ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕೆಲವು ದರೋಡೆ, ಕಳ್ಳತನ, ವಂಚನೆ ಮತ್ತು ಹಣ ಸುಲಿಗೆ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯೇ ನೇರವಾಗಿ ಭಾಗಿಯಾಗಿರುವುದು ಕಳವಳಕಾರಿಯಾಗಿದೆ. ಇದರಿಂದ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಕುಗ್ಗಿ, ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಸಂಶಯದ ವಾತಾವರಣ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗುವ ಪೊಲೀಸರ ವಿರುದ್ಧ ಕಾನೂನು ಮತ್ತು ಶಿಸ್ತಿನ ಕ್ರಮಗಳನ್ನು ತಪ್ಪದೆ ಕೈಗೊಳ್ಳುವಂತೆ ಖಡಕ್ ಆದೇಶ ಹೊರಡಿಸಿರುವುದಾಗಿ ಡಿ.ಜಿ. ಮತ್ತು ಐ.ಜಿ.ಪಿ. ಡಾ. ಎಂ.ಎ.ಸಲೀಂ ತಿಳಿಸಿದ್ದಾರೆ.

ಪೊಲೀಸರ ಅಪರಾಧ ಸಂಪರ್ಕವು ಕಾನೂನು ಜಾರಿ ವ್ಯವಸ್ಥೆಯ ಮೂಲ ಸಿದ್ಧಾಂತಗಳನ್ನೇ ಪ್ರಶ್ನಾರ್ಥಕಗೊಳಿಸುವುದರ ಜೊತೆಗೆ ಇಲಾಖೆಯ ಗೌರವಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ದಾವಣಗೆರೆಯಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರು ಚಿನ್ನದ ವ್ಯಾಪಾರಿಯ ಮೇಲೆ ನಕಲಿ ಬಂದೂಕು ಬಳಸಿ ದರೋಡೆ ನಡೆಸಿದ ಪ್ರಕರಣ, ಬೆಂಗಳೂರಿನಲ್ಲಿ ಕ್ಯಾಶ್ ಮ್ಯಾನೇಜ್ಮೆಂಟ್ ಸಂಸ್ಥೆಯ ಕೋಟ್ಯಂತರ ಮೌಲ್ಯದ ದರೋಡೆ ಪ್ರಕರಣದಲ್ಲಿ ಕಾನ್ಸ್ಟೇಬಲ್ ಬಂಧನ, ಮಾಲೂರಿನಲ್ಲಿ ಬಿಪಿಯೋ ಮ್ಯಾನೇಜರ್ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಹೆಡ್ ಕಾನ್ಸ್ಟೇಬಲ್ ವಿರುದ್ಧ ಕ್ರಮ ಕೈಗೊಳ್ಳಲಾದ ಪ್ರಕರಣಗಳು ಇತ್ತೀಚಿನ ಉದಾಹರಣೆಗಳಾಗಿವೆ.
ಇಂತಹ ಘಟನೆಗಳು ಇಲಾಖೆಗೆ ಸರಿಪಡಿಸಲಾಗದ ಅಪಕೀರ್ತಿಯನ್ನು ತರಬಲ್ಲವು. ಆದ್ದರಿಂದ ಘಟಕಾಧಿಕಾರಿಗಳು ತಮ್ಮ ಅಧೀನದಲ್ಲಿರುವ ಸಿಬ್ಬಂದಿಯ ನೈತಿಕತೆ, ಪೂರ್ವಾಪರ, ವರ್ತನೆ ಮತ್ತು ಸಮಗ್ರತೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಭ್ರಷ್ಟಾಚಾರ, ದುರ್ವರ್ತನೆ ಮತ್ತು ಅಪರಾಧಿಕ ಕ್ರಿಯೆಗಳ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ತರಬೇತಿಯನ್ನು ಏರ್ಪಡಿಸಬೇಕು. ಸಿಬ್ಬಂದಿ ಯಾವುದೇ ಅಕ್ರಮದಲ್ಲಿ ತೊಡಗಿರುವ ಮಾಹಿತಿ ದೊರೆತ ಕ್ಷಣದಿಂದಲೇ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡುವ ಹೊಣೆಗಾರಿಕೆ ಘಟಕಾಧಿಕಾರಿಗಳದ್ದೇ ಆಗಿರುತ್ತದೆ.

ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದರಲ್ಲಿ ಯಾವುದೇ ರೀತಿಯ ತಾವು ವಿಫಲರಾದರೆ ಅದನ್ನೇ ‘ಘೋರ ನಿರ್ಲಕ್ಷ್ಯ’ ಎಂದು ಪರಿಗಣಿಸಿ ಅವರ ಮೇಲೂ ಇಲಾಖಾ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಪೊಲೀಸ್ ಇಲಾಖೆಯ ಗೌರವ, ಹಿರಿಮೆ ಮತ್ತು ಸಮಗ್ರತೆಯ ವಿಷಯದಲ್ಲಿ ಯಾವುದೇ ರೀತಿ ರಾಜಿಯೇ ಅಸಾಧ್ಯ. ಇಲಾಖೆಯ ಕೀರ್ತಿಯನ್ನು ಕಾಪಾಡುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯ ಎಂಬುದನ್ನು ಎಲ್ಲರೂ ಅರಿತು ಕಾರ್ಯನಿರ್ವಹಿಸಬೇಕು ಎಂದು ಡಿ.ಜಿ. ಮತ್ತು ಐ.ಜಿ.ಪಿ. ಸಲೀಂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.



“ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಅಸಾಧ್ಯ. ಈ ಸಂಸ್ಥೆಯ ಹಿರಿಮೆ ಹೆಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಡಿ.ಜಿ. ಮತ್ತು ಐ.ಜಿ.ಪಿ. ಡಾ. ಸಲೀಂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.





