ಕರ್ನಾಟಕದಲ್ಲಿ PMSMA ಅಡಿಯಲ್ಲಿ 12.28 ಲಕ್ಷಕ್ಕೂ ಅಧಿಕ ಅಪಾಯದ ಗರ್ಭಧಾರಣೆ ಪತ್ತೆ; ಅಗತ್ಯ ವೈದ್ಯಕೀಯ ಆರೈಕೆ – ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಸರ್ಕಾರದ ಮಾಹಿತಿ
ನವದೆಹಲಿ, ಆ. 4: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (PMSMA) ದೇಶದ ಮಾತೃ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಕರ್ನಾಟಕದಲ್ಲಿ ಮಾತ್ರವೇ 12.28 ಲಕ್ಷಕ್ಕೂ ಅಧಿಕ ಅಪಾಯದ (High-Risk) ಗರ್ಭಧಾರಣೆಗಳನ್ನು ಗುರುತಿಸಿ ಅಗತ್ಯ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಚಿಕಿತ್ಸಾ ನೆರವು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು ಲಿಖಿತ ಉತ್ತರ ನೀಡಿದ್ದು, ಯೋಜನೆಯ ಅನುಷ್ಠಾನ, ಸಾಧನೆ ಹಾಗೂ ರಾಜ್ಯವಾರು ಮಾಹಿತಿಯನ್ನು ಸಂಸತ್ತಿಗೆ ಸಲ್ಲಿಸಿದ್ದಾರೆ.

ಸಚಿವರು ನೀಡಿರುವ ಮಾಹಿತಿಯ ಪ್ರಕಾರ, 2016ರಲ್ಲಿ ಆರಂಭವಾದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ದೇಶಾದ್ಯಂತ ಇದುವರೆಗೆ 7.91 ಕೋಟಿಗೂ ಹೆಚ್ಚು ಗರ್ಭಿಣಿಯರು ಉಚಿತವಾಗಿ ತಜ್ಞ ವೈದ್ಯರ ನೇತೃತ್ವದಲ್ಲಿ ಗುಣಮಟ್ಟದ ಪ್ರಸವಪೂರ್ವ ಆರೋಗ್ಯ ತಪಾಸಣೆ ಮತ್ತು ಆರೈಕೆಯನ್ನು ಪಡೆದಿದ್ದಾರೆ. ಇವರಲ್ಲಿ 1.24 ಕೋಟಿಗೂ ಅಧಿಕ ಮಹಿಳೆಯರಲ್ಲಿ ಅಧಿಕ ಅಪಾಯದ ಗರ್ಭಧಾರಣೆಯನ್ನು ಗುರುತಿಸಿ, ತಕ್ಷಣದ ವೈದ್ಯಕೀಯ ಮೇಲ್ವಿಚಾರಣೆ, ವಿಶೇಷ ಚಿಕಿತ್ಸೆ ಮತ್ತು ನಿರಂತರ ಅನುಸರಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕರ್ನಾಟಕದಲ್ಲಿ 35 ಲಕ್ಷಕ್ಕೂ ಅಧಿಕ ಗರ್ಭಿಣಿಯರಿಗೆ ಲಾಭ
ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ 35,13,527 ಗರ್ಭಿಣಿಯರು PMSMA ಯೋಜನೆಯಡಿ ಉಚಿತ ಹಾಗೂ ತಜ್ಞ ವೈದ್ಯರ ಪ್ರಸವಪೂರ್ವ ಆರೈಕೆಯ ಪ್ರಯೋಜನ ಪಡೆದಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಮೂಲಕ ಈ ಸೇವೆ ಒದಗಿಸಲಾಗಿದ್ದು, ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪುವಲ್ಲಿ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ.

12.28 ಲಕ್ಷ ಅಧಿಕ ಅಪಾಯದ ಗರ್ಭಧಾರಣೆಗಳ ಗುರುತು
ಯೋಜನೆಯಡಿ ಕರ್ನಾಟಕದಲ್ಲಿ 12,28,200 ಅಧಿಕ ಅಪಾಯದ ಗರ್ಭಧಾರಣೆಗಳನ್ನು ಗುರುತಿಸಲಾಗಿದೆ. ಈ ಮಹಿಳೆಯರಿಗೆ ವಿಸ್ತೃತ ಇ-ಪಿಎಂಎಸ್ಎಂಎ (e-PMSMA) ವ್ಯವಸ್ಥೆಯಡಿ ವಿಶೇಷ ವೈದ್ಯಕೀಯ ತಪಾಸಣೆ, ನಿರಂತರ ಆರೋಗ್ಯ ಮೇಲ್ವಿಚಾರಣೆ, ಅಗತ್ಯ ಚಿಕಿತ್ಸಾ ಅನುಸರಣೆ ಹಾಗೂ ತಜ್ಞರ ಸಲಹೆಗಳನ್ನು ನೀಡಲಾಗಿದೆ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ರಕ್ಷಣೆಗೆ ಈ ವ್ಯವಸ್ಥೆ ಮಹತ್ವದ ಕೊಡುಗೆ ನೀಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಅನುಷ್ಠಾನ
ಶಿವಮೊಗ್ಗ ಜಿಲ್ಲೆಯಲ್ಲಿಯೂ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಜಿಲ್ಲೆಯಲ್ಲಿ 58,763 ಗರ್ಭಿಣಿಯರು PMSMA ಯೋಜನೆಯಡಿ ಪ್ರಸವಪೂರ್ವ ಆರೈಕೆಯ ಪ್ರಯೋಜನ ಪಡೆದಿದ್ದಾರೆ. ಇವರಲ್ಲಿ 21,112 ಅಧಿಕ ಅಪಾಯದ ಗರ್ಭಧಾರಣೆಗಳನ್ನು ಗುರುತಿಸಿ, ತಕ್ಷಣದ ಚಿಕಿತ್ಸೆ, ವಿಶೇಷ ವೈದ್ಯಕೀಯ ಸಲಹೆ ಹಾಗೂ ನಿರಂತರ ಮೇಲ್ವಿಚಾರಣೆಗೆ ಒಳಪಡಿಸಲಾಗಿದೆ.

