ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು, ಸಾಂಸ್ಕೃತಿಕ ನಗರಿ ಶಿವಮೊಗ್ಗ ಇಂದು ಅಕ್ಷರಶಃ ಶಿವಮಯವಾಗಿ ಕಂಗೊಳಿಸಿತು. ಬರೋಬ್ಬರಿ 34 ವರ್ಷಗಳ ಸುದೀರ್ಘ ಅವಧಿಯ ನಂತರ ನಗರದಲ್ಲಿ ನಡೆದ “ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವ”ದ ಮಹಾ ಮೆರವಣಿಗೆಗೆ ಇಡೀ ನಗರವೇ ಸಾಕ್ಷಿಯಾಯಿತು. ಜೀವನದಲ್ಲಿ ಒಮ್ಮೆಯಾದರೂ ಕಣ್ತುಂಬಿಕೊಳ್ಳಬಹುದಾದ ಈ ಅಭೂತಪೂರ್ವ, ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹವೇ ಸಾಗರೋಪಾದಿಯಾಗಿ ಹರಿದುಬಂದಿತ್ತು.

ಕಣ್ಣು ಸಾಲದ ಭವ್ಯ ದೃಶ್ಯ: ಪಂಚಪೀಠಾಧೀಶ್ವರರ ದರ್ಶನಭಾಗ್ಯ
ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಧರ್ಮದ ಪರಮ ಪೂಜ್ಯರಾದ:
- ಶ್ರೀ ರಂಭಾಪುರಿ ಜಗದ್ಗುರುಗಳು
- ಶ್ರೀ ಉಜ್ಜಯಿನಿ ಜಗದ್ಗುರುಗಳು
- ಶ್ರೀ ಶ್ರೀಶೈಲ ಜಗದ್ಗುರುಗಳು
- ಶ್ರೀ ಕಾಶಿ ಹಿರಿಯ ಜಗದ್ಗುರುಗಳು
- ಶ್ರೀ ಕಾಶಿ ಕಿರಿಯ ಜಗದ್ಗುರುಗಳು

ಈ ಪರಮ ಪೂಜ್ಯರ ಭವ್ಯ ಅಡ್ಡಪಲ್ಲಕ್ಕಿ ಮಹೋತ್ಸವವು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ದರ್ಶನ ಪಡೆದ ಅನುಭೂತಿ ನೀಡಿತು. ಸಂಜೆ 4 ಗಂಟೆಗೆ ನಗರದ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನ (ಗಾಂಧಿಬಜಾರ್) ದಿಂದ ಆರಂಭವಾದ ಈ ಮೆರವಣಿಗೆಯು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವೈಭವಕ್ಕೆ ಸಾಕ್ಷಿಯಾಯಿತು.


ಧಾರ್ಮಿಕ ಪರಂಪರೆಯ ಅಪ್ರತಿಮ ಕಣ್ಣು, ಮಲೆನಾಡಿನ ಹೆಮ್ಮೆಯ ನಾಯಕ ಬಿ.ಎಸ್. ಯಡಿಯೂರಪ್ಪನವರ ಉಪಸ್ಥಿತಿ ಮಹೋತ್ಸವಕ್ಕೆ ತಂದಿತು ಆನೆಬಲ!
ಧರ್ಮ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯೆಂದರೆ ಸದಾ ಮುಂಚೂಣಿಯಲ್ಲಿ ನಿಲ್ಲುವ ಕರ್ನಾಟಕದ ಜನಪ್ರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗರಿಷ್ಠ ಪ್ರಭಾವಿ ಉಪಸ್ಥಿತಿಯು ಈ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವದ ಗಾಂಭೀರ್ಯವನ್ನು ಮತ್ತಷ್ಟು ಹೆಚ್ಚಿಸಿತು. ವಯಸ್ಸಿನ ಹಂಗಿಲ್ಲದೆ, ಭಕ್ತಿಯ ಪರಾಕಾಷ್ಠೆಯೊಂದಿಗೆ ಜಗದ್ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದ ಅವರ ನಡೆ, ಧಾರ್ಮಿಕ ಆಚರಣೆಗಳ ಮೇಲಕ್ಕಿರುವ ಅವರ ಅಚಲ ನಿಷ್ಠೆಗೆ ಸಾಕ್ಷಿಯಾಗಿತ್ತು.

