ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕಾವೇರಿ ನಮ್ಮನ್ನು ವಿಭಜಿಸಬಾರದು, ಒಗ್ಗೂಡಿಸಬೇಕು; ಮೇಕೆದಾಟಿಗೆ ಸಹಕಾರ ನೀಡಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್‌ಗೆ ಬಿ.ವೈ. ವಿಜಯೇಂದ್ರ ಪತ್ರ

On: August 2, 2026 4:29 PM
Follow Us:

ಬೆಂಗಳೂರು, ಆ.2: ಕಾವೇರಿ ಜಲವಿವಾದ ಹಾಗೂ ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕದ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಗೌರವಿಸಿ, ಎರಡೂ ರಾಜ್ಯಗಳ ಜನರ ಹಿತದೃಷ್ಟಿಯಿಂದ ಸಹಕಾರದ ಮನೋಭಾವದಿಂದ ಮುಂದುವರಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಬರೆದಿರುವ ಬಹಿರಂಗ ಪತ್ರದಲ್ಲಿ ಅವರು, ಕರ್ನಾಟಕ ಮತ್ತು ತಮಿಳುನಾಡು ಶತಮಾನಗಳಿಂದ ಇತಿಹಾಸ, ಸಂಸ್ಕೃತಿ, ವ್ಯಾಪಾರ, ಆರ್ಥಿಕತೆ ಹಾಗೂ ಜನ-ಜನರ ಬಾಂಧವ್ಯದಿಂದ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುವ ಸಹೋದರ ರಾಜ್ಯಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಲಕ್ಷಾಂತರ ತಮಿಳರು ನೆಲೆಸಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿ ಸಾವಿರಾರು ಕನ್ನಡಿಗರು ವಾಸಿಸಿ ಅಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪರಸ್ಪರ ಸಹಬಾಳ್ವೆಯು ನಮ್ಮ ಸಂಬಂಧದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನೆರೆಯ ರಾಜ್ಯಗಳ ನಡುವೆ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಪರಸ್ಪರ ಗೌರವ, ಸಂವಾದ ಮತ್ತು ರಾಜನೀತಿಯ ಮೂಲಕ ಬಗೆಹರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರಿನ ತಿರುಳ್ಳುವರ್ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದ ದೀರ್ಘಕಾಲದ ವಿವಾದವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ರಾಜನೀತಿಯ ಮನೋಭಾವದಿಂದ ಬಗೆಹರಿಸಿದ್ದನ್ನು ಸ್ಮರಿಸಿರುವ ಅವರು, ಜನರ ಹಿತಾಸಕ್ತಿಯನ್ನು ಮುಂದಿರಿಸಿದಾಗ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದನ್ನು ಆ ಘಟನೆಯು ಸಾಬೀತುಪಡಿಸಿತ್ತು ಎಂದು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾವೇರಿ ನೀರಿನ ಹಂಚಿಕೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಕಾವೇರಿ ನದಿ ಕರ್ನಾಟಕದ ಕೋಟ್ಯಂತರ ಜನರ ಜೀವನಾಡಿಯಾಗಿದ್ದು, ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಅನೇಕ ನಗರಗಳು ಹಾಗೂ ಗ್ರಾಮಗಳು ಕುಡಿಯುವ ನೀರಿಗಾಗಿ ಈ ನದಿಯನ್ನೇ ಅವಲಂಬಿಸಿವೆ. ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರು ಮಾತ್ರವಲ್ಲದೆ ಲಕ್ಷಾಂತರ ತಮಿಳು ಭಾಷಿಕರೂ ಇದೇ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಅನಿಶ್ಚಿತ ಮಳೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ರೈತರು ಮತ್ತು ನಾಗರಿಕರು ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಅವರ ಕುಡಿಯುವ ನೀರಿನ ಹಕ್ಕು ಹಾಗೂ ಕೃಷಿ ಅಗತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೇಕೆದಾಟು ಯೋಜನೆ ಕುರಿತು ಪ್ರಸ್ತಾಪಿಸಿರುವ ವಿಜಯೇಂದ್ರ ಅವರು, ಈ ಯೋಜನೆಯು ಮುಖ್ಯವಾಗಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿದ್ದು, ತಮಿಳುನಾಡಿನ ನ್ಯಾಯಸಮ್ಮತ ನೀರಿನ ಪಾಲಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಜಾರಿಗೊಳಿಸಬಹುದಾಗಿದೆ. ಆದ್ದರಿಂದ ಈ ಯೋಜನೆಯನ್ನು ವಿರೋಧದ ದೃಷ್ಟಿಯಿಂದ ನೋಡದೆ, ಪರಸ್ಪರ ಸಹಕಾರ ಮತ್ತು ವಿಶ್ವಾಸದ ಮನೋಭಾವದಿಂದ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಈ ಯೋಜನೆಗೆ ತಮಿಳುನಾಡಿನ ಸಹಕಾರ ದೊರೆತರೆ, ಅದು ಕೇವಲ ಒಂದು ಅಭಿವೃದ್ಧಿ ಯೋಜನೆಗೆ ಸಮ್ಮತಿ ನೀಡಿದಂತಾಗುವುದಲ್ಲ; ಎರಡು ರಾಜ್ಯಗಳ ನಡುವಿನ ವಿಶ್ವಾಸ, ಸ್ನೇಹ ಹಾಗೂ ಸಹಕಾರದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ತಮಿಳುನಾಡಿನ ಹಿತಾಸಕ್ತಿಗಳಿಗೂ ಗೌರವ ನೀಡುವ ಸಮತೋಲಿತ ಮತ್ತು ರಾಜನೀತಿಯ ನಿಲುವನ್ನು ತಮಿಳುನಾಡು ಸರ್ಕಾರ ಅನುಸರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ವಿಜಯೇಂದ್ರ, ಎರಡೂ ರಾಜ್ಯಗಳ ಜನರ ನಡುವೆ ಇರುವ ಶತಮಾನಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಇದಾಗಿದೆ ಎಂದು ಹೇಳಿದ್ದಾರೆ.