ತಾಯಿ ಆರೋಗ್ಯ ಸೂಚ್ಯಂಕಗಳಲ್ಲಿ ಗಣನೀಯ ಸುಧಾರಣೆ
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ, ದೇಶದಲ್ಲಿ ಮಾತೃ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ತಾಯಿಯ ಮರಣ ಪ್ರಮಾಣ (Maternal Mortality Ratio – MMR) ಒಂದು ಲಕ್ಷ ಜೀವಂತ ಜನನಗಳಿಗೆ 130ರಿಂದ 87ಕ್ಕೆ ಇಳಿದಿದೆ. ಇದೇ ವೇಳೆ ಸಾಂಸ್ಥಿಕ ಹೆರಿಗೆಗಳ ಪ್ರಮಾಣ 90.6 ಶೇಕಡಾಕ್ಕೆ ಏರಿಕೆಯಾಗಿದೆ. ಇದು ಕೇಂದ್ರ ಸರ್ಕಾರದ ಮಾತೃ ಹಾಗೂ ಶಿಶು ಆರೋಗ್ಯದ ಮೇಲಿನ ನಿರಂತರ ಕಾಳಜಿ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಯ ಪರಿಣಾಮ ಎಂದು ಸಚಿವಾಲಯ ತಿಳಿಸಿದೆ.

ತಂತ್ರಜ್ಞಾನ ಆಧಾರಿತ ಆರೋಗ್ಯ ಮೇಲ್ವಿಚಾರಣೆ
ಸಂಸದ ಬಿ.ವೈ. ರಾಘವೇಂದ್ರ ಅವರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಅಧಿಕ ಅಪಾಯದ ಗರ್ಭಧಾರಣೆಯ ನಿರ್ವಹಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ವಿಸ್ತೃತ ಇ-ಪಿಎಂಎಸ್ಎಂಎ ವ್ಯವಸ್ಥೆಯಡಿ ಗುರುತಿಸಲಾದ ಪ್ರತಿಯೊಬ್ಬ ಅಧಿಕ ಅಪಾಯದ ಗರ್ಭಿಣಿಯನ್ನು ಹೆರಿಗೆಯ ನಂತರ 45 ದಿನಗಳವರೆಗೆ ಡಿಜಿಟಲ್ ವೇದಿಕೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇದರ ಜೊತೆಗೆ ಸ್ವಯಂಚಾಲಿತ SMS ಎಚ್ಚರಿಕೆ ಸಂದೇಶಗಳು, ಹೆಚ್ಚುವರಿ ಪ್ರಸವಪೂರ್ವ ತಪಾಸಣೆಗಳು, ಮೊದಲ ಉಲ್ಲೇಖ ಘಟಕಗಳಿಗೆ (FRU) ತುರ್ತು ರವಾನೆ, ಆಶಾ ಕಾರ್ಯಕರ್ತೆಯರ ನಿರಂತರ ಸಂಪರ್ಕ, ಸಾರಿಗೆ ನೆರವು ಸೇರಿದಂತೆ ಹಲವು ಸೇವೆಗಳನ್ನು ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮಹಿಳೆಯರಿಗೆ ಒದಗಿಸಲಾಗುತ್ತಿದೆ.

ಯೋಜನೆ ಮತ್ತಷ್ಟು ಬಲಪಡಿಸಿದ ಕೇಂದ್ರ ಸರ್ಕಾರ
ಪಿಎಂಎಸ್ಎಂಎ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹೆಚ್ಚುವರಿ ಚಿಕಿತ್ಸಾ ಅನುಸರಣೆ, ಡಿಜಿಟಲ್ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯ ವಿಸ್ತರಣೆ, ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ, ಮಾಹಿತಿ–ಶಿಕ್ಷಣ–ಸಂವಹನ (IEC) ಕಾರ್ಯಕ್ರಮಗಳು, ನಡವಳಿಕೆ ಬದಲಾವಣೆ ಸಂವಹನ (BCC) ಅಭಿಯಾನಗಳು ಹಾಗೂ ಖಾಸಗಿ ತಜ್ಞ ವೈದ್ಯರು ಮತ್ತು ಸ್ವಯಂಸೇವಕ ವೈದ್ಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮೂಲಕ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, “ಪ್ರತಿಯೊಬ್ಬ ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯವು ಸದೃಢ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣದ ಮೂಲಾಧಾರವಾಗಿದೆ. ನಾನು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ಅಧಿಕ ಅಪಾಯದ ಗರ್ಭಧಾರಣೆಯನ್ನು ಸಕಾಲದಲ್ಲಿ ಗುರುತಿಸಿ, ಅಗತ್ಯ ವೈದ್ಯಕೀಯ ನೆರವು ಒದಗಿಸಿರುವುದು ತಾಯಂದಿರ ಜೀವ ರಕ್ಷಣೆಯಲ್ಲಿ ಮಹತ್ವದ ಸಾಧನೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾವಿರಾರು ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದಿರುವುದು ಸಂತಸದ ವಿಷಯ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಮೂಲಕ ಸುರಕ್ಷಿತ ತಾಯ್ತನವನ್ನು ಖಚಿತಪಡಿಸುವ ದಿಸೆಯಲ್ಲಿ ನಾವು ಮುಂದೆಯೂ ಬದ್ಧತೆಯಿಂದ ಕೆಲಸ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.






