ಬೆಂಗಳೂರು: ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ) ಸಂಘದ ಆಡಳಿತ ಕ್ರಮಗಳು ಬೈಲಾ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗಕ್ಕೆ ಒಳಪಟ್ಟಿವೆ ಎಂಬ ಗಂಭೀರ ಆರೋಪ ಪತ್ರಕರ್ತ ಬಂಗ್ಲೆ ಮಲ್ಲಿಕಾರ್ಜುನ್ ಅವರಿಂದ ಹೊರಬಿದ್ದಿದೆ. ಅವರು ನೀಡಿರುವ ದೂರು ಮತ್ತು ದಾಖಲೆಗಳ ಪ್ರಕಾರ, ಸಂಘದ ಪದಾಧಿಕಾರಿಗಳ ಚಟುವಟಿಕೆಗಳು “ಬೇಲಿ ಎದ್ದು ಹೊಲ ಮೇಯುತ್ತಿರುವಂತಾಗಿದೆ” ಎಂಬ ಗಾದೆಗೆ ತಕ್ಕಂತೆ ಪರಿಣಮಿಸಿರುವುದಾಗಿ ಅವರು ಖಂಡಿಸಿದ್ದಾರೆ. 1956ರಲ್ಲಿ ಮೈಸೂರು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ “ಸ್ಟೇಟ್ ಜರ್ನಲಿಸ್ಟ್ ಅಸೋಸಿಯೇಷನ್, ಬೆಂಗಳೂರು” ಎಂಬ ಹೆಸರಿನಲ್ಲಿ ಕಾರ್ಮಿಕ ಸಂಘವಾಗಿ ನೊಂದಾಯಿತ KUWJ, 1966ರಲ್ಲಿ ಬೈಲಾ ತಿದ್ದುಪಡಿ ಮೂಲಕ ಇಂದಿನ ಹೆಸರಿಗೆ ಬದಲಾಗಿತ್ತೆಂದರೂ, ಕಾರ್ಮಿಕರ ಸಂಘಟನೆ ಎನ್ನುವ ಮೌಲ್ಯ ಮತ್ತು ಉದ್ದೇಶಗಳಿಂದ ದೂರವಾಗಿ ಮಾಲೀಕರ ಹಾಗೂ ವ್ಯವಸ್ಥಾಪಕರ ಪ್ರಭಾವಕ್ಕೆ ಒಳಗಾಗಿದೆ ಎಂದು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.

ಬೈಲಾ ಮೀರಿ ಅಧಿಕಾರ — ಸಂಘದ ಪಾರದರ್ಶಕತೆಗೆ ಗಂಭೀರ ಪ್ರಶ್ನೆಗಳು
ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಅವಧಿಯತ್ತ ನಡೆಯುತ್ತಿರುವ ಕ್ರಮ ಬೈಲಾ ನಿಯಮದ ನೇರ ಉಲ್ಲಂಘನೆ ಎಂದು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ. ಬೈಲಾ ಪ್ರಕಾರ, ಒಬ್ಬರಿಗೆ ಎರಡು ಬಾರಿ ಅವಧಿಗಿಂತ ಹೆಚ್ಚು ಅಧಿಕಾರದಲ್ಲಿರಲು ಅವಕಾಶವಿಲ್ಲ, ಆದಾಗ್ಯೂ ಶಿವಾನಂದ ತಗಡೂರು ಮೂರನೇ ಅವಧಿಗೆ ಅವಿರೋಧವಾಗಿಯೇ ಆಯ್ಕೆಯಾಗಿರುವುದು ಸಂಘದ ಒಳರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದ ಹೊಸದಲ್ಲ; 2018ರಲ್ಲಿಯೂ ಇದೇ ಪ್ರಶ್ನೆ ಎದ್ದು ಬಂದಿದ್ದು, ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ದಾಖಲೆಗಳೂ ಲಭ್ಯವಿವೆ. ವಾಸುದೇವ ಹಳ್ಳ ಅವರು