ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಮಾನಕ್ಕೆ ಸಂಬಂಧಿಸಿದ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, “ಎಲ್ಲವನ್ನೂ ಹೈಕಮಾಂಡ್ ತೀರ್ಮಾನಿಸುತ್ತದೆ, ಸದ್ಯಕ್ಕೆ ಹೇಳಲು ಏನೂ ಇಲ್ಲ” ಎಂದು ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆ ಚರ್ಚೆ ನಡೆಸಿದ್ದರು. ಇಂದು ಮಾಧ್ಯಮದವರು ಪ್ರಶ್ನಿಸಿದಾಗ, “ಯಾವುದೇ ವಿಷಯದ ಬಗ್ಗೆ ಈಗ ಮಾತಾಡುವುದಿಲ್ಲ, ಹೈಕಮಾಂಡ್ ನೋಡಿಕೊಳ್ಳುತ್ತದೆ” ಎಂದು ಚುಟುಕಾಗಿ ಉತ್ತರಿಸಿದ ಖರ್ಗೆ ಅವರು ಕಾರು ಹತ್ತಿದರು. ಈ ಮೂಲಕ, ನಿರ್ಧಾರ ರಾಹುಲ್ ಗಾಂಧಿ ಅವರ ಕೈಯಲ್ಲಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ಗೊಂದಲಕ್ಕೆ ತೆರೆ ಎಳೆಯಲು ಸಿಎಂ ಒತ್ತಾಯ
ರಾಜ್ಯ ಸರ್ಕಾರ ಹಾಗೂ ಪಕ್ಷದ ಮೇಲೆ ಪರಿಣಾಮ ಬೀರುತ್ತಿರುವ ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಎಳೆಯುವಂತೆ ಸಿಎಂ ಸಿದ್ದರಾಮಯ್ಯ ಖರ್ಗೆ ಅವರಿಗೆ ಒತ್ತಾಯಿಸಿರುವುದಾಗಿ ಮೂಲಗಳು ತಿಳಿಸಿವೆ. ಖರ್ಗೆ ಅವರು ದೆಹಲಿಗೆ ಹಿಂತಿರುಗುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸ್ಥಿತಿಗತಿ ಬಗ್ಗೆ ಸ್ಪಷ್ಟನೆ ನೀಡುವ ಭರವಸೆ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ನವೆಂಬರ್ 26ರಂದು ಹಿಂದಿರುಗಲಿದ್ದಾರೆ. ಅದಾದ ನಂತರ ಸಿಎಂ–ಡಿಸಿಎಂ ಜೋಡಿಗೆ ದೆಹಲಿ ಬುಲಾವ್ ಬರುವ ಸಾಧ್ಯತೆ ಹೆಚ್ಚಿದೆ.
ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೇ ಸಿಎಂ–ಡಿಸಿಎಂ ನಡುವೆ ‘ಪವರ್ ಶೇರಿಂಗ್’ ಚರ್ಚೆ ಮರುಕಳಿಸಿರುವ ಕಾರಣ, ಸಿಎಂ ಸಂಪುಟ ಪುನಾರಚನೆ ಕುರಿತ ಪ್ರಸ್ತಾಪವನ್ನೂ ಚರ್ಚೆಯಲ್ಲಿ ಮುಂದಿಟ್ಟಿದ್ದಾರೆಂದು ಮಾಹಿತಿ.

‘ನಾನು ಯಾವಾಗ್ಲೂ ಸಿಎಂ ರೇಸ್ನಲ್ಲಿರ್ತೀನಿ’ – ಗೃಹ ಸಚಿವ ಪರಮೇಶ್ವರ್ ಹೇಳಿಕೆ
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಜೋರಾಗುತ್ತಿರುವ ನಡುವೆ, ಗೃಹ ಸಚಿವ ಜಿ. ಪರಮೇಶ್ವರ್ ಅವರು ತಮ್ಮ ಆಕಾಂಕ್ಷೆಯನ್ನು ಸ್ಪಷ್ಟಪಡಿಸಿ, “ನಾನು ಯಾವಾಗಲೂ ಸಿಎಂ ರೇಸ್ನಲ್ಲಿರ್ತೀನಿ… 2013ರಲ್ಲಿ ಗೆದ್ದಿದ್ದರೆ ಇಂದೇನಾಗುತ್ತಿತ್ತೋ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಈಗ ಆಗದಿದ್ದರೂ, ಅವಕಾಶ ಬಂದರೆ ವಿಚಾರಿಸೋಣ ಎಂದೂ ಹೇಳಿದ್ದಾರೆ.

ಜಾರಕಿಹೊಳಿ ಪರೋಕ್ಷ ತಿರುಗೇಟು
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಲವೇ ಜನರ ಶ್ರಮವಲ್ಲ, ಎಲ್ಲರ ದುಡಿತ ಇದೆ. ಶ್ರೇಯಸ್ಸು ಎಲ್ಲರೂ ಹಂಚಿಕೊಳ್ಳಬೇಕು” ಎಂದು ಹೇಳಿ ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಪರೋಕ್ಷವಾಗಿ ಸಂದೇಶ ಕಳುಹಿಸಿದ್ದಾರೆ. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಬೇಕೆಂದು ಆಗ್ರಹಿಸಿದ್ದಾರೆ.

ಗೊಂದಲಕ್ಕೆ ತಾತ್ಕಾಲಿಕ ಬ್ರೇಕ್?
ಎಐಸಿಸಿ ಅಧ್ಯಕ್ಷ ಖರ್ಗೆಯ ‘ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂಬ ಹೇಳಿಕೆ ಈಗಾಗಲೇ ಬಿಕ್ಕಟ್ಟಿನಿಂದ ನಡುಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ತಾತ್ಕಾಲಿಕ ವಿರಾಮ ನೀಡಿದೆ. ಆದರೆ, ಅಂತಿಮ ನಿರ್ಧಾರ ರಾಹುಲ್ ಗಾಂಧಿ ವಾಪಸಿನ ನಂತರವೇ ಹೊರಬರುವ ನಿರೀಕ್ಷೆ.
ಈ ನಡುವೆ, ಸಚಿವ ಮಹದೇವಪ್ಪ ಅವರು “ಇನ್ನೂ ಎರಡೂವರೆ ವರ್ಷ ಕಾಂಗ್ರೆಸ್ ಸಿಎಂ ಇರುತ್ತಾರೆ” ಎಂದು ಹೇಳಿದರೂ, ಸಿದ್ದರಾಮಯ್ಯ ಮುಂದುವರಿಯುತ್ತಾರೆಯೇ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಮಾತನಾಡಲಿಲ್ಲ.





