ಮಂಗಳೂರು, ಅಕ್ಟೋಬರ್ 8: ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮೈಸೂರು ವಿಭಾಗೀಯ ಸಭೆ ಇಂದು ಮಂಗಳೂರಿನ ಓಶಿಯನ್ ಪಾರ್ಲ್ಸ್ ಹೋಟೆಲ್ನಲ್ಲಿ ಭರ್ಜರಿಯಾಗಿ ನಡೆಯಿತು. ರಾಜ್ಯ ಮಟ್ಟದ ಮುಖಂಡರು ಹಾಗೂ ವಿಭಾಗೀಯ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದರು.
“ಸಾಮಾಜಿಕ ನ್ಯಾಯ ಸಂವಿಧಾನಬದ್ಧವಾದ ಹಕ್ಕು – ನಾವೆಲ್ಲರೂ ಒಂದೇ” ಎಂಬ ಘೋಷಣೆಯ ಅಡಿಯಲ್ಲಿ ನಡೆದ ಈ ಸಭೆಯಲ್ಲಿ, ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿ, ಸಾಮಾಜಿಕ ಸಮಾನತೆ ಹಾಗೂ ಜಾತಿ ಗಣತಿಯ ಮಹತ್ವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ನಾಯಕರು, “ಜಾತಿ ಸಮೀಕ್ಷೆಯಲ್ಲಿ ಬರುವ ಅಂಕಿಅಂಶಗಳು ನಮ್ಮ ಸಾಮಾಜಿಕ ಹಕ್ಕಿನ ಮಾನದಂಡ. ಎಲ್ಲರೂ ಸಕ್ರಿಯವಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಗಣತಿಯನ್ನು ವಿರೋಧಿಸುವ ಶಕ್ತಿಗಳ ದುರಾಲೋಚನೆಯನ್ನು ಜನರಿಗೆ ಮನವರಿಕೆ ಮಾಡಿಸಬೇಕು,” ಎಂದು ಒಕ್ಕೊರಲಾಗಿ ಅಭಿಪ್ರಾಯಪಟ್ಟರು.

“ಸಾಮಾಜಿಕ ನ್ಯಾಯ ಎಂಬುದು ಕೇವಲ ರಾಜಕೀಯ ಘೋಷಣೆ ಅಲ್ಲ, ಅದು ಸಂವಿಧಾನ ಬದ್ಧವಾದ ಹಕ್ಕು. ಹಿಂದುಳಿದ ವರ್ಗಗಳ ಉನ್ನತಿಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ. ಗಣತಿ ಕಾರ್ಯದ ಮೂಲಕ ಹಿಂದುಳಿದ ವರ್ಗಗಳ ನಿಜವಾದ ಅಂಕಿಅಂಶ ಹೊರಬರಬೇಕು. ಅದೇ ನಾಳೆಯ ಅಭಿವೃದ್ಧಿಗೆ ಆಧಾರವಾಗಲಿದೆ,”
–ಸಚಿವ ಎಸ್. ಮಧು ಬಂಗಾರಪ್ಪ
“ಪ್ರತಿ ಹಿಂದುಳಿದ ವರ್ಗದ ವ್ಯಕ್ತಿಯೂ ಗಣತಿಯಲ್ಲಿ ಭಾಗವಹಿಸುವುದು ಸಾಮಾಜಿಕ ಕರ್ತವ್ಯ. ಗಣತಿ ವಿರೋಧಿ ಪ್ರಚಾರಗಳನ್ನು ಜನರ ನಡುವೆ ಖಂಡಿಸಬೇಕು. ಈ ಅಂಕಿಅಂಶಗಳ ಆಧಾರದಲ್ಲಿ ಸರ್ಕಾರದಿಂದ ಹೆಚ್ಚು ಪ್ರಯೋಜನಗಳು ಲಭಿಸಬೇಕು,”
– ಶಾಸಕ ಗೋಪಾಲಕೃಷ್ಣ ಬೇಳೂರು (ಸಾಗರ)
“ಹಿಂದುಳಿದ ವರ್ಗಗಳ ಹೋರಾಟವೇ ಸಮಾಜದ ಬಲ. ಪಕ್ಷ ರಾಜಕಾರಣಕ್ಕಿಂತ ಸಾಮಾಜಿಕ ನ್ಯಾಯ ಮುಖ್ಯ. ನಾವು ಸಮಾನ ಹಕ್ಕುಗಳಿಗಾಗಿ ನಾವೇ ಮುಂದೆ ಬರಬೇಕು,” ಎಂದು ಹೇಳಿದರು.
– ಶಾಸಕ ಭೀಮಣ್ಣನಾಯ್ಕ (ಶಿರಸಿ)
“ಈ ಸಭೆಗಳು ಕೇವಲ ಚರ್ಚೆಗೆ ಸೀಮಿತವಾಗದೆ ಕಾರ್ಯರೂಪ ಪಡೆಯಬೇಕು. ಯುವಜನರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ನಿಜವಾದ ಬದಲಾವಣೆ ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
–ಶಾಸಕ ಪ್ರದೀಪ್ ಈಶ್ವರ್ (ಚಿಕ್ಕಬಳ್ಳಾಪುರ)
ಸಭೆಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರು ಹಾಗೂ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪ, ವಿಧಾನಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ವಿನಯ್ ಸೊರಕೆ, ಶಾಸಕರಾದ ಗೋಪಾಲಕೃಷ್ಣ ಬೇಳೂರು , ಭೀಮಣ್ಣನಾಯ್ಕ, ಪ್ರದೀಪ್ ಈಶ್ವರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮೆಸ್ಕಾಂ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಮುಖ್ಯಮಂತ್ರಿಯವರ ವೈದ್ಯಕೀಯ ಸಲಹೆಗಾರ ಡಾ. ರವಿ ಕುಮಾರ್, ಹಾಗೂ ಕಾಂಗ್ರೆಸ್ ಮುಖಂಡರಾದ ರವಿ ಬೋಸರಾಜ್, ಪದ್ಮರಾಜ್, ರಕ್ಷಿತ್ ಶಿವರಾಂ, ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ರಮೇಶ್ ಶೆಟ್ಟಿ ಸೇರಿದಂತೆ ಅನೇಕ ಮುಖಂಡರು, ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಸಭೆಯ ಅಂತ್ಯದಲ್ಲಿ, ಹಿಂದುಳಿದ ವರ್ಗಗಳ ಹಿತಾಸಕ್ತಿಗಾಗಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.







