ಶಿವಮೊಗ್ಗ: “ಮಾತನಾಡುವುದೇ ಸಾಧನೆಯಾಗಬಾರದು, ಬದಲಿಗೆ ನಮ್ಮ ಸಾಧನೆಯೇ ಮಾತನಾಡಬೇಕು ಎಂಬ ಧ್ಯೇಯದೊಂದಿಗೆ ನಾವೆಲ್ಲರೂ ಮುನ್ನಡೆಯಬೇಕಿದೆ. ಕೇವಲ 40 ಜನ ಸದಸ್ಯರಿಂದ ಆರಂಭವಾದ ಸಂಸ್ಥೆಯೊಂದು ಇಂದು ಶತಮಾನೋತ್ಸವ ಆಚರಿಸುತ್ತಿರುವುದು ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿ” ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಅವರು ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಾಗತಿಕ ಹಾಗೂ ಸ್ಥಳೀಯ ಸಹಕಾರ ಕ್ಷೇತ್ರದ ಇತಿಹಾಸ
ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ವ್ಯಾಪ್ತಿ ಮತ್ತು ಇತಿಹಾಸದ ಕುರಿತು ಗೂಗಲ್ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, “ವಿಶ್ವದಾದ್ಯಂತ ಕಳೆದ ಎರಡು ದಶಕಗಳಲ್ಲಿ ಸಹಕಾರ ರಂಗವು ಅಪಾರವಾಗಿ ಬೆಳೆದಿದೆ. ಪ್ರಪಂಚದಲ್ಲಿ ಒಟ್ಟು 30 ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, ಅದರಲ್ಲಿ ಕೇವಲ 50,000 ಸಂಘಗಳು ಮಾತ್ರ 100 ವರ್ಷಗಳ ಇತಿಹಾಸವನ್ನು ದಾಟಿ ಮುನ್ನಡೆಯುತ್ತಿವೆ. ಭಾರತ ದೇಶದಲ್ಲಿ ಸುಮಾರು 8,50,000 ಸಹಕಾರ ಸಂಘಗಳಿದ್ದು, ಇವುಗಳಲ್ಲಿ 15,000 ಸಂಘಗಳು ಶತಮಾನೋತ್ಸವದ ಗೌರವಕ್ಕೆ ಪಾತ್ರವಾಗಿವೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ನಮ್ಮ ಕರ್ನಾಟಕ ರಾಜ್ಯದಲ್ಲಿ 44,000 ಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, ಅದರಲ್ಲಿ ಕೇವಲ 1,000 ದಿಂದ 1,200 ಸಂಘಗಳು ಮಾತ್ರ ನೂರು ವರ್ಷ ಪೂರೈಸಿವೆ. ಇನ್ನು ನಮ್ಮ ಶಿವಮೊಗ್ಗ ಜಿಲ್ಲೆಯ ವಿಚಾರಕ್ಕೆ ಬಂದರೆ, ಇಲ್ಲಿ ಕಾರ್ಯಾಚರಿಸುತ್ತಿರುವ 1,268 ಸಹಕಾರ ಸಂಘಗಳ ಪೈಕಿ ಕೇವಲ 25 ಸಂಘಗಳು ಮಾತ್ರ ಯಶಸ್ವಿಯಾಗಿ ನೂರು ವರ್ಷಗಳ ಇತಿಹಾಸವನ್ನು ದಾಟಿದ್ದು, ಅದರಲ್ಲಿ ನಮ್ಮ ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘವೂ ಒಂದಾಗಿರುವುದು ಶ್ಲಾಘನೀಯ” ಎಂದರು.

ಶರಣರ ತತ್ವವೇ ಸಹಕಾರದ ಮೂಲ
“ಇಂದಿನ ಆಧುನಿಕ ಜಗತ್ತಿಗೆ ಸಹಕಾರ ತತ್ವವು ಹೊಸದಾಗಿ ಕಂಡರೂ, ಇದರ ನಿಜವಾದ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ ನಮ್ಮ ಶಿವಶರಣರು ಸಾರಿದ್ದರು. ಜಗತ್ತಿಗೆ ಸಮಾನತೆ ಹಾಗೂ ಭ್ರಾತೃತ್ವದ ಸಂದೇಶ ನೀಡಿದ ಬಸವಣ್ಣನವರ ‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ’ ಎಂಬ ವಚನವೇ ಇಂದಿನ ಸಹಕಾರ ಚಳವಳಿಗೆ ಅತಿ ದೊಡ್ಡ ಪ್ರೇರಣೆ” ಎಂದು ಡಾ. ಸರ್ಜಿ ಅಭಿಪ್ರಾಯಪಟ್ಟರು.
“ಶರಣರು ನಮಗೆ ಧಾರೆ ಎರೆದುಕೊಟ್ಟ ‘ಕಾಯಕ’ ಮತ್ತು ‘ದಾಸೋಹ’ ಎಂಬ ಎರಡು ಪವಿತ್ರ ಪದಗಳೇ ಇಂದಿನ ಸಹಕಾರ ಸಂಸ್ಥೆಗಳ ಯಶಸ್ಸಿಗೆ ಭದ್ರವಾದ ಅಡಿಪಾಯ ಮತ್ತು ಬುನಾದಿಯಾಗಿದೆ. ಕಾಯಕ ನಿಷ್ಠೆಯಿಂದ ದುಡಿಯಬೇಕು ಮತ್ತು ಆ ದುಡಿಮೆಯ ಫಲವನ್ನು ಸಮಾಜಕ್ಕೆ ದಾಸೋಹ ರೂಪದಲ್ಲಿ ಹಂಚಬೇಕು ಎನ್ನುವುದೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಬೇಕು” ಎಂದು ಅವರು ಕರೆ ನೀಡಿದರು.
ನೂರು ವರ್ಷಗಳ ಯಶೋಗಾಥೆ ಮತ್ತು ನೂತನ ಯೋಜನೆಗಳು
1925ರಲ್ಲಿ ಕೇವಲ 40 ಜನ ಪ್ರಮುಖರು ಒಟ್ಟಾಗಿ ಗಾಂಧಿ ಬಜಾರ್ನ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಕುಳಿತು, ಅಂದಿನ ಕಾಲಕ್ಕೆ ಕೇವಲ ರೂ.1,150 ಸಂಗ್ರಹಿಸುವ ಮೂಲಕ ಈ ಸಂಘಕ್ಕೆ ಚಾಲನೆ ನೀಡಿದ್ದರು. ಅಂದಿನ ಆ ಮೊತ್ತವು ಇಂದಿನ ಕೋಟ್ಯಂತರ ರೂಪಾಯಿ ಮೌಲ್ಯಕ್ಕೆ ಸಮಾನವಾಗಿದೆ. ಅಷ್ಟು ಸಣ್ಣ ಪ್ರಮಾಣದಲ್ಲಿ ಆರಂಭವಾದ ಸಂಸ್ಥೆ ಇಂದು ಈ ಮಟ್ಟಕ್ಕೆ ಬೃಹತ್ತಾಗಿ ಬೆಳೆದು ನಿಂತಿದೆ ಎಂದರೆ, ಅದಕ್ಕೆ ಕಾರಣಕರ್ತರಾದ ಸಂಸ್ಥೆಯ ಸಂಸ್ಥಾಪಕರು ಮತ್ತು ಮುನ್ನಡೆಸಿದ ಎಲ್ಲಾ ಹಿರಿಯರ ತ್ಯಾಗ ಹಾಗೂ ಶ್ರಮವನ್ನು ನಾವಿಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘವು ಗ್ರಾಹಕರು ಹಾಗೂ ಸದಸ್ಯರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ನೂತನ ಯೋಜನೆಗಳನ್ನು ಅವರು ಶ್ಲಾಘಿಸಿದರು. ಠೇವಣಿದಾರರ ರಕ್ಷಣೆಗಾಗಿ ತಂದಿರುವ ‘ಕ್ಷೇಮಾಭಿವೃದ್ಧಿ ನಿಧಿ’, ಉಳಿತಾಯದ ಮಹತ್ವ ಸಾರುವ ‘ಅಲ್ಲಮ ನಗದು ಪತ್ರ’ ಹಾಗೂ ಭರವಸೆಯ ಹೂಡಿಕೆಯಾದ ‘ಶ್ರೀ ನಂದಿ ಠೇವಣಿ’ ಯೋಜನೆಗಳು ಅತ್ಯಂತ ಜನಪರವಾಗಿದ್ದು, ಸಾರ್ವಜನಿಕರಿಗೆ ಸಹಕಾರಿಯಾಗಲಿವೆ ಎಂದು ಆಶಿಸಿದರು.
ಸಾಧನೆಯೇ ಮಾತನಾಡಬೇಕು: ಆಡಳಿತ ಮಂಡಳಿಗೆ ಕರೆ
ಪ್ರಸ್ತುತ ಸಂಘದಲ್ಲಿ 5500 ಸದಸ್ಯರಿದ್ದು, ಅವರೆಲ್ಲರ ಆರ್ಥಿಕ ಪ್ರಗತಿಗೆ ಸಂಘವು ಮತ್ತಷ್ಟು ಪೂರಕವಾಗಿ ಕೆಲಸ ಮಾಡಬೇಕಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಸದಾ ಹೇಳುವಂತೆ, ನಾವೆಲ್ಲರೂ ಕೇವಲ ಮಾತುಗಳಿಗೆ ಸೀಮಿತವಾಗದೆ, ಜನಪರ ಕೆಲಸಗಳ ಮೂಲಕ ನಮ್ಮ ಸಾಧನೆಯನ್ನು ತೋರಿಸಬೇಕಿದೆ. ಇಂದಿನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಅದೇ ಮನೋಭಾವನೆಯನ್ನು ಇಟ್ಟುಕೊಂಡು, ಸಂಘವನ್ನು ಇನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು ಮತ್ತು ಸಹಕಾರದ ಲಾಭ ಪ್ರತಿಯೊಬ್ಬ ಸದಸ್ಯನಿಗೂ ತಲುಪುವಂತೆ ಶ್ರಮಿಸಬೇಕು ಎಂದು ಡಾ. ಧನಂಜಯ್ ಸರ್ಜಿ ಅವರು ಹಾರೈಸಿದರು.






