ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ

On: October 2, 2025 2:12 PM
Follow Us:

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ತನ್ನ ಅಂತಿಮ ಘಟ್ಟಕ್ಕೆ ಪ್ರವೇಶಿಸಿದೆ. 11 ದಿನಗಳ ವೈವಿಧ್ಯಮಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಜನಪದ ಕಾರ್ಯಕ್ರಮಗಳ ನೆರವೇರಿಕೆಯಿಂದ ಜನಮನ ಸೆಳೆದಿರುವ ನಾಡಹಬ್ಬ, ಇಂದು ಐತಿಹಾಸಿಕ ಜಂಬೂ ಸವಾರಿಯೊಂದಿಗೆ ಅಂತ್ಯಗೊಳ್ಳಲಿದೆ. ಕೋಟ್ಯಂತರ ಜನರ ಕಣ್ಣಿಗೆ ಹಬ್ಬವಾದ ಈ ಮೆರವಣಿಗೆಯನ್ನು ವೀಕ್ಷಿಸಲು ರಾಜ್ಯದೆಲ್ಲೆಡೆ ಜೊತೆಗೆ ವಿದೇಶಗಳಿಂದಲೂ ಪ್ರವಾಸಿಗರು ಮೈಸೂರಿನತ್ತ ಧಾವಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯ ಮಹನೀಯರ ಸಾನ್ನಿಧ್ಯದಲ್ಲಿ ಇಂದು ಸಂಜೆ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ (4.42 ರಿಂದ 5.06ರೊಳಗೆ) ಜಂಬೂ ಸವಾರಿಗೆ ಅಧಿಕೃತ ಚಾಲನೆ ದೊರೆಯಲಿದೆ. ಚಿನ್ನದ ಅಂಬಾರಿಯಲ್ಲಿ ವಿರಾಜಿಸುವ ಚಾಮುಂಡೇಶ್ವರಿ ದೇವಿಗೆ ಸಿಎಂ ಪುಷ್ಪಾರ್ಚನೆ ಸಲ್ಲಿಸಲಿದ್ದು, ರಾಷ್ಟ್ರಗೀತೆಯೊಂದಿಗೆ ಪಿರಂಗಿದಳದ ಮೂಲಕ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಿದ್ದಾರೆ.

ಈ ಬಾರಿ ಸಹ ಗಜಪಡೆಯ ನಾಯಕ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ನಡೆಸಲಿದ್ದಾನೆ. ಇದು ಅವನ ಆರನೇ ಬಾರಿ ಅಂಬಾರಿ ಹೊರುವ ಸಂತಸದ ಕ್ಷಣ. ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಸಹಯೋಗ ನೀಡಲಿವೆ.

ಅರಮನೆ ಮುಂಭಾಗದಿಂದ ಆರಂಭವಾಗುವ ಮೆರವಣಿಗೆ ಕೆ.ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಒಟ್ಟು ಸುಮಾರು 5 ಕಿ.ಮೀ ದೂರ ಸಾಗಲಿದೆ. ಮಾರ್ಗಮಧ್ಯೆ ನೂರಾರು ಸ್ತಬ್ಧಚಿತ್ರಗಳು, ನೃತ್ಯ-ಕಲಾತಂಡಗಳು ಹಾಗೂ ಜನಪದ ಬಳಗಗಳು ಸವಾರಿಗೆ ಕಂಗೊಳಿಸುವ ಸಾಥ್ ನೀಡಲಿವೆ.

ಅಂಬಾವಿಲಾಸ ಅರಮನೆ ಮುಂಭಾಗ ಹಾಗೂ ಮಾರ್ಗದ ಉದ್ದಕ್ಕೂ ಪ್ರೇಕ್ಷಕರಿಗಾಗಿ ಮೈಸೂರು ಜಿಲ್ಲಾಡಳಿತ ಸುಮಾರು 45 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಿದೆ. ವಿಶೇಷ ಆಹ್ವಾನಿತರಿಂದ ಸಾಮಾನ್ಯ ನಾಗರಿಕರವರೆಗಿನ ಸಾವಿರಾರು ಜನರು ನೆರೆದಿದ್ದಾರೆ.

ಜಂಬೂ ಸವಾರಿ ಬನ್ನಿಮಂಟಪ ತಲುಪಿದ ನಂತರ ರಾತ್ರಿ 7 ಗಂಟೆಗೆ ಪಂಜಿನ ಕವಾಯತು ನಡೆಯಲಿದೆ. ಮೆರವಣಿಗೆಯ ವಿದಾಯ ಸಂಭ್ರಮವಾಗಿ ನಡೆಯುವ ಈ ಕಾರ್ಯಕ್ರಮದೊಂದಿಗೆ ಈ ವರ್ಷದ ದಸರಾ ಮಹೋತ್ಸವಕ್ಕೆ ಅಂತ್ಯವಾಗಲಿದೆ.

ಜಂಬೂ ಸವಾರಿ ಹಾಗೂ ಜನಸ್ತೋಮದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಟ್ಟು ನಿಟ್ಟಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ ಒಟ್ಟು 6,384 ಪೊಲೀಸರನ್ನು ನಿಯೋಜಿಸಲಾಗಿದ್ದು, ಮೆರವಣಿಗೆಯ ಮಾರ್ಗದ ಸುತ್ತಮುತ್ತ ನಿಗಾವಹಿಸಲು ಹೆಚ್ಚುವರಿ ಪಡೆ ತೊಡಗಿಸಲಾಗಿದೆ.

ದೇಶ-ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರು ಹಾಗೂ ಭಕ್ತಾದಿಗಳು “ಚಿನ್ನದ ಅಂಬಾರಿ” ಮತ್ತು “ಅಭಿಮನ್ಯು”ನ ಸಂಭ್ರಮ ಕಣ್ತುಂಬಿಕೊಳ್ಳಲು ತವಕದಿಂದ ಕಾಯುತ್ತಿದ್ದಾರೆ. ಮೈಸೂರಿನ ಬೀದಿಗಳಲ್ಲಿ ಸಂಭ್ರಮದ ವಾತಾವರಣ ಮತ್ತಷ್ಟು ಹೆಚ್ಚಾಗಿದ್ದು, ಎಲ್ಲೆಡೆ ಸಾಂಸ್ಕೃತಿಕ ಚಟುವಟಿಕೆಗಳು, ಶೋಭಾಯಾತ್ರೆಗಳು ಮತ್ತು ಧ್ವಜಾರೋಹಣಗಳ ಜಾಡು ಕಾಣಿಸುತ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment