ಬೆಂಗಳೂರು, ನ.22: ಜೆಡಿಎಸ್ ಪಕ್ಷದಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದಂತೆಯೇ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ತಾವು ಸಿದ್ಧರಾಗಿದ್ದೆವು, ಆದರೆ ಸೋನಿಯಾ ಗಾಂಧಿ ಧರಂ ಸಿಂಗ್ ಅವರನ್ನು ಮುಂದಿರಿಸಿದ್ದರಿಂದ ನಿರ್ಧಾರ ಬದಲಾಗಿತ್ತೇ ಹೊರತು ತಾವು ವಿರೋಧಿಸಲಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಜೆಡಿಎಸ್ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ದೇವೇಗೌಡರು ಎನ್ಡಿಎ ಜತೆಗಿನ ಮೈತ್ರಿ ಯಾವುದೇ ಕಾರಣಕ್ಕೂ ಮುರಿಯುವುದಿಲ್ಲ ಎಂದು ತಿಳಿಸಿದರು. “ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಬಲಿಷ್ಠ ಸರ್ಕಾರ ಕೇಂದ್ರದಲ್ಲಿ ಇದೆ. ನಮ್ಮ ಕಾರ್ಯಕರ್ತರು ಇದನ್ನು ಮರೆಯಬಾರದು” ಎಂದು ಸೂಚಿಸಿದರು.

ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, “ಸಿದ್ದರಾಮಯ್ಯರನ್ನು ಸಿಎಂ ಮಾಡಲು ನಾನು ಮೂರು ಬಾರಿ ಸೋನಿಯಾ ಗಾಂಧಿಯವರ ಮನೆಗೆ ಹೋಗಿ ಕೇಳಿದ್ದೆ. ಕಾಶ್ಮೀರದಲ್ಲಿ ಗುಲಾಮ್ ನಬಿ ಆಜಾದ್ ಅವರನ್ನು ಡಿಸಿಎಂ ಮಾಡಿ, ಮುಫ್ತಿ ಮೊಹಮ್ಮದ್ ಸಯ್ಯಿದ್ ಅವರನ್ನು ಸಿಎಂ ಮಾಡಿದ ಕಾಂಗ್ರೆಸ್, ಹಾಗೆಯೇ ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲಿ ಎಂದು ಕೇಳಿದ್ದೆ. ಬೇಕಿದ್ದರೆ ಸಿದ್ದರಾಮಯ್ಯ ಸೋನಿಯಾಗಾಂಧಿಯವರನ್ನೇ ಕೇಳಬಹುದು. ಅವರು ಇನ್ನೂ ಬದುಕಿದ್ದಾರೆ” ಎಂದರು.
ಹೆಗಡೆ ಅವರ ವಿರೋಧ, ಜಾಲಪ್ಪ ಮೆಡಿಕಲ್ ಕಾಲೇಜು ಮಂಜೂರು, ಅಹಿಂದ ಸಮಾವೇಶದ ವಿವಾದ ಸೇರಿದಂತೆ ಹಲವು ವಿಷಯಗಳಲ್ಲಿ ಸಿದ್ದರಾಮಯ್ಯ ತಾವು ನೀಡಿದ ಸಲಹೆಗಳನ್ನು ಪಾಲಿಸದ ಕಾರಣವೇ ಅವರನ್ನು ಪಕ್ಷದಿಂದ ಹೊರಹಾಕಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ದೇವೇಗೌಡರು ವಿವರಿಸಿದರು. “ಈ ನಿರ್ಧಾರಕ್ಕೆ ನನಗೆ ಇಂದು ಕೂಡ ಯಾವುದೇ ಪಶ್ಚಾತ್ತಾಪವಿಲ್ಲ” ಎಂದು ಹೇಳಿದರು.
ತುರ್ತು ಪರಿಸ್ಥಿತಿ ಕಾಲದ ಹೋರಾಟವನ್ನು ನೆನಪಿಸಿಕೊಂಡ ದೇವೇಗೌಡರು, “ಅವತ್ತಿನ ಕಾಂಗ್ರೆಸ್ನ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಲು ನಾವು ಬದ್ಧರಾಗಿದ್ದೇವೆ. ರಾಷ್ಟ್ರದ ಹಿತದೃಷ್ಟಿಯಿಂದ ನಾವು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
“ಉತ್ತರದಲ್ಲಿ ಜೆಡಿಯು – ದಕ್ಷಿಣದಲ್ಲಿ ಜೆಡಿಎಸ್”
ರಾಜಕೀಯ ಭವಿಷ್ಯವನ್ನು ವಿವರಿಸಿದ ದೇವೇಗೌಡರು, “ಉತ್ತರದಲ್ಲಿ ಜೆಡಿಯು ಹೇಗೆ ಬಲಿಷ್ಠವಾಗಿದೆಯೋ, ದಕ್ಷಿಣದಲ್ಲಿ ಜೆಡಿಎಸ್ ಹೀಗೆಯೇ ಶಕ್ತಿ ಪ್ರದರ್ಶಿಸಬೇಕು. ಅಲ್ಲಿ ನಿತೀಶ್ ಕುಮಾರ್ ಇದ್ದಾರೆ, ಇಲ್ಲಿ ಕುಮಾರಸ್ವಾಮಿ ಇದ್ದಾರೆ” ಎಂದು ಘೋಷಿಸಿದರು. ನಿತೀಶ್ ಕುಮಾರ್ನ ದೀರ್ಘ ರಾಜಕೀಯ ಅನುಭವ ಮತ್ತು ಹತ್ತು ಬಾರಿ ಸಿಎಂ ಪ್ರಮಾಣವಚನ ಮಾಡಿದ ವಿಚಾರ ಉಲ್ಲೇಖಿಸಿದ ಅವರು, “ಅವರ ಕಾರ್ಯಪದ್ದತಿ ನಮಗೆ ಮಾರ್ಗದರ್ಶಕವಾಗಬೇಕು” ಎಂದರು.
“ದೇವೇಗೌಡ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಪಕ್ಷ ಕಟ್ಟುತ್ತೇನೆ, ಹೋರಾಟ ಮುಂದುವರಿಸುತ್ತೇನೆ” ಎಂದು ದೇವೇಗೌಡರು ಸ್ಪಷ್ಟ ಸಂದೇಶ ನೀಡಿದರು.





