ್ಕಿಂತ ದೊಡ್ಡ ನೆಮ್ಮದಿ ಬೇರೊಂದಿಲ್ಲ.
- • ಸೋಲಿಲ್ಲದ ದಾರಿ: ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದವನು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ.
- • ಧರ್ಮ ಮಾರ್ಗ: ನ್ಯಾಯ, ನೀತಿ ಹಾಗೂ ಧರ್ಮ ಎಂಬ ರಾಜಮಾರ್ಗದಲ್ಲಿ ನಡೆದರೆ ಯಾರ ಮುಂದೆಯೂ ತಲೆ ಬಾಗಿಸುವ ಪ್ರಮೇಯ ಬರುವುದಿಲ್ಲ.
- • ಪ್ರವಾಹದಂತಿರಲಿ ಜೀವನ: ಜೀವನವು ನಿಂತ ನೀರಾಗಬಾರದು; ಅದು ನಿರಂತರ ಹರಿಯುವ ಗಂಗಾಜಲವಾಗಬೇಕು. ಧರ್ಮಾಚರಣೆಯಿಂದ ದೊರೆಯುವ ಆತ್ಮಬಲವು ಯಾವುದೇ ಸವಾಲನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.


ವೀರಶೈವ ಧರ್ಮದಲ್ಲಿ ಗುರುಗೆ ಮೊದಲ ಸ್ಥಾನ: ಓಂಕಾರ ಶಿವಾಚಾರ್ಯ ಸ್ವಾಮೀಜಿ
ಅಧ್ಯಕ್ಷತೆ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭವಬಂಧನದಿಂದ ಮುಕ್ತಿ ಪಡೆಯಲು ಗುರುಕೃಪೆ ಅತ್ಯಗತ್ಯ. ಕತ್ತಲೆಯನ್ನು ಹೋಗಲಾಡಿಸಲು ಸೂರ್ಯ ಹೇಗೆ ಅಗತ್ಯವೋ, ಅಜ್ಞಾನವನ್ನು ನಿವಾರಿಸಲು ಗುರು ಅಷ್ಟೇ ಅವಶ್ಯಕ. ವೀರಶೈವ ಧರ್ಮದಲ್ಲಿ ಗುರುಗೆ ಮೊದಲ ಸ್ಥಾನ ನೀಡಿರುವುದು ಅದರ ಮಹತ್ವವನ್ನು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಹಂಪಸಾಗರ ನವಿಲು ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.


ಹರಿಹರದ ಎನ್.ಇ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಿಯಾಳ ಹೊಸಪೇಟೆಯ ಜುಂಜಪ್ಪ ಹೆಗ್ಗಪ್ಪನವರ, ಹೆಗ್ಗಪ್ಪನವರ ಚಂದ್ರಶೇಖರ, ರಾಜು, ಸೋಮಣ್ಣ, ಅನಿಲ್, ಮಲ್ಲಜ್ಜ, ಮಂಜುನಾಥ, ಅಣ್ಣಪ್ಪ ಪೂಜಾರ್, ಸಂಜೀವಪ್ಪ ಹಾಗೂ ನಾಗರಾಜ್ ಚಕ್ರಸಾಲಿ ಸೇರಿದಂತೆ ಹಲವಾರು ಗಣ್ಯರಿಗೆ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಪರಮೇಶ್ವರಪ್ಪ ಕತ್ತಿಗೆ ಮತ್ತು ತಂಡದವರು ಸಂಗೀತ ಸೇವೆ ಸಲ್ಲಿಸಿದರು. ಕೊಂಡಜ್ಜಿ ಪಂಚಾಕ್ಷರಿ ಸ್ವಾಗತಿಸಿದರು. ವಿ.ಬಿ. ಕೊಟ್ರೇಶ್ ಹಾಗೂ ಶ್ರೀಮತಿ ಶಾಂತಕುಮಾರಿ ಕಾರ್ಯಕ್ರಮ ನಿರೂಪಿಸಿದರು.


ಇದೇ ಸಂದರ್ಭದಲ್ಲಿ ಹರಿಹರದ ಕ್ರೀಡಾಪಟು ಕುಮಾರಿ ಸೃಷ್ಟಿ ಯೋಗ ಪ್ರದರ್ಶನ ನೀಡಿದರು. ಸಂಕರ್ಷಣ ನೃತ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಶ್ರೀಮತಿ ಗೌರಮ್ಮ ಚಿಕ್ಕಪ್ಪ ಹೆಗ್ಗಪ್ಪನವರ ಕುಟುಂಬದವರಿಂದ ದಾಸೋಹ ಸೇವೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಾದ ನೀಡಿದರು.











