ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಮಳೆಯ ಮಧ್ಯೆಯೂ ಸೇರಿದ ಜನಸಾಗರ ಸಾಕ್ಷಿಯಾಗಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಬೃಹತ್ ಧರ್ಮಜಾಗೃತಿ ಸಮಾವೇಶವು ಅತ್ಯಂತ ವೈಭವದಿಂದ ನೆರವೇರಿತು. ಇದೇ ಭವ್ಯ ವೇದಿಕೆಯಲ್ಲಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅಳಿಸಲಾಗದ ಮುದ್ರೆ ಒತ್ತಿದ ಧೀಮಂತ ನಾಯಕ, ಕೋಟ್ಯಂತರ ರೈತರ ಆಶಾಕಿರಣ, ಬಡವರ ಬಂಧು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇಡೀ ವೀರಶೈವ ಲಿಂಗಾಯತ ಸಮಾಜದ ಪರವಾಗಿ ಹಮ್ಮಿಕೊಳ್ಳಲಾಗಿದ್ದ “ಕೃತಜ್ಞತಾ ಸಮರ್ಪಣಾ ಮತ್ತು ಅಭಿನಂದನಾ ಸಮಾರಂಭ” ಅತ್ಯಂತ ವೈಭವದ ಕ್ಷಣಗಳಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರು, ಯಡಿಯೂರಪ್ಪನವರ ಹೋರಾಟದ ಹಾದಿ, ಧೀಮಂತ ನಾಯಕತ್ವ ಮತ್ತು ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

“ಹೋರಾಟದ ಹಾದಿಯಲ್ಲಿ ಬೆಳೆದು ನಾಲ್ಕು ಬಾರಿ ಮುಖ್ಯಮಂತ್ರಿ ಆದ ಏಕೈಕ ನಾಯಕ ಬಿ.ಎಸ್. ಯಡಿಯೂರಪ್ಪ”
ನಮ್ಮ ಸಮಾಜದಿಂದ ಹಿಂದೆ ನಿಜಲಿಂಗಪ್ಪನವರು, ವೀರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಾಯಿ, ಜೆ.ಹೆಚ್. ಪಟೇಲ್, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಇಡೀ ಕರ್ನಾಟಕದ ಇತಿಹಾಸದಲ್ಲಿ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ಸ್ವಂತ ಶಕ್ತಿ, ಸಾಮರ್ಥ್ಯ ಮತ್ತು ತಮ್ಮ ರಕ್ತವನ್ನು ಬೆವರಾಗಿಸಿ ನಿರಂತರ ಹೋರಾಟದ ಮೂಲಕ ನಾಯಕನಾಗಿ ಬೆಳೆದು, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ಏಕೈಕ ಮಹಾನ್ ರಾಜಕಾರಣಿ ಎಂದರೆ ಅದು ಬಿ.ಎಸ್. ಯಡಿಯೂರಪ್ಪನವರು ಮಾತ್ರ. ಅವರು ರಾಜಕೀಯದಲ್ಲಿ ಚುನಾಯಿತ ಸ್ಥಾನವನ್ನು ಪಡೆದು ಇಂದಿಗೆ ಬರೋಬ್ಬರಿ 50 ವರ್ಷಗಳು ಸಂದಿವೆ ಎಂದು ಆಯನೂರು ಮಂಜುನಾಥ್ ಹೇಳಿದರು.