ಸಲ್ಲಿಸಿದ ದೂರುದಲ್ಲಿ, KUWJ ಬೈಲಾ ನಿಯಮ 22(ಡಿ) ಉಲ್ಲಂಘನೆಯ ಮೂಲಕ ಶಿವಾನಂದ ತಗಡೂರು ಮೂರನೇ ಅವಧಿಗೆ ಅಧಿಕಾರದಲ್ಲಿದ್ದಾರೆ ಎಂದು ಹೇಳಿದ್ದು, ತಗಡೂರು ಅವರ ವಿವರಣೆಯಲ್ಲಿ “ಒಂದು ಅವಧಿ ಗ್ರಾಮಾಂತರ ಘಟಕಕ್ಕೆ ಸೇರಿದ್ದರಿಂದ ಗಣನೆಗೆ ಬರದು” ಎಂಬ ವಾದವನ್ನು ಮುಂದಿರಿಸಲಾಗಿದೆ. ಆದರೆ ದೂರುದಾರರು, “ಉಪಾಧ್ಯಕ್ಷ ಹುದ್ದೆಯಿಂದಲೇ ಅಧ್ಯಕ್ಷ ಸ್ಥಾನಕ್ಕೆ ಬಂದಿರುವಾಗ ಹಿಂದಿನ ಅವಧಿಯನ್ನು ‘ಗಣನೆಗೆ ಬರಬಾರದು’ ಎನ್ನುವುದು ನ್ಯಾಯಸಮ್ಮತವಲ್ಲ,” ಎಂದು ಪ್ರಶ್ನಿಸಿದ್ದಾರೆ. ಇಂತಹ ವಿವಾದಗಳಿಂದ ಸಂಘದ ನೈತಿಕತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಗಟ್ಟಿ ಆಗುತ್ತಿವೆ.

ವಿಳಾಸವಿಲ್ಲದ ಚುನಾವಣಾ ಪಟ್ಟಿ — ಪಾರದರ್ಶಕತೆಗೆ ಪ್ರಶ್ನಾರ್ಥಕ ಚಿಹ್ನೆ,.?
ಇನ್ನೊಂದೆಡೆ KUWJ ಚುನಾವಣೆಗೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲೂ ಪಾರದರ್ಶಕತೆ ಇರುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಪತ್ರಕರ್ತರ ಸಂಘವನ್ನು ಮುನ್ನಡೆಸುವ ಅಧ್ಯಕ್ಷರ ಹೆಸರಿನ ಬಳಿ ವಿಳಾಸ ದಾಖಲಿಸದೇ ಇರುವುದರಿಂದ, ಯಾವುದೇ ಚುನಾವಣೆಯ ಮೂಲಭೂತ ನಿಯಮಗಳಿಗೂ ಇದು ವಿರುದ್ಧವಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ಈ ಕುರಿತು 2022ರಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಾನೂನುಬದ್ಧ ದಾಖಲೆಗಳಿದ್ದರೂ ಸರಳ ಹಾಗೂ ಕಡ್ಡಾಯ ಮಾಹಿತಿಯನ್ನೇ ನೀಡದಿರುವುದು ತನಿಖೆಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸದಸ್ಯತ್ವದ ಗೊಂದಲ — ಕಾರ್ಮಿಕರ ಹಕ್ಕುಗಳೇ ಕುಗ್ಗುವ ಪರಿಸ್ಥಿತಿ
ಬೈಲಾ ನಿಯಮ ಪ್ರಕಾರ, ಸಂಘದ ಸದಸ್ಯತ್ವಕ್ಕೆ “ಸೇವೆಯಲ್ಲಿರುವ ವರದಿಗಾರರು / ಕಾರ್ಮಿಕರು” ಮಾತ್ರ ಅರ್ಹರಾಗಿದ್ದರೂ, ಇಂದಿನKUWJ ನಲ್ಲಿ ಮಾಲೀಕರು, ವ್ಯವಸ್ಥಾಪಕರು ಹಾಗೂ ಪತ್ರಿಕಾ ಸಂಸ್ಥೆಯ ನಿರ್ವಹಣಾಧಿಕಾರಿಗಳು ಸದಸ್ಯರಾಗಿದ್ದು ಹುದ್ದೆಗಳನ್ನೂ ಹಿಡಿದಿದ್ದಾರೆ ಎಂಬುದರ ಬಗ್ಗೆ ಮಲ್ಲಿಕಾರ್ಜುನ್ ಗಂಭೀರ ಆಕ್ಷೇಪಿಸಿದ್ದಾರೆ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಬೇಕಾದ ಸಂಘವೇ, ಕಾರ್ಮಿಕರ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವವರ ಕೈಯಲ್ಲಿ ಸಿಲುಕಿರುವುದು, ಕಾರ್ಯನಿರತ ಪತ್ರಕರ್ತರ ಹಕ್ಕುಗಳನ್ನೇ ಕುಂದಿಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ. ಇದರಿಂದ ಪೇಸ್ಲಿಪ್, ವಿಮೆ, ಕಾರ್ಮಿಕ ಕಾನೂನುಗಳ ಅನುಷ್ಠಾನ, ಉಚಿತ ಬಸ್ ಪಾಸ್ ಮುಂತಾದ ಹಕ್ಕುಗಳು ಪತ್ರಕರ್ತರಿಗೆ ದೊರೆಯುವುದೇ ಅನುಮಾನವಾಗುತ್ತಿದೆ. “ಒಂದೆಡೆ ಕಾರ್ಮಿಕರನ್ನು ಪ್ರತಿನಿಧಿಸುವ ಸಂಘ, ಮತ್ತೊಂದೆಡೆ ಸಂಸ್ಥೆಗಳ ಮಾಲೀಕರು—ಇಬ್ಬರೂ ಒಂದೇ ಸಂಘದಲ್ಲಿ ಅಧಿಕಾರಕ್ಕೆ ಹೋರಾಡುವ ಪರಿಸ್ಥಿತಿ ಉಂಟಾದಾಗ ಕಾರ್ಮಿಕರ ಹಕ್ಕಿಗೆ ಲಭಿಸಬೇಕಾದ ನ್ಯಾಯ ದೂರದ ಕನಸು” ಎಂದು ಹಲವು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

9000 ಪತ್ರಕರ್ತರು, ಹಕ್ಕು ಶೂನ್ಯ — ಸೌಲಭ್ಯಗಳ ಅನುಷ್ಠಾನದಲ್ಲಿ ದ್ವಂದ್ವ ನೀತಿ?
KUWJ ಚುನಾವಣಾ ಅಧಿಕಾರಿಗಳ ಟಿಪ್ಪಣಿಗಳ ಪ್ರಕಾರ, ಸಂಘದಲ್ಲಿ ರಾಜ್ಯದಾದ್ಯಂತ 9000ಕ್ಕೂ ಹೆಚ್ಚು ಪ್ರತಿನಿಧಿ ಪತ್ರಕರ್ತರು ಇದ್ದರೂ “ಶ್ರಮ ಪತ್ರಕರ್ತರದು, ಅದರ ಫಲಪಾಲು ಮತ್ತೊಬ್ಬರದು” ಎನ್ನುವ ಅಸಮಾಧಾನ ಸದಸ್ಯರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಮಹಿಳೆಯರು ಮತ್ತು ಮಂಗಳಮುಖಿಯರು ಕೇವಲ ಆಧಾರ್ ಕಾರ್ಡ್ ತೋರಿಸಿದರೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣಕ್ಕೆ ಅರ್ಹರಾಗಿರುವಾಗ, ಕಾರ್ಯನಿರತ ಪತ್ರಕರ್ತರು — ಆರ್.ಎನ್.ಐ ನೋಂದಣಿ, ಪ್ರಮಾಣಿತ ದಾಖಲೆಗಳು ಇದ್ದರೂ — ಉಚಿತ ಬಸ್ ಪಾಸ್ ಪಡೆಯಲು ಸಾಧ್ಯವಾಗದಿರುವುದು ವಿಚಿತ್ರ ಸ್ಥಿತಿಯಾಗಿದೆ. ಪತ್ರಕರ್ತರಿಗೆ ಮಾತ್ರ ‘’ಕಠಿಣ ಮಾನದಂಡ’’ ಅನ್ವಯ ಮಾಡುತ್ತಿರುವ ನಿಲುವು ಎಂದು ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.

