ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸಂಪತ್ತಿಗಿಂತ ಸಂಸ್ಕಾರವೇ ಬದುಕಿನ ನಿಜವಾದ ಶ್ರೀಮಂತಿಕೆ; ಸತ್ಕಾರ್ಯಗಳಿಂದ ಬದುಕು ಸಾರ್ಥಕ: ಶ್ರೀ ರಂಭಾಪುರಿ ಜಗದ್ಗುರುಗಳು

On: August 23, 2026 9:51 PM
Follow Us:

ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು), ಆ.23: ಯಶಸ್ವಿ ಮನುಷ್ಯನಾಗುವುದಕ್ಕಿಂತ ಮೌಲ್ಯಯುತ ವ್ಯಕ್ತಿಯಾಗಿ ಬದುಕುವುದು ಶ್ರೇಯಸ್ಕರ. ಬದುಕನ್ನು ಸಾರ್ಥಕಗೊಳಿಸಲು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಭಾನುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದ ಸಭಾಂಗಣದಲ್ಲಿ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರ 58ನೇ ಜನ್ಮದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ಮನುಷ್ಯನ ಬದುಕಿನ ನಿಜವಾದ ಸಾರ್ಥಕತೆ ಸಂಪತ್ತು, ಅಂತಸ್ತು ಅಥವಾ ಅಧಿಕಾರದಲ್ಲಿ ಅಡಗಿಲ್ಲ, ಉತ್ತಮ ಸಂಸ್ಕಾರ, ಸದ್ವಿಚಾರ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ನೆಲೆಸಿದೆ ಎಂದು ತಿಳಿಸಿದರು.

ಭಗವಂತನು ಮನುಷ್ಯನಿಗೆ ಒಳ್ಳೆಯ ಅಥವಾ ಕೆಟ್ಟ ಜೀವನವನ್ನು ನೀಡುವುದಿಲ್ಲ. ಬದಲಾಗಿ ಅತ್ಯಮೂಲ್ಯವಾದ ಜೀವನವನ್ನು ನೀಡುತ್ತಾನೆ. ಆ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೋ ಅಥವಾ ದುರ್ಬಳಕೆ ಮಾಡಿಕೊಳ್ಳಬೇಕೋ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿರುವ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಒಳ್ಳೆಯ ನಡವಳಿಕೆಯಿಂದ ತಕ್ಷಣದ ಲಾಭ ಸಿಗದೇ ಇರಬಹುದು. ಆದರೆ ಉತ್ತಮ ಗುಣ, ಸೌಜನ್ಯ ಮತ್ತು ಸದಾಚಾರವು ಸಾವಿರಾರು ಹೃದಯಗಳನ್ನು ಗೆಲ್ಲುವ ಶಕ್ತಿಯನ್ನು ಹೊಂದಿವೆ. ಸಂಪತ್ತು ಅಂತಸ್ತನ್ನು ತಂದುಕೊಡಬಹುದು, ವಿದ್ಯೆ ಜ್ಞಾನ ಮತ್ತು ಅರಿವನ್ನು ನೀಡಬಹುದು. ಆದರೆ ಸಮಾಜದಲ್ಲಿ ನಿಜವಾದ ಗೌರವವನ್ನು ತಂದುಕೊಡುವುದು ವ್ಯಕ್ತಿಯ ನಡವಳಿಕೆ ಮತ್ತು ವ್ಯಕ್ತಿತ್ವ ಎಂಬುದನ್ನು ಯಾರೂ ಮರೆಯಬಾರದು ಎಂದು ಜಗದ್ಗುರುಗಳು ತಿಳಿಸಿದರು.

ಸಂಸ್ಕಾರ ಮತ್ತು ಸದ್ವಿಚಾರಗಳ ಮೂಲಕ ಜಗತ್ತನ್ನೇ ಗೆಲ್ಲಬಹುದಾಗಿದೆ. ಆದರೆ ಅಹಂಕಾರ ಬೆಳೆಯುತ್ತಿದ್ದರೆ ಮನುಷ್ಯನು ಗಳಿಸಿದ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಕಾಯಕದಲ್ಲಿ ತೊಡಗಿಸಿಕೊಂಡು, ಕಲಾ ಚೈತನ್ಯವನ್ನು ಬೆಳೆಸಿಕೊಂಡು ಮತ್ತು ಸೃಜನಶೀಲ ಬದುಕನ್ನು ನಡೆಸಿದಾಗ ಜೀವನ ಉಜ್ವಲಗೊಳ್ಳುತ್ತದೆ ಎಂಬ ಸಂದೇಶವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ನೀಡಿದ್ದಾರೆ ಎಂದು ಅವರು ಸ್ಮರಿಸಿದರು.

ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಶ್ರಮಿಸುತ್ತಿರುವವರು. ಪರಿಶುದ್ಧ ಚಾರಿತ್ರ್ಯ, ಸಂಸ್ಕೃತಿ ಸಂರಕ್ಷಣೆ ಹಾಗೂ ಧಾರ್ಮಿಕ ಪರಂಪರೆಯ ಪಾಲನೆಯ ಮೂಲಕ ಅವರ ಬದುಕು ಮಾದರಿಯಾಗಿ ರೂಪುಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು, ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರು, ಪೂರ್ವಜನ್ಮದ ಪುಣ್ಯದ ಫಲದಿಂದ ಇಂದು ಮೂಲ ಶ್ರೀ ರಂಭಾಪುರಿ ಪೀಠದಲ್ಲಿ ತಮ್ಮ 58ನೇ ಜನ್ಮದಿನೋತ್ಸವ ಸಮಾರಂಭ ನಡೆಯುತ್ತಿರುವುದು ತಮ್ಮ ಪಾಲಿನ ಮಹತ್ತರ ಸೌಭಾಗ್ಯವಾಗಿದೆ ಎಂದು ಹೇಳಿದರು.

ಈ ಸಂಭ್ರಮವು ಕೇವಲ ತಮ್ಮ ವೈಯಕ್ತಿಕ ಸಂತೋಷವಲ್ಲ, ಎಲ್ಲ ಭಕ್ತವೃಂದದ ಪ್ರೀತಿ ಮತ್ತು ಆಶೀರ್ವಾದದ ಪ್ರತೀಕವಾಗಿದೆ. ಹರಸುವ ಹಿರಿಯರು, ಆಶೀರ್ವದಿಸುವ ಆತ್ಮೀಯರು ಮತ್ತು ಪ್ರೀತಿಯ ಸ್ನೇಹಿತರು ಜೀವನದಲ್ಲಿ ಇದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ. ಜೀವನದಲ್ಲಿ ರಾಜನಾಗಬೇಕೆಂಬ ಅವಶ್ಯಕತೆಯಿಲ್ಲ; ಉತ್ತಮ ವ್ಯಕ್ತಿತ್ವವನ್ನು ಹೊಂದಿದರೆ ಸಾಕು ಎಂದು ಅವರು ಅಭಿಪ್ರಾಯಪಟ್ಟರು.

ವ್ಯಕ್ತಿತ್ವವು ಕಾಲಕ್ಕೆ ತಕ್ಕಂತೆ ಬದಲಾಗುವ ಕ್ಷಣಿಕ ಗುಣವಾಗಬಾರದು. ಅದು ಜೀವನದುದ್ದಕ್ಕೂ ಉಳಿಯುವ ಮೌಲ್ಯವಾಗಬೇಕು. ಹಣದ ಹಿಂದೆ ನಿರಂತರವಾಗಿ ಓಡಿದರೆ ಮನಸ್ಸಿನ ಶಾಂತಿ ದೂರವಾಗುತ್ತದೆ. ಆದರೆ ಉತ್ತಮ ಗುಣಗಳೊಂದಿಗೆ ಬದುಕಿದರೆ ಸಂಬಂಧಗಳು ಗಟ್ಟಿಯಾಗುತ್ತವೆ, ಪ್ರೀತಿ ಮತ್ತು ವಿಶ್ವಾಸ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.

ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದ ಬಲದಿಂದ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡುವ ಛಲ ಮತ್ತು ಧೈರ್ಯ ದೊರಕಿದೆ. ಗುರು ಕೃಪೆ ಮತ್ತು ಕಾರುಣ್ಯದಿಂದ ಬದುಕು ಉಜ್ವಲಗೊಳ್ಳುತ್ತದೆ ಎಂಬ ನಂಬಿಕೆ ತಮ್ಮಲ್ಲಿದೆ ಎಂದು ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಕಾರ್ಯಕ್ರಮದಲ್ಲಿ ಅಷ್ಟಿಮಠದ ವಿಶ್ವಚೈತನ್ಯ ಶಿವಾಚಾರ್ಯ ಸ್ವಾಮೀಜಿಯವರು, ಕರ್ಜಗಿ ಮುರುಗೇಂದ್ರ ಸ್ವಾಮೀಜಿ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಪಾತ್ರಿ ಮಠದ ಕಾಶೀನಾಥ ಶಿವಾಚಾರ್ಯ ಸ್ವಾಮೀಜಿಯವರು ಸ್ವಾಗತಿಸಿದರು. ಹುಡುಗಿ ಸಂಸ್ಥಾನ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಕೊನೆಯ ಹಂತದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಭಕ್ತವೃಂದವು ಅಂಬಾಜೋಗಾಯಿ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಯವರನ್ನು ಶಾಲು, ಫಲಪುಷ್ಪ ನೀಡಿ ಗೌರವಿಸಿತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Leave a Comment