ತುರ್ತು ಪರಿಸ್ಥಿತಿಯ ಜೈಲು ವಾಸ ಮತ್ತು ಜೈಲಿನೊಳಗಿನ ಹೋರಾಟ
ಯಡಿಯೂರಪ್ಪನವರ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಆಯನೂರು ಮಂಜುನಾಥ್, “1975-76ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ನನಗೆ ಯಡಿಯೂರಪ್ಪನವರ ಜೊತೆ ಬಳ್ಳಾರಿ ಜೈಲಿನಲ್ಲಿ ಕೆಲವು ತಿಂಗಳುಗಳ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ಯಡಿಯೂರಪ್ಪನವರ ಹೋರಾಟದ ಸ್ವಭಾವ ಎಂತದ್ದೆಂದರೆ, ಕೇವಲ ಹೊರಗಡೆ ಮಾತ್ರವಲ್ಲ, ತಮ್ಮನ್ನು ಬಂಧಿಸಿಟ್ಟಿದ್ದ ಜೈಲಿನೊಳಗೂ ಸಹ ಅಲ್ಲಿದ್ದ ಕೈದಿಗಳಿಗೆ ಆಗುತ್ತಿದ್ದ ಅನ್ಯಾಯ, ಭ್ರಷ್ಟಾಚಾರ ಮತ್ತು ಆಹಾರದ ಕೊರತೆಯ ವಿರುದ್ಧ ಧ್ವನಿ ಎತ್ತಿ ಭರ್ಜರಿ ಹೋರಾಟ ನಡೆಸಿದ್ದರು. ಜೈಲಿನ ಒಳಗಡೆ ಪೊಲೀಸರು ನಡೆಸಿದ ಹಲ್ಲೆ ಮತ್ತು ಲಾಠಿಚಾರ್ಜ್ ವೇಳೆ ಯಡಿಯೂರಪ್ಪನವರು ಸ್ವತಃ ಒಬ್ಬ ದೈಹಿಕ ಹೋರಾಟಗಾರನಂತೆ (Physical Fighter) ಮುಂಚೂಣಿಯಲ್ಲಿ ನಿಂತು ಎದುರಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ” ಎಂದರು.


ವಿಧಾನಸಭೆಯ ಸಿಂಹ ಸ್ವಪ್ನ ಹಾಗೂ ರೈತ ನಾಯಕ: “ಯಡಿಯೂರಪ್ಪ ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು”
ಯಡಿಯೂರಪ್ಪನವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಒಂದು ನಿಜವಾದ ಗೌರವ ಮತ್ತು ಅರ್ಥವನ್ನು ತಂದುಕೊಟ್ಟಿದ್ದಾರೆ. ಅವರು ವಿಧಾನಸಭೆಯಲ್ಲಿ ಎದ್ದು ನಿಂತರೆ ಇಡೀ ಸದನವೇ ನಡುಗುತ್ತಿತ್ತು. ಹಿಂದೆ ಸಂಖ್ಯಾಬಲ ಕಡಿಮೆ ಇದ್ದಾಗಲೂ, ಅಂದಿನ ಕಾಂಗ್ರೆಸ್ ಸರ್ಕಾರ ತರಲು ಯತ್ನಿಸಿದ ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆಯನ್ನು ತಮ್ಮ ಒಂಟಿ ಹೋರಾಟದ ಮೂಲಕ ಸರ್ಕಾರ ಹಿಂಪಡೆಯುವಂತೆ ಮಾಡಿದ್ದ ಧೀಮಂತ ನಾಯಕ ಇವರು. ರಾಜ್ಯದಲ್ಲಿ ರೈತ ಸಂಘಟನೆಗಳು ಪ್ರಬಲವಾಗಿದ್ದ ಕಾಲದಲ್ಲೂ, ರಾಜಕೀಯವಾಗಿ ಒಬ್ಬ ಧೀಮಂತ ರೈತ ನಾಯಕನಾಗಿ ಉದಯಿಸಿ ರೈತರಿಗೆ ಆಶಾಕಿರಣವಾದರು. ಹಿಂದೆ ರಾಮಕೃಷ್ಣ ಹೆಗಡೆಯವರ ನಂತರ ಇಡೀ ರಾಜ್ಯವನ್ನು ಸುತ್ತಿ, ಸಮಾಜದ ಎಲ್ಲಾ ಒಳಪಂಗಡಗಳ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಎಲ್ಲರೂ ಒಪ್ಪಿ ಅಪ್ಪಿಕೊಂಡಂತಹ ಏಕೈಕ ಸರ್ವಸಮ್ಮತ ನಾಯಕ ಎಂದರೆ ಅದು ಯಡಿಯೂರಪ್ಪನವರು ಮಾತ್ರ ಎಂದು ಶ್ಲಾಘಿಸಿದರು.

ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರ ನಾಯಕತ್ವದ ಹೋಲಿಕೆ: “ಯೋಗ ಇದ್ದಿದ್ದರೆ ಯಡಿಯೂರಪ್ಪನವರು ದೇಶದ ಪ್ರಧಾನಿಯಾಗುತ್ತಿದ್ದರು” – ಆಯನೂರು ಮಂಜುನಾಥ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವವನ್ನು ಹೋಲಿಸಿದ ಆಯನೂರು ಮಂಜುನಾಥ್, “ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಈಗಾಗಲೇ ಅಧಿಕಾರದಲ್ಲಿದ್ದ, ಭದ್ರವಾಗಿದ್ದ ಪಕ್ಷಕ್ಕೆ ಮುಖ್ಯಮಂತ್ರಿಯಾಗಿ ಬಂದವರು. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಯಡಿಯೂರಪ್ಪನವರು ಶೂನ್ಯದಿಂದ ಪಕ್ಷವನ್ನು ತಾವೇ ಕಟ್ಟಿ, ಬೆಳೆಸಿ, ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದವರು. ಈ ನಿಟ್ಟಿನಲ್ಲಿ ನೋಡಿದರೆ ಯಡಿಯೂರಪ್ಪನವರ ಹೆಸರು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅವರಿಗೆ ದೇಶದ ಪ್ರಧಾನಿಯಾಗುವ ಎಲ್ಲಾ ಯೋಗ್ಯತೆ ಇತ್ತು, ಆದರೆ ಸೂಕ್ತ ‘ಯೋಗ’ ಇರಲಿಲ್ಲ. ಒಂದು ವೇಳೆ ಆ ಯೋಗ ಇದ್ದಿದ್ದರೆ ದೇವೇಗೌಡರ ತರಹ ಇವರೂ ಕೂಡ ಈ ದೇಶವನ್ನು ಆಳುತ್ತಿದ್ದರು” ಎಂದರು.

ಕೇಂದ್ರಕ್ಕೆ ಮಾದರಿಯಾದ ಯಡಿಯೂರಪ್ಪ ನವರ ಯೋಜನೆಗಳು
ಹೆಣ್ಣು ಮಕ್ಕಳ ಭ್ರೂಣ ಹತ್ಯೆ ತಡೆಯಲು ಮತ್ತು ಅವರ ಶಿಕ್ಷಣಕ್ಕಾಗಿ ಯಡಿಯೂರಪ್ಪನವರು ತಂದ ‘ಭಾಗ್ಯಲಕ್ಷ್ಮಿ ಯೋಜನೆ’ ಅತ್ಯಂತ ಯಶಸ್ವಿಯಾಯಿತು. ಕೇಂದ್ರ ಸರ್ಕಾರ ಜಾರಿಗೆ ತಂದ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆ ಯಡಿಯೂರಪ್ಪನವರ ಭಾಗ್ಯಲಕ್ಷ್ಮಿ ಯೋಜನೆಯ ಯಥಾವತ್ ನಕಲು (Carbon Copy) ಆಗಿದೆ ಎಂದು ಅವರು ತಿಳಿಸಿದರು.

”ನಾನು ಒಪ್ಪಿಕೊಳ್ಳುವ ಏಕೈಕ ನಾಯಕ ಯಡಿಯೂರಪ್ಪ ಮಾತ್ರ”
ಯಡಿಯೂರಪ್ಪನವರು ತಕ್ಷಣವೇ, ಚುರುಕಾಗಿ ಅದ್ಭುತ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. “ಇವತ್ತಿಗೂ ನಾನು ಯಾರನ್ನಾದರೂ ಒಬ್ಬ ನಾಯಕ ಎಂದು ಒಪ್ಪಿಕೊಳ್ಳುವುದಾದರೆ ಅದು ಕೇವಲ ಬಿ.ಎಸ್. ಯಡಿಯೂರಪ್ಪನವರನ್ನು ಮಾತ್ರ, ಇನ್ಯಾರನ್ನೂ ನಾನು ನಾಯಕರೆಂದು ಒಪ್ಪುವುದಿಲ್ಲ” ಎಂದು ಆಯನೂರು ಮಂಜುನಾಥ್ ಭಾವುಕರಾಗಿ ನುಡಿದರು.
“ತಮ್ಮ ಹೆಸರಿಗಿಂತ ಜಿಲ್ಲೆ ಅಭಿವೃದ್ಧಿಗೆ ಮಹತ್ವ ನೀಡಿದ ನಾಯಕ ಯಡಿಯೂರಪ್ಪ”
ಯಡಿಯೂರಪ್ಪನವರ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹೈವೇಗಳು, ರೈಲ್ವೆ ಸಂಪರ್ಕಗಳು, ಫ್ಲೈಓವರ್ಗಳು, ಸುಸಜ್ಜಿತ ಆಸ್ಪತ್ರೆಗಳು ಹಾಗೂ ವಿಮಾನ ನಿಲ್ದಾಣ ಬಂದವು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರನ್ನೇ ಇಡಬೇಕು ಎಂದು ಸದನದಲ್ಲಿ ಪ್ರಸ್ತಾಪವಾಗಿ, ಇಡೀ ರಾಙಜ್ಯವೇ ಒಪ್ಪಿಗೆ ಸೂಚಿಸಿದರೂ, ಅವರು ತಮ್ಮ ದೊಡ್ಡ ಗುಣದಿಂದ ಅದನ್ನು ನಿರಾಕರಿಸಿ ಬೇರೆ ಮಹನೀಯರ ಹೆಸರನ್ನು ಸೂಚಿಸಿದರು. ತಾವು ಈ ಹಿಂದೆ ಇದ್ದ ಜೈಲಿನ ಆವರಣವನ್ನು ಬದಲಾಯಿಸಿ, ಅದಕ್ಕೆ 12ನೇ ಶತಮಾನದ ಕ್ರಾಂತಿಕಾರಿ ಅಲ್ಲಮಪ್ರಭುಗಳ ಹೆಸರನ್ನು ಶಾಶ್ವತವಾಗಿ ಇಟ್ಟರು. ಉಡುತಡಿಯಲ್ಲಿ ಅಕ್ಕಮಹಾದೇವಿಯ ಅದ್ಭುತ ವಿಗ್ರಹ ಮತ್ತು ಆ ಸ್ಥಳದ ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ಶರಣರ ಪರಂಪರೆಯನ್ನು ಎತ್ತಿಹಿಡಿದರು. ಮಂಡ್ಯದಲ್ಲಿ ಹುಟ್ಟಿದರೂ ಅವರಿಗೆ ರಾಜಕೀಯ ಜನ್ಮ ನೀಡಿದ ಈ ಶಿವಮೊಗ್ಗ ಜಿಲ್ಲೆಯೇ ಅವರ ನಿಜವಾದ ಕರ್ಮಭೂಮಿಯಾಗಿದೆ.


“ನಾಡಿನ ಅಭಿವೃದ್ಧಿಗೆ ಜೀವ ತುಂಬಿದ ಯಡಿಯೂರಪ್ಪನವರಿಗೆ ಸದಾ ಋಣಿಯಾಗಿರುವ ಕರ್ನಾಟಕ”
ಯಡಿಯೂರಪ್ಪನವರ ವಿರುದ್ಧ ನಡೆದ ರಾಜಕೀಯ ಕುತಂತ್ರ ಮತ್ತು ಬೆನ್ನಿಗೆ ಇರಿಯುವ ಷಡ್ಯಂತ್ರಗಳನ್ನು ತಾವು ಯಾವಾಗಲೂ ತೀವ್ರವಾಗಿ ವಿರೋಧಿಸಿದ್ದನ್ನು ನೆನಪಿಸಿಕೊಂಡ ಆಯನೂರು ಮಂಜುನಾಥ್, ಸಮಾಜಕ್ಕಾಗಿ ಅವಿಶ್ರಾಂತವಾಗಿ ದುಡಿದ ನಮ್ಮ ನಾಯಕರ ಮುಂದಿನ ಜೀವನ ಅತ್ಯಂತ ನೆಮ್ಮದಿಯಿಂದ, ಸುಖವಾಗಿರಬೇಕು ಮತ್ತು ಅವರು ನೂರಾರು ವರ್ಷಗಳ ಕಾಲ ದೀರ್ಘಾಯುಷಿಯಾಗಿ ಶತಾಯುಷಿಯಾಗಿ ಬಾಳಬೇಕು ಎಂದು ಪಂಚಪೀಠಾಧೀಶ್ವರರ ಸಮ್ಮುಖದಲ್ಲಿ ಪ್ರಾರ್ಥಿಸಿದರು. ಯಡಿಯೂರಪ್ಪನವರು ಮಾಡಿದ ಮಹತ್ಕಾರ್ಯಗಳಿಗೆ ಶಿವಮೊಗ್ಗ ಜಿಲ್ಲೆ ಮತ್ತು ಇಡೀ ಕರ್ನಾಟಕ ರಾಜ್ಯ ಸದಾ ಋಣಿಯಾಗಿರುತ್ತದೆ ಎಂದರು.

