ಶಿವಮೊಗ್ಗ: ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಸಂಘವು ಕೇವಲ ಒಂದು ಹಣಕಾಸು ಸಂಸ್ಥೆಯಲ್ಲ, ಅದು ಕಳೆದ 100 ವರ್ಷಗಳಿಂದ ಸಮಾಜದ ವಿವಿಧ ವರ್ಗಗಳ ಜನರಿಗೆ ಆಸರೆಯಾಗಿ ನಿಂತಿರುವ ಹೆಮ್ಮರ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶ್ಲಾಘಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಸ್ಥೆಯ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇತಿಹಾಸದ ಹೆಮ್ಮರಕ್ಕೆ ಸುದೀರ್ಘ ಬೇರುಗಳು
ಸಂಸ್ಥೆಯ ಸುದೀರ್ಘ ಮತ್ತು ಯಶಸ್ವಿ ಇತಿಹಾಸವನ್ನು ಬಣ್ಣಿಸಿದ ಸಂಸದರು, “100 ವರ್ಷಗಳನ್ನು ಪೂರೈಸುವುದು ಯಾವುದೇ ಸಂಸ್ಥೆಗೆ ಸಣ್ಣ ಸಾಧನೆಯಲ್ಲ. ಈ ಸುದೀರ್ಘ ಅವಧಿಯಲ್ಲಿ ಈ ಸಂಸ್ಥೆಯೆಂಬ ಹೆಮ್ಮರದ ಬೇರುಗಳು ನೆಲದಲ್ಲಿ ಎಷ್ಟು ಆಳವಾಗಿ ಬೇರೂರಿರಬಹುದು ಮತ್ತು ಭೂಮಿಯಿಂದ ಮೇಲೆ ಎಷ್ಟು ಎತ್ತರಕ್ಕೆ ಜಗತ್ತಿಗೆ ಕಾಣುವಂತೆ ಬೆಳೆದಿರಬಹುದು ಎಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು. ಅಷ್ಟು ಗಟ್ಟಿಯಾದ ಅಡಿಪಾಯದ ಮೇಲೆ ಈ ಸಹಕಾರ ಸಂಘವು ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ” ಎಂದು ಹೇಳಿದರು.
ಶೋಷಿತರ, ಪೀಡಿತರ ಪಾಲಿಗೆ ನೆರಳಾಗಲಿ ಸಹಕಾರ ಸಂಸ್ಥೆ
ಸಂಸ್ಥೆಯ ಮುಂದಿನ ದಾರಿಯ ಕುರಿತು ಆಶಯ ವ್ಯಕ್ತಪಡಿಸಿದ ಬಿ.ವೈ. ರಾಘವೇಂದ್ರ ಅವರು, “ಬರುವ ದಿನಗಳಲ್ಲಿ ಈ ಸಂಸ್ಥೆಯ ಬೇರುಗಳು ಸಮಾಜದಲ್ಲಿ ಇನ್ನೂ ಆಳವಾಗಿ ವಿಸ್ತರಿಸಬೇಕು. ಈ ಹೆಮ್ಮರ ಮತ್ತಷ್ಟು ವಿಶಾಲವಾಗಿ ಬೆಳೆದು, ಅದರ ನೆರಳು ಸಮಾಜದ ಕಟ್ಟಕಡೆಯ ಶೋಷಿತ ಹಾಗೂ ಪೀಡಿತ ವರ್ಗದ ಜನರಿಗೂ ತಲುಪಬೇಕು. ನೊಂದವರಿಗೆ ಆರ್ಥಿಕ ಶಕ್ತಿ ತುಂಬುವ ಮೂಲಕ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡಲಿ” ಎಂದು ಆಶಿಸಿದರು.

ಕೃತಜ್ಞತೆ ಮತ್ತು ಭರವಸೆ
ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒಬ್ಬ ಸಂಸತ್ ಸದಸ್ಯನಾಗಿ ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವ ಭಾಗ್ಯ ನನ್ನದಾಗಿದ್ದಕ್ಕೆ ಅತ್ಯಂತ ಸಂತೋಷವಾಗಿದೆ. ಈ ಅವಕಾಶ ನೀಡಿದ ಸಂಘದ ಪದಾಧಿಕಾರಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಶಿವಮೊಗ್ಗದ ಪ್ರತಿಯೊಂದು ಕುಟುಂಬಕ್ಕೂ ಈ ಬಸವೇಶ್ವರ ಪಟ್ಟಣ ಸಹಕಾರ ಸಂಘವು ಆರ್ಥಿಕ ಬೆನ್ನೆಲುಬಾಗಿ ನಿಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಉಳಿಸಿಕೊಂಡು, ನಿಮ್ಮೆಲ್ಲರ ಸೇವೆಗೆ ನಾನು ಸದಾ ಸಿದ್ಧನಾಗಿರುತ್ತೇನೆ ಎಂದು ಸಂಸದರು ಭರವಸೆ ನೀಡಿದರು.
ಕಾರ್ಯಕ್ರಮವು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ 1008 ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀಶ್ರೀಶ್ರೀ 1008 ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳವರ ಪವಿತ್ರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್, ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿ ಎಸ್.ಪಿ. ದಿನೇಶ್, ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಹುಲ್ಲುಳಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