ಕಾನೂನು ಹೋರಾಟದ ಘೋಷಣೆ — ‘ಕೊಳೆತ ಮನಸ್ಸಿಗೆ ಬಲಿಯಾಗಬಾರದು: ಬಂಗ್ಲೆ ಮಲ್ಲಿಕಾರ್ಜುನ್
“2018ರಿಂದ KUWJ ಹಣಕಾಸು ಮತ್ತು ಬೈಲಾ ವಿಚಾರಗಳನ್ನು ನಾನು ಕಾನೂನುಬದ್ಧವಾಗಿ ಪ್ರಶ್ನಿಸುತ್ತಿದ್ದೇನೆ. ದುರುಪಯೋಗದ ಹಣ ಮರುಪಡೆಯುವುದರ ಮೂಲಕ ಅದರ ಪಾಲು ಪತ್ರಕರ್ತರಿಗೆ ಮರಳಬೇಕು ಇದು ನನ್ನ ನಿಲುವು,” ಎಂದು ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ. “ಮೂರನೇ ಅವಧಿಗೆ ಅಧಿಕಾರ ಪಡೆದಿದ್ದರೆ ಅಥವಾ ಸದಸ್ಯತ್ವಕ್ಕೆ ಅರ್ಹರಲ್ಲದವರು ಚುನಾವಣೆಗೆ ನಿಂತಿದ್ದರೆ, ಬೈಲಾ ಉಲ್ಲಂಘನೆ ಆಧಾರದ ಮೇಲೆ ಅವರ ಆಯ್ಕೆ ರದ್ದುಪಡಿಸಲು ಕಾನೂನು ಹೋರಾಟ ಮುಂದುವರಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ತಮ್ಮ ಹೋರಾಟದ ನಿಲುವನ್ನು ವ್ಯಕ್ತಪಡಿಸುತ್ತಾ, ಅವರು ಬರೆದಿರುವ ಸಾಲುಗಳು ಹೋರಾಟದ ಘೋಷಣೆಯಂತಿವೆ — “ಸ್ಮಶಾನ ಸುಗಂಧ ಕೊಡುತ್ತದೆ ಹೂಗಳಿಂದ; ಆದರೆ ಸಮಾಜ ದುರ್ವಾಸನೆ ಕೊಡುತ್ತದೆ ಕೊಳೆತ ಮನಸ್ಸಿನಿಂದ. ನಾವಾದರೂ, ನೀವಾದರೂ ಆ ಕೊಳೆತ ಮನಸ್ಸಿಗೆ ಬಲಿಯಾಗಬಾರದು.” ಪತ್ರಕರ್ತರ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಹೋರಾಟ ರಾಜ್ಯ ಮಟ್ಟದಲ್ಲಿ ಹೊಸ ಚಳವಳಿಗೆ ನಾಂದಿ ಹಾಡುವ ಸಾಧ್ಯತೆ ಉಂಟಾಗಿದ್ದು, ನೈಜ ಪತ್ರಕರ್ತರಿಗೆ ಎಲ್ಲಾ ಸೌಲಭ್ಯಗಳು ದೊರಕಲಿ, ಕೆಲವರ ಹಿಡಿತ ಮತ್ತು ಏಕಿ ಅಧಿಪತ್ಯ ಕೊನೆಗೊಳ್ಳಲಿ ಎಂಬುದು ಪತ್ರಕರ್ತ ಸಮುದಾಯದ ಆಶಯವಾಗಿದೆ.









