ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಉತ್ತರ ಕರ್ನಾಟಕ ಪ್ರವಾಹ ಪೀಡಿತ ರೈತರಿಗೆ ಹೆಚ್ಚುವರಿ 8,500 ರೂ. ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ

On: September 30, 2025 11:37 PM
Follow Us:

ಕಲಬುರಗಿ, ಸೆಪ್ಟೆಂಬರ್ 29: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ನೆರವು ಘೋಷಿಸಿದ್ದು, NDRF ಮಾರ್ಗಸೂಚಿಗಳ ಪೈಕಿ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರವಾಹದಿಂದ ಹಾನಿಗೊಂಡ ಜಿಲ್ಲೆಗಳ ವೈಮಾನಿಕ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳು ಮತ್ತು ಶಾಸಕರ ಸಭೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎನ್ಡಿಆರ್ಎಫ್‌ನ ಅಡಿಯಲ್ಲಿ ಈಗಿರುವ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೆರವು ಸೇರಿ ಕುಷ್ಕಿ ಜಮೀನಿಗೆ ಒಟ್ಟು ₹17,000, ನೀರಾವರಿ ಜಮೀನಿಗೆ ₹25,500 ಮತ್ತು ಬಹುವಾರ್ಷಿಕ ಬೆಳೆಗಳಿಗೆ ₹31,000 ಪರಿಹಾರ ಲಭ್ಯವಾಗಲಿದೆ. ಈ ಮೂಲಕ ರಾಜ್ಯವು ಸುಮಾರು ₹2,000 ಕೋಟಿ ರಿಂದ ₹2,500 ಕೋಟಿ ನೆರವನ್ನು ಬಿಡುಗಡೆ ಮಾಡಲಿದೆ.

ಜೂನ್ 1ರಿಂದ ಸೆಪ್ಟೆಂಬರ್ 29ರವರೆಗೆ ಸರಾಸರಿ 845 ಮಿಮೀ ಮಳೆಯಾಗಬೇಕಾಗಿರುವಲ್ಲಿ 879 ಮಿಮೀ ಮಳೆಯಾಗಿದೆ. ಉತ್ತರ ಒಳನಾಡು ಪ್ರದೇಶದಲ್ಲಿ ಮಾತ್ರ 576 ಮಿಮೀ ಮಳೆ ದಾಖಲಾಗಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಒಟ್ಟು 9.6 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಲ್ಲಿ 8.8 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಮತ್ತು 71 ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆ ಸೇರಿವೆ.

117 ಗ್ರಾಮಗಳು ಪ್ರವಾಹದಿಂದ ಬಾಧಿತಗೊಂಡಿದ್ದು, 80 ಕಾಳಜಿ ಕೇಂದ್ರಗಳಲ್ಲಿ 10,576 ಜನರನ್ನು ಸ್ಥಳಾಂತರಿಸಲಾಗಿದೆ. ಕಲಬುರಗಿಯಲ್ಲಿ 56, ವಿಜಯಪುರದಲ್ಲಿ 17 ಮತ್ತು ಯಾದಗಿರಿಯಲ್ಲಿ 7 ಕೇಂದ್ರಗಳನ್ನು ತೆರೆಯಲಾಗಿದೆ.

ಜೂನ್ ಬಳಿಕ ನಡೆದ ಮಳೆ ಮತ್ತು ನೆರೆ ಆಪತ್ತಿನ ಪರಿಣಾಮವಾಗಿ 52 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಜಾನುವಾರುಗಳ ಸಾವಿನ ಸಂಖ್ಯೆ 422 ಆಗಿದ್ದು, ಬಹುತೇಕ ಪಶುಪಾಲಕರಿಗೂ ಪರಿಹಾರ ನೀಡಲಾಗಿದೆ.

547 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ಪ್ರತಿ ಪ್ರಕರಣಕ್ಕೂ ₹1.20 ಲಕ್ಷ ಪರಿಹಾರ ನೀಡಲಾಗಿದೆ. ಅನುಮತಿ ಇಲ್ಲದೇ ನಿರ್ಮಿಸಿದ 62 ಮನೆಗಳಿಗೆ ₹1 ಲಕ್ಷ ನೀಡಲಾಗಿದೆ. ಭಾಗಶಃ ಹಾನಿಗೊಂಡ ಮನೆಗಳಿಗೆ ಅವಲಂಬನೆಯಾಗಿ ₹50 ಸಾವಿರ ಅಥವಾ ₹6,500 ಪರಿಹಾರ ನೀಡಲಾಗಿದೆ. ಗೃಹೋಪಯೋಗಿ ವಸ್ತು ಮತ್ತು ಬಟ್ಟೆಗಳ ನಷ್ಟಕ್ಕೆ 4,858 ಕುಟುಂಬಗಳಿಗೆ ₹2.42 ಕೋಟಿ ಬಿಡುಗಡೆ ಮಾಡಲಾಗಿದೆ.

ಮಳೆಯ ಪರಿಣಾಮವಾಗಿ ರಸ್ತೆ, ಸೇತುವೆ ಮತ್ತು ಕೆರೆಗಳಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿರುವುದರಿಂದ ಪುನರ್ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಕೆರೆ ಮಣ್ಣು ಕೃಷಿ ಭೂಮಿಗೆ ಸಾಗಿಸುವ ಬಗ್ಗೆ ಚರ್ಚೆ ನಡೆದಿದೆ.

ಶಾಲಾ ಕಟ್ಟಡಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಫಿಟ್ನೆಸ್ ಪ್ರಮಾಣಪತ್ರವಿಲ್ಲದ ಶಾಲೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ದಾಖಲೆ ಕಳೆದುಕೊಂಡ ಕುಟುಂಬಗಳಿಗೆ ಹೊಸ ದಾಖಲೆಗಳನ್ನು ಅಭಿಯಾನ ರೂಪದಲ್ಲಿ ನೀಡಲಾಗುವುದು. ಸಾಂಕ್ರಾಮಿಕ ರೋಗ ತಡೆಗಾಗಿ ಹಾಸ್ಟೆಲ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲು ನಿರ್ದೇಶನ ಮಾಡಲಾಗಿದೆ.

ಕೃಷಿ ವಿಮೆ ಕಂಪನಿಗಳು ಪರಿಹಾರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಬ್ಯಾಂಕ್‌ಗಳ ಮೂಲಕ ಸಾಲ ಮನ್ನಾ ಮತ್ತು ಮರುಪಾವತಿ ವಿರಾಮ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹25-50 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಹವಾಮಾನ ಬದಲಾವಣೆಯಿಂದ ಅಪರೂಪದ ರೀತಿಯ ಮಳೆಸಂಕಷ್ಟ ಎದುರಾಗಿದೆ. PD ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಪರಿಹಾರ ಕಾರ್ಯಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ. ಜಂಟಿ ಸಮೀಕ್ಷೆಯ ನಂತರ ಕೇಂದ್ರ ಸರ್ಕಾರದ ಸಹಾಯವೂ ಕೇಳಲಾಗುತ್ತದೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

K.M.Sathish Gowda

Join WhatsApp

Join Now

Facebook

Join Now

Leave a Comment