ಸಾರ್ವಜನಿಕ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಗುರು-ಹಿರಿಯರ ಮತ್ತು ಧರ್ಮಪೀಠಗಳ ಎದುರು ಸದಾ ವಿನಮ್ರರಾಗಿ ನಿಲ್ಲುವ ಯಡಿಯೂರಪ್ಪನವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ನೆರೆದಿದ್ದ ಸಹಸ್ರಾರು ಭಕ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿತು. ಮಲೆನಾಡಿನ ಮಣ್ಣಿನ ಮಗನಾಗಿ, ಈ ಭಾಗದ ಪ್ರತಿಯೊಂದು ಧಾರ್ಮಿಕ ಮೈಲಿಗಲ್ಲಿಗೂ ಹೆಗಲು ಕೊಡುವ ಅವರ ಮುತ್ಸದ್ದಿತನ ಮತ್ತು ಧಾರ್ಮಿಕ ಕಾಳಜಿ ಈ ಮಹೋತ್ಸವದ ಯಶಸ್ಸಿಗೆ ಮತ್ತಷ್ಟು ಮೆರಗು ನೀಡಿತು.


ಯುವ ನಾಯಕತ್ವ ಮತ್ತು ಹಿರಿಯ ಮುಖಂಡರ ಉಪಸ್ಥಿತಿ: ಮಹೋತ್ಸವದ ಯಶಸ್ಸಿಗೆ ಸಾಕ್ಷಿಯಾದ ಗಣ್ಯರು
ಮಲೆನಾಡಿನ ಅಭಿವೃದ್ಧಿಯ ಹರಿಕಾರ, ಸದಾ ಕ್ರಿಯಾಶೀಲ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಉಪಸ್ಥಿತಿಯು ಈ ಐತಿಹಾಸಿಕ ಮಹೋತ್ಸವದ ಯಶಸ್ಸಿಗೆ ದಿಕ್ಸೂಚಿಯಂತಿತ್ತು. ಸಾರ್ವಜನಿಕರೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತ ಅವರು ಜಗದ್ಗುರುಗಳ ಆಶೀರ್ವಾದ ಪಡೆದರು. ಇವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಭಾಗವಹಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮಗಿರುವ ಅಚಲ ಶ್ರದ್ಧೆಯನ್ನು ತೋರ್ಪಡಿಸಿದರು.

ಇನ್ನು ರಾಜಕೀಯ ಮುತ್ಸದ್ದಿ, ಮಾಜಿ ಶಾಸಕ ಆಯನೂರು ಮಂಜುನಾಥ್, ಶಾಸಕ ಚನ್ನಬಸಪ್ಪ, ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಉಪಸ್ಥಿತಿಯು ಕಾರ್ಯಕ್ರಮದ ಗಾಂಭೀರ್ಯವನ್ನು ಹೆಚ್ಚಿಸಿತು. ಈ ಎಲ್ಲಾ ಮುಖಂಡರು ಮುಂಚೂಣಿಯಲ್ಲಿ ನಿಂತು ಮೆರವಣಿಗೆಗೆ ಶಕ್ತಿ ತುಂಬಿದ್ದು, ಮಲೆನಾಡಿನ ರಾಜಕೀಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಯಿತು.





ಸಮಾಜದ ಕೊಂಡಿಯಾಗಿ ನಿಂತು ಮೆರಗು ತಂದ ಪ್ರಮುಖರು
ಇದೇ ವೇಳೆ ಶಿವಮೊಗ್ಗದ ಹೆಮ್ಮೆಯ ಪ್ರಮುಖ ಮುಖಂಡರುಗಳಾದ, ರುದ್ರುಮನಿ ಸಜ್ಜನ್, ಮಹೇಶ್ವರಯ್ಯ, ವಿರೂಪಾಕ್ಷ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಬಳ್ಳೇಕೆರೆ ಸಂತೋಷ್ ಮತ್ತು ಎಸ್.ಪಿ. ದಿನೇಶ್ ಅವರುಗಳು ಈ ಭವ್ಯ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಕಳೆ ತಂದರು.

