ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಇತಿಹಾಸ ಪ್ರಸಿದ್ಧ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬಿ.ಎಸ್.ವೈ ಅಭಿನಂದನಾ ಸಮಾರಂಭ ಯಶಸ್ವಿಗೊಳಿಸಲು ಆಯನೂರು ಮಂಜುನಾಥ್ ಕರೆ

On: May 16, 2026 7:25 PM
Follow Us:

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ವೈಭವದಿಂದ ನಡೆದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು ಶಿವಮೊಗ್ಗದಲ್ಲಿ ನಾಳೆ (ಮೇ 17) ನಡೆಯಲಿರುವ ಪಂಚಪೀಠಾಧೀಶರ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಸೇವೆಯನ್ನು ಸ್ಮರಿಸಿ ಆಯೋಜಿಸಿರುವ ಬೃಹತ್ ಕೃತಜ್ಞತಾ ಸಮಾರಂಭವನ್ನು ಯಶಸ್ವಿಗೊಳಿಸಲು ಸಮಾಜದ ಬಾಂಧವರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ನಗರದಲ್ಲಿ ನಾಳೆ ಮಧ್ಯಾಹ್ನ 3:00 ಗಂಟೆಗೆ ಗಾಂಧಿ ಬಜಾರ್‌ನ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವವು ಅತ್ಯಂತ ವೈಭವಾಗಿ ಚಾಲನೆ ಪಡೆಯಲಿದೆ. ಸುಮಾರು 34 ವರ್ಷಗಳ (ಮೂರು ದಶಕಗಳ) ದೀರ್ಘ ಅವಧಿಯ ನಂತರ ಶಿವಮೊಗ್ಗ ನಗರದಲ್ಲಿ ಇಂತಹದೊಂದು ಐತಿಹಾಸಿಕ ಧಾರ್ಮಿಕ ಉತ್ಸವ ಮರುಕಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಹೊಸ ಪೀಳಿಗೆಗೆ ಈ ಭವ್ಯ ಪರಂಪರೆಯನ್ನು ಕಣ್ಣುಂಬಿಕೊಳ್ಳುವ ಹಾಗೂ ನೂತನವಾಗಿ ಪೀಠ ಅಲಂಕರಿಸಿರುವ ಕಾಶಿ, ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ, ದರ್ಶನ ಪಡೆಯುವ ಅಪರೂಪದ ಅವಕಾಶ ಒದಗಿಬಂದಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.

ಈ ಬೃಹತ್ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೆರವಣಿಗೆಯು ಬಸವೇಶ್ವರ ದೇವಸ್ಥಾನದಿಂದ ಹೊರಟು, ನಗರದ ಪ್ರಮುಖ ವೃತ್ತಗಳಾದ ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್ ಮೂಲಕ ಸಾಗಿ, ಅಂತಿಮವಾಗಿ ಜೈಲು ಆವರಣದ ಅಲ್ಲಮಪ್ರಭು ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ಸಮಾಜದ ಬಂಧುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ, ಶಿಸ್ತುಬದ್ಧವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ.

ಇದೇ ಮಹೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ನಮ್ಮ ಹೆಮ್ಮೆಯ ಜಿಲ್ಲೆಯ ನಾಯಕರಾದ, ವೀರಶೈವ ಲಿಂಗಾಯತ ಸಮಾಜಕ್ಕೆ ರಾಜಕೀಯ ಘನತೆ ಹಾಗೂ ಗೌರವವನ್ನು ತಂದುಕೊಟ್ಟ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರ ಕೃತಜ್ಞತಾ ಸಮಾರಂಭ. ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಿ 50 ವರ್ಷಗಳನ್ನು ಪೂರೈಸಿ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಯಡಿಯೂರಪ್ಪನವರ ಜನಪರ ಸೇವೆಯನ್ನು ಗುರುತಿಸಿ, ಸಮಾಜದ ಪರವಾಗಿ ಗೌರವ ಸಲ್ಲಿಸುವ ಬೃಹತ್ ಸಮಾರಂಭವನ್ನು ಅಂದು ಸಂಜೆ ಪಂಚಪೀಠಾಧೀಶರ ದಿವ್ಯ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ.

