ಶಿವಮೊಗ್ಗ: ನಗರದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಕ್ಷುಲ್ಲಕ ಮಟ್ಟದ ಗಲಾಟೆಯನ್ನು ಕೆಲವು ರಾಜಕೀಯ ಪ್ರೇರಿತ ಅಂಶಗಳು ಕೋಮು ಬಣ್ಣ ಹಚ್ಚುವ ಮೂಲಕ ವಿಸ್ತರಿಸಿ, ಸುಳ್ಳು ಸುದ್ದಿಗಳನ್ನು ಹರಡಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಘಟನೆಗೆ ಶಾಂತಿ ನಡಿಗೆ ಸಮಿತಿ ಖಂಡನೆ ವ್ಯಕ್ತಪಡಿಸಿದೆ.
ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಾಮಾನ್ಯ ಸ್ವಭಾವದ ಗಲಾಟೆಯನ್ನು ಉದ್ದೇಶಪೂರ್ವಕವಾಗಿ ವಿಸ್ತರಿಸಿ, ತಪ್ಪು ಮಾಹಿತಿಯನ್ನು ಹಬ್ಬಿಸಲು ಯತ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿ, ಇಂತಹ ಕೃತ್ಯಗಳು ನಗರದಲ್ಲಿ ಅನಗತ್ಯ ಉದ್ವಿಗ್ನತೆ ಉಂಟುಮಾಡಬಹುದು ಎಂದು ಎಚ್ಚರಿಸಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ, ಈ ಘಟನೆ ಯಾವುದೇ ಕೋಮು ಸಂಘರ್ಷವಲ್ಲ ಎಂಬ ಸತ್ಯವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿರುವುದನ್ನು ಸಮಿತಿ ಶ್ಲಾಘಿಸಿದೆ.
ನಗರದ ಶಾಂತಿ–ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಊಹಾಪೋಹಗಳನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಸೂ-ಮೋಟೋ ಪ್ರಕರಣಗಳನ್ನು ದಾಖಲಿಸಿ ನಿಗಾವಹಿಸುವುದು ಅತ್ಯಾವಶ್ಯಕವಾಗಿದೆ ಎಂದು ಸಮಿತಿ ತಿಳಿಸಿದೆ. ಕೋಮು ಘಟನೆಗಳ ದೃಷ್ಟಿಯಿಂದ ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ, ಇಂತಹ ತಪ್ಪು ಪ್ರಚಾರಗಳು ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿಗಳಿಗೆ ದಾರಿ ಮಾಡಿಕೊಡಬಲ್ಲವು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಶಾಂತಿ ಭಂಗಪಡಿಸಲು ಯತ್ನಿಸುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಶಾಂತಿ ನಡಿಗೆ ಸಮಿತಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಇಂದು ಈ ಬಗ್ಗೆ ಶಾಂತಿ ನಡಿಗೆ ಸಮಿತಿಯ ಪ್ರತಿನಿಧಿಗಳು ಐಜಿಪಿ ರವಿಕಾಂತೇಗೌಡ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ರವರಿಗೆ ಮನವಿಯನ್ನು ಸಲ್ಲಿಸಿದೆ. ನಗರದಲ್ಲಿ ಶಾಂತಿ–ಸೌಹಾರ್ದತೆ ಕಾಪಾಡಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆಯು ಭರವಸೆ ನೀಡಿದೆ ಎಂದು ಸಮಿತಿ ತಿಳಿಸಿದೆ.
ಈ ಸಂದರ್ಭದಲ್ಲಿ ಕೆ.ಪಿ. ಶ್ರೀಪಾಲ (ವಕೀಲರು), ಎಂ. ಗುರುಮೂರ್ತಿ (ಸಂಚಾಲಕರು – ದಲಿತ ಸಂಘರ್ಷ ಸಮಿತಿ), ಮಾಲತೇಶ್ ಬೊಮ್ಮನಕಟ್ಟೆ, ಮಂಜುನಾಥ್ ನವುಲೆ, ಎಂ. ರವಿ ಸೇರಿದಂತೆ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.







