ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಸ್ವಾಮೀಜಿಗಳ ರಾಜಕೀಯ ಪ್ರವೇಶ: ಕಾಂಗ್ರೆಸ್ ಕುರ್ಚಿ ಕದನಕ್ಕೆ ಮತ್ತೊಂದು ತಿರುವು

On: November 27, 2025 7:47 PM
Follow Us:

ಚಳಿಗಾಲಕ್ಕೂ ಮುನ್ನವೇ ಆರಂಭಗೊಂಡಿದ್ದ ಕಾಂಗ್ರೆಸ್‌ನ ಕುರ್ಚಿ ಕದನ ಈಗ ನಿರ್ಣಾಯಕ ಹಂತ ತಲುಪಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ ಈ ರಾಜಕೀಯ ಗೊಂದಲಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ ಪಟ್ಟ ತ್ಯಜಿಸಲಿದಾರಾ? ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಆಸೆ ಈಡೇರಲಿದೆಯಾ? ಎಂಬ ಪ್ರಶ್ನೆಗಳು ರಾಜ್ಯ ರಾಜಕೀಯವನ್ನು ಆವರಿಸಿಕೊಂಡಿವೆ.

ಇದರ ಮಧ್ಯೆ, ಸಾಮಾನ್ಯವಾಗಿ ರಾಜಕೀಯದ ಗೋಜಿಗೆ ದೂರವಿರುವ ಸ್ವಾಮೀಜಿಗಳು ಈ ಬಾರಿ ನೇರವಾಗಿ ರಾಜಕೀಯ ವೇದಿಕೆಗೆ ಪ್ರವೇಶಿಸಿ ತಮ್ಮ ತಮ್ಮ ಸಮುದಾಯದ ನಾಯಕರ ಪರ ವಕಾಲತ್ತು ವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಡಿಕೆಶಿ ಪರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮುಕ್ತವಾಗಿ ಬೆಂಬಲ ವ್ಯಕ್ತಪಡಿಸಿ, ಎರಡು-ಎರಡು ವರ್ಷಗಳ ಒಪ್ಪಂದದಂತೆ ಈಗ ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. “ನಮ್ಮ ಸಮುದಾಯದವರಿಗೂ ಡಿಕೆಶಿ ಸಿಎಂ ಆಗಬೇಕೆಂಬ ಆಸೆ ಇದೆ. ಅವರು ಪಕ್ಷಕ್ಕಾಗಿ ಶಿಸ್ತಿನಿಂದ ದುಡಿದಿದ್ದಾರೆ,” ಎಂದು ಸ್ವಾಮೀಜಿ ಸಾರ್ವಜನಿಕವಾಗಿ ಹೇಳಿದ್ದಾರೆ.

ಈ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದವರು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ. “ಸಂವಿಧಾನದಲ್ಲಿ ಮಠಾಧೀಶರು ಹೇಳಿದ ತಕ್ಷಣ ಮುಖ್ಯಮಂತ್ರಿ ಆಗುವ ವ್ಯವಸ್ಥೆ ಇಲ್ಲ. ಸಿಎಂ ಆಯ್ಕೆ ಮಾಡುವ ಅಧಿಕಾರ ಶಾಸಕರದ್ದು,” ಎಂದು ಟಾಂಗ್ ನೀಡಿರುವ ಅವರು ಮಠಾಧೀಶರ ರಾಜಕೀಯ ಹಸ್ತಕ್ಷೇಪ ಸೂಕ್ತವಲ್ಲ ಎಂಬ ಸಂದೇಶ ನೀಡಿದ್ದಾರೆ. ಅವರ ಹೇಳಿಕೆಗೆ ಬೆಂಬಲವಾಗಿ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಕೂಡ, ಜಾತಿ ಆಧಾರದಲ್ಲಿ ನಾಯಕತ್ವಕ್ಕೆ ವಕಾಲತ್ತು ವಹಿಸುವುದು ಇತರೆ ಸಮುದಾಯಗಳಿಗೆ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತ ಪಕ್ಷದ ಒಳಚಟುವಟಿಕೆಗಳು ಸಹ ಕುತೂಹಲ ಹುಟ್ಟಿಸುತ್ತಿವೆ. ಡಿಸಿಎಂ ನಿವಾಸದಲ್ಲಿ ಜಮೀರ್ ಅಹ್ಮದ್ ಹಾಗೂ ಡಿಕೆಶಿ ನಡೆಸಿದ ಖಾಸಗಿ ಮಾತುಕತೆ ಮತ್ತು ನಂತರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ನಡುವಿನ ಅರ್ಧಗಂಟೆಯ ವಿಶೇಷ ಸಭೆ ರಾಜಕೀಯ ಊಹಾಪೋಹಗಳಿಗೆ ಮತ್ತಷ್ಟು ಬಣ್ಣ ಹಚ್ಚಿದೆ. ಸಚಿವ ಮಹದೇವಪ್ಪರನ್ನು ಸಭೆಗೆ ಒಳಗೆ ಬಿಡದ ಘಟನೆ ಪಕ್ಷದ ಒಳಜಗಳ ಗಂಭೀರವಾಗಿರುವುದನ್ನು ತೋರಿಸಿದೆ.

ರಾಜ್ಯದಲ್ಲಿ ಬೆಳೆಯುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೈಕಮಾಂಡ್‌ ಕೂಡ ಎಚ್ಚರಗೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜೊತೆಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಕುರ್ಚಿ ಕದನ ಬಗೆಹರಿಸಲು ಕೇಂದ್ರ ನಾಯಕತ್ವದ ಹಸ್ತಕ್ಷೇಪ ಅನಿವಾರ್ಯವಾಗಿದೆ ಎಂಬುದರಲ್ಲಿ ಪಕ್ಷದ ಒಳ ವಲಯವೂ ಏಕಮತವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ತ್ಯಾಗಮೂರ್ತಿಗಳೆಂದು ಕರೆಯಲ್ಪಡುವ ಸ್ವಾಮೀಜಿಗಳು ಭೋಗಿಗಳ ಕ್ಷೇತ್ರವಾದ ರಾಜಕಾರಣದಲ್ಲಿ ಕಾಲಿಟ್ಟು, ಜಾತಿ ಆಧಾರಿತ ರಾಜಕೀಯದ ಪರವಾಗಲಿ ವಿರುದ್ಧವಾಗಲಿ ಮಾತನಾಡುತ್ತಿರುವುದು ಸಾಮಾಜಿಕ ವಲಯದಲ್ಲಿ ವಿರೋಧಕ್ಕೆ ಗುರಿಯಾಗಿದೆ. ಮಠಾಧೀಶರ ಈ ರೀತಿಯ ಎಂಟ್ರಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂಬ ಅಭಿಪ್ರಾಯವೂ ಜೋರಾಗಿದೆ.

ರಾಜ್ಯ ರಾಜಕೀಯದ ತಾಪಮಾನ ತಾರಕಕ್ಕೇರಿರುವ ಈ ಸಮಯದಲ್ಲಿ ಸಿಎಂ ಕುರ್ಚಿಯ ಬಗ್ಗೆ ಹೈಕಮಾಂಡ್ ಕೊಡಲಿರುವ ನಿರ್ಧಾರವೇ ಮುಂದಿನ ರಾಜಕೀಯದ ದಿಕ್ಕನ್ನು ತೋರಿಸಲಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment