ಶಿವಮೊಗ್ಗ, ಸೆ. 21 – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಸೇವಾ ಪಾಕ್ಷಿಕ ಅಂಗವಾಗಿ ಬಿಜೆಪಿ ಯುವಮೋರ್ಚಾ ವತಿಯಿಂದ ಶಿವಮೊಗ್ಗದಲ್ಲಿ ಭವ್ಯ “ನಮೋ ಯುವ ರನ್ – ನಶಾಮುಕ್ತ ಭಾರತ” ಬೃಹತ್ ಮ್ಯಾರಥಾನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಲನೆ ನೀಡಿದರು.
ಮಾದಕ ವಸ್ತುಗಳ ದುರುಪಯೋಗವು ಸಮಾಜದ ಮೇಲೆ ಉಂಟುಮಾಡುತ್ತಿರುವ ಗಂಭೀರ ಪರಿಣಾಮಗಳನ್ನು ನೆನಪಿಸಿಕೊಂಡು, ಮೋದಿ ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿದೆ. ಯುವಕರು ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಂಡು ವ್ಯಸನಗಳನ್ನು ತ್ಯಜಿಸಿ, ಸ್ವಸ್ಥ, ಸಮೃದ್ಧ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ತೊಡಗಬೇಕು ಎಂಬ ಸಂದೇಶ ಈ ಸಂದರ್ಭದಲ್ಲಿ ಒತ್ತಿ ಹೇಳಲಾಯಿತು.
ಪ್ರಧಾನಿ ಮೋದಿ ಅವರ FitIndia ಕರೆಯಂತೆ ದೇಶ ಬಲಿಷ್ಠವಾಗುತ್ತಿರುವ ಈ ಘಟ್ಟದಲ್ಲಿ, ನಶಾಮುಕ್ತ ಭಾರತ ಕನಸಿನತ್ತ 75 ನಗರಗಳಲ್ಲಿ ಸಮಾನಾಂತರವಾಗಿ ನಡೆಯುತ್ತಿರುವ ನಮೋ ಯುವ ರನ್ ಮ್ಯಾರಥಾನ್ ಇತಿಹಾಸ ನಿರ್ಮಿಸುವ ಅಭಿಯಾನವಾಗಲಿದೆ ಎಂದು ಆಯೋಜಕರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕ ಚನ್ನಬಸಪ್ಪ, ಯುವಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜ್, ವಿಧಾನ ಪರಿಷತ್ ಸದಸ್ಯ ಡಾ.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಆರ್.ಕೆ.ಸಿದ್ದರಾಮಣ್ಣ, ಕುಮಾರ ಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಚಲನಚಿತ್ರ ನಟಿ ಕು.ಕಾರುಣ್ಯ ರಾಮ್, ನಟ ಗೌರಿಶಂಕರ್, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಸೌಮ್ಯ ಸಾವಂತ್, ಜಿಲ್ಲಾ ಅಧ್ಯಕ್ಷ ಜಗದೀಶ್, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ಯುವಕರು ಭಾಗವಹಿಸಿ ಮ್ಯಾರಥಾನ್ಗೆ ಉತ್ಸಾಹ ತುಂಬಿದರು.