ದಾವಣಗೆರೆ, ನವೆಂಬರ್ 12: ದಾವಣಗೆರೆ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ತೆಲಿಗಿ ಗ್ರಾಮದ ಪ್ರಸಿದ್ಧ ಸಾಹಿತಿ ಕೆ.ಎಸ್. ವೀರಭದ್ರಪ್ಪ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ. ಈ ಆಯ್ಕೆಯೊಂದಿಗೆ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಉತ್ಸಾಹ ಮತ್ತು ದಿಕ್ಕು ದೊರೆತಿದೆ ಎಂದು ಸಾಹಿತ್ಯ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
ಸಭೆಯಲ್ಲಿ ಚುಟುಕು ಸಾಹಿತ್ಯದ ಪ್ರಸ್ತುತ ಸ್ಥಿತಿ ಮತ್ತು ಅದರ ಸಾಮಾಜಿಕ ಪ್ರಭಾವದ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷ ವೀರಭದ್ರಪ್ಪ ತೆಲಿಗಿ ಮಾತನಾಡಿ, “ಚುಟುಕು ಸಾಹಿತ್ಯವು ಕನ್ನಡ ಭಾಷೆಯ ಸೌಂದರ್ಯವನ್ನು ಸಣ್ಣ ಪದಗಳಲ್ಲಿ ಪ್ರಬಲವಾಗಿ ವ್ಯಕ್ತಪಡಿಸುವ ಶಕ್ತಿ ಹೊಂದಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು ನಮ್ಮ ಮುಖ್ಯ ಗುರಿ,” ಎಂದರು.
ಇದೇ ವೇಳೆ, ಹೊನ್ನಾಳಿಯ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಚುಟುಕು ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಧ್ಯಕ್ಷರ ಸಂದೇಶ
ಹೊನ್ನಾಳಿ ತಾಲ್ಲೂಕಿನ ಚುಟುಕು ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷರಾದ ಹೆಚ್. ನಾರಾಯಣಸ್ವಾಮಿ (ಹಿರೇಗೋಣಿಗೆರೆ) ಮಾತನಾಡಿ, “ಚುಟುಕು ಸಾಹಿತ್ಯವು ಅಲ್ಪ ಪದಗಳಲ್ಲಿ ಆಳವಾದ ಅರ್ಥ ಸಾರುವ ಕಲೆ. ಇದು ನಮ್ಮ ಸಮಾಜದ ಚಿಂತನೆಗೆ ಕನ್ನಡಿ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಯುವ ಕವಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಚುಟುಕು ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ,” ಎಂದು ಹೇಳಿದರು.

ನ್ಯಾಮತಿ ತಾಲ್ಲೂಕಿನ ಅಧ್ಯಕ್ಷರಾದ ಕವಿರಾಜ್ (ಮಲ್ಲಿಗೆನಹಳ್ಳಿ) ತಮ್ಮ ಸಂದೇಶದಲ್ಲಿ, “ಚುಟುಕು ಕವಿತೆ ಕನ್ನಡ ಸಾಹಿತ್ಯದ ಹೃದಯದ ನಾಡಿ. ಈ ಪರಿಷತ್ ವೇದಿಕೆಯಿಂದ ಗ್ರಾಮಾಂತರದ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಧ್ಯೇಯ. ಚುಟುಕು ಸಾಹಿತ್ಯದ ಮೂಲಕ ಸಮಾಜದಲ್ಲಿ ನೈತಿಕತೆ, ಮಾನವೀಯತೆ ಮತ್ತು ಭಾಷಾ ಪ್ರೇಮವನ್ನು ವಿಸ್ತರಿಸುತ್ತೇವೆ,” ಎಂದು ಅಭಿಪ್ರಾಯಪಟ್ಟರು.

ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕವಿಗಳ ಅಭಿವ್ಯಕ್ತಿಗೆ ಸಕಾಲಿಕ ವೇದಿಕೆ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ, ಹಳ್ಳಿಗಳಲ್ಲಿ ಚುಟುಕು ಕವನ ಸ್ಪರ್ಧೆಗಳು, ಕಾವ್ಯ ಕಾರ್ಯಾಗಾರಗಳು ಹಾಗೂ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಟ್ಟದ ಕವಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಕನ್ನಡ ಚುಟುಕು ಸಾಹಿತ್ಯದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.
ಈ ಸಂಧರ್ಭದಲ್ಲಿ ಜಿಲ್ಲಾ ಪರಿಷತ್ತಿನ ಕೋಶಾಧಿಕಾರಿ ಎಂ. ಬಸವರಾಜ್, ಹಿರಿಯ ಸಾಹಿತಿಗಳಾದ ಯು.ಎನ್. ಸಂಗನಾಳಮಠ, ಡಾ.ನಾ. ಕೊಟ್ರೇಶ್ ಉತ್ತಂಗಿ, ಪಿ.ಎಂ. ಸಿದ್ದಯ್ಯ, ಗೊಲ್ಲರಹಳ್ಳಿ ಮಂಜುನಾಥ, ಎನ್.ಟಿ. ಮಂಜಪ್ಪ (ಚನ್ನಮುಂಬಾಪುರ), ಯೋಗೀಶ್ ಪಾಟೀಲ್ (ಲಿಂಗಾಪುರ), ಮಹಂತೇಶ್ (ಹಿರೇಗೋಣಿಗೆರೆ), ವಿಜಯ ಸೊಲ್ಲಾಪುರ (ಪ್ರೌಢಶಾಲಾ ಶಿಕ್ಷಕರು, ಹಿರೇಗೋಣಿಗೆರೆ), ಪ್ರಕಾಶ ಬಿ.ಜಿ, ಶ್ರೀಮತಿ ಗೀತಾ ಮೊಹರೆ ಮತ್ತು ಹೆಚ್.ಜಿ. ಸಂತೋಷ (ಹಿರೇಗೋಣಿಗೆರೆ) ಉಪಸ್ಥಿತರಿದ್ದರು.