ಸಾರ್ವಜನಿಕ ಜೀವನದಲ್ಲಿ ಸದಾ ಜನಪರ ಚಿಂತನೆಗಳನ್ನು ಹೊಂದಿರುವ ಈ ನಾಯಕರು, ಭಕ್ತ ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಾಗುವ ಮೂಲಕ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ತಾವೂ ಸದಾ ಸಿದ್ಧ ಎಂಬುದನ್ನು ಸಾಬೀತುಪಡಿಸಿದರು. ಜಗದ್ಗುರುಗಳ ಭವ್ಯ ಮೆರವಣಿಗೆಯುದ್ದಕ್ಕೂ ಈ ಪ್ರಮುಖ ಗಣ್ಯರು ನೆರೆದಿದ್ದ ಸಹಸ್ರಾರು ಭಕ್ತ ಸಮೂಹವನ್ನು ಹುರಿದುಂಬಿಸುತ್ತಾ, ಇಡೀ ಶಿವಮೊಗ್ಗ ನಗರವು ಭಕ್ತಿ ಸಾಗರದಲ್ಲಿ ತೇಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೆರವಣಿಗೆಯ ಅಪ್ರತಿಮ ಸಾರಥಿಗಳು: ಇತಿಹಾಸ ನಿರ್ಮಿಸಿದ ಉತ್ಸಾಹಿ ಯುವಕರ ಹೆಮ್ಮೆಯ ದಂಡು!
34 ವರ್ಷಗಳ ನಂತರ ಶಿವಮೊಗ್ಗದಲ್ಲಿ ಮರುಕಳಿಸಿದ ಈ ಐತಿಹಾಸಿಕ ಕ್ಷಣಕ್ಕೆ ಹೆಗಲು ಕೊಟ್ಟು, ಸಾವಿರಾರು ಭಕ್ತರ ಸಾಗರವನ್ನು ನಿಯಂತ್ರಿಸುತ್ತಾ, ಇಡೀ ಮೆರವಣಿಗೆಯುದ್ದಕ್ಕೂ ಜಗದ್ಗುರುಗಳ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಪರಿ ಅಪೂರ್ವವಾಗಿತ್ತು. ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ತಾವು ಸದಾ ಮುಂಚೂಣಿಯಲ್ಲಿರುವುದಾಗಿ ಸಾಬೀತುಪಡಿಸಿದ ಈ ಯುವ ನಾಯಕರ ಸಂಘಟನಾ ಚಾತುರ್ಯ ಮತ್ತು ಶ್ರಮ ಇಡೀ ಮಹೋತ್ಸವಕ್ಕೆ ಧರ್ಮದ ಜೈಕಾರದಷ್ಟೇ ದೊಡ್ಡ ಮೆರಗು ತಂದಿತು.
ಈ ಭವ್ಯ ಮಹೋತ್ಸವದ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿ, ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಾಗುವಂತೆ ನೋಡಿಕೊಂಡ ಹೆಮ್ಮೆಯ ಯುವಕರ ದಂಡು ಮೆರವಣಿಗೆಯ ನಿಜವಾದ ಸಾರಥಿಗಳಾಗಿ ಮಿಂಚಿದರು. ಸಮಾಜದ ಯುವ ಶಕ್ತಿಗಳಾದ ಹೆಚ್.ಕೆ.ರಾಜಶೇಖರ್, ಪ್ರದೀಪ್ ವಿ.ಎಲಿ, ಮಲ್ಲಿಕಾರ್ಜುನ ಸ್ವಾಮಿ, ಚೇತನ್ ದುಮ್ಮಳ್ಳಿ, ದೃವಕುಮಾರ್, ಉಮಾಶಂಕರ್, ಸತೀಶ್ ಹಿರೇಮಠ್, ಅವಿನಾಶ್ ಬಿದರೆ, ಉಮೇಶ್ ಕತ್ತಿಗೆ, ಪರಮೇಶ್ ವಾಲಿಬಾಲ್, ಉಮೇಶ್ ಎಟಿಎಂ, ನವೀನ್ ವಾರದ್, ಮತ್ತು ಡಿವಿನ್ ಪಾಟೀಲ್, ಸಚಿನ್ ಪೂಜಾರ್, ಚಂದ್ರು, ಪ್ರವೀಣ್ ವಿದ್ಯಾನಗರ, ರುದ್ರಪ್ಪ ಬೆನ್ನೂರು, ಮೋಹನ್, ಪ್ರಮೋದ್, ಮಲ್ಲೇಶಪ್ಪ, ಮಲ್ಲಿಕಾರ್ಜುನ ಹೂಗಾರ್, ಅನಿಲ್ ಪಟೇಲ್, ರಾಜಯ್ಯ, ಮಲ್ಲೇಶಪ್ಪ, ಮನೋಹರ ಸಜ್ಜನ್, ಗಂಗಾಧರ್, ಶರತ್, ಮತ್ತು ಇತರ ಇದ್ದರು, ಅವರನ್ನೊಳಗೊಂಡ ಈ ಉತ್ಸಾಹಿ ಯುವಕರ ತಂಡವು ತೋರಿದ ಶಿಸ್ತು ಮತ್ತು ಭಕ್ತಿ ನಿಜಕ್ಕೂ ಶ್ಲಾಘನೀಯ.


