ತೋಟದ ಮನೆಯಲ್ಲಿ ಅಕ್ರಮ ಸ್ಕ್ಯಾನಿಂಗ್ — ಮೂವರು ವಶ, ಇಬ್ಬರು ಗರ್ಭಿಣಿಯರ ರಕ್ಷಣೆ
ಮೈಸೂರು: ಮೈಸೂರು ತಾಲ್ಲೂಕಿನ ಹುನಗನಹಳ್ಳಿಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡಿ ಗರ್ಭದಲ್ಲೇ ಶಿಶು ಹತ್ಯೆ ಮಾಡುತ್ತಿದ್ದ ಕ್ರೂರ ಗ್ಯಾಂಗ್ ಪತ್ತೆಯಾಗಿದೆ. ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ನಡೆಸುತ್ತಿದ್ದ ಈ ಗ್ಯಾಂಗ್ ಗ್ರಾಮೀಣ ಭಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ದುಷ್ಕೃತ್ಯ ನಡೆಸುತ್ತಿತ್ತು.
ತೋಟದ ಮನೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಿಕೊಂಡು ಭ್ರೂಣದ ಲಿಂಗ ಪತ್ತೆ ಮಾಡುತ್ತಿದ್ದರೆಂದು ಖಚಿತ ಮಾಹಿತಿ ಆಧಾರದಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಇಬ್ಬರು ಗರ್ಭಿಣಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೂವರು ಆರೋಪಿಗಳನ್ನು ಅವರಲ್ಲಿ ಒಬ್ಬಳು ಮಹಿಳೆಯೂ ಸೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ ನೇತೃತ್ವದಲ್ಲಿ ಮಂಡ್ಯ ಡಿಹೆಚ್ಒ ಮೋಹನ್ ಮತ್ತು ಮೈಸೂರು ಡಿಹೆಚ್ಒ ಕುಮಾರಸ್ವಾಮಿ ತಂಡ ದಾಳಿ ನಡೆಸಿದ್ದು, ಸ್ಥಳದಿಂದ ಮೂರು ಲಕ್ಷಕ್ಕೂ ಹೆಚ್ಚು ನಗದು, ಭ್ರೂಣ ಹತ್ಯೆಗೆ ಬಳಸುತ್ತಿದ್ದ ಕಿಟ್ಗಳು ಮತ್ತು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಭ್ರೂಣದ ಲಿಂಗ ಪತ್ತೆಗೆ 25 ಸಾವಿರ ರೂಪಾಯಿ ಮೊತ್ತ ನಿಗದಿಪಡಿಸಲಾಗಿತ್ತು. ಪತ್ತೆಯಾದ ವಸ್ತುಗಳ ಆಧಾರದಲ್ಲಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಗ್ಯಾಂಗ್ ಹಿನ್ನಲೆ ಹಾಗೂ ಸಂಪರ್ಕ ವಲಯ ಕುರಿತು ಸುಳಿವು ಹುಡುಕುತ್ತಿದ್ದಾರೆ.
ಈ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದ್ದು, ಮಹಿಳಾ ಮತ್ತು ಶಿಶು ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳು ಕಾನೂನು ಕ್ರಮ ಕಠಿಣಗೊಳಿಸುವಂತೆ ಆಗ್ರಹಿಸಿವೆ.

ಹೆಣ್ಣು ಭ್ರೂಣ ಹತ್ಯೆ ಎಂಬ ಕ್ರೂರ ಬೆಳವಣಿಗೆ ಸಮಾಜದ ಮಾನವೀಯತೆಯ ಮೇಲೆ ಕಲೆಗಟ್ಟಿದ ಕಲೆ ಎಂಬಂತೆ ಪರಿಣಮಿಸಿದೆ. ತಂತ್ರಜ್ಞಾನದ ದುರುಪಯೋಗದಿಂದ ಹೆಣ್ಣು ಶಿಶು ಹುಟ್ಟುವ ಮುನ್ನವೇ ಜೀವ ಕಸಿಯುವ ಈ ಪಾತಕಿ ಕೃತ್ಯಗಳು ಮಹಿಳಾ ಅಸ್ತಿತ್ವವನ್ನೇ ಪ್ರಶ್ನಿಸುವ ಮಟ್ಟಕ್ಕೆ ಹೋಗಿವೆ. ಪೋಷಕರ ಲಿಂಗಾಭಿಮಾನ, ಸಾಮಾಜಿಕ ಒತ್ತಡ, ಮತ್ತು ಅಜ್ಞಾನ ಇವುಗಳೇ ಈ ಕ್ರೌರ್ಯದ ಮೂಲ ಕಾರಣಗಳು. ಇಂತಹ ಘಟನೆಗಳು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಮಾನವ ಸಂಸ್ಕೃತಿಯ ಪತನದ ಸಂಕೇತವೂ ಆಗಿವೆ. ಹೆಣ್ಣು ಶಿಶುಗಳ ಜೀವ ರಕ್ಷಣೆಯು ಕೇವಲ ಕಾನೂನು ಬದ್ಧ ಹೊಣೆಗಾರಿಕೆಯಲ್ಲ, ಅದು ಪ್ರತಿಯೊಬ್ಬನ ಮಾನವೀಯ ಕರ್ತವ್ಯವೂ ಆಗಬೇಕು.






