ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ ನಡೆದಿದೆ ಎಂಬ ನಮ್ಮ ಮಾತು ಇದೀಗ ಸತ್ಯವಾಗಿದೆ. ಧರ್ಮಸ್ಥಳದ ಪವಿತ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಕಪೋಲ ಕಲ್ಪಿತ ದೂರು ಸಲ್ಲಿಸಿದ್ದ ದೂರುದಾರ ಮುಸುಕುಧಾರಿಯ ಬಂಧನವೇ ಇದಕ್ಕೆ ಸಾಕ್ಷಿಯಾಗಿದೆ.
ಈತನ ಹಿಂದೆ ಕೆಲಸ ಮಾಡಿದ ಶಕ್ತಿಗಳು ಯಾವವು? ಷಡ್ಯಂತ್ರ ರೂಪಿಸಿದ ವಿಕೃತಿಗಳು ಯಾರು? ಇವರ ಮುಖವಾಡಗಳು ಬಯಲಾಗಬೇಕಿದೆ. ರಾಜ್ಯ ಹಾಗೂ ದೇಶದಾದ್ಯಂತ ಗೌರವಿಸಲ್ಪಟ್ಟಿರುವ ಈ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವನ್ನು ಅಪವಿತ್ರಗೊಳಿಸಲು ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿದೆ.
ಈ ಸುಳ್ಳು ಪ್ರಚಾರ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ, ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿರುವ ಸಾಧ್ಯತೆ ತಳ್ಳಿಹಾಕಲಾಗದು. ಆದ್ದರಿಂದ ಈ ಪ್ರಕರಣವನ್ನು ಧರ್ಮಸ್ಥಳದ ವಿರುದ್ಧ ನಡೆದ ಒಂದು ಘಟನೆ ಎಂದೇ ಸೀಮಿತಗೊಳಿಸದೆ, ಇದು ಭಾರತೀಯರ ಭಾವನೆಗಳು ಹಾಗೂ ಸಂಸ್ಕೃತಿಯ ಮೇಲೆ ನಡೆದ ಪಿತೂರಿ ಎಂದು ಪರಿಗಣಿಸಬೇಕಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಎಡಪಂಥೀಯರ ಒತ್ತಡಕ್ಕೆ ಮಣಿದು ಹೇಗೆ ಎಸ್ಐಟಿ ರಚಿಸಿ ತನಿಖೆ ನಡೆಸಿತೋ, ಅದೇ ರೀತಿಯಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರನ್ನೂ ಪತ್ತೆಹಚ್ಚಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.