ಜಾನಪದ ಕಲಾ ವೈಭವ – ಮಂತ್ರ ಘೋಷಗಳ ನಿನಾದ
ಮೆರವಣಿಗೆಯುದ್ದಕ್ಕೂ ಸಂಸ್ಕೃತಿ ಮತ್ತು ಭಕ್ತಿಯ ಸಂಗಮ ಎದ್ದುಕಾಣುತ್ತಿತ್ತು. ಕಳಸ ಹೊತ್ತ ನೂರಾರು ಮಹಿಳೆಯರು, ಪುರೋಹಿತರ ತಂಡದಿಂದ ಮೊಳಗಿದ ವೇದ ಮಂತ್ರ ಘೋಷಗಳು ವಾತಾವರಣದಲ್ಲಿ ದಿವ್ಯತೆಯನ್ನು ತುಂಬಿದ್ದವು. ಭಜನಾ ಮಂಡಳಿಗಳ ಕೀರ್ತನೆಗಳು, ವಾದ್ಯ ವೃಂದ ಹಾಗೂ ತಮಟೆಗಳ ಗರ್ಜನೆ ಭಕ್ತರಲ್ಲಿ ರೋಮಾಂಚನ ಉಂಟುಮಾಡಿತು.



ಇದರೊಂದಿಗೆ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು.
ಡೊಳ್ಳು ಕುಣಿತ, ಕೀಲುಕುದರೆ, ವೀರಗಾಸೆ, ನಂದಿ ಧ್ವಜ ಮತ್ತು ವೈವಿಧ್ಯಮಯ ಜಾನಪದ ಕಲಾಮೇಳಗಳು ಮಲೆನಾಡಿಗರ ಕಣ್ಮನ ಸೆಳೆದವು.

ಸಾಗರೋಪಾದಿಯಾಗಿ ಹರಿದುಬಂದ ಭಕ್ತರ ಮಹಾಪೂರ
ಗಾಂಧಿಬಜಾರ್ನ ಶ್ರೀ ಬಸವೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಮಾರ್ಗವಾಗಿ ಸಾಗಿ ಕೊನೆಗೆ ಅಲ್ಲಮ ಪ್ರಭು ಮೈದಾನವನ್ನು ತಲುಪಿತು. ಈ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ, ಮನೆಗಳ ಮಹಡಿಗಳ ಮೇಲೆ ನಿಂತು ಸಹಸ್ರಾರು ಭಕ್ತರು ಜಗದ್ಗುರುಗಳ ದರ್ಶನ ಪಡೆದು ಪುನೀತರಾದರು. ಇಡೀ ಶಿವಮೊಗ್ಗ ನಗರವು ಇಂದು ಭಕ್ತಿ ರಸಾಯನದಲ್ಲಿ ಮಿಂದೆದ್ದಿತು. ಈ ಮಹೋತ್ಸವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಭಕ್ತನೂ “ನಾನೇ ಧನ್ಯ, ನಾನೇ ಪಾವನ” ಎಂಬ ಮೂಕವಿಸ್ಮಿತ ಭಾವದಲ್ಲಿದ್ದದ್ದು ಕಂಡುಬಂತು.

ಶಿವಮೊಗ್ಗ ನಗರದ ಇತಿಹಾಸದಲ್ಲಿ ಈ ಅಡ್ಡಪಲ್ಲಕ್ಕಿ ಮಹೋತ್ಸವವು ಒಂದು ಮೈಲಿಗಲ್ಲು. ಸನಾತನ ಧರ್ಮದ ಶ್ರೇಷ್ಠ ಪರಂಪರೆಯನ್ನು ಎತ್ತಿಹಿಡಿದ ಈ ಉತ್ಸವ, ಮಲೆನಾಡಿನ ಜನತೆಯ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾತುಗಳಿಗೆ ನಿಲುಕದ ಈ ಭಕ್ತಿ ಉತ್ಸವವು ನಿಜಕ್ಕೂ ಅಭೂತಪೂರ್ವ.