“ಕಾವೇರಿ ನಮ್ಮನ್ನು ವಿಭಜಿಸುವ ನದಿಯಾಗಬಾರದು; ನಮ್ಮನ್ನು ಒಗ್ಗೂಡಿಸುವ ಜೀವನದಾಯಿನಿಯಾಗಬೇಕು. ಪರಸ್ಪರ ವಿಶ್ವಾಸ, ಸಹಕಾರ ಮತ್ತು ಸೌಹಾರ್ದತೆಯ ಮೂಲಕವೇ ಶಾಶ್ವತ ಪರಿಹಾರ ಸಾಧ್ಯ” ಎಂದು ತಮ್ಮ ಪತ್ರದಲ್ಲಿ ಬಿ.ವೈ. ವಿಜಯೇಂದ್ರ ಆಶಯ ವ್ಯಕ್ತಪಡಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಕಾವೇರಿ ಹಕ್ಕು ರಕ್ಷಣೆಗೆ ಸರ್ವಪಕ್ಷ ಒಗ್ಗಟ್ಟು: ರಾಜ್ಯದ ಹಿತಕ್ಕೆ ರಾಜಿ ಇಲ್ಲ ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮೈಸೂರಿನಲ್ಲಿ ‘ವಿವೇಕ ಸ್ಮಾರಕ’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶ್ವದಲ್ಲಿ ಭಾರತದ ಹೆಮ್ಮೆ ಹೆಚ್ಚಿಸುತ್ತಿರುವ ಯುವಶಕ್ತಿಗೆ ಶ್ಲಾಘನೆ

ಆಗಸ್ಟ್ 10ರಂದು ಶಿವಮೊಗ್ಗದಲ್ಲಿ ‘ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ’ ಘೋಷಣೆಯಡಿ ಜೈಲು ಭರೋ ಚಳುವಳಿ

ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನಕ್ಕೆ ಫಲ; ಶಿವಮೊಗ್ಗ–ಬೆಂಗಳೂರು ಸಂಚಾರಕ್ಕೆ ಹೊಸ ಯುಗ: ₹6,400 ಕೋಟಿ ವೆಚ್ಚದ ಹೆದ್ದಾರಿ ಮುಂದಿನ ಮಾರ್ಚ್‌ಗೆ ಪೂರ್ಣ

ಶಿವಮೊಗ್ಗ–ಮಲೆನಾಡಿನ ಕೃಷಿ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ

​ಮಂಡ್ಯದಲ್ಲಿ ರೈತ ದಂಪತಿ ಆತ್ಮಹತ್ಯೆ ದುರಂತ,!: ​”ಎಸಿ ಕೊಠಡಿ ಬಿಟ್ಟು ಜನರ ಬಳಿ ಬನ್ನಿ”: ರೈತನ ಆತ್ಮಹತ್ಯೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ

Leave a Comment