ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡಿಕೆ ಶಿವಕುಮಾರ್ ಮಾರ್ಮಿಕ ಮಾತು – ಸಿದ್ದರಾಮಯ್ಯನವರ ಕಡೆ ಪರೋಕ್ಷ ಬಾಣ?

On: August 31, 2025 10:49 PM
Follow Us:

ಬೆಂಗಳೂರು, ಆಗಸ್ಟ್ 31:ರಾಜಕೀಯದಲ್ಲಿ ತ್ಯಾಗ, ತಂತ್ರ, ದಾಳಕ್ಕೆ ಸದಾ ಹೆಚ್ಚಿನ ಬೆಲೆ ಇರುತ್ತದೆ. ಇದೇ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಮಾಡಿದ ಭಾಷಣವು ಹೊಸ ರಾಜಕೀಯ ಅರ್ಥೈಸಿಕೆಗಳಿಗೆ ಕಾರಣವಾಗಿದೆ.

ದೇವರಾಜ ಅರಸು ಹೊಗಳಿದ ಡಿಕೆಶಿ

ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿವಂಗತ ದೇವರಾಜ ಅರಸು ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ,“ದೇವರಾಜ ಅರಸು ಅವರಿಗೆ ಸಮಾಜ, ಜಾತಿ ಎಂಬುದೇ ಇರಲಿಲ್ಲ. ಅವರಿಗೆ ಇದ್ದದ್ದು ನಾಯಕತ್ವದ ಗುಣ. ಎಲ್ಲರನ್ನೂ ಬೆಳೆಸಿದರು” ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ಡಿಕೆಶಿ ಸಮಗ್ರ ನಾಯಕತ್ವದ ಅವಶ್ಯಕತೆಯನ್ನು ಒತ್ತಿ ಹೇಳಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಹೋರಾಟ ಹೂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವುದಾಗಿ ಘೋಷಿಸಿದರೆ, ಆಗ ಡಿಕೆಶಿ ಸೋನಿಯಾ ಗಾಂಧಿಯ ತ್ಯಾಗ ಮನೋಭಾವವನ್ನು ನೆನಪಿಸಿದ್ದರು.

ಇದೀಗ ದೇವರಾಜ ಅರಸು ಉಲ್ಲೇಖದ ಮೂಲಕ, ಹೊಸ ನಾಯಕತ್ವಕ್ಕೆ ಹಾಲಿ ನಾಯಕರು ಅವಕಾಶ ಮಾಡಿಕೊಡಬೇಕು ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆ ಎಂಬುದು ಪಕ್ಷದ ಒಳವಲಯದಲ್ಲಿ ಚರ್ಚೆಯಾಗುತ್ತಿದೆ.

ದಾಖಲೆ ಮುರಿಯಲು ಸಿದ್ದರಾಮಯ್ಯ ಸಜ್ಜು

ದೇವರಾಜ ಅರಸು 7 ವರ್ಷ 7 ತಿಂಗಳು ಮುಖ್ಯಮಂತ್ರಿಯಾಗಿದ್ದರೆ, ಅವರ ನಂತರ ಅಷ್ಟು ದೀರ್ಘಾವಧಿ ಸಿಎಂ ಆಗಿರುವವರು ಸಿದ್ದರಾಮಯ್ಯ ಮಾತ್ರ. ಅವರು ಈಗಾಗಲೇ 7 ವರ್ಷ ಪೂರೈಸಿದ್ದು, ಇನ್ನೂ ಕೆಲವು ತಿಂಗಳಲ್ಲಿ ದೇವರಾಜ ಅರಸು ದಾಖಲೆಯನ್ನೇ ಮುರಿಯುವ ಸಾಧ್ಯತೆ ಇದೆ.

ಈ ಹಿನ್ನಲೆಯಲ್ಲಿ, ಡಿಕೆಶಿಯ ಮಾತುಗಳು ಸಿದ್ದರಾಮಯ್ಯ ತಾವು ಕುರ್ಚಿ ಬಿಟ್ಟುಕೊಡಬೇಕು ಎಂಬ ಅರ್ಥವನ್ನು ಹೊತ್ತಿವೆ ಎಂದು ರಾಜಕೀಯ ವಲಯದಲ್ಲಿ ಮಾತುಕತೆ ಶುರುವಾಗಿದೆ.

 ಸೆಪ್ಟೆಂಬರ್ ಕ್ರಾಂತಿಯ ಚರ್ಚೆ: ಇದಕ್ಕೆ ಸೇರ್ಪಡೆಯಾಗಿ, ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ ಸೆಪ್ಟೆಂಬರ್ ಕ್ರಾಂತಿ ಕೂಡ ಈಗ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ನಾಳೆಯಿಂದ ಸೆಪ್ಟೆಂಬರ್ ಆರಂಭವಾಗುತ್ತಿರುವುದರಿಂದ, ಡಿಕೆಶಿಯ ಮಾತುಗಳು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಚಟುವಟಿಕೆಗಳಿಗೆ ವೇದಿಕೆ ಸಜ್ಜಾಗಿಸುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಒಟ್ಟಿನಲ್ಲಿ, ದೇವರಾಜ ಅರಸು ಹೊಗಳಿಕೆಯೊಳಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿದ್ದರಾಮಯ್ಯನತ್ತ ಬಾಣ ಎಸೆದಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಈ ಹೇಳಿಕೆಗಳ ರಾಜಕೀಯ ಪರಿಣಾಮ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment