ಗಣೇಶ ಚತುರ್ಥಿಯ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದ್ದು, ಸೊರಬ ತಾಲೂಕಿನ ಕುಬಟೂರಿನಲ್ಲಿ ಭಕ್ತರ ಆಕರ್ಷಣೆಯ ಕೇಂದ್ರವಾಗಿರುವ 16 ಅಡಿ ಎತ್ತರದ ಗಣೇಶ ಮೂರ್ತಿ ಈ ಬಾರಿ ವಿಶೇಷ ಗಮನ ಸೆಳೆದಿದೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ತಮ್ಮ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ ಈ ಅತೀ ಎತ್ತರದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಜಧಾನಿ ಬೆಂಗಳೂರಿನಿಂದ ತರಿಸಲಾದ ಈ ಗಣೇಶ ಮೂರ್ತಿ ಸೊರಬ ತಾಲೂಕಿನಲ್ಲೇ ಅತಿ ಎತ್ತರದ ಮೂರ್ತಿಯಾಗಿದ್ದು, “ಕುಬಟೂರು ಮಹಾರಾಜ” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ.
ಕಲಾತ್ಮಕವಾಗಿ ನಿರ್ಮಿಸಲಾದ ಮಂಟಪದಲ್ಲಿ, ಸಿಂಹಾಸನದ ಮೇಲೆ ರಾಜಗಾಂಭೀರ್ಯದಿಂದ ಅಲಂಕರಿಸಿರುವ ಗಣಪತಿಯನ್ನು ನೋಡಲು ಸುತ್ತಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಎಲ್ಲ ಜಾತಿ, ಜನಾಂಗದ ಜನರು ಒಟ್ಟಾಗಿ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಸೆಪ್ಟೆಂಬರ್ 12 ರಂದು ಅನ್ನಸಂತರ್ಪಣಾ ಕಾರ್ಯಕ್ರಮ ಹಾಗೂ ಸೆಪ್ಟೆಂಬರ್ 13 ರಂದು ಸಾಂಸ್ಕೃತಿಕ ಮೆರವಣಿಗೆಗಳೊಂದಿಗೆ “ಕುಬಟೂರು ಮಹಾರಾಜ” ಗಣೇಶನ ವಿಸರ್ಜನೆ ನಡೆಯಲಿದೆ ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.