ಅವರು ದೀರ್ಘಾಯುಷಿಗಳಾಗಿ, ಸಮಾಜ ಹಾಗೂ ರಾಜ್ಯಕ್ಕೆ ಅವರ ಮಾರ್ಗದರ್ಶನ ಸದಾ ಸಿಗುವಂತಾಗಲಿ ಎಂದು ಜಗದ್ಗುರುಗಳ ಆಶೀರ್ವಾದದೊಂದಿಗೆ ಇಡೀ ಸಮಾಜವು ಒಟ್ಟಾಗಿ ಹರಸುವ ಸುದಿನ ಇದಾಗಿದ್ದು, ಸಾರ್ವಜನಿಕರು ತಮ್ಮ ಕುಟುಂಬ ಸಮೇತರಾಗಿ ಇದರಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.

100 ವರ್ಷಗಳ ಸುದೀರ್ಘ ಇತಿಹಾಸವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಸಾಧನೆಯನ್ನು ಆಯನೂರು ಮಂಜುನಾಥ್ ಶ್ಲಾಘಿಸಿದರು. “ನೂರು ವರ್ಷಗಳ ಯಶಸ್ವಿ ಹೆಜ್ಜೆಯ ನಂತರ ಈಗ ಈ ಸಂಘಕ್ಕೆ ಮತ್ತಷ್ಟು ವೇಗವನ್ನು ನೀಡಬೇಕಿದೆ. ಸಂಘದ ಆರ್ಥಿಕ ವಹಿವಾಟು ಹೆಚ್ಚಾಗುವುದರ ಜೊತೆಗೆ, ಇದರ ಸಹಾಯ ಹಸ್ತವು ಸಮಾಜದ ಕಟ್ಟಕಡೆಯ ಕುಟುಂಬಕ್ಕೂ ತಲುಪುವಂತೆ ಹಲವಾರು ಜನೋಪಕಾರಿ ಯೋಜನೆಗಳನ್ನು ರೂಪಿಸಬೇಕಿದೆ” ಎಂದು ಸಂಘದ ಆಡಳಿತ ಮಂಡಳಿಗೆ ಕಿವಿಮಾತು ಹೇಳಿದರು.

ತಮ್ಮ ಭಾಷಣದಲ್ಲಿ ಅತ್ಯಂತ ಭಾವುಕ ಕ್ಷಣವನ್ನು ನೆನಪಿಸಿಕೊಂಡ ಆಯನೂರು ಮಂಜುನಾಥ್ ಅವರು, ಹಿಂದೆ ಮಂಡಳಿಯ ವೀರಶೈವ ಸಮಾಜದ ಸ್ಮಶಾನ ಕಾಯುತ್ತಿದ್ದ ಕೊಟ್ರಪ್ಪ ಎಂಬುವವರ ಜೀವನದ ಏಳುಬೀಳುಗಳನ್ನು ಉದಾಹರಿಸಿದರು. “ಒಂದು ಕಾಲದಲ್ಲಿ ₹25,000 ದೊಡ್ಡ ಮೊತ್ತದ ಡೆಪಾಸಿಟ್ ಇಡುವಷ್ಟು ಅಗಾಧ ಶ್ರೀಮಂತನಾಗಿದ್ದ ಕೊಟ್ರಪ್ಪ, ಕಾಲಚಕ್ರದ ಮಹಾತ್ಮೆಯಿಂದ ಕೊನೆಗೆ ಸ್ಮಶಾನ ಕಾಯುವಂತಾಯಿತು. ಭಗವಂತ ಯಾರಿಗೆ ಯಾವಾಗ ಎಂತಹ ದಿನಗಳನ್ನು ನೀಡುತ್ತಾನೋ ತಿಳಿಯದು. ಆದ್ದರಿಂದ ನಮಗೆ ಅಧಿಕಾರ, ಸಂಪತ್ತು ಅಥವಾ ಒಳ್ಳೆಯ ದಿನಗಳು ಸಿಕ್ಕಾಗ ನಮ್ಮನ್ನು ನಾವು ದೈವ ಕೃಪೆಗೆ ಹಾಗೂ ಸಮಾಜದ ಒಳ್ಳೆಯ ಕೆಲಸಗಳಿಗೆ ಮೀಸಲಿಡಬೇಕು” ಎಂದು ಭಾವನಾತ್ಮಕವಾಗಿ ಹೇಳಿದರು.