ಅಭೂತಪೂರ್ವ ಯಶಸ್ಸಿನ ಹಿಂದೆ ಆಯನೂರು ಮಂಜುನಾಥ್ ಅವರ ಭಗೀರಥ ಶ್ರಮಕ್ಕೆ ಶ್ಲಾಘನೆ
ಶಿವಮೊಗ್ಗದಲ್ಲಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ, ಬೃಹತ್ ಕೃತಜ್ಞತಾ ಸಮಾವೇಶ ಹಾಗೂ ಧರ್ಮಜಾಗೃತಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಲು ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಅವರ ನಿರಂತರ ಶ್ರಮವೇ ಪ್ರಮುಖ ಕಾರಣವೆಂದು ಸಂಘಟಕರು ಕಾರ್ಯಕ್ರಮದ ಅಂತ್ಯದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದರು. ಕಳೆದ ಒಂದು ತಿಂಗಳಿನಿಂದ ಹಗಲಿರುಳು ಎನ್ನದೆ, ಪ್ರತಿಯೊಂದು ಸಣ್ಣ ಸಿದ್ಧತೆಯನ್ನೂ ಸ್ವತಃ ನಿಂತು ಗಮನಿಸಿ, ಇಡೀ ಜಿಲ್ಲೆಯ ಜನರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಲು ಅವರು ಭಗೀರಥ ಪ್ರಯತ್ನ ನಡೆಸಿದ್ದರು. ಕೇವಲ ಭಾಷಣದ ಮಟ್ಟಕ್ಕೆ ಸೀಮಿತವಾಗದೆ, ಇಂತಹ ಅಪರೂಪದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಅವರ ಸಂಘಟನಾಶಕ್ತಿಯನ್ನು ವೇದಿಕೆಯಲ್ಲಿದ್ದ ಪರಮಪೂಜ್ಯ ಜಗದ್ಗುರುಗಳು ಶ್ರೀರಕ್ಷೆ ನೀಡಿ ಆಶೀರ್ವದಿಸಿದರು.

ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಆಯನೂರು ಮಂಜುನಾಥ್ ಅವರಿಗೆ ಡಿಟೆಕ್ಟಿವ್ ನ್ಯೂಸ್ 24 ಸುದ್ದಿ ಸಂಸ್ಥೆಯಿಂದ ಧನ್ಯವಾದಗಳು
ನಮ್ಮ ಡಿಟೆಕ್ಟಿವ್ ನ್ಯೂಸ್ 24 ವತಿಯಿಂದ ಅಡ್ಡಪಲ್ಲಕ್ಕಿ ಮಹೋತ್ಸವ, ಕೃತಜ್ಞತಾ ಸಮಾವೇಶ ಹಾಗೂ ಧರ್ಮಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಅವಿರತ ಶ್ರಮ ವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಅವರ ಸಂಘಟನಾ ಚಾತುರ್ಯ ಮತ್ತು ಸಮರ್ಪಣಾಭಾವದಿಂದ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಮೂಡಿಬಂದಿದ್ದು, ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ.









