ಶಿವಮೊಗ್ಗ ಜಿಲ್ಲಾಡಳಿತದಿಂದ ಗೌರಿ ಗಣೇಶ ಹಬ್ಬದ ಸಿದ್ಧತೆಗಳು ನಡೆಯುತ್ತಿವೆ. ಗಣೇಶ ಮೂರ್ತಿ ಕೂರಿಸುವುದು, ಮೆರವಣಿಗೆ, ವಿಸರ್ಜನಾ ಸ್ಥಳಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅನುಮತಿಗಾಗಿ ಸಿಂಗಲ್ ವಿಂಡೋ ಸಿಸ್ಟಮ್ ಅಳವಡಿಸಲಾಗಿದೆ. ಶಿವಮೊಗ್ಗ ನಗರ, ಸಾಗರ, ಭದ್ರಾವತಿಯಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ.
ಗಣೇಶ ಹಬ್ಬಕ್ಕೆ ಪೊಲೀಸರು ಕಟ್ಟು ನಿಟ್ಟಿನ ಭದ್ರತೆ – ಮೆರವಣಿಗೆ ಮಾರ್ಗ, ಸಮಯ ನಿಗದಿ:
ಮೆರವಣಿಗೆ ಮಾರ್ಗಗಳು ಮತ್ತು ಸಮಯವನ್ನು ಪೊಲೀಸರು ನಿಗದಿಪಡಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ. ಮೆಸ್ಕಾಂ ಇಲಾಖೆಗೆ ಯಾವುದೇ ವಿದ್ಯುತ್ ಅನಾಹುತವಾಗದಂತೆ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ. ವಿಸರ್ಜನಾ ಸ್ಥಳಗಳಲ್ಲಿ ಲೈಟಿಂಗ್, ಪಬ್ಲಿಕ್ ಅಡ್ರೆಸ್ ಸಿಸ್ಟಮ್, ಸ್ವಚ್ಛತೆ ಮತ್ತು ಲೈಫ್ ಗಾರ್ಡ್ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ತೆಪ್ಪಗಳಲ್ಲಿ ಇಬ್ಬರಿಂದ ಮೂರು ಜನರಿಗೆ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಡಿಜೆ, ಪೇಪರ್ ಬ್ಲಾಸ್ಟರ್, ಬೈಕ್ ರ್ಯಾಲಿ ನಿಷೇಧ – ಫ್ಲೆಕ್ಸ್-ಬ್ಯಾನರ್ ಅಳವಡಿಕೆಗೆ ನಿಯಮ:
ಡಿಜೆ (DJ) ಬಳಕೆ, ಪೇಪರ್ ಬ್ಲಾಸ್ಟರ್ಸ್ ಮತ್ತು ಬೈಕ್ ರ್ಯಾಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಫ್ಲೆಕ್ಸ್, ಹೋರ್ಡಿಂಗ್ಸ್, ಬ್ಯಾನರ್ ಗಳಿಗಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಪಡೆದು ಅಳವಡಿಸಲು ಸೂಚಿಸಲಾಗಿದೆ. ಪ್ರಿಂಟಿಂಗ್ ಪ್ರೆಸ್ಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.
ಹಬ್ಬದ ವೇಳೆ ಸಾಮಾಜಿಕ ಮಾಧ್ಯಮದ ಮೇಲೆ ಪೊಲೀಸ್ ಇಲಾಖೆ ಕಣ್ಣೆಚ್ಚರ:
ಪೊಲೀಸ್ ಇಲಾಖೆಯು ಸಾಮಾಜಿಕ ಮಾಧ್ಯಮದಲ್ಲಿ ನಿಗಾ ವಹಿಸುತ್ತಿದ್ದು, ಹಬ್ಬಕ್ಕೆ ಅಹಿತಕರ ಘಟನೆಗಳಿಗೆ ಕಾರಣವಾಗುವ ಪೋಸ್ಟ್ಗಳನ್ನು ಮಾಡುವವರ ವಿರುದ್ಧ ಭಾರತೀಯ ನ್ಯಾಯ ಸಮಿತಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ರಾಜ್ಯಾದ್ಯಂತ ಪಿಒಪಿ ಗಣಪತಿ ಮೂರ್ತಿಗಳಿಗೆ ಸಂಪೂರ್ಣ ನಿಷೇಧ – ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ:
ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣಪತಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯಾರೂ ಪಿಒಪಿ ಮೂರ್ತಿಗಳನ್ನು ತಯಾರಿಸಬಾರದು, ಮಾರಾಟ ಮಾಡಬಾರದು, ಕೊಂಡುಕೊಳ್ಳಬಾರದು ಎಂದು ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘನೆ ತಡೆಯಲು ವಿಶೇಷ ಲ್ಯಾಬ್ಗಳನ್ನು ಸ್ಥಾಪಿಸಿ ಮೂರ್ತಿಗಳ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ.
ಪಿಒಪಿ ಮೂರ್ತಿ ಮಾರಾಟ ಅಥವಾ ಬಳಕೆ ಕಂಡುಬಂದರೆ ಅವನ್ನು ತಕ್ಷಣ ವಶಪಡಿಸಿಕೊಳ್ಳುವುದು, ದಂಡ ವಿಧಿಸುವುದು ಹಾಗೂ ಎಫ್ಐಆರ್ ದಾಖಲಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಇತರ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಮೆರವಣಿಗೆ ಮಾರ್ಗ ಸ್ವಚ್ಛ – ಗಣೇಶ ಮೂರ್ತಿಗಳ ಎತ್ತರಕ್ಕೆ ಮಿತಿ:
ಗೌರಿ-ಗಣೇಶ ಹಬ್ಬವನ್ನು ಅಡ್ಡಿ-ತೊಡಕುಗಳಿಲ್ಲದೆ ನಡೆಸಲು ಆಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮೆರವಣಿಗೆ ಮಾರ್ಗಗಳಲ್ಲಿ ಮರಗಳ ಕೊಂಬೆಗಳನ್ನು ಕತ್ತರಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ.
ಹಾಗೆಯೇ, ಗಣೇಶ ಮೂರ್ತಿಗಳ ಎತ್ತರವನ್ನು ಗರಿಷ್ಠ 5-6 ಅಡಿಗೆ ಸೀಮಿತಗೊಳಿಸಲು ಸಂಘಟಕರಿಗೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಚಿಕ್ಕ ರಸ್ತೆಗಳು ಹಾಗೂ ಗಲ್ಲಿಗಳಲ್ಲಿ ದೊಡ್ಡ ಮೂರ್ತಿಗಳಿಂದಾಗುವ ಅಪಘಾತ, ತೊಂದರೆಗಳು ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ತಿಳಿಸಿದ್ದಾರೆ.