ಪರಮೇಶ್ವರನ ಸ್ವರೂಪಿಗಳಾದ ಜಗದ್ಗುರುಗಳು ನಮ್ಮ ನಗರಕ್ಕೆ ಆಗಮಿಸುತ್ತಿರುವಾಗ, ಭಕ್ತಿಭಾವದಿಂದ ಆ ಪಲ್ಲಕ್ಕಿಗೆ ಒಂದು ನಿಮಿಷ ಹೆಗಲು ಕೊಡುವುದರ ಮೂಲಕ ಅಥವಾ ಮಹಿಳೆಯರು ಪಲ್ಲಕ್ಕಿಯ ಕೆಳಗೆ ಹಾದುಹೋಗುವ ಧಾರ್ಮಿಕ ವಿಧಿಯ ಮೂಲಕ ನಮ್ಮ ಪಾಪದೋಷಗಳನ್ನು ಪರಿಹರಿಸಿಕೊಂಡು ಬದುಕನ್ನು ಪಾವನ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.

ಭಗವಂತ ತಮಗೆ ನೀಡಿರುವ ಆರ್ಥಿಕ ಶಕ್ತಿಯಲ್ಲಿ ಈ ಐತಿಹಾಸಿಕ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಭಕ್ತಿಪೂರ್ವಕ ಕಾಣಿಕೆಯನ್ನು ಸಲ್ಲಿಸಿ, ಅದನ್ನು ದೇವರ ಸೇವೆಗೆ ಸಮರ್ಪಿಸುವ ಉದಾರ ಧಾರ್ಮಿಕ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂದು ಆಯನೂರು ಮಂಜುನಾಥ್ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಸಂಸದರು ಹಾಗೂ ಮಾಜಿ ಶಾಸಕರಾದ ಆಯನೂರು ಮಂಜುನಾಥ್, ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ಸಂತೋಷ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿ ಎಸ್.ಪಿ. ದಿನೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

​ಸಾವಿರ ರೂಪಾಯಿಯಿಂದ ಕೋಟ್ಯಂತರ ರೂ. ವಹಿವಾಟು: ಬಸವೇಶ್ವರ ಸಹಕಾರ ಸಂಘದ ಶತಮಾನದ ಬೆಳವಣಿಗೆ ಹಾಗೂ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ಸಾರಥ್ಯಕ್ಕೆ ಸಿ.ಎಸ್.ಷಡಾಕ್ಷರಿ ಶ್ಲಾಘನೆ

ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ: ಶೋಷಿತರ ಪಾಲಿಗೆ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ – ಸಂಸದ ಬಿ.ವೈ. ರಾಘವೇಂದ್ರ

ಸರ್ವೆ ಸ್ಥಗಿತ, ರಸಗೊಬ್ಬರ ಕೊರತೆ ತಕ್ಷಣ ಬಗೆಹರಿಸಿ: ಇಲ್ಲದಿದ್ದರೆ ಉಗ್ರ ಹೋರಾಟ – ಹೆಚ್.ಆರ್. ಬಸವರಾಜಪ್ಪ ಎಚ್ಚರಿಕೆ

“ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಬಸವ ತತ್ವದ ಕಾಯಕ-ದಾಸೋಹಕ್ಕೆ ಸಿಕ್ಕ ವಿಜಯೋತ್ಸವ” – ಬಿ.ಎಸ್. ಯಡಿಯೂರಪ್ಪ ಶ್ಲಾಘನೆ

ಬಂಗಾರಪ್ಪನವರಿಗೆ ದಕ್ಷಿಣ ಕನ್ನಡದಲ್ಲಿ ಬ್ಯಾರಿ ಸಮುದಾಯವೇ ರಾಜಕೀಯ ಶಕ್ತಿಯಾಗಿತ್ತು: ಸಚಿವ ಮಧು ಬಂಗಾರಪ್ಪ

ಜಾಗತಿಕ ಯುದ್ಧದ ಆತಂಕ, ಇಂಧನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ ಕರೆಗೆ ಸ್ಪಂದನೆ: ಮೆಟ್ರೋದಲ್ಲಿ ಸಂಚರಿಸಿದ ಬಿ.ವೈ.ವಿಜಯೇಂದ್ರ

Leave a